ಗಣರಾಜ್ಯದ ಚಿಂತನೆಗಳು
ಭಾರತವು ಬಹುತ್ವದೊಳಗೆ ಏಕತೆ ರೂಪಿಸಿಕೊಂಡ ದೇಶವಾಗಿದೆ. ೧೯೫೦ರ ಜನವರಿ ೨೬ರಂದು ಭಾರತಕ್ಕೆ ಸಂವಿಧಾನದ ಮೂಲಕ ಗಣರಾಜ್ಯ ಸ್ವರೂಪ ನೀಡಿದರು. ಈ ಮಣ್ಣಿನ ದಾರ್ಶನಿಕರು ಕಂಡುಕೊಂಡಿದ್ದ ಪರಮೋನ್ನತ ‘ಧರ್ಮ'ದ ಆಧುನಿಕ ಲಿಖಿತ ರೂಪವಾಗಿತ್ತು. ಗಣರಾಜ್ಯೋತ್ಸವದ ಈ ಸಂಭ್ರಮದ ಸಂದರ್ಭದಲ್ಲಿ, ನಮ್ಮ ಸಂವಿಧಾನದ ಆಶಯಗಳಿಗೂ ಮತ್ತು ಭಾರತೀಯ ಆಧ್ಯಾತ್ಮಿಕ ಚಿಂತನೆಗಳಿಗೂ ಇರುವ ಅವಿನಾಭಾವ ಸಂಬಂಧವು ದೇಹ ಮತ್ತು ಮನಸ್ಸಿನಂತಹ ಹೊಂದಾಣಿಕೆಯಾಗಿದೆ.
ವಸುದೈವ ಕುಟುಂಬಕಂ
ಭಾರತೀಯ ಆಧ್ಯಾತ್ಮದ ಸಾರವೆಂದರೆ ‘ಏಕತೆ'. ಈ ದೇಶದ ಋಷಿ-ಮುನಿಗಳು ಕಂಡುಕೊಂಡ ಅತ್ಯುನ್ನತ ಸತ್ಯವೇನೆಂದರೆ, ಈ ಜಗತ್ತಿನ ಎಲ್ಲ ಜೀವರಾಶಿಗಳೂ ಒಂದೇ ಪರಮ ಚೇತನದ ವಿವಿಧ ರೂಪಗಳು. ಮಹಾ ಉಪನಿಷತ್ತಿನ ಪ್ರಸಿದ್ಧ ಮಂತ್ರವು ಹೀಗೆ ಹೇಳುತ್ತದೆ: ‘ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ | ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ||’ (ಮಹಾ ಉಪನಿಷತ್, ೬.೭೧) ಇವನು ನನ್ನವನು, ಇವನು ಪರಕೀಯನು ಎಂದು ಎಣಿಸುವುದು ಸಂಕುಚಿತ ಮನೋಭಾವದ ಲಕ್ಷಣ; ವಿಶಾಲ ಹೃದಯದವರಿಗೆ ಇಡೀ ಜಗತ್ತೇ ಒಂದು ಕುಟುಂಬ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಲಾದ ‘ಭ್ರಾತೃತ್ವ' ಎಂಬ ಪದಕ್ಕೆ ಮೂಲವೇ ಈ ಆಧ್ಯಾತ್ಮ ಚಿಂತನೆ. ವೈವಿಧ್ಯತೆಯನ್ನು ಸಂಭ್ರಮಿಸುತ್ತಲೇ ಎಲ್ಲರನ್ನೂ ಒಗ್ಗೂಡಿಸುವ ಈ ಮಂತ್ರವೇ ಗಣರಾಜ್ಯದ ಜೀವಾಳವಾಗಿದೆ. ನಾವು ಇಂದು ಮಾತನಾಡುತ್ತಿರುವ ‘ಜಾಗತಿಕ ಗ್ರಾಮ' ಪರಿಕಲ್ಪನೆಗೆ ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಆಧ್ಯಾತ್ಮವು ನಾಂದಿ ಹಾಡಿತ್ತು. ಸಂವಿಧಾನವು ಈ ಆಧ್ಯಾತ್ಮಿಕ ಸೋದರತ್ವವನ್ನು ಕಾನೂನಾತ್ಮಕ ಚೌಕಟ್ಟಿನಲ್ಲಿ ನಿರೂಪಿಸಿದೆ.
ಸಾಂವಿಧಾನಿಕ ಸಮಾನತೆ ಮತ್ತು ಅದ್ವೈತ ದರ್ಶನ
ಸಂವಿಧಾನದ ೧೪ನೇ ವಿಧಿಯು ‘ಕಾನೂನಿನ ಮುಂದೆ ಎಲ್ಲರೂ ಸಮಾನರು' ಎಂದು ಘೋಷಿಸುತ್ತದೆ. ಈ ಸಾಮಾಜಿಕ ಸಮಾನತೆಯ ಮೂಲವು ಉಪನಿಷತ್ತುಗಳ ‘ಅದ್ವೆöÊತ' ಚಿಂತನೆಯಲ್ಲಿದೆ. ‘ಸರ್ವಂ ಖಲ್ವಿದಂ ಬ್ರಹ್ಮ’ (ಛಾಂದೋಗ್ಯ ಉಪನಿಷತ್, ೩.೧೪.೧) ಅಂದರೆ ‘ಇರುವುದೆಲ್ಲವೂ ಆ ಪರಬ್ರಹ್ಮವೇ' ಎಂಬ ದರ್ಶನವು ಮನುಷ್ಯರಲ್ಲಿ ಮೇಲು-ಕೀಳು ಎಂಬ ಭೇದವನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಸಮಾಜದಲ್ಲಿ ಜಾತಿ, ಧರ್ಮ ಅಥವಾ ಲಿಂಗದ ಹೆಸರಿನಲ್ಲಿರುವ ಅಸಮಾನತೆಯನ್ನು ತೊಡೆದುಹಾಕಲು ಸಂವಿಧಾನವು ಹಾಕಿಕೊಟ್ಟ ತತ್ವಗಳು, ವಾಸ್ತವವಾಗಿ ನಮ್ಮ ಅಂತರಾತ್ಮದಲ್ಲಿರುವ ದೈವತ್ವದ ಸಮಾನತೆಯನ್ನು ಸಾಮಾಜಿಕವಾಗಿ ಪ್ರತಿಷ್ಠಾಪಿಸುವ ಪ್ರಯತ್ನಗಳಾಗಿವೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯನ್ನು ಕೇವಲ ರಾಜಕೀಯ ಹಕ್ಕಾಗಿ ನೋಡಲಿಲ್ಲ, ಬದಲಿಗೆ ಅದನ್ನು ವ್ಯಕ್ತಿಯ ಘನತೆಯ ಪ್ರಶ್ನೆಯಾಗಿ ನೋಡಿದರು. ಋಗ್ವೇದವು “ಅಜ್ಯೇಷ್ಠಾಸೋ ಅಕನಿಷ್ಠಾಸೋ ಏತೇ ಸಭ್ರಾತರೋ ವಾ ವೃಧುಃ ಸೌಭಾಗ್ಯಾಯ” (ಋಗ್ವೇದ ೫.೬೦.೫) ಎಂದು ಹೇಳುತ್ತದೆ, ಅಂದರೆ “ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ; ಎಲ್ಲರೂ ಸೋದರರಂತೆ ಸಮಾನವಾಗಿ ಅಭಿವೃದ್ಧಿ ಹೊಂದಬೇಕು.” ಇದೇ ಆಶಯವನ್ನು ಕುವೆಂಪು ಅವರು ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ವೆಂದರು. ಈ ಸಂದೇಶವು ಸಂವಿಧಾನದ ಸಮಾನತೆಯ ಹಕ್ಕಿನಲ್ಲಿ ಅಡಗಿದೆ.
ಧರ್ಮನಿರಪೇಕ್ಷತೆ ಮತ್ತು ಸರ್ವಧರ್ಮ ಸಮಭಾವ
ಭಾರತವು ಧರ್ಮನಿರಪೇಕ್ಷ ರಾಷ್ಟ್ರವೆಂದು ಕರೆಸಿಕೊಳ್ಳಲು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಹಿಷ್ಣುತೆಯೇ ಕಾರಣ. ಋಗ್ವೇದದ ಪ್ರಸಿದ್ಧ ವಾಕ್ಯ: “ಏಕಂ ಸತ್ ವಿಪ್ರಾ ಬಹುಧಾ ವದಂತಿ” (ಋಗ್ವೇದ, ೧.೧೬೪.೪೬) ಸತ್ಯವು ಒಂದೇ ಆಗಿದ್ದರೂ ಜ್ಞಾನಿಗಳು ಅದನ್ನು ವಿವಿಧ ರೀತಿಯಲ್ಲಿ ವರ್ಣಿಸುತ್ತಾರೆ. ಈ ಉದಾತ್ತವಾದ ಆಧ್ಯಾತ್ಮಿಕ ಚಿಂತನೆಯೇ ಸಂವಿಧಾನದ ೨೫ರಿಂದ ೨೮ನೇ ವಿಧಿಗಳವರೆಗೆ ಕಂಡುಬರುವ ‘ಧಾರ್ಮಿಕ ಸ್ವಾತಂತ್ರ್ಯದ ಹಕ್ಕು'ಗಳಿಗೆ ಪ್ರೇರಣೆ ಹೊಂದಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ‘ಸೆಕ್ಯುಲರಿಸಂ' ಎಂದರೆ ಧರ್ಮ ಮತ್ತು ರಾಜಕಾರಣದ ನಡುವಿನ ಗೋಡೆ. ಆದರೆ ಭಾರತದಲ್ಲಿ ಅದು ‘ಸರ್ವಧರ್ಮ ಸಮಭಾವ'. ಅಂದರೆ, ರಾಜ್ಯವು ಎಲ್ಲ ಧರ್ಮಗಳನ್ನೂ ಸಮಾನ ಗೌರವದಿಂದ ಕಾಣುವುದು. ಇದು ಅಶೋಕ ಚಕ್ರವರ್ತಿಯ ಶಾಸನಗಳಿಂದ ಹಿಡಿದು ವಿವೇಕಾನಂದರ ಭಾಷಣಗಳವರೆಗೆ ಹರಿದು ಬಂದಿರುವ ಭಾರತೀಯ ಆಧ್ಯಾತ್ಮಿಕ ಉದಾರತೆಯ ಫಲವಾಗಿದೆ.
ಕರ್ಮಯೋಗ ಮತ್ತು ನಾಗರಿಕ ಕರ್ತವ್ಯಗಳು
ನಾವು ಸಾಮಾನ್ಯವಾಗಿ ಹಕ್ಕುಗಳ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಆದರೆ, ಹಕ್ಕುಗಳಿಗಿಂತಲೂ ಮುಖ್ಯವಾದುದು ‘ಧರ್ಮ' ಅಥವಾ ‘ಕರ್ತವ್ಯ'. ಭಗವದ್ಗೀತೆಯ ಪ್ರಸಿದ್ಧ ಶ್ಲೋಕ: “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|” (ಭಗವದ್ಗೀತೆ, ೨.೪೭) ನಾವು ನಮ್ಮ ಕರ್ತವ್ಯದಲ್ಲಿ ನಿಷ್ಠರಾಗಿರಬೇಕು ಎಂದು ಇದು ಬೋಧಿಸುತ್ತದೆ. ಸಂವಿಧಾನದ ೫೧ಎ ವಿಧಿಯಲ್ಲಿ ವಿವರಿಸಲಾದ ‘ಮೂಲಭೂತ ಕರ್ತವ್ಯಗಳು' ಒಬ್ಬ ನಾಗರಿಕನು ತನ್ನರಾಷ್ಟ್ರದ ಬಗ್ಗೆ ಹೊಂದಿರಬೇಕಾದ ಆಧ್ಯಾತ್ಮಿಕ ಶಿಸ್ತನ್ನೇ ಪ್ರತಿಬಿಂಬಿಸುತ್ತವೆ. ಪರಿಸರ ರಕ್ಷಣೆ (ಪ್ರಕೃತಿಯನ್ನು ದೈವವೆಂದು ಪೂಜಿಸುವ ಪರಂಪರೆ), ಸ್ತ್ರೀಯರು(ಯತ್ರ ನಾರ್ಯಸ್ತು ಪೂಜ್ಯಂತೇ...), ಮತ್ತು ದೇಶದ ಏಕತೆಯನ್ನು ಕಾಪಾಡುವುದು - ಇವೆಲ್ಲವೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ‘ರಾಷ್ಟ್ರ ಧರ್ಮ'ಗಳಾಗಿವೆ. ವ್ಯಕ್ತಿಯು ತನ್ನ ಸ್ವಾರ್ಥವನ್ನು ಮೀರಿ ಸಮಾಜಕ್ಕಾಗಿ ಶ್ರಮಿಸಿದಾಗ ಮಾತ್ರ ಗಣರಾಜ್ಯವು ಸದೃಢವಾಗುತ್ತದೆ.
ನ್ಯಾಯದ ಪರಿಕಲ್ಪನೆ ಮತ್ತು ಸಾಮಾಜಿಕ ಹಿತ
ಸಂವಿಧಾನದ ಪೀಠಿಕೆಯಲ್ಲಿ ‘ನ್ಯಾಯ' ಎನ್ನುವ ಪದಕ್ಕೆ ಮೊದಲ ಸ್ಥಾನವಿದೆ. ಆಧ್ಯಾತ್ಮಿಕವಾಗಿ ನ್ಯಾಯವೆಂದರೆ ಕೇವಲ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದಲ್ಲ, ಬದಲಿಗೆ ಸಮಸ್ತ ಜೀವಿಗಳಿಗೂ ಬದುಕುವ ಅವಕಾಶ ಕಲ್ಪಿಸುವುದು. “ಪರಹಿತಾಯ ಪುಣ್ಯಾಯ ಪಾಪಾಯ ಪರಪೀಡನಮ್” (ಪುರಾಣ ಸಾರ) ಇತರರಿಗೆ ಒಳ್ಳೆಯದನ್ನು ಮಾಡುವುದೇ ಪುಣ್ಯ, ನೋಯಿಸುವುದೇ ಪಾಪ. ಸಂವಿಧಾನದ ‘ರಾಜ್ಯ ನಿರ್ದೇಶಕ ತತ್ವಗಳು' ಇದೇ ಪುಣ್ಯಕಾರ್ಯವನ್ನು ಸರ್ಕಾರಗಳ ಆದ್ಯ ಕರ್ತವ್ಯವನ್ನಾಗಿ ಮಾಡಿದೆ. ಅಸಹಾಯಕರಿಗೆ ರಕ್ಷಣೆ, ಹಸಿದವರಿಗೆ ಅನ್ನ ಮತ್ತು ದೀನರಿಗೆ ನ್ಯಾಯ ಒದಗಿಸುವ ಮೂಲಕ ‘ಕಲ್ಯಾಣ ರಾಜ್ಯ'ದ ಕನಸನ್ನು ನನಸು ಮಾಡಲು ಸಂವಿಧಾನವು ಹಾದಿ ಮಾಡಿಕೊಟ್ಟಿದೆ.
ಸ್ವಾತಂತ್ರ್ಯ ಮತ್ತು ಆತ್ಮ ಚೈತನ್ಯ
ಸಂವಿಧಾನವು ನೀಡುವ ಸ್ವಾತಂತ್ರö್ಯ ಕೇವಲ ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಶಕ್ತವಾಗಿದೆ. ಆಧ್ಯಾತ್ಮಿಕವಾಗಿ ಸ್ವಾತಂತ್ರ ಎಂದರೆ ‘ಮುಕ್ತಿ' ಅಥವಾ ‘ಮೋಕ್ಷ'. ತನ್ನ ಪ್ರತಿಭೆ, ಚಿಂತನೆ ಮತ್ತು ವ್ಯಕ್ತಿತ್ವವನ್ನು ಯಾವುದೇ ಅಡೆತಡೆಯಿಲ್ಲದೆ ಬೆಳೆಸಿಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ. ಇದು ಉಪನಿಷತ್ತುಗಳ “ಉದ್ಧರೇದಾತ್ಮನಾತ್ಮಾನಂ” (ನಿನ್ನನ್ನು ನೀನೇ ಉದ್ಧರಿಸಿಕೊ) ಎಂಬ ಮಾತಿಗೆ ಪೂರಕವಾಗಿದೆ. ತನ್ನನ್ನು ತಾನು ಅರಿತುಕೊಳ್ಳಲು ಬೇಕಾದ ವಾಕ್ ಸ್ವಾತಂತ್ರö್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನಂಬಿಕೆಯ ಸ್ವಾತಂತ್ರ್ಯಗಳು ಪ್ರಜಾಪ್ರಭುತ್ವದ ಅಧ್ಯಾತ್ಮಿಕ ಆಯಾಮಗಳಾಗಿವೆ.
ಸಂವಿಧಾನವು ಓದುವ, ಕಾಣಿಸುವ ಪಠ್ಯವಾಗದೆ ಅಳವಡಿಸಿಕೊಳ್ಳುವ ‘ಸಂಸ್ಕಾರ’ವಾಗಬೇಕು. ಭಾರತೀಯ ಸಂಸ್ಕೃತಿಯಲ್ಲಿ ನಾವು ರೂಪಿಸಿಕೊಂಡಿರುವ ಎಲ್ಲಾ ಕಾನೂನಿನ ವಿಚಾರಗಳು ಸಂಸ್ಕೃತಿಯ ಹೆಸರಿನಲ್ಲಿ ನಿರ್ವಚನಗೊಂಡಿವೆ. ಆತ್ಮಶಕ್ತಿಯೆಂಬ ಆಧ್ಯಾತ್ಮ ಬೇರಿನಿಂದ ಸಂವಿಧಾನವೆಂಬ ಕಾನೂನು ಶಕ್ತಿಯು ರೂಪುಗೊಂಡಿರುವುದು ಭಾರತದ ಜೀವ ಚೈತನ್ಯವಾಗಿದೆ.
ಡಾ. ರವಿಶಂಕರ್ ಎ.ಕೆ.
ಕನ್ನಡ ಅಧ್ಯಾಪಕ, ಕ್ರಿಸ್ತು ಜಯಂತಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ, ಬೆಂಗಳೂರು




.jpg)









.jpeg)
