ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜನವರಿ 14, 2019

ನಾ ಕಂಡ ಸಂಕ್ರಾಂತಿ

ಸೂರ್ಯನು ಉತ್ತರಾಯಣಕೆ
ಬರುವನೋ ಬಿಡುವನೋ
ಕಾಂತಿ ಕಡಿಮೆಯಾಗಿಲ್ಲ...
ಚಳಿಗೆ ಹೊದಿಕೆ ಬಂದಿಲ್ಲ...
ಹನ್ನೆರಡು ರಾಶಿಯ ಹೆಜ್ಜೆ
ಇಡುವನೋ ಬಿಡುವನೋ
ನನಗೆ ತಿಳಿದಿಲ್ಲ...
ರೈತನಂತೂ ಹನ್ನೆರಡು ತಿಂಗಳ
ಕಳೆದು ಸುಗ್ಗಿಗೆ ಬಂದ...
ವರ್ಷದ ಬೆವರನ್ನು ಕೂಡಿಡುವ
ಸಮಯವಿದು
ಹರ್ಷದ ಸುಗ್ಗಿಯ ಕಾಲಮೇಳ

ಕಥೆಯ ಸುಗ್ಗಿಯು ಈಗ
ಕಥೆಯಾಗಿ ಮರೆಯಾಯ್ತು
ಸುಲಭ ದಾರಿಯ ಬೆಳೆಯ
ಲಾಭ ಬಂದಾಯ್ತು..
ಕಣಗಳೆಲ್ಲಾ ರಸ್ತೆಗೆ ಬಂದು
ಮೇಟಿ-ಕೋಲುಗಳೆಲ್ಲಾ
ಯಂತ್ರದಲಿ ಮರೆಯಾಗಿ
ಉಳಿದದ್ದು ರೈತನಿಗೆ ಒಕ್ಕಲೂಟ
ದನಕರುಗಳೆಲ್ಲಾ ಸಂತೆಯಲಿ
ವ್ಯಾಪಾರ
ಉಳಿದದ್ದು ವಾಣಿಯಲಿ
ಹರಿಕಥೆಯ ಸಾರ..
ಸಂಕ್ರಾಂತಿ ಎಂಬುದು
ಹಳ್ಳಿಯ ಹಬ್ಬ!
ಸುಗ್ಗಿಗೂ ಸಂಭ್ರಮದ
ವಸಂತ ಕಬ್ಬ!
ಬರೀ ತೋರಣ ಬರದಿರಲಿ
ಮನಸುಗಳು ಇತಿಹಾಸ
ಮರಳಿ ತರಲಿ..
ಸುಲಭ ಬದುಕಿಗೆ
ಬೆವರ ಕ್ರಾಂತಿ ಇರಲಿ.-
ಅಂಕುರ ೧೫/೦೧/೨೦೧೯