ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಆಗಸ್ಟ್ 11, 2020

ಭಾಷೆಯ ಮಾಂತ್ರಿಕತೆ – ಕೆ. ವಿ ನಾರಾಯಣ

 ಭಾಷೆಯ ಮಾಂತ್ರಿಕತೆ – ಕೆ. ವಿ ನಾರಾಯಣ

ಕೆ. ವಿ. ನಾರಾಯಣ ಅವರ ಚಿತ್ರ



ಪರಿಚಯ:
ಡಾ. ಕೆ.ವಿ. ನಾರಾಯಣ :- ಹುಟ್ಟಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೋಕು ಕಂಪಲಾಪುರದಲ್ಲಿ. ಅಮ್ಮ ಕೆಂಚಮ್ಮ. ಅಪ್ಪ ವೀರಣ್ಣ. ಕೆ. ಆರ್. ಮೊದಲ ಹಂತದ ಓದು ಹುಟ್ಟೂರು ಮತ್ತು ತಾಲೋಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಙ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಇಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ವಿ.ಎನ್ ಮತ್ತೆ ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ವಿಙ್ಞಾನದ ಪದವಿ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿಎಡ್ ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು. ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಕೆ.ವಿ.ಎನ್ ಮುಂದಿನ ಓದಿಗೆ ಆರಿಸಿಕೊಂಡಿದ್ದು ಸಾಹಿತ್ಯವನ್ನು. ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ತಮ್ಮ ಒಡನೋದಿಯಾಗಿದ್ದ, ಕನ್ನಡದಲ್ಲಿ ಮಹತ್ವದ ಸ್ತ್ರೀವಾದಿ ಚಿಂತಕಿಯಾಗಿರುವ ಶ್ರೀಮತಿಯವರೊಡನೆ ಒಲುಮೆ ಸಂಭವಿಸಿದ್ದು ಇಲ್ಲೆ. ಗೆಳೆಯರ ಸಮ್ಮುಖದಲ್ಲಿ ಮದುವೆ. ಅಧ್ಯಾಪನ ಕೆಲಸ ಆರಂಭಿಸಿದ್ದು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ಜಿ.ಎಸ್.ಎಸ್ ನೇತೃತ್ತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರ್ಪಡೆ. ಜಿ.ಎಸ್.ಎಸ್ ಮಾರ್ಗದರ್ಶನದಲ್ಲಿ ಆನಂದವರ್ಧನನ "ಧ್ವನ್ಯಾಲೋಕ -ಒಂದು ಅಧ್ಯಯನ" ಮಾಡಿ ಪಿಎಚ್ ಡಿ ಪದವಿ ಪಡೆದರು. ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾಶಾಸ್ತ್ರವನ್ನು. ವಿಙ್ಞಾನದ ತಾತ್ವಿಕತೆಯನ್ನಿರಿಸಿಕೊಂಡೇ ಕೆ.ವಿ.ಎನ್ ಬೆಳೆದಿದ್ದು ವಿಮರ್ಶಕರಾಗಿ, ಭಾಷಾಶಾಸ್ತ್ರಜ್ಞರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ. ತಿಳುವಳಿಕೆ ಮತ್ತು ನಡವಳಿಕೆ ಎರಡರಲ್ಲೂ ಸರಳವಾಗಿರುವ ಕೆ.ವಿ.ಎನ್ 1993ರಲ್ಲಿ ಕನ್ನಡಿಗರ ಕನಸಿನ ಸಂಸ್ಥೆಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದ ಶುರುವಿನಲ್ಲೇ ರಿಜಿಸ್ಟ್ರಾರ್ ಆಗಿ ಅಲ್ಲಿನ ಆಡಳಿತ ನಿರ್ವಹಣೆಯೊಳಗೂ ಪ್ರವೇಶ ಪಡೆದರು. ಅಲ್ಲಿಂದ ನಿವೃತ್ತಿಯಾಗಿ ಹೊರಗೆ ಬರುವವರೆಗೆ ಹಲವು ಜನ ಕುಲಪತಿಗಳ ಆವಧಿಯಲ್ಲಿ ಆಡಳಿತ ಮತ್ತು ಅಧ್ಯಯನಗಳ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ತಮ್ಮ ಅಧ್ಯಾಪನ ಸಂದರ್ಭದಲ್ಲೇ ಶುರುಮಾಡಿದ್ದ ಕನ್ನಡಭಾಷೆ ಮತ್ತು ಕನ್ನಡ ಸಂಸ್ಕೃತಿಯ ಚಿಂತನೆಗಳನ್ನು ಕನ್ನಡ ಸಮಾಜದ ಬೇರುಗಳ ಮೂಲಕ ಅರಸುವ ಕೆಲಸವನ್ನು ಮತ್ತಷ್ಟು ಸ್ಪಷ್ಟವಾಗಿ ಮಂಡಿಸುತ್ತಾ ಬಂದರು. ಈಗಲೂ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ವಿಙ್ಞಾನ ಮೊದಲಾಗಿ ಕನ್ನಡ ಸಮಾಜಕ್ಕೆ ಸಂಬಂಧಿಸಿದ ಯಾವುದರಲ್ಲೂ ಜರೂರಾಗಿ ನಡೆಯಬೇಕಿರುವ ಕೆಲಸ ಇದೆ ಎಂದು ತೊಡಗಿಸಿಕೊಂಡು ಈ ಕಾಲದ ಕನ್ನಡದ ಮಹತ್ವದ ಚಿಂತಕರಾಗಿದ್ದಾರೆ.
(ವಿಕಿಪೀಡಿಯಾ ಮಾಹಿತಿಯನ್ನು ಪಡೆದು ಪರಿಶೀಲಿಸಲಾಗಿದೆ)
ಕೃತಿ ತೊಂಡು ಮೇವು ಮುಖಪುಟ


2021ರ ಸಾಲಿನ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ. ಎಚ್. ಎಸ್ ಸತ್ಯನಾರಾಯಣ ಅವರು

ಅಪೂರ್ವ ಒಡನಾಟಕ್ಕೆ ಗೌರವ ಲಭಿಸಿದೆ


        ಅಧ್ಯಯನ ಎಂಬುದು ಎಲ್ಲರಿಗೂ ದಕ್ಕುವುದಿಲ್ಲ. ಕಾಣುವುದನ್ನು ಗ್ರಹಿಸುವುದು, ಗ್ರಹಿಸಿದಕ್ಕೆ ತನ್ನ ಹಿಂದಿನ ಗ್ರಹಿಕೆಗಳನ್ನು ತುಲನೆಮಾಡುವುದು ಅದೊಂದು ವಿಮರ್ಶೆಯ ಚಾಣಾಕ್ಷತೆ. ಅಡುಗೆಮಾಡುವ ರುಚಿ ಮಾಂತ್ರಿಕರು ಕಂಡದ್ದಕ್ಕೆಲ್ಲಾ ರುಚಿ ಮೂಡಿಸಿ ಅರ್ಥ ನೀಡುವಂತೆ ಈ ವಿಮರ್ಶಕರು ಕಾಣಸಿಗುತ್ತಾರೆ.
ಈ ಜ್ಞಾನ ಮೂಡುವುದರ ಹಿಂದೆ ಸರಿಯಾದ, ಶಾಂತವಾದ ಓದು ನಡೆದಿರುತ್ತದೆ. ಆ ಕಾರ್ಯದಲ್ಲಿ ಭಾರತೀಯ, ಪಾಶ್ಚಾತ್ಯವೆಂಬ ಎಲ್ಲೆಗಳನ್ನು ಮೀರಿ, ವಿಶ್ವಮಾನವ ತತ್ವದೊಳಗೆ ತಮ್ಮ ದರ್ಶನಗಳನ್ನು ತಾವು ರುಚಿಸಿಕೊಂಡಾಗ ತಮ್ಮ ನುಡಿ-ನಡೆ, ವಿಚಾರಗಳು ಲೋಕಕ್ಕೆ ಹೊಸ ಮಾದರಿಗಳನ್ನು ನೀಡುತ್ತವೆ. ಇಂತಹ ಹೊಸ ಮಾದರಿಗಳನ್ನು ಪರಿಚಯಿಸುತ್ತಿರುವ ಕನ್ನಡದ ಜನಪ್ರಿಯ ಲೇಖಕರು ನಮ್ಮ ಎಚ್. ಎಸ್. ಸತ್ಯನಾರಾಯಣ ಅವರು.  

    ಮನುಷ್ಯನಿಗೆ ಲೋಕವಿರಾಮದ ಹಸಿವು ಉಂಟಾದರೆ ಆ ದಿಕ್ಕಿನ ಕಡೆಗೆ ತುಡಿಯುತ್ತಾನೆ. ಅಂತಹ ಲೋಕವಿರಾಮವನ್ನು ತನ್ನ ಯೌವನದಲ್ಲಿಯೇ ತುಳಿದಿದ್ದರು ಎನಿಸುತ್ತದೆ. ಈ ಆಸಕ್ತಿಯಲ್ಲಿಯೇ ಕನ್ನಡ ನುಡಿಸೇವಕರ ಕುರಿತು ಅಪೂರ್ವ ಒಡನಾಟ ಇವರದು. ಗಂಭೀರವಾದ ವಿಚಾರಗಳಿಗೆ ಹಾಸ್ಯದ ಲೇಪನವಚ್ಚಿ, ಅವರವರ ರುಚಿ-ಅಭಿರುಚಿಗಳಿಗೆ ಮಾತಿನ ಮಜಲನ್ನು ಕಟ್ಟಿ ಎಲ್ಲರೊಂದಿಗೆ ಬೆರೆತವರು. ಕುವೆಂಪು, ಹಾ.ಮಾ.ನಾ, ಬೇಂದ್ರೆ ಎಲ್ಲರನ್ನೂ ತನ್ನ ಸಮಕಾಲೀನರಂತೆ ಚಿತ್ರಸುವ ವ್ಯಕ್ತಿ-ಸಾಹಿತ್ಯ-ಚಿತ್ರಮಾಂತ್ರಿಕರಾಗಿ ನಮ್ಮ ನಡುವೆ ವೇದಿಕೆ ಕೊಟ್ಟಲ್ಲೆಲ್ಲಾ ಬಿಗುಮಾನವಿಲ್ಲದೆ ಸಂಚಲನ ಮೂಡಿಸುತ್ತಾರೆ. ಸತ್ಯನಾರಾಯಣ ಎಂಬ ಹೆಸರು ಈಗ ಕನ್ನಡದ ಮುಕ್ಕಾಲು ಪಾಲು ಸಾಹಿತ್ಯ ಆಸಕ್ತರ ಮನೆ-ಮನಗಳಲ್ಲಿದೆ. ಸತ್ಯ, ಸತ್ಯಣ್ಣ, ಮೇಷ್ಟ್ರು ಮೊದಲಾದ ಹೆಸರುಗಳೊಂದಿಗೆ ಹಿರಿಯರಿಂದ-ಕಿರಿಯರವರೆಗೂ ಪ್ರೀತಿಯ ಸ್ಪರ್ಷತೆ. ಇದಕ್ಕೆ ಕಾರಣವೆಂದರೆ ಅವರ ಸಮನ್ವಯತೆ, ನಿರಂಹಕಾರ, ಎಲ್ಲರೊಂದಿಗೂ ಆಪ್ತವಾಗಿ ಬೆರೆಯುವ ಗುಣ.

          ಕುವೆಂಪು ಕುರಿತು ಗಂಭೀರ ವಿಚಾರಗಳನ್ನೂ ಸರಳವಾಗಿ ಪರಿಚಯಿಸಿಕೊಳ್ಳಲು ‘ಕುವೆಂಪು ಅಲಕ್ಷಿರೆದೆಯ ದೀಪ’ ಕೃತಿಯನ್ನು ನೀಡಿದ್ದಾರೆ. ಹದಿನೈದು ಸಾಹಿತಿಗಳ ಒಡನಾಟದ ಆಪ್ತತೆಯನ್ನು, ಸಂಕ್ಷಿಪ್ತವಾಗಿ ಫೇಸ್ ಬುಕ್ ನಲ್ಲಿ ಕವಿಸಮಯ-ಅಂಕಣ ಬರಹ ರೂಪದಲ್ಲಿ ಹಂಚಿಕೊಂಡ ಪ್ರಸಿದ್ಧಿಯ ಫಲವೇ ‘ಅಪೂರ್ವ ಒಡನಾಟ’. ಇವರು ಈ ಹಿಂದೆ ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ಸಾಹಿತ್ಯ ಸಂಪದವನ್ನು ಸಂಪಾದಿಸಿದ ಕಾರ್ಯದ ಮೂಲಕ ಮೇಷ್ಟ್ರುಗಳ, ಮಕ್ಕಳ ಮನಸ್ಸಿನಲ್ಲಿ ಇದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’ ಹಾಗೂ ತೇಜಸ್ವಿ ಕುರಿತು ಇವರ ಸಂಶೋಧನಾ ಪ್ರಬಂಧ ಕಾರ್ಯವು ಅತ್ಯಂತ ವಿಭಿನ್ನವಾದುದು. ಅಪೂರ್ವ ಒಡನಾಟ ಪ್ರಕಟವಾದ ಮೇಲೆ ಇವರ ಆಪ್ತರು ಸುಮಾರು ಐವತ್ತು ವರ್ಷಗಳ ನಿರಂತರ ಓದಿನ ಫಲವನ್ನು ಆಚೆ ತರಲು ಹಂಬಲಿಸಿದರು. ಚಿಕ್ಕಮಗಳೂರಿನಲ್ಲಿ ತಪಸ್ವಿಯಂತೆ ಬರವಣಿಗೆ ಪ್ರಾರಂಭಿಸಿರುವ ಇವರು ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ಡುಂಡಿಮಲ್ಲಿಗೆ’, ಅಂಕಣ ಬರಹಗಳ ಕೃತಿರೂಪ ‘ನುಡಿಚಿತ್ರ’, ವಿಮರ್ಶಾ ಲೇಖನಗಳನ್ನು ‘ಕಣ್ಣೋಟ’ವಾಗಿ, ಅಪೂರ್ವ ಒಡನಾಟದಲ್ಲಿ ನೆನಪು ಕಡಿಮೆ ಇದೆ ಎಂದು ಬರೆಯದೆ, ಮುಂದೆ ಮಾಸ್ತಿ ಕುರಿತು ಅಧ್ಯಯನ ಜಾಸ್ತಿಯಿದೆ ಎಂಬಂತೆ ‘ನಗೆಮೊಗದ ಅಜ್ಜ ಮಾಸ್ತಿ’ಯಾಗಿ, ಲಾಲಿತ್ಯದ ಔತಣ ನೀಡುವ ಸತ್ಯಣ್ಣನವರು ‘ಪನ್ನೇರಳೆ’ ಎಂಬ ಲಲಿತ ಪ್ರಬಂಧವನ್ನೂ ಬರೆದಿದ್ದಾರೆ. ಈ ಎಲ್ಲಾ ಕೃತಿಗಳು ವರ್ತಮಾನದ ಹಸಿವಿಗೆ, ಬಾಳ್ವೆಯ ಅರ್ಥಪೂರ್ಣ ಸ್ವೀಕಾರಕ್ಕೆ ಸರಿಯಾದ ಮಾರ್ಗಸೂಚಿ ನೀಡಬಲ್ಲವು ಅನಿಸುತ್ತದೆ.

        ಇಂತಹ ನಮ್ಮ ಅಪೂರ್ವ ಒಡನಾಡಿ ವ್ಯಕ್ತಿತ್ವಕ್ಕೆ 2021ನೇ ಸಾಲಿನ ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಗೌರವ ಲಭಿಸಿದ್ದು ನಮಗೆ ಸಂತಸ ಮೂಡಿತ್ತು. ಅದೇ ಸಂತಸವು ಹಿಮ್ಮಡಿಯಾಗಿ ಈಗ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ನೀಡುವ 2021ರ ಸಾಲಿನ ಪ್ರತಿಷ್ಠಿತ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಲಭಿಸಿರುವುದು ಸಂತಸ ಮೂಡಿಸಿದೆ. ಎಷ್ಟೋ ಸಂದರ್ಭದಲ್ಲಿ ಪ್ರಶಸ್ತಿ ನೀಡುವ, ಪಡೆಯುವ ಕಾರಣಗಳಿಗೆ ಅರ್ಥವಿರದ ಕಾಲದಲ್ಲಿದ್ದೇವೆ. ಆದರೆ ಇಂತಹ ವಿದ್ವಾಂಸರಿಗೆ ಲಭಿಸುವ ಹೊಸಬಗೆಯು ಪ್ರಶಸ್ತಿಯ ಗೌರವವನ್ನು ಹೆಚ್ಚಿಸುತ್ತದೆ. 




ಡಾ. ಎಚ್. ಎಸ್ ಸತ್ಯನಾರಾಯಣ ಅವರ ಕುರಿತು- ಚಿತ್ರ ಹಾಗೂ ಅವರ ಭಾಷಣದ ಒಂದು ಮಾದರಿ

https://youtu.be/c9V5_EhjEPk