ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಆಗಸ್ಟ್ 13, 2017

ಓ ಪಾರಿಜಾತ

ಓ ಪಾರಿಜಾತ...



ಸೂರ್ಯನಿಲ್ಲದ ವೇಳೆ
ಕೃಷ್ಣ ತಂದನು ಹೂ
ಪಾರಿಜಾತ ಇವಳು ಭಗ್ನಪ್ರೇಮಿ!
ಸತ್ಯಭಾಮೆಯ ಮನೆಯ
ಅಂಗಳವು ಇನ್ನು ವಿರಹ ಕಾಂತಿಯ
ಕಥೆಗೆ ಕೃಷ್ಣಲೀಲೆ!


ಕೇಸರಿಯ ಕಾಂಡದಲಿ
ಬಿಳಿಯ ಚಂದನಲೀಲೆ
ಪರಿಮಳಕೆ ಪ್ರೇಮವು
ರಾತ್ರಿ ರೂಪ
ಬುದ್ಧನ ಸ್ತೂಪದಲೂ
ನಿನ್ನ ಹಾಸಿದ ಅರಿವೆ
ಶಾಂತಿಯಲಿ ಬಂದ ಪ್ರೇಮ ಬಾಲೆ!
ಕ್ಷೀರಸಾಗರದಲ್ಲಿ
ಮಥನದ ಯುದ್ಧಗಳು

ದೇವತೆಗೂ ರಾಕ್ಷಸರ ಪಾಠವಾಯ್ತು.


ಸುರಭಿ, ವಾರಿಣಿಯ ಗೆಳತಿ
ಸುಂದರ ಮಧುಕನ್ಯೆ
ಬಂದಳು ಪ್ರೇಮದಲಿ ಪಾರಿಜಾತ
ಇಂದ್ರನ ಮೋಹದಲಿ
ವಿಷ್ಣುವಿನ ದಾಹದಲಿ
ಪ್ರೇಮ ಮಂದಿರ ವೃಕ್ಷ
ನಿನ್ನ ಜನ್ಮ ಲೀಲೆ!


ಭರತ ಭೂಮಿಯ ಮಗಳೆ
ಕೋಮಲಾಂಗಿಯ ಕನ್ಯೆ
ಪಂಪನ ಕಾವ್ಯಕೂ ಕೈಪಿಡಿಯ
ವರ್ಣನೆ ಓ ಕಬ್ಬಿಗನ ಮಗಳೇ
ಪ್ರಕೃತಿಗೆ ನಿನ್ನ ಸುಗಂಧ ಲೀಲೆ!

ಮಾತೆಂಬ ಮೈಲಿಗೆ...


 

          ಭಾರತ ಸಂವಿಧಾನವು ಪ್ರಾರಂಭವಾಗುವುದೇ ‘ನಾವು ಭಾರತೀಯ ಜನರು’ ಎಂಬ ತತ್ತ್ವದ ಅಡಿಪಾಯದಲ್ಲಿ ಆದ್ದರಿಂದ ಇಲ್ಲಿ ಪ್ರತಿಯೊಬ್ಬರಿಗೂ ಮನುಷ್ಯ ಗುಣವಿದೆ. ಅದನ್ನು ಕಾಪಾಡುವುದು ಪ್ರತಿಯೊಬ್ಬರ ಜವಬ್ದಾರಿ.
          ಅಕ್ಷರಗಳಿಗಿರುವ ಮೌಲ್ಯ, ಮಾತಿಗೆ ದೊರಕದೇ ಇರುವುದು ಇಂದು ವಿಪರ್ಯಾಸ. ಯೇಸು ಶಿಲುಬೆಯಲ್ಲಿ ಹೇಳಿದ ಕೊನೆಯ ದನಿ ‘ಅಪರಾಧಿಗಳನ್ನು ಕ್ಷಮಿಸು’ ಎಂಬ ಮಹತ್ವದ ಮಾತು ಇಲ್ಲಿ ಅನಿವಾರ್ಯ.

           ಸಮಾಜದ ಜನತೆಗೆ ತಮ್ಮ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವ ಜವಬ್ದಾರಿ ಅಗತ್ಯವಿದೆ. ನಾವು ಕೂಡ ಈ ಸಮಾಜದ ಒಂದು ಭಾಗ. ಅದರೊಳಗೆ ನಮ್ಮ ಪಾತ್ರವೇನು ಎಂಬ ಅಂಶವನ್ನು ಸ್ವಯಂ ಕಲಿಕೆಯ ಪ್ರಾಮಾಣಿಕತೆ ಅಗತ್ಯವಿದೆ. ಮನುಷ್ಯನು ಮನುಷ್ಯನನ್ನೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯ ಪ್ರವೇಶ ಪಡೆಯುವುದಾದರೆ ಭಾರತೀಯ ಸಂಸ್ಕøತಿಯ ಅರ್ಥವೇನು? ಮನುಷ್ಯ ಸದಾ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವಾಗ ತಾನು ಯಾವ ಹಾದಿ ಹಿಡಿದಿರುವೆ ಎಂಬ ಚಿಂತನೆ ಅಗತ್ಯವಿದೆ. ಸಮಾಜವನ್ನು ರೂಪಿಸುವ ಅದರಲ್ಲೂ ಶಿಕ್ಷಣದ ನೈತಿಕ ಜವಬ್ದಾರಿಯನ್ನು ಪೂರೈಸಿದ ಕೆಲವು ಮುಖಗಳು ಸಮಾಜದ ಜ್ಞಾನವನ್ನು ಮುಸುಕಿನಲ್ಲಿ ದರ್ಶನಮಾಡಿಸುವ ಹೊಣೆ ಹೊತ್ತಿರುವುದು ವಿಪರ್ಯಾಸ!
          ಈ ಲೇಖನದಲ್ಲಿ ಎರಡು ಅಂಶಗಳನ್ನು ಚರ್ಚಿಸುವ ಪ್ರವೇಶಿಕೆಯನ್ನು ಕಾಣುತ್ತಿದ್ದೇನೆ ನೀವು ಇದನ್ನು ವಿಸ್ತರಿಸಬಹುದು.


ನಿರೂಪಕರಿಗೆ ನಿರ್ಣಯಿಸುವ ಸ್ವಾತಂತ್ರ್ಯ ನೀಡಿದವರಾರು?
ಮಾಧ್ಯಮಗಳಲ್ಲಿ ಇಂದು ನಿರೂಪಕರ ಸಂಖ್ಯೆ ಗಂಟೆ ಲೆಕ್ಕದ ಕೂಲಿಯಾಗಿದೆ. ಆದರೆ ತಮ್ಮ ಕರ್ತವ್ಯದ ದಿಕ್ಕನ್ನೇ ಮರೆತ ಇವರು ಪ್ರತಿನಿತ್ಯ ಜರುಗುವ ಘಟನೆಗಳಲ್ಲಿ ರೆಕ್ಕೆ ಪುಕ್ಕಗಳು ದೊರೆತ ಅರೆಬರೆ ವಿಷಯಗಳನ್ನು ವಿಸ್ಮಯದಂತೆ ಹಾರಿಸುವ ನೈತಿಕ ಜವಬ್ದಾರಿಯಲ್ಲಿ ಇವರಿಗೆ ದಕ್ಕಿರುವ ಜ್ಞಾನವಾದರೂ ಎಷ್ಟು! ಒಂದು ಘಟನೆಗೆ ಸಾಕ್ಷಿಯೇ ಇನ್ನೂ ತನಿಕೆಯ ಕಾರ್ಯದಲ್ಲಿ ತೊಡಗಿರುವಾಗಲೇ ನಿರ್ಣಯಿಸುವುದು ಎಷ್ಟು ಸಮಂಜಸ. ಸಮೂಹ ಮಾಧ್ಯಮವೆಂಬುದು ನಾಲ್ಕನೆಯ ಅಂಗವೆಂದು ಕರೆದುಕೊಂಡು ಸ್ವಯಂ ಘೋಷಿತರು ಸಂವಿಧಾನ ಪಾಲನೆಯೊಂದಿಗೆ ಜನರ ರಕ್ಷಣೆಯ ಹೊಣೆಯೇನು? ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯವನ್ನು ಎಷ್ಟು ಜನರು ಅಧ್ಯಯನ ಮಾಡಿ ಬಳಸುತ್ತಿದ್ದಾರೆ. ಆಸ್ಪತ್ರೆಗೆ ಬಂದವರೆಲ್ಲಾ ರೋಗಿಯೇ! ಮಾಧ್ಯಮದವರಿಗೆ ಮಾಹಿತಿಯನ್ನು ಪೂರ್ಣ ಪರಿಶೀಲನೆಯೊಂದಿಗೆ ಪಡೆದು ಜನರಿಗೆ ನ್ಯಾಯಬದ್ಧವಾಗಿ ತಲುಪಿಸುವ ಜವಬ್ದಾರಿಯೇ ಹೊರೆತು ಬ್ರೇಕಿಂಗ್ ನ್ಯೂಸ್‍ಗಳ ಮೂಲಕ ಬಣ್ಣ ಹಚ್ಚುವ ಟಿ ಆರ್ ಪಿ ಸಂಸ್ಕøತಿಯಲ್ಲ. ಇದು ಆಡಳಿತ ವಲಯಕ್ಕೆ ತಿಳಿಯದೇ ಕೀಲಿ ಗೊಂಬೆಯಾಗಿರುವ ಅಧಿಕಾರಿಗಳ ವರ್ಗವನ್ನು ಕಂಡು ನಾಚುವ ಕಾಲ ಕಣ್ಣೆದುರಿದೆ. ಅಧಿಕಾರದಲ್ಲಿರುವ ಉತ್ತಮ ಆಡಳಿತಗಾರನನ್ನು ವ್ಯಂಗ್ಯವಾಗಿ ಬಿಂಬಿಸುವ ಮಾಧ್ಯಮಗಳು ಜನರ ತಿಳುವಳಿಕೆಗೆ ಯಾವ ಅಂಶವನ್ನು ನೀಡುತ್ತಿದ್ದೇವೆ ಎಂಬ ಅರಿವನ್ನು ಯೋಚಿಸುವುದಿಲ್ಲವೇಕೆ! ಅನಗತ್ಯವನ್ನು ಬಿಂಬಿಸುವಷ್ಟು ಅಗತ್ಯವನ್ನು ತಲುಪಿಸುತ್ತಿಲ್ಲವೇಕೆ? 


ಯುವಕರಿಗೆ ದೊರೆತ ಮಾತಿನ ಮೈಲಿಗೆ..
ಯುವಕರೆಂದರೆ ಬೆಂಕಿಯ ರೂಪಗಳು, ಸಮಾಜದ ಹೊಸರೂಪಗಳು ಎಂಬ ಆಶಾಭಾವನೆಯನ್ನು ನಮ್ಮ ಹಿರಿಯ ವರ್ಗ ನೀಡಿತಾದರೂ ನಾವು ಏಕೆ ಅಳಿಸಲೆತ್ನಿಸುವ ಅಜ್ಞಾನವನ್ನು ತೋರುತ್ತಿದ್ದೇವೆ. ಮಾಧ್ಯಮವು ಸುಲಭವಾಗಿ ಕೈಗೆ ದೊರಕಿತೆಂಬ ಅಹಂ ಇಂದು ಯುವಕರಿಗೆ ಪೂರ್ಣ ಸ್ವಾತಂತ್ರ್ಯದ ಹಕ್ಕು ದೊರೆತಂತಾಗಿ ಮನುಷ್ಯ ಪದಕ್ಕೆ ಬೆಲೆಯೇ ಇಲ್ಲದಂತೆ ವರ್ತನೆಗಳು ಪ್ರಾರಂಭವಾಗಿವೆ. ಮೌಲ್ಯವೇ ಇಲ್ಲದಂತೆ ಮಾತನಾಡುವ, ವರ್ತಿಸುವ ಎಲ್ಲಾ ಬೆಳವಣಿಗೆಗಳು ಮಾತು, ಸಂದೇಶ, ನಡವಳಿಕೆಯಲ್ಲಿ ಕಂಡುಬರುತ್ತಿವೆ. ಕುಟುಂಬ, ಶಿಕ್ಷಣ, ಸಮಾಜವೆಂಬುದು ತನಗಿಷ್ಟದ ನೆಪವಾಗುತ್ತಿರುವ ವೇಳೆಯಲ್ಲಿ ಇವರಿಗೆ ಈ ಸ್ವಾತಂತ್ರ್ಯ ನೀಡಿದವರಾರು..
    ವಿಚಾರದ ಅಧ್ಯಯನವನ್ನೇ ಮಾಡದೇ ಪೂರ್ವಗ್ರಹಿತರಾಗಿ ಚಳುವಳಿ ಮಾಡುವ, ಬೆಂಬಲ ನೀಡುವ ಶಿಕ್ಷಣವನ್ನು ಯಾರು ನೀಡಿದ್ದಾರೆ.  ಸಂಘಟನೆಗಳೆಂದರೇನು... ಸಮಸ್ಯೆಗಳನ್ನು ಹುಡುಕುವುದೇ! ಪರಿಹಾರ ಹುಡುಕುವುದೇ! ಬೆಂಬಲ ಸೂಚಿಸುವುದೇ! ಏಕೆ ಈ ಅಂಶಗಳು ಅರ್ಥವಾಗುತ್ತಿಲ್ಲ. ಸಮಾಜದ ದ್ರೋಹಗಳೆಲ್ಲಾ ಹಣವೆಂಬ ನೆಪದಲ್ಲಿ ಸುಲಭ ಮಾರ್ಗಗಳನ್ನು ಅಲೋಚಿಸುತ್ತಾ ರಕ್ತ ಹೀರುವ ಸದ್ಗುಣರೂಪಗಳ ದರ್ಶನವು ಈ ಸಮಾಜಕ್ಕೆ ತಿಳಿಯುವುದೆಂದು?

  • ನ್ಯಾಯಾಲಯಕ್ಕೆ ಇಬ್ಬರೂ ಬಂದರು..
       ಸತ್ಯ ಹಾಗೂ ಸುಳ್ಳು ಇಬ್ಬರೂ ನ್ಯಾಯಾಲಯಕ್ಕೆ ಬರುವಾಗಲೇ ತಾನು ಬೆತ್ತಲೆ ಎಂಬುದು ಸುಳ್ಳಿಗೆ ತಿಳಿದಿರುತ್ತದೆ. ಆದರೂ ಭೂಷಣ ಪ್ರವೃತ್ತಿಯನ್ನು ಅದೆಂದಿಗೂ ಬಿಡಲಾರದು. ಒಬ್ಬ ವ್ಯಕ್ತಿ ಪೂರ್ಣವಾಗಿ ನ್ಯಾಯಕ್ಕೆ ಬದ್ಧವೆಂದ ಮೇಲೆ ಆ ವ್ಯಕ್ತಿಯ ಕುರಿತು ತನಗೆ ಸುಲಭವಾಗಿ ಲಭ್ಯವಾಗುವ ಅಕ್ಷರ, ಮಾತು, ಕ್ರಿಯೆಗಳಲ್ಲೆಲ್ಲಾ ಅಪೂರ್ಣ ಅನರ್ಥಗಳನ್ನು ಸೃಷ್ಟಿಸುವ ನೈತಿಕ ಸ್ವಾತಂತ್ರ್ಯವನ್ನು ಈ ಸಮಾಜಕ್ಕೆ ನೀಡಿದವರಾರು? ರಕ್ಷಕರು, ನ್ಯಾಯಧೀಶರು ಎಂಬೆಲ್ಲಾ ವ್ಯವಸ್ಥೆಗಳು ಇರುವುದಾದರೂ ಏಕೆ? ನಮ್ಮ ಮನೆಯೇ ನಮಗೆ ಪೂರ್ಣವಾಗಿ ಅರ್ಥವಾಗದಿರಲು ಕಾರಣ ನಮಗೆ ಪರಿಸರದ ಅನುಭವದ ಕೊರತೆ ಆದರೆ ಒಂದು ಸ್ಥಳವನ್ನು ನೋಡದೆ, ಎಂದೋ ನೋಡಿದ ಕಲ್ಪನೆಯಲ್ಲೇ, ಇನ್ನೊಬ್ಬರ ಹೇಳಿಕೆಯಲ್ಲಿ ನಾವು ನಮ್ಮದೇ ನಿರ್ಧಾರಗಳನ್ನು ಸುಲಭವಾಗಿ ಮಾರಿಕೊಂಡರೆ ನಮ್ಮ ಅಸ್ತಿತ್ವದ ಪ್ರಶ್ನೆಯಾದರೂ ಏನು? ನಾವು ಒಬ್ಬ ಮನುಷ್ಯನಿಗೆ ಸಹಾಯ ಮಾಡಲಾಗದ ಶಕ್ತಿ ಇಲ್ಲದ ಮೇಲೆ ಆತನನ್ನು ನಿಂದಿಸುವ ಯಾವ ನೈತಿಕತೆಯೂ ನಮಗೆ ಇರಲಾರದು ಎಂಬ ಬುದ್ಧನ ನುಡಿಗೆ ಅರ್ಥವಿಲ್ಲವೇ.. ಅಕ್ಷರ ಕಲಿತವರ ಗೊಸಂಬಿತನಗಳಿಗೆ ಅನಕ್ಷರಸ್ಥ ಬಲಿಯಾಗುತ್ತಿದ್ದಾನೆ. ಮಕ್ಕಳು ಬದುಕನ್ನು ಅರ್ಥವಿಲ್ಲದ ಅಯನದಲ್ಲಿ ಉಸಿರುಗಟ್ಟುತ್ತಾ ನಾಳೆಯ ವ್ಯವಹಾರದ ದಾಳಗಳಾಗುವುದು ಇಂದಿನ ಅನಿವಾರ್ಯ ಸ್ವರೂಪಿ ಜಗತ್ತಿನ ಲೀಲೆ!
     ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಯೋಚಿಸಬೇಕಾದುದು ಇಲ್ಲಿ ಯಾವುದು ಅಗತ್ಯ, ಹಾಗೂ ಅನಗತ್ಯವಾದುದನ್ನು ಮುಂದುವರೆಸಬೇಕೆ? ನಮ್ಮ ಎಂತಹ ರಾಜಕೀಯ ನಾಯಕರು ಬೇಕು, ಯಾವ ರೀತಿಯ ಸಾಂಸ್ಕøತಿಕ ಚಿಂತಕರು ಬೇಕು.. ಹಾಗೂ ಮೊದಲು ನಾವು ಯಾರು, ಇಲ್ಲಿ ನಮ್ಮ ಅಸ್ಥಿತ್ವವೇನು? ನಾವು ಮಾತನಾಡುವ ನುಡಿಯ ಶುದ್ಧತೆ ಹೇಗಿರಬೇಕು. ನಮ್ಮ ಒಪ್ಪಿಕೊಳ್ಳುವ ಸಮಾಜ ಹೇಗಿದೆ. ನಾವು ಸ್ವತಂತ್ರರೇ! ಇಷ್ಟೆಲ್ಲಾ ಪ್ರಶ್ನೆಗಳಿಗೆ ಮಾನಸಿಕವಾದ ನಮ್ಮದೇ ಉತ್ತರ ಕಂಡುಕೊಂಡರೆ ನಾಶವಾಗುತ್ತಿರುವ ಭಾರತೀಯ ಅಂತಃಸತ್ವ ಉಳಿಯುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು.. ಮಾತೆಂಬುದು ಜ್ಯೋತಿರ್ಲಿಂಗ.. ಮೊದಲಾದ ನುಡಿಗಳಿಗೆ ಅಂಟಿದ ಮೈಲಿಗೆಯನ್ನು ಕಳಚುವ ಪ್ರಯತ್ನ ಮಾಡಬಹುದು. 
ಶ್ರೇಷ್ಟವಾದುದು ಯಾವಾಗಲೂ ಶಾಶ್ವತವಾಗಿ ಉಳಿಯುತ್ತದೆ ಹಾಗೂ ಇದನ್ನು ಕುರಿತು ಯೋಚಿಸುವಾಗ ನಮ್ಮ ಜ್ಞಾನದ ಅರ್ಹತೆಯನ್ನು ನಾವು ಪರಿಶೀಲಿಸಿಕೊಳ್ಳಲೇಬೇಕು