ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಫೆಬ್ರವರಿ 22, 2020

ಕುರುಡು ಕಾಂಚಾಣಾ………………………ದ. ರಾ. ಬೇಂದ್ರೆ



ಕುರುಡು ಕಾಂಚಾಣಾ ಕುಣಿಯುತಲಿತ್ತು |
ಕಾಲಿಗೆ ಬಿದ್ದವರ ತುಳಿಯುತಲಿತ್ತೋ ||
                        ಕುರುಡು ಕಾಂಚಾಣಾ ||
      ಬಾಣಂತಿಯೆಲುಬ ಸಾ-
      ಬಾಣದ ಬಿಳುಪಿನಾ
      ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ;
               ಸಣ್ಣ ಕಂದಮ್ಮಗಳ
               ಕಣ್ಣೀನ ಕವಡಿಯ
               ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;
      ಬಡವರ ಒಡಲಿನ
      ಬಡಬಾsನಲದಲ್ಲಿ
      ಸುಡು ಸುಡು ಪಂಜು ಕೈಯೊಳಗಿತ್ತೋ;
               ಕಂಬನಿ ಕುಡಿಯುವ
               ಹುಂಬ ಬಾಯಿಲೆ ಮೈ-
               ದುಂಬಿದಂತುಧೋ ಉಧೋ ಎನ್ನುತಲಿತ್ತೋ;
      ಕೂಲಿ ಕುಂಬಳಿಯವರ
      ಪಾಲಿನ ಮೈದೊಗಲ
      ಧೂಳಿಯ ಭಂಡಾರ ಹಣೆಯೊಳಗಿತ್ತೋ;
               ಗುಡಿಯೊಳಗೆ ಗಣಣ, ಮಾ
               ಹಡಿಯೊಳಗೆ ತನನ, ಅಂ-
               ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ;
      ಹ್ಯಾಂಗಾರೆ ಕುಣಿಕುಣಿದು
      ಮಂಗಾಟ ನಡೆದಾಗ
      ಅಂಗಾತ ಬಿತ್ತೋ, ಹೆಗಲಲಿ ಎತ್ತೋ.

‘ಕುರುಡು ಕಾಂಚಾಣಾ’ ಕವನವು ಅಂಬಿಕಾತನಯದತ್ತರ ‘ನಾದಲೀಲೆ’ ಕವನಸಂಗ್ರಹದಲ್ಲಿ ಅಡಕವಾಗಿದೆ. ಈ ಕವನಸಂಕಲನವು ೧೯೩೮ನೆಯ ಇಸವಿಯಲ್ಲಿ ಪ್ರಕಟವಾಯಿತು. ಬ್ರಿಟಿಶ್ ಸರಕಾರದ ಶೋಷಣೆಯ ನೀತಿಯಿಂದಾಗಿ ಭಾರತೀಯರು ಕಡುಕಷ್ಟವನ್ನು ಎದುರಿಸುತ್ತಿದ್ದ ಕಾಲವದು; ಸಾಮಾನ್ಯ ಪ್ರಜೆಗಳು ಒಂದು ತುತ್ತು ಕೂಳಿಗಾಗಿ ಪರದಾಡುತ್ತಿರುವಾಗ, ಸರಕಾರವು ಹಾಗು ಸರಕಾರದ ಚೇಲಾಗಳಾದ ಲಾಭಬಡುಕರು ಮೆರೆದಾಡುತ್ತಿದ್ದ ಕಾಲವದು; ಮಾನವೀಯತೆಯು ಸತ್ತು ಹೋಗಿ, ನರಭಕ್ಷಣೆಯೇ ಮೇಲ್ಗೈ ಸಾಧಿಸಿದಂತಹ ಕಾಲವದು. ಈ ಸಂಕಟಮಯ ಪರಿಸ್ಥಿತಿಯು ಬೇಂದ್ರೆಯವರ ಕವನಗಳಲ್ಲಿ ವ್ಯಕ್ತವಾಗಿದೆ. ‘ನಾದಲೀಲೆ’ ಸಂಕಲನದಲ್ಲಿಯೇ ಇರುವ ‘ಮನುವಿನ ಮಕ್ಕಳು’, ‘ಅನ್ನಾವತಾರ’, ‘ಭೂಮಿತಾಯಿಯ ಚೊಚ್ಚಲ ಮಗ’  ಹಾಗು ‘ಗರಿ’ ಸಂಕಲನದಲ್ಲಿರುವ  ‘ತುತ್ತಿನ ಚೀಲ’ ಮೊದಲಾದ ಕವನಗಳು ಇದಕ್ಕೆ ನಿದರ್ಶನಗಳಾಗಿವೆ.
………………………………………………………………
ಕುರುಡು ಕಾಂಚಾಣಾ ಕುಣಿಯುತಲಿತ್ತು |
ಕಾಲಿಗೆ ಬಿದ್ದವರ ತುಳಿಯುತಲಿತ್ತೋ ||
                   ಕುರುಡು ಕಾಂಚಾಣಾ ||

‘ಕುರುಡು ಕಾಂಚಾಣಾ’ ಎನ್ನುವುದು ಒಂದು personification. ಕಾಂಚಾಣಲೋಭಿ ಹೃದಯಹೀನರ ಪ್ರತೀಕವಿದು. ಇವರು ಕುಣಿಯುವುದು ಸಂಪತ್ತಿನ ದೇವಿಯ ಎದುರಿನಲ್ಲಿ. ಸಂಪತ್ತು ಕೇವಲ ಕೆಲವರ ಐಶಾರಾಮಿಗಾಗಿ ಇರದೆ ಸರ್ವರ ಒಳಿತಿಗಾಗಿ, ಏಳ್ಗೆಗಾಗಿ ಇರಬೇಕು. ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ. ಇಂತಹ ಕುರುಡು ಕಾಂಚಾಣದ ಉನ್ಮಾದದ ಕುಣಿತವನ್ನು ಬೇಂದ್ರೆಯವರು (ಎಲ್ಲಮ್ಮನ)ಜೋಗತಿಯ ಉನ್ಮಾದದ ಕುಣಿತದೊಂದಿಗೆ ಹೋಲಿಸುತ್ತಿದ್ದಾರೆ. ಪಲ್ಲದ ಮೊದಲ ಸಾಲಿನಲ್ಲಿ ‘ಕುಣಿಯುತಲಿತ್ತು’ ಎನ್ನುವ ಸಾಮಾನ್ಯ ನೋಟದೊಂದಿಗೆ ಪ್ರಾರಂಭವಾಗುವ ಕವನವು, ಎರಡನೆಯ ಸಾಲಿನಲ್ಲಿ ‘ತುಳಿಯುತಲಿತ್ತೋ’ ಎನ್ನುವ ಪದದಿಂದ ಉದ್ವಿಗ್ನತೆಯನ್ನು, ಹತಾಶೆಯನ್ನು ವ್ಯಕ್ತಪಡಿಸುತ್ತದೆ. ಎಲ್ಲಮ್ಮನ ಜೋಗತಿ ಹಾಗು ಕಾಂಚಾಣಜೋಗತಿ ಈರ್ವರೂ ಜೋಗತಿಯರೇ. ಎಲ್ಲಮ್ಮನ ಜೋಗತಿ ಭಕ್ತಿಯ ಉನ್ಮಾದದಲ್ಲಿದ್ದರೆ, ಕಾಂಚಾಣಜೋಗತಿ ದುಡ್ಡಿನ ಉನ್ಮಾದದಲ್ಲಿದ್ದಾಳೆ.  ಈ ಕವನದಲ್ಲಿ ಇವಳ ತೊಡುಗೆಯನ್ನು ಅವಳಿಗಿಟ್ಟು ಬೇಂದ್ರೆಯವರು ಚಿತ್ರಿಸಿದ್ದಾರೆ.

ಮೈಮೇಲೆ ದೇವಿ ಬಂದಾಗ, ಎಲ್ಲಮ್ಮನ ಜೋಗತಿಯು ಉನ್ಮಾದದಿಂದ ಕುಣಿಯುತ್ತಾಳೆ. ಅನೇಕ ಭಕ್ತರು ಜೋಗತಿಯ ಕಾಲಿಗೆ ಬಿದ್ದು, ಅವಳಿಂದ (ಎಲ್ಲಮ್ಮನ) ಅನುಗ್ರಹವನ್ನು ಪಡೆಯುತ್ತಾರೆ. ಕುರುಡು ಕಾಂಚಾಣವೂ ಸಹ ಅದೇ ರೀತಿಯಲ್ಲಿ ಉನ್ಮಾದದಿಂದ ಕುಣಿಯುತ್ತಿದೆ. ಹೊಟ್ಟೆಗಿಲ್ಲದ ಜನರು ಎರಡು ತುತ್ತು ಕೂಳಿಗಾಗಿ ಇವಳ ಕಾಲಿಗೆ ಬೀಳುತ್ತಾರೆ. ಅವರನ್ನೆಲ್ಲ ಈ ಜೋಗತಿ ತುಳಿದು ಹಾಕುತ್ತಾಳೆ. ಈ ರೀತಿಯಾಗಿ ಕವನದ ಪಲ್ಲದಲ್ಲಿ ‘ಕಾಂಚಾಣ-ಜೋಗತಿಯ’ ಕುಣಿತವನ್ನು  ಬೇಂದ್ರೆಯವರು (ಎಲ್ಲಮ್ಮನ) ಜೋಗತಿಗೆ ಹೋಲಿಸಿ ಚಿತ್ರಿಸಿದ್ದಾರೆ; ಮುಂದಿನ ನುಡಿಗಳಲ್ಲಿ, ಅವಳ ವೇಷಭೂಷಗಳನ್ನು ವರ್ಣಿಸಿದ್ದಾರೆ.

     ಬಾಣಂತಿಯೆಲುಬ ಸಾ-
     ಬಾಣದ ಬಿಳುಪಿನಾ
     ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ;
              ಸಣ್ಣ ಕಂದಮ್ಮಗಳ
             ಕಣ್ಣೀನ ಕವಡಿಯ
             ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

(ಎಲ್ಲಮ್ಮನ) ಜೋಗತಿಯು ತನ್ನ ಕಾಲಲ್ಲಿ ಬೆಳ್ಳಿಯ ಕಿರುಗೆಜ್ಜೆಗಳನ್ನು ಧರಿಸಿರುತ್ತಾಳೆ. ಕಾಂಚಾಣಜೋಗತಿಯೂ ಸಹ ತನ್ನ ಕಣಕಾಲುಗಳಲ್ಲಿ ಕಿರುಗೆಜ್ಜೆಗಳನ್ನು ಧರಿಸಿದ್ದಾಳೆ. ಆದರೆ ಇವು ಬಾಣಂತಿಯ ಎಲುವಿನಿಂದ ಮಾಡಿದ ಗೆಜ್ಜೆಗಳು. ಈ ಗೆಜ್ಜೆಗಳು ಸವೆದು ಹೋದ ಸಾಬಾಣದಷ್ಟು (soap) ಬೆಳ್ಳಗಿವೆ. ‘ಬಾಣಂತಿಯೆಲುಬು’ ಇಲ್ಲಿ ಎರಡು ಅರ್ಥಗಳನ್ನು ಧ್ವನಿಸುತ್ತದೆ. ಬಾಣಂತಿಯು ಮಗುವನ್ನು ಹೆತ್ತು ಸೃಷ್ಟಿಕ್ರಿಯೆಯನ್ನು ಮುಂದುವರಿಸುವಂತಹ ಹೆಂಗಸು. ಬಡತನದ ಹೊಡೆತದಿಂದಾಗಿ ಹಾಗು ಸಾಮಾಜಿಕ ಅನ್ಯಾಯದಿಂದ ಬಾಣಂತಿಯು ಈಗ ಸತ್ತು ಹೆಣವಾಗಿದ್ದಾಳೆ; ನಿಸರ್ಗಸಹಜವಾದ ಸೃಷ್ಟಿಕಾರ್ಯವು ನಿಂತು ಹೋಗಿದೆ. ಸವೆದು ಹೋಗಿ ಬೆಳ್ಳಗಾದ ಸಾಬಾಣವು ದುಡಿದುಡಿದು ಕ್ಷೀಣವಾದ ಬಾಣಂತಿಯನ್ನು ಸೂಚಿಸುತ್ತದೆ.

ಎರಡನೆಯ ಅರ್ಥವೆಂದರೆ, ಬಾಣಂತಿಯ ಎಲುಬಗಳನ್ನು ಮಾಟಗಾರರು ಅಭಿಚಾರಕ್ರಿಯೆಯಲ್ಲಿ ಬಳಸುತ್ತಾರೆ. ಈ ಕಾಂಚಾಣಜೋಗತಿಯು ತನ್ನ ಕಣಕಾಲುಗಳಲ್ಲಿ ಬಾಣಂತಿಯ ಎಲುವುಗಳ ಕಿರುಗೆಜ್ಜೆಯನ್ನು ಕಟ್ಟಿಕೊಂಡು ಕುಣಿಯುವ ಮಾಟಗಾತಿಯಾಗಿದ್ದಾಳೆ. ಇವಳ ಅಂತಿಮ ಉದ್ದೇಶವು ಸಮಾಜವನ್ನು ಹಾಳುಗೆಡುವುದಾಗಿದೆ. ಆದರೆ ಈ ಗೆಜ್ಜೆಗಳು ‘ಕಾಣದ ಕಿರುಗೆಜ್ಜೆಗಳು’. ಆದುದರಿಂದ ಕಾಂಚಾಣಜೋಗತಿಯ ಕಿರುಗೆಜ್ಜೆಗಳಾಗಲಿ ಅಥವಾ ಅವಳ ಹೀನ ಉದ್ದೇಶವಾಗಲಿ ಸಮಾಜಕ್ಕೆ ಅದೃಶ್ಯವಾಗಿಯೇ ಇರುತ್ತವೆ.

ಇನ್ನು ಈ ಜೋಗತಿ ಧರಿಸಿದಂತಹ ‘ಜೋಮಾಲೆ’(=ಜೋಗತಿಯ ಮಾಲೆ) ಎಂತಹದು? ಬಾಣಂತಿಯನ್ನು ಕೊಂದವಳು ಅವಳ ಮಕ್ಕಳನ್ನು ಬಿಟ್ಟಾಳೆಯೆ?  ಸಣ್ಣ ಕಂದಮ್ಮಗಳು ಮುಗ್ಧ, ಅಸಹಾಯಕ ಜೀವಿಗಳು. ಅವುಗಳ ಕಣ್ಣುಗುಡ್ಡಿಗಳನ್ನೆ ಕಿತ್ತು, ಕವಡಿಗಳ ಮಾಲೆಯನ್ನು ಮಾಡಿಕೊಂಡು ಈ ಜೋಗತಿ ಕೊರಳಲ್ಲಿ ಧರಿಸಿದ್ದಾಳೆ. ಭವಿಷ್ಯದ ಸಂಕೇತಗಳಾದ ಈ ಕಂದಮ್ಮಗಳು ಇದೀಗ ಕುರುಡರಾಗಿದ್ದಾರೆ. ಈ ಮಾಲೆಯು ‘ತಣ್ಣನ್ನ ಜೋಮಾಲೆ’! ಜೋಗತಿಯ ತಣ್ಣನೆಯ ಕ್ರೌರ್ಯಕ್ಕೆ ಇದು ಸಂಕೇತವಾಗಿದೆ.


     ಬಡವರ ಒಡಲಿನ
     ಬಡಬಾsನಲದಲ್ಲಿ
     ಸುಡು ಸುಡು ಪಂಜು ಕೈಯೊಳಗಿತ್ತೋ;
            ಕಂಬನಿ ಕುಡಿಯುವ
            ಹುಂಬ ಬಾಯಿಲೆ ಮೈ-
            ದುಂಬಿದಂತುಧೋ ಉಧೋ ಎನ್ನುತಲಿತ್ತೋ;

ಕೈಯಲ್ಲಿ ಉರಿಯುವ ಪಂಜನ್ನು ಹಿಡಿದುಕೊಂಡು, ದೇವಿಗೆ ‘ಉಧೋ ಉಧೋ’ ಎಂದು ಘೋಷಿಸುವುದು ಜೋಗತಿಯ ಪೂಜೆಯ ಭಾಗವಾಗಿದೆ. ಕಾಂಚಾಣಜೋಗತಿಯ ಕೈಯಲ್ಲೂ ಸಹ ಉರಿಯುತ್ತಿರುವ ಪಂಜಿದೆ. ಇವಳೂ ಸಹ ‘ಉಧೋ ಉಧೋ’ ಎಂದು ಗರ್ಜಿಸುತ್ತಿದ್ದಾಳೆ. ಆದರೆ ಇವಳು ಹಿಡಿದಿರುವುದು ಸಾಧಾರಣ ಪಂಜಲ್ಲ. ಇದು ಬಡವರ ಒಡಲಿನ ಬೆಂಕಿಯ ಪಂಜು. ಬಡವರ ಒಡಲೇ ಒಂದು ಸಮುದ್ರದಷ್ಟು ವಿಶಾಲವಾಗಿದೆ. ಏಕೆಂದರೆ ಇವರ ಹಸಿವೆಯನ್ನು ಹಿಂಗಿಸುವಷ್ಟು ಕೂಳು ಇವರಿಗೆ ಸಿಗುವುದಿಲ್ಲ. ಅಲ್ಲದೆ ಒಬ್ಬನು ಸಿರಿವಂತನಾಗಬೇಕಾದರೆ ನೂರು ಜನ ಬಡವರಾಗಿರಬೇಕಾಗುತ್ತದೆ! ಆದುದರಿಂದ ಬಡವರ ಒಡಲು ಅಪಾರ ಹಾಗು ಅನಂತ ಸಮುದ್ರದಷ್ಟು ಆಳ ಹಾಗು ವಿಶಾಲ! ಸಮುದ್ರದಲ್ಲಿ ಇರುವ ಬೆಂಕಿಗೆ ‘ಬಡಬಾನಲ’ ಎಂದು ಕರೆಯುತ್ತಾರೆ. ಬಡವರ ಒಡಲೊಳಗಿರುವ ಬೆಂಕಿಯು ಹಸಿವಿನ ಬೆಂಕಿ. ಆ ಬೆಂಕಿಯಿಂದ ಹೊತ್ತಿಸಿದ ಪಂಜನ್ನು ಈ ಜೋಗತಿ ಹಿಡಿದಿದ್ದಾಳೆ. (ಬಡಬಾನಲವು ಸಮುದ್ರದ ಬೆಂಕಿ ಎಂದು ಅರ್ಥ ನೀಡುವುದರ ಜೊತೆಗೇ ‘ಬಡವರ+ಅನಲ’ ಎಂದು  ಶ್ಲೇಷೆಯ ಮೂಲಕ ಸೂಚಿಸುವದನ್ನೂ ಗಮನಿಸಬೇಕು.)

’ಉಧೋ ಉಧೋ’ ಎಂದು ಉಗ್ಗಡಿಸುವ ಜೋಗತಿಯ ಮೈಯಲ್ಲಿ ದೇವಿಯ ಆವೇಶ ಬಂದಿರುತ್ತದೆ. ಈ ಕಾಂಚಾಣಜೋಗತಿಯ ಮೈಯಲ್ಲಿಯೂ ಆವೇಶವಿದೆ. ಆದರೆ ಇದು ಕಾಂಚಾಣದ ಆವೇಶ. ಕಾಂಚಾಣವನ್ನು ಹೇಗಾದರೂ ಸಂಪಾದಿಸಬೇಕೆನ್ನುವ ಲೋಭವು ಅವಳನ್ನು ಕುರುಡಳನ್ನಾಗಿ ಮಾಡಿದೆ. ಅವಳ ಬಾಯಿಯಿಂದ ಬರುವ ‘ಉಧೋ ಉಧೋ’ ಎನ್ನುವ ಉಗ್ಗಡಣೆಯು ಪವಿತ್ರವಾದ ಘೋಷವಲ್ಲ; ಇದು ಹುಂಬತನದ ಘೋಷ.  ಇದು ಮುಗ್ಧ, ಅಸಹಾಯಕರ ಕಂಬನಿಯನ್ನು ಕುಡಿಯುವ ಅಪವಿತ್ರ ಬಾಯಿಯಿಂದ ಹೊರಡುತ್ತಿರುವ ಸಂವೇದನಾಶೂನ್ಯ ಘೋಷ.

    ಕೂಲಿ ಕುಂಬಳಿಯವರ
     ಪಾಲಿನ ಮೈದೊಗಲ
     ಧೂಳಿಯ ಭಂಡಾರ ಹಣೆಯೊಳಗಿತ್ತೋ;
            ಗುಡಿಯೊಳಗೆ ಗಣಣ, ಮಾ
            ಹಡಿಯೊಳಗೆ ತನನ, ಅಂ-
            ಗಡಿಯೊಳಗೆ ಝಣಣಣ  ನುಡಿಗೊಡುತಿತ್ತೋ;

ಎಲ್ಲಮ್ಮನ ಜೋಗತಿಯು ಹಣೆಯ ಮೇಲೆ  ಭಂಡಾರವನ್ನು (ಅಂದರೆ ಎಲ್ಲಮ್ಮ ದೇವಿಯ ಅರಿಶಿಣವನ್ನು) ಧರಿಸಿರುತ್ತಾಳೆ. ಈ ಕಾಂಚಾಣಜೋಗತಿಯು ಧರಿಸಿರುವ ಭಂಡಾರವೆಂತಹುದು? ಒಬ್ಬನು ದುಡ್ಡನ್ನು ಕೂಡಿಹಾಕಬೇಕಾದರೆ ನೂರು ಜನ ಬೆವರು ಹರಿಸಬೇಕಲ್ಲವೆ? ಈ ಕೂಲಿ ಜನರು ದುಡಿದುಡಿದು ಸೋತು ಸಣ್ಣಗಾದಾಗ ಇವರ ಮೈಯ ತೊಗಲೂ ಸಹ ಜೋತು ಬಿದ್ದಿರುತ್ತದೆ. ಅದೇ ಇವರ  ಪಾಲಿಗೆ ಉಳಿದಿರುವ ಸಂಪತ್ತು. ಆ ಮೈದೊಗಲಿಗೆ ಹತ್ತಿದ ಧೂಳಿಯೇ ಈ ಕಾಂಚಾಣಜೋಗತಿಯು ತನ್ನ ಹಣೆಯ ಮೇಲೆ ಹಚ್ಚಿಕೊಂಡಂತಹ ಭಂಡಾರವಾಗಿದೆ. (ಭಂಡಾರ ಎಂದರೆ ಸಂಪತ್ತಿನ ಸಂಗ್ರಹಾಲಯ ಎನ್ನುವ ಶ್ಲೇಷೆ ಇಲ್ಲಿದೆ.)

ಇದಾದ ಬಳಿಕ, ದೇವಿಯ ಜೋಗತಿಯು ಗುಡಿಯೊಳಗೆ ಹೋಗಿ ಗಂಟೆ ಬಾರಿಸಿ ಪೂಜೆ ಸಲ್ಲಿಸುವಳಷ್ಟೆ? ಕಾಂಚಾಣಜೋಗತಿಯೂ ಸಹ ತನ್ನ ಹಣದ ಬಲದಿಂದ ಗುಡಿಗಳೊಳಗೆ ಪೂಜೆಯ ಅಧಿಕಾರವನ್ನು ಕೊಳ್ಳುವವಳೇ. (ದುಡ್ಡಿದ್ದವರಿಗೆ ‘ಸ್ಪೆಶಲ್ ದರ್ಶನ’ ಎನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ!) ಗುಡಿಗಳಲ್ಲಿ ‘ಗಣಣ’ ಎಂದು ಗಂಟೆ ಬಾರಿಸುವ ಇವಳು ಮಹಡಿಯ ಮನೆಗಳಲ್ಲಿ, ಹಣವುಳ್ಳವರ ಎದುರಿಗೆ ‘ತನನ’ ಎಂದು ಕುಣಿಯುವ ಸಾಮಾನ್ಯ ನಾಚುಗಾತಿಯಾಗುತ್ತಾಳೆ. ಇನ್ನು ದುಡ್ಡಿನ ಕಾರಾಗಾರಗಳಾದ ಅಂಗಡಿಗಳ ಒಳಗಂತೂ ಇವಳ ಝಣಝಣ ಪ್ರತಿಧ್ವನಿ ಯಾವಾಗಲೂ ಕೇಳಿ ಬರುವಂತಹದು. ಹಣದ ಕುಣಿತ ಹೇಗೆ ಸರ್ವವ್ಯಾಪಿಯಾಗಿದೆ, ಸರ್ವಮಾನ್ಯವಾಗಿದೆ ಎನ್ನುವುದನ್ನು ಬೇಂದ್ರೆಯವರು ಇಲ್ಲಿ ವ್ಯಂಗ್ಯವಾಗಿ ಸೂಚಿಸಿದ್ದಾರೆ.

ಹ್ಯಾಂಗಾರೆ ಕುಣಿಕುಣಿದು
     ಮಂಗಾಟ ನಡೆದಾಗ
     ಅಂಗಾತ ಬಿತ್ತೋ,  ಹೆಗಲಲಿ ಎತ್ತೋ.

ಆದರೆ ಇಂತಹ ವಿನಾಶಕಾರಿ ಧಂಧೆ ಎಲ್ಲಿಯವರೆಗೆ ನಡೆದೀತು? ಅದು ಅತಿಶಯಕ್ಕೆ ಮುಟ್ಟಿದಾಗ (--ಪಾಪದ ಕೊಡ ತುಂಬಿದಾಗ ಎಂದು ಹೇಳುತ್ತಾರಲ್ಲವೆ?--) ಈ ಮಂಗಾಟದ ಕುಣಿತಕ್ಕೆ ಕೊನೆಯಾಗಲೇ ಬೇಕು. ತನ್ನ (ಪಾಪದ) ಭಾರ ತಾಳಲಾರದೆ ಈ ಜೋಗತಿ ಕುಸಿದು ಬೀಳಲೇ ಬೇಕು. ‘ಅದು ಬಿದ್ದಾಗ, ತಡ ಮಾಡದೇ ಆ ಶವವನ್ನು ಎತ್ತಿ ಹಾಕಿರಿ’ (--ಅದು ಮತ್ತೆ ಮೈದುಂಬೀತು ಎನ್ನುವ ಹೆದರಿಕೆಯಿಂದಲೆ?--) ಎಂದು ಬೇಂದ್ರೆಯವರು ಹೇಳುತ್ತಾರೆ. ತುಳಿತಕ್ಕೆ ಒಳಗಾದವರ ಆಸೆ ಹಾಗು ಆಶಯವೂ ಸಹ ಇದೇ ಆಗಿದೆ.
                                                                                                         
ಟಿಪ್ಪಣಿ: ಬೇಂದ್ರೆಯವರ ಕವನಗಳು ಕೇವಲ ಹಾಡುವ ಅಥವಾ ಮನನ ಮಾಡುವ ಕವನಗಳಷ್ಟೇ ಅಲ್ಲ. ಅವರು ತಮ್ಮ ಕವನಗಳ ಬರಹವನ್ನೂ ಸಹ ನಿರ್ದಿಷ್ಟ ರೀತಿಯಲ್ಲಿ ಬರೆಯುತ್ತಿದ್ದರು. ಯಾವ ಸಾಲಿನ ಕೆಳಸಾಲು ಎಲ್ಲಿ ಬರಬೇಕು, ಯಾವ ವಿರಾಮಗಳನ್ನು ಎಲ್ಲಿ ಬಳಸಬೇಕು ಎನ್ನುವುದರ ಬಗೆಗೆ ಅವರು ತುಂಬ ಕಾಳಜಿಯಿಂದ ಇರುತ್ತಿದ್ದರು. ಈ ಕವನದ ಮೊದಲ ಆರು ನುಡಿಗಳ ಕೊನೆಯ ಸಾಲುಗಳ ಕೊನೆಯಲ್ಲಿ ಅರ್ಧವಿರಾಮ ಬರುತ್ತದೆ. ಕೊನೆಯ (ಏಳನೆಯ ಸಾಲಿನ) ಕೊನೆಯಲ್ಲಿ ಮಾತ್ರ ಪೂರ್ಣವಿರಾಮ ಬರುತ್ತದೆ. ಕಾಂಚಾಣ-ಜೋಗತಿಯ ಪೂರ್ಣಚಿತ್ರವನ್ನು, ಯಾವುದೇ ವಿರಾಮವಿಲ್ಲದೆ ನೀಡುತ್ತಿದ್ದೇನೆ ಎನ್ನುವುದರ ಸೂಚನೆಯನ್ನು ಬೇಂದ್ರೆಯವರು ನೀಡುತ್ತಿದ್ದಾರೆ. 


ಸಲ್ಲಾಪ ಬ್ಲಾಗ್ ನಿಂದ..

         ಆಡಿಯೋ ಲಿಂಕ್                               https://youtu.be/HKPetWFxqZM

ಶನಿವಾರ, ಫೆಬ್ರವರಿ 8, 2020

ಕೀರ್ತನೆಗಳು

ನಿನ್ನ ಧ್ಯಾನವ ಮಾಡುತ್ತಾ...
-ಶ್ರೀ ವ್ಯಾಸರಾಯರು

ನಿನ್ನ ಧ್ಯಾನವನ್ನು ಮಾಡುತ್ತಿದ್ದರೂ ನನ್ನ ಮನಸ್ಸು ಬೇರೆ ಬೇರೆ ವಿಚಾರಗಳ ಕಡೆಗೆ ಆಸಕ್ತಿ ತೋರುತ್ತಿದೆ. ನಿನ್ನ ಕುರಿತು ನನ್ನ ಭಕ್ತಿ ಕಡಿಮೆ ಆಗುತ್ತಿದೆ ಆದ್ದರಿಂದ ಈ ಮನಸ್ಸನ್ನು ಬೇರೆಕಡೆಗೆ ಸೆಳೆಯದಂತೆ ಕರುಣಿಸು ಸಿರಿಕೃಷ್ಣರಾಯ ಎಂದು ಶ್ರೀವ್ಯಾಸರಾಯರು ಹಾಡುತ್ತಿದ್ದಾರೆ.

ಮನಸ್ಸನ್ನು ಕೇಂದ್ರೀಕರಿಸಿ ನಮ್ಮ ಗುರಿಯನ್ನು ತಲುಪುವ ಕುರಿತು ಈ ಕೀರ್ತನೆ ತಿಳಿಸುತ್ತದೆ.

ಗಂಡನು ಪ್ರಿಯನಾಗಿದ್ದರೂ ಬೇರೆ ಪುರುಷನನ್ನು ಇಷ್ಟ ಪಡುವಂತ ಕೆಟ್ಟ ಮನಸ್ಸು ನೀಡಬೇಡ.
ಕಿವಿಗೆ ಹಿತವಾದ ಒಳ್ಳೆಯ ಜೀವನ ಸಂದೇಶಗಳಂತಹ ತತ್ವಗಳಿದ್ದರೂ ಕೆಟ್ಟ ವಿಚಾರಗಳ ಕಡೆಗೆ ಈ ಮನಸ್ಸು ಸೆಳೆಯುತ್ತಿದೆ. ಮತ್ತೆ ಹಿತನುಡಿಗಳ ಕಡೆಗೆ ವಾಲಿಸು ನನ್ನ ಮನಸ್ಸುನ್ನು ಎಂದು ನಮ್ಮ ಚಂಚಲತೆಯನ್ನು ಸರಿಪಡಿಕೊಳ್ಳುವ ಕುರಿತು ಹೇಳುತ್ತಿದ್ದಾರೆ.

ನಿತ್ಯವೂ ಶ್ರೇಷ್ಠವಾದ ಆಹಾರ ಸೇವಿಸುತ್ತಿದ್ದರೂ ಈ ಮನಸ್ಸು ಹೆಂಡವನ್ನು ಚಿಂತಿಸಿ ಆಸೆಪಡುವಂತೆ, ಆನೆಯು ಶ್ರೇಷ್ಠನದಿಯಲ್ಲಿ ಸ್ನಾನಮಾಡಿ ಬಂದು ತುಂಬಾ ಆನಂದದಿಂದ ಕೆಸರನ್ನು ಮೈಮೇಲೆ ಎರಚಿಕೊಳ್ಳುವಂತೆ ಉತ್ತಮವಾದ ನಮ್ಮ ಗುಣವನ್ನು, ಮನಸ್ಸನ್ನು ಕೆಟ್ಟ ಆಲೋಚನೆ ಮೂಲಕ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದನ್ನು ನಿಯಂತ್ರಣ ಮಾಡುವ ಮೂಲಕ ನಮ್ಮ ಶ್ರೇಷ್ಠತೆ ಉಳಿಸಿಕೊಳ್ಳಬೇಕಿದೆ.

ಶ್ರೇಷ್ಠನಾದ ಗುಣಪೂರ್ಣನಾದ ಸಿರಿ ಕೃಷ್ಣರಾಯನೇ ನಿನ್ನ ಜೋಡಿಪಾದಗಳ ಧ್ಯಾನಿಸುತ್ತಲೇ ನನ್ನ ಮನಸ್ಸು ಚಂಚಲವಾಗದಂತೆ ಕರುಣಿಸಿ ಸ್ಥಿರಗೊಳಿಸು ಎಂದು ಶ್ರೀ ವ್ಯಾಸರಾಯರು ತಿಳಿಸಿದ್ದಾರೆ.


ಬೆಳಗುತಿದೆ ಬೆಳಗುತಿದೆ ಭಾನುವಿನ ಬೆಳಕು
- ತಿಮ್ಮಪ್ಪ ದಾಸ

ಬೆಳಕು - ಜ್ಞಾನ


ಸೂರ್ಯನ ಬೆಳಕು ಸರ್ವವನ್ನು ಹೊಳೆಯುಂತೆ ಮಾಡುತ್ತಾ ಬೆಳಗುತಿದೆ.

ಈ ಬೆಳಕು ಅಮಿತಾಂಡಕೋಟಿ ಎಂದರೆ ಅಳತೆಗೆ ಮೀರಿದ ಪ್ರಕಾಶವನ್ನು ಬೆಳಗುವಂತಹ ಬೆಳಕಾಗಿದೆ. ವಿಶ್ವವ್ಯಾಪಿ ಅಣುವಿನಿಂದ ಆಕಾಶದ ತನಕ ಎಲ್ಲಕ್ಕೂ ಬೆಳಕು ನೀಡುತ್ತಿದ್ದಾನೆ ಸೂರ್ಯ.

ಕತ್ತಲೆಯ ಗುಂಪುಗಳ ಇಲ್ಲವಾಗಿಸುವಂತಹ ಬೆಳಕು. ಅಂದರೆ ಬೆಳಕು ಇಲ್ಲಿ ಜ್ಞಾನದ ಸಂಕೇತ. ಅಜ್ಞಾನವನ್ನು ದೂರಮಾಡಲು ಜ್ಞಾನದ ಬೆಳಕು ಬೇಕು.
ಬೆಳಕು ಒಳ್ಳೆಯ ಮನಸ್ಸಿನ ರೂಪವಾಗಿ, ನಿರ್ಮಲ ಆಲೋಚನೆಯ ನೀಡುವ, ಶೋಭಿಸುವ ರೂಪದಲ್ಲಿ ಬೆಳಕು ಬರುತ್ತದೆ. ಜ್ಞಾನಿ ಯಾವಾಗಲೂ ತೇಜಸ್ಸು ತುಂಬಿರುತ್ತಾನೆ.

ಪರಸ್ಪರ ಮನೆಮನೆಗಳ, ಮನಮನಗಳ ಎದುರಾಗಿ, ಜೊತಯಾಗಿ ಬೆಳಕು ವಿಶ್ವಾಸ ತುಂಬುತ್ತದೆ.
ತಪಸ್ಸಿನಂತೆ ಕಲಿತವರ ಮನಸ್ಸಿನಲ್ಲಿ ಮುಖ್ಯ ಪಾತ್ರದಲ್ಲಿ ಬೆಳಕು ಎಂದರೆ ಜ್ಞಾನ ಕಾಣುತ್ತದೆ.
ಈ ಜ್ಞಾನವೆಂಬ ಬೆಳಕು ದೇವತೆಗಳು ತಾವೇ ಸಂಪಾದಿಸಿದ ಶ್ರೇಷ್ಠತೆಯಂತೆ ವಿಶೇಷವಾದುದು.
ಈ ಬೆಳಕಿಗೆ ಅಂತ್ಯವೂ, ಪ್ರಾರಂಭವೂ ಇರುವುದಿಲ್ಲ.

ಈ ಬೆಳಕು ನಮ್ಮಿಂದ ಹಲವು ಕಾರ್ಯಗಳನ್ನು ಮಾಡಿಸುತ್ತದೆ. ಅಷ್ಟೇ ಅಲ್ಲದೆ ಕಮಲದಂತೆ ಕಾರ್ಯದ ಮೂಲಕ ನಮ್ಮ ಕಶ್ಮಲತೆಯನ್ನು ಕಳೆದು ನಿರ್ಮಲವಾಗಿಸುತ್ತದೆ.
ಆಕಾಶದಂತೆ ಅಪರಿಮಿತ ದೂರದಲ್ಲಿ ನಮ್ಮ ಆಲೋಚನೆಗೂ ಮೀರಿ ಬಹು ಎತ್ತರದಲ್ಲಿ ಸದಾ ಶೋಭಿಸುತ್ತದೆ ಈ ಬೆಳಕು. ಈ ಜಗತ್ತಿನ ಸರ್ವ ಚಲನೆಯನ್ನು ನಮ್ಮ ಕಣ್ಣಿನ ಮೂಲಕ ಕಾಣಿಸುತ್ತದೆ. ಅರಿವುಂಟುಮಾಡುತ್ತದೆ.  ಜ್ಞಾನವೂ ಕೂಡ ಹೀಗೆ ಶ್ರೇಷ್ಠ.

ಯಾವುದೇ ಕಾರ್ಯಕ್ಕೆ ಬೆಳಕು ಕಾರಣವಾಗಿ ಕಾಣುತ್ತದೆ. ಈ ಭೂಮಿಯ ಜೀವಿಗಳಲ್ಲೇ ಅಡಗಿ ಯಾರನ್ನೂ ಮೀರದೆ ಜೊತೆಯಾಗಿರುತ್ತದೆ. ಬೆಳಕು ಮೂರು ಲೋಕಕ್ಕೂ ಪಾಪಗಳ ಅಳಿಸಿ ಮುಕ್ತಿ ನೀಡುತ್ತಾ ಸುಖವನ್ನು  ತರುತ್ತದೆ. ಪಾರಮಾರ್ಥಿಕವಾದ ಪರಬ್ರಹ್ಮ ಅಂದರೆ ಸರ್ವವನ್ನೂ ಶ್ರೇಷ್ಠವಾಗಿ ವಿಚಾರಮಾಡುವಂತಹ ದ್ದು ಈ ಬೆಳಕು ಎಂದರೆ ಜ್ಞಾನ ಎಂದರ್ಥ.

ಶ್ರೇಷ್ಠತೆಯಲ್ಲಿ ಪರಿಶುದ್ಧವಾಗಿ ನಮ್ಮ ಪಾಪಗಳನ್ನು ಅಂದರೆ ತಪ್ಪುಗಳನ್ನು ಇಲ್ಲವಾಗಿಸುವ(ನಾಶಮಾಡುವ) ಬೆಳಕು.
ಯಾರು ಈ ಜ್ಞಾನಕ್ಕೆ (ಬೆಳಕು) ಶರಣಾಗುವರೋ ಕಾಯುತ್ತಾ ಸುಲಭವಾದ ಸುಖವನ್ನು ನೀಡುತ್ತದೆ.
ತಿಮ್ಮಪ್ಪದಾಸರು ತಮ್ಮ ಕೀರ್ತನೆಯ ಅಂಕಿತ ದೇವರಾದ ತಿರುಪತಿಯ ವಾಸಿ ವರದ ವೆಂಕಟರಮಣನ ಹೆಸರಿನ ಉಚ್ಚಾರವೇ ಈ ಸೂರ್ಯನ ಬೆಳಕು ಎಂದಿದ್ದಾರೆ. ಅಂದರೆ ನಮ್ಮ ಭಕ್ತಿಯು ನಮ್ಮ ಸರ್ವಕಾರ್ಯಗಳಲ್ಲೂ ನಾವು ನಂಬುವ ದೇವರ ಮೇಲೆ ಎಷ್ಟು ಇರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಇದ್ದರೆ ಎಲ್ಲಾ ಜ್ಞಾನಗಳು ಬೆಳಕಿನಂತೆ ಲಭಿಸುತ್ತವೆ. ಬದುಕನ್ನು ಬೆಳಗುತ್ತವೆ.






ವ್ಯಾಸರಾಯರ ಕುರಿತು ಮಾಹಿತಿ


ಸಂಪಾದಿಸಿ

ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.

ಕಾಲವಾದ ಸ್ಥಳ ಮತ್ತು ದಿನಸಂಪಾದಿಸಿ

ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆ ಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

ಕೃತಿಗಳುಸಂಪಾದಿಸಿ

ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು ವ್ಯಾಸರಾಯರ ಅಂಕಿತ. 



ಶಿಶುನಾಳ ಶರೀಫರು ತತ್ವಪದಗಳ ರೂವಾರಿ.

ಜನನಸಂಪಾದಿಸಿ

ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೆಂದು ಕೆಲಸ ಮಾಡಿದರು.

ವಿದ್ಯಾಭ್ಯಾಸಸಂಪಾದಿಸಿ

ಆದರೆ ಮುಂದೆ ಈ ಕೆಲಸವನ್ನು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು.
ಕೆಲವು ಸಮಯದ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು. ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು.
ಕೊನೆಗೆ ಗೋವಿಂದಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು.
ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ.ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ.
ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭಾವಕಾವ್ಯದ ಹೊಂಗಿರಣವೊಂದನ್ನು ಹಾಯಿಸಿದ ಪ್ರಸಿದ್ಧ ಅನುಭಾವಿ ಕವಿ. ಇವರ ಮೊದಲಿನ ಹೆಸರು ಮಹಮ್ಮದ್ ಶರೀಫ್. ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಇವರ ಜನ್ಮಸ್ಥಳ. 1819 ಮಾರ್ಚ್ 7 ರಂದು ಜನಿಸಿದರು. ಕನ್ನಡ ಮುಲ್ಕೀ ಪರೀಕ್ಷೆಯವರೆಗೆ ಓದಿದ ಇವರು, ಆರಂಭದಲ್ಲಿ ಕೆಲಕಾಲ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರಾದರೂ ಬೇಗನೆ ಅದರ ಹಂಗು ಹರಿದುಕೊಂಡು ಆಧ್ಯಾತ್ಮಸಾಧನೆಗೆ ತಮ್ಮನ್ನು ಸಮರ್ಪಿಸಿ ಕೊಂಡರು.
ಅಭಿಜಾತ ಕಲಾವಿದರಾಗಿದ್ದ ಶಿಶುನಾಳರು ಚಿಕ್ಕಂದಿನಲ್ಲಿಯೇ ಹಳ್ಳಿಯ ಜಾತ್ರೆ ಉತ್ಸವಗಳಲ್ಲಿ ಶರಣರ ವಚನಗಳನ್ನೂ ಅನುಭಾವ ಪದಗಳನ್ನೂ ಹಾಡುತ್ತ, ಬಹುರೂಪಿಗಳ ಹಾಗೆ ವಿವಿಧ ವೇಷ ಹಾಕುತ್ತ, ಬಗೆಬಗೆಯ ಬಯಲಾಟಗಳಲ್ಲಿ ಪಾತ್ರವಹಿಸುತ್ತ ತಮ್ಮ ಕಲೆಗಾರಿಕೆಯನ್ನು ಜನಮನದ ವಿಲಾಸ-ವಿಕಾಸಗಳಿಗೆ ಮುಡಿಪಿಡಲು ಮೊದಲುಮಾಡಿದರು. ಮೊಹರಂ ಪರ್ವ ಸಮಯದಲ್ಲಿ ತಲೆ ಎತ್ತುವ ಕರ್ಬಲಾ ಮೇಳಗಳಿಗಾಗಿ ರಿವಾಯತ್ ಪದ ರಚಿಸಿಕೊಟ್ಟರು, ಲಾವಣಿಗಳನ್ನೂ ಬರೆದರು. ಹೀಗೆ ನಿಧಾನವಾಗಿ ಸಾಹಿತ್ಯಪಥದಲ್ಲಿ ತಮ್ಮ ಹೆಜ್ಜೆ ಮೂಡಿಸಿ, ಮುಂದಿನ ಸೃಷ್ಟಿಗೆ ಅಗತ್ಯ ವಾದ ಪೂರ್ವಸಿದ್ಧತೆ ಮಾಡಿಕೊಂಡರು. ಕಳಸದ ಗುರುಗೋವಿಂದ ಭಟ್ಟರು, ಅಂಕಲಗಿಯ ಅಡವಿ ಸ್ವಾಮಿಗಳು, ಗರಗದ ಮಡಿವಾಳಪ್ಪ ನವರು, ನವಿಲುಗುಂದದ ನಾಗಲಿಂಗಪ್ಪನವರು, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳು ಮುಂತಾದ ಸಮಕಾಲೀನ ಸಾಧುಸತ್ಪುರುಷರ ಸಾನ್ನಿಧ್ಯ, ಸಂಸರ್ಗಗಳಿಂದ ಅನುಭಾವಿಯಾಗಿ ಮಾಗಿದರು.
ಕನ್ನಡ ಸಂಸ್ಕಂತಿಯ ಸರ್ವಧರ್ಮಸಹಿಷ್ಣುಭಾವ ಮತ್ತು ಆಧ್ಯಾತ್ಮಿಕ ಪರಂಪರೆಯ ಸರ್ವಸಮನ್ವಯ ಅನುಭಾವ ಸಂಪತ್ತನ್ನು ಅರಗಿಸಿಕೊಂಡು ಇವರು ರಚಿಸಿದ ಅನುಭವ ಪದಗಳು ಆಪ್ತವಾದ ಕಳಕಳಿಗೆ ನೆಲೆ ಯಾಗಿವೆ. ಹಳ್ಳಿಯ ಬಾಳಿನ ದಿನದಿನದ ಬದುಕಿನಲ್ಲಿ ತಮ್ಮ ಕಣ್ಮನಗಳನ್ನು ಸೆಳೆದ ಒಂದೊಂದು ಸನ್ನಿವೇಶ-ಸಂಗತಿ, ವಸ್ತು-ವ್ಯಕ್ತಿ, ಪಶು-ಪಕ್ಷಿ ಮೊದಲಾದವುಗಳನ್ನೇ ಒಂದು ರೂಪಕವನ್ನಾಗಿಯೋ ದೃಷ್ಟಾಂತವ ನ್ನಾಗಿಯೋ ಪ್ರತಿಮೆಯನ್ನಾಗಿಯೋ ಮಾಡಿಕೊಂಡು ಅವುಗಳಲ್ಲಿ ತಮ್ಮ ಅನುಭವದ ಬೆಳಕು ಮತ್ತು ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿದ್ದಾರೆ. ತಮ್ಮ ಜೀವಮಾನದುದ್ದಕ್ಕೂ ಇವರು ಬರೆದ ಹಾಡು, ಒರೆದ ಪಾಡು ಒಂದೇ ಆಗಿದೆ. ಬೋಧ ಒಂದೇ, ಬ್ರಹ್ಮನಾದ ಒಂದೇ ಎಂಬುದು ಅವರ ಬೀಜಮಂತ್ರವಾಗಿದ್ದು ನಡಿಯೊ ದೇವರ ಚಾಕರಿಗೆ, ಮುಕ್ತಿಗೊಡೆಯ ಖಾದರ ಲಿಂಗ ನೆಲಸಿರ್ಪ ಗಿರಿಗೆ ಎಂಬುದು ಇವರು ತಮ್ಮ ಮನಕ್ಕೂ ಜನಕ್ಕೂ ಕೊಟ್ಟ ಜೀವಾಳದ ಕರೆಯಾಗಿದೆ. ಇವರ ದೃಷ್ಟಿಯಲ್ಲಿ ಸನಾತನ ವೈದಿಕ ಮತ ಎತ್ತಿಹಿಡಿಯುವ ಬ್ರಹ್ಮತತ್ತ್ವ, ತಮ್ಮ ಪರಿಸರದಲ್ಲಿ ಪ್ರಭಾವಕಾರಿಯಾಗಿದ್ದ ವೀರಶೈವ ಮತದ ಲಿಂಗತತ್ತ್ವ ಹಾಗೂ ತಮ್ಮ ಮನೆತನಕ್ಕೆ ಪೂಜ್ಯವಾಗಿದ್ದ ಹುಲಗೂರ ಖಾದರಶಾ ಸಾಧುವಿನ ಸಮಾಧಿತತ್ತ್ವ-ಇವೆಲ್ಲವೂ ಮೂಲತಃ ಒಂದೇ. ಇದರಿಂದಾಗಿ ಇವರು ಸರ್ವಧರ್ಮಸಮನ್ವಯದ ಉಜ್ಜ್ವಲ ಮೂರ್ತಿಯಾಗಿ ಹಿಂದು-ಮುಸ್ಲಿಮ್ ಬಾಂಧವ್ಯದ ಧವಲಕೀರ್ತಿಯಾಗಿ ಉತ್ತರ ಭಾರತದ ಮಹಾತ್ಮ ಕಬೀರರಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಮನದ ಗದ್ದುಗೆ ಏರಿದರು. ಇದಲ್ಲದೆ ತಮ್ಮ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ಜನಪದ ಭಾಷೆಯ ಸೊಗಡು-ಗತ್ತು, ಗ್ರಾಮೀಣ ಸಂಗೀತದ ಲಯ-ಲಾಸ್ಯಗಳಿಂದಾಗಿಯೂ ಇವರು ಜನಮನವನ್ನು ಸೂರೆಗೊಂಡರು. ಹೀಗೆ ಆಧ್ಯಾತ್ಮಿಕ ಸಾಧನೆಯ ಸಿದ್ಧಿಯನ್ನು ಮುಟ್ಟಿದಮೇಲೆ ತಮ್ಮಲ್ಲಿ ಬಂದವರಿಗೆ ಧರ್ಮನೀತಿ ಬೋಧೆ ಮಾಡಲೆಂದು ಇವರು ತಮ್ಮ ಮನೆ ಹತ್ತಿರದಲ್ಲಿ ಕುಳಿತುಕೊಳ್ಳುತ್ತಿದ್ದ ಕಟ್ಟೆಯೊಂದು ಇಂದಿಗೂ ಇದ್ದು ಬೋಧಪೀಠ ಎಂಬುದಾಗಿ ಪೂಜಿಸಲ್ಪಡುತ್ತದೆ.

ಬುಧವಾರ, ಜನವರಿ 22, 2020

ಜಲಗಾರ ನಾಟಕ ಅಧ್ಯಯನ ಪಠ್ಯಗಳು





ಜಲಗಾರ - ಕುವೆಂಪು

Jump to navigationJump to search
೧೯೨೭-೨೮ ಕುವೆಂಪು ಅವರ ಸಾಹಿತ್ಯಕ ಜೀವನದ ಮಹತ್ತರ ಘಟ್ಟ. ಅವರು ಎಂ.ಎ. ಕನ್ನಡ ತರಗತಿಗೆ ಸೇರಿದ್ದರಿಂದ ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆಯ ಶಾಸ್ತ್ರೀಯವಾದ ಅಭ್ಯಾಸದ ಅವಕಾಶ ಲಭಿಸಿತು. ಕವಿಯ ಸೃಜನ ಪ್ರತಿಭೆಯ ತಾಯಿಬೇರಿಗೆ ಅಮೃತಾಹಾರ ಒದಗಿದಂತಾಗಿತ್ತು. ಕನ್ನಡದಲ್ಲಿ ಇಂಗ್ಲೀಷಿನಂತೆ ಸರ್ವವಿಧವಾದ ಛಂದೋವೈವಿಧ್ಯತೆಯಿಂದ ಕೂಡಿದ ಸಾಹಿತ್ಯವನ್ನು ಸೃಷ್ಟಿಸಬೇಕೆಂಬ ಅವರ ಹಂಬಲ ಕ್ಷಣಿಕವಾದುದಾಗಿರಲಿಲ್ಲ. ಕುಳಿತಲ್ಲಿ, ನಿಂತಲ್ಲಿ, ಓದುವಾಗ, ಬರೆಯುವಾಗ - ಕೊನೆಗೆ ನಿದ್ದೆ ಮಾಡುವಾಗಲೂ ಅದರ ಬಗ್ಗೆ ಚಿಂತಿಸಿತ್ತಿದ್ದರು. ಸಾನೆಟ್ ಮತ್ತು ಬ್ಲಾಂಕ್‌ವರ್ಸ್ ಛಂದಸ್ಸುಗಳಲ್ಲಿ ಪರಿಣಿತಿ ಸಾಧಿಸುತ್ತಿದ್ದಂತೆ, ಅವುಗಳಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮನಸ್ಸು ಹಾತೊರೆಯುತ್ತಿತ್ತು. ಬ್ಲಾಂಕ್‌ವರ್ಸ್ ಗತಿಯಲ್ಲಿ ಆಗಲೇ ಕರಿಸಿದ್ದ ಮತ್ತು ಪ್ರಾಯಶ್ಚಿತ್ತ ಎಂಬ ದೀರ್ಘ ಕಥನಕವನಗಳು ರಚಿತವಾಗಿದ್ದವು. ಆಗ ಕವಿಗೆ, ಈ ಬ್ಲಾಂಕ್‌ವರ್ಸ್ ಛಂದೋಶೈಲಿಯನ್ನು ಬಳಸಿಕೊಂಡು ಕನ್ನಡದಲ್ಲಿ ನಾಟಕ ರಚಿಸಬಹುದಲ್ಲ ಎಂಬ ಯೋಚನೆ ಪ್ರಬಲವಾಗಿ, ಒಳಗಿನ ಒತ್ತಡವಾಗಿ ಬೆಳೆಯತೊಡುಗುತ್ತದೆ. ಅದುವರೆಗೆ ಯಾರೂ ಕನ್ನಡದಲ್ಲಿ ನಾಟಕಕ್ಕೆ ಬ್ಲಾಂಕ್‌ವರ್ಸ್ ಪ್ರಯೋಗ ಮಾಡಿರಲೂ ಇಲ್ಲ. ಅದಕ್ಕೆ ಅನುಗುಣವಾದ ನಾಟಕದ ವಸ್ತು, ವಿಷಯ, ರೂಪ ಇವುಗಳ ಬಗ್ಗೆ ಏನೊಂದೂ ಹೊಳೆಯದೆ ಕವಿ ಭಾವಶೂನ್ಯನಾಗಿದ್ದಾಗಲೇ ಒಂದು ದಿನ ಅಸಮಾನ್ಯವೆನ್ನಬಹುದಾದ ಘಟನೆಯೊಂದು ನಡೆದುಬಿಡುತ್ತದೆ.
ದಿವಾನರ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಆಶ್ರಮದಲ್ಲಿ ಕವಿಯ ವಾಸ. ಮನೆ ಚಿಕ್ಕದಾಗಿದ್ದುದರಿಂದ, ಪ್ರತ್ಯೇಕ ದೇವರ ಮನೆಯಿರಲಿಲ್ಲ. ಪೂಜೆ ಮುಗಿದ ಮೇಲೆ, ಪರದೆಯೊಂದನ್ನು ಅಡ್ಡ ಎಳೆದು, ದೇವರ ಕಡೆ ತಲೆ ಹಾಕಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದರು. ಒಂದು ಭಾನುವಾರ ಹಗಲು ವೇಳೆಯಲ್ಲಿಯೇ ಕವಿ ಗಡದ್ದಾದ ನಿದ್ದೆಯಲ್ಲಿ ಮುಳುಗಿಬಿಟ್ಟಿರುತ್ತಾರೆ. ಕನ್ನಡ, ನಾಟಕ, ಬ್ಲಾಂಕ್‌ವರ್ಸ್ ಈ ವಿಚಾರಗಳೇ ತಲೆಯಲ್ಲಿದ್ದುರಿಂದಲೋ ಏನೋ ಕವಿಗೆ ಅದರದೇ ಒಂದು ಕನಸು ಬೀಳುತ್ತದೆ. ಅದು ಹೀಗಿತ್ತು: ನಾನೊಂದು ಬೃಹದ್‌ಗಾಥ್ರದ ಅಪ್ರಾಸಛಂದಸ್ಸಿನ (ಬ್ಲಾಂಕ್‌ವರ್ಸ್) ಮಹಾಕಾವ್ಯ (ಎಪಿಕ್) ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ! ಎಷ್ಟು ಮನೋಹರವಾಗಿ ಮುದ್ರಿತವಾಗಿದೆ! ಅದರ ಕ್ಯಾಲಿಕೊ ಬೈಂಡಿನ ಸೌಂದರ್ಯವೊ ಹೇಳತೀರದು! ಹಾಳೆಗಳನ್ನು ಮಗುಚಿ ನೋಡುತ್ತಿದ್ದೇನೆ: ನುಣ್ಣನೆ ಕಾಗದ, ಮುದ್ದಾದ ಅಚ್ಚು! ಓದುತ್ತಿದ್ದೇನೆ....
ಅಷ್ಟರಲ್ಲಿ ರೀ, ರೀ ಪುಟ್ಟಪ್ಪ! ಎಷ್ಟು ನಿದ್ದೆ ಮಾಡ್ತೀರ್ರಿ? ಏಳ್ರಿ! ಎಂದು ಭುಜ ಹಿಡಿದು ಅಲುಗಿಸುತ್ತ ಎಚ್.ಬಿ.ನಂಜಯ್ಯ ಎಂಬುವವರು ಕವಿಯ ನಿದ್ರೆಗೂ ಅದಕ್ಕಿಂತ ಹೆಚ್ಚಾಗಿ ಕನಸಿಗೂ ಭಂಗ ತಂದುಬಿಡುತ್ತಾರೆ. ಪಾಪ! ಆತನಿಗೆ ಹೇಗೆ ಗೊತ್ತಾಗಬೇಕು ತಾನೆಸಗಿದ ಮಹಾ ಅನರ್ಥ? - ಕವಿಯ ಪ್ರತಿಕ್ರಿಯೆಯಿದು. ಆದರೂ ಕವಿಗೆ ಸಂತೋಷವಾಗುತ್ತದೆ; ಕನಸಿನಲ್ಲಾದರೂ ಎಪಿಕ್ಕಿಗೆ ಬೇಕಾದ ಅಪ್ರಾಸ ಛಂದಸ್ಸಿನ ಗುಟ್ಟು ಸಿಕ್ಕಿತಲ್ಲಾ ಎಂದು. ಆದರೆ ಕನಸಿನಲ್ಲಿ ಕಂಡಿದ್ದ ಪುಸ್ತಕದಲ್ಲಿದ್ದ ಭಾಷೆ ಲಿಪಿ ಯಾವುದೂ ನೆನಪಾಗುವುದಿಲ್ಲ. ಅದರ ಒಂದು ಸಾಲನ್ನಾದರೂ ನೆನಪಿಗೆ ತಂದುಕೊಳ್ಳುವ ಪ್ರಯತ್ನ ಸಫಲವಾಗುವುದಿಲ್ಲ.
ಅಂದು ಕನಸಿನಲ್ಲಿ ಸಿಕ್ಕ ಅಪ್ರಾಸ ಛಂದಸ್ಸಿನ ಗುಟ್ಟು ವ್ಯರ್ಥವಾಗಲಿಲ್ಲ. ಆ ಛಂದೋಲಯದಲ್ಲಿ ಹಿಡಿತ ಸಾಧಿಸಿದ ಕವಿ ಕೇವಲ ನಾಲ್ಕು ದಿನಗಳಲ್ಲಿ ’ಜಲಗಾರ’, ’ಯಮನಸೋಲು’ ಮತ್ತು ’ಮಹಾರಾತ್ರಿ’ ಎಂಬ ಮೂರು ನಾಟಕಗಳನ್ನು ಬರೆದು ಮಗಿಸಿಬಿಡುತ್ತಾರೆ. ಇವುಗಳಲ್ಲಿ ಮೊದಲನೆಯದೇ ಅಪ್ರಾಸ ಛಂದಸ್ಸಿನ ’ಸರಳರಗಳೆ’ ರೂಪದಲ್ಲಿರುವ, ಕೇವಲ ಎರಡು ದೀರ್ಘ ದೃಶ್ಯಗಳಿರುವ ಜಲಗಾರ ಎಂಬ ನಾಟಕ. ನಾಟಕ ರಚನೆಯಾದ ದಿನವೇ, ರಚಿಸುವಾಗ ಇದ್ದ ಆವೇಶದಲ್ಲಿಯೇ, ಆಶ್ರಮದಲ್ಲಿ ಸ್ವಾಮೀಜಿ, ನಾ.ಕಸ್ತೂರಿ ಮುಂತಾದವರ ಮುಂದೆ ಓದುತ್ತಾರೆ. ಅದರಲ್ಲಿದ್ದ ಹೊಸ ಆಲೋಚನೆಗಳು, ಹೊಸ ಭಾವಗಳು ಎಲ್ಲರ ಗಮನ ಸೆಳೆಯುತ್ತವೆ. ಹೀಗೆ ಕನ್ನಡದ ಮೊತ್ತಮೊದಲ ಸರಳರಗಳೆಯ ನಾಟಕ ಸಿದ್ಧವಾಗುತ್ತದೆ.
ಮಹಾಶಿವರಾತ್ರಿಯ ದಿನ ಶರತ್ಕಾಲದ ಸುಂದರ ಮುಂಜಾನೆ. ಊರಿನ ಕಾಯಕಯೋಗಿಜಲಗಾರನು ಸಂತೋಷವಾಗಿ ’ಮಂಜು ಹರಿಯುವವರೆಗೆ ಕುಳಿತಿಲ್ಲಿ, ನಲಿಯುವೆನು ನಲ್ಗಬ್ಬಗಳ ಹಾಡಿ’ ಎಂದು ಹಾಡುತ್ತಿದ್ದಾನೆ. ಮುಂಜಾವಿನ ಸೊಬಗಿಗೆ ಆತನೂ ಮಾರುಹೋಗಿದ್ದಾನೆ. ’ಸೃಷ್ಟಿಕರ್ತನನೆಮಗೆ ಸಾಧಿಸಲು, ತೋರಿಸಲು, ಸೃಷ್ಟಿಯಿದು ಸಾಲದೇ? ..... ಬಿಜ್ಜೆಯೇಂ ತೋರ್ಕುಮೇ ಎದೆಯರಿವು ತೋರದಾ ಪರಮನಂ?’ ಎನ್ನಿಸಿಬಿಡುತ್ತದೆ. ಆಗ ’ನೇಗಿಲ ಯೋಗಿಯು ನಾನು; ಮಣ್ಣಿನ ಭೋಗಿಯು ನಾನು!’ ಎಂದು ಹಾಡುತ್ತಾ ಒಬ್ಬ ರೈತನ ಆಗಮನವಾಗುತ್ತದೆ. ಆಗ ಜಲಗಾರ ’ಮುಂಜಾನೆಯೊಳಗೆಲ್ಲಿ ಹೋಗುತಿಹೆ, ರೈತ?’ ಎನ್ನುತ್ತಾನೆ. ಆಗ ರೈತ-

ಓಹೊ ನೀನರಿಯೆಯಾ? ಇಂದು ನಮ್ಮೂರ
ಶಿವಗುಡಿಯ ಜಾತ್ರೆ! ಬರುವುದಿಲ್ಲವೆ ನೀನು?
ತೇರೆಳೆಯಲೆಂದನಿಬರೂ ಬರುತಿಹರು.

ಎಂದು ಆ ದಿನದ ಮಹತ್ವವನನು ಹೇಳುತ್ತಾನೆ. ’ನನಗೇಕೆ ಶಿವಗುಡಿಯ ಜಾತ್ರೆ? ಜೋಯಿಸರು ದೇಗುಲದ ಬಳಿಗೆನ್ನ ಸೇರಿಸರು’ ಎನ್ನುತ್ತಾನೆ ಜಲಗಾರ. ಪಾಪ ರೈತನಿಗೆ ಜಲಗಾರನ ಮಾತುಗಳಲ್ಲಿದ್ದ ನೋವು ಅರ್ಥವಾಗುವುದಿಲ್ಲ. ’ದೂರದಲ್ಲಿಯೇ ನಿಂತು ಕೈಮುಗಿದು ಬಾ.’ ಎನ್ನುತ್ತಾನೆ. ಶಿವದರ್ಶನಕ್ಕೆ ದೇವಾಲಯಕ್ಕೆ ಹೋಗುವ ಅವಶ್ಯಕತೆ ಜಲಗಾರಿನಿಗೆ ಕಾಣುವುದಿಲ್ಲ.
ಶಿವಗುಡಿಯ ಶಿವನು ಜೋಯಿಸರ ಶಿವನಂತೆ; ನನ್ನ ಶಿವನೀ ಮಣ್ಣಿನಲ್ಲಿಹನು. ಕಪ್ಪುರದೊಳಗಿಲ್ಲ, ಮಂಗಳಾರತಿಯೊಳಗಿಲ್ಲ, ಹೂವುಗಳಲ್ಲಿಲ್ಲ; ಕೊಳೆತ ಕಸದೊಳಗಿಹನು ನನ್ನ ಶಿವ’ ಎಂದು ’ಲೋಕ ನಗಬೇಕಾದರೆ ಆರಾದರೂ ಅಳಬೇಕು’ ಎನ್ನುವಂತೆ ತಾನು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತಾನೆ. ರೈತ ’ಪೂಜೆಯೆಂಬುದನರಿಯ; ದೇವನೆಂಬುದನರಿಯ; ಹುಟ್ಟುಗುಣ ಸುಟ್ಟರೂ ಹೋಗುವುದೆ?’ ಎಂದು ತಾನು ತಂದಿದ್ದ ಹೂವು ಹಣ್ಣುಗಳೊಂದಿಗೆ ಶಿವಾಲಯದೆಡೆಗೆ ಹೊರಡುತ್ತಾನೆ. ’ತಿರೆಗಿಂತ ದೇಗುಲವದೊಳದೇನ್?’ ಎಂದು ಜಲಗಾರ ಹಾಡುತ್ತಾನೆ.
ಆಗ ಇಬ್ಬರು ಪಾರ್ವರ ಪ್ರವೇಶವಾಗುತ್ತದೆ. ದೂರದಿಂದ ಹಾಡು ಕೇಳಿದ ಅವರಲ್ಲೊಬ್ಬ

ಕೊಳಲಿನಿದನಿಯಂತೆ ಸವಿಗೊರಲಿನಿಂದೊಗೆದ
ಗಾಯನವದೆನಿತಿಂಪು! ಹಾಡಿದವರಾರೊ?
ಎನ್ನುತ್ತಾನೆ. ಎರಡನೆಯವನು-
ಯಾರೋ ದಿವ್ಯಾತ್ಮನಿರಬೇಕು. ಮಧುರತಮ
ಗಾಯನವು ಅಮಲತಮ ಹೃದಯದಿಂದಲ್ಲದೆ
ಹೊರಹೊಮ್ಮಲರಿಯದು! ಗುಡಿಯ ಬಳಿಯಾದರೂ
ಹಾಡಿದನೆ!

ಎನ್ನುತ್ತಾನೆ. ಜಲಗಾರನನ್ನು ನೋಡಿ ಹಾಡಿದವನು ಅವನೇ ಎಂದು ತಿಳಿಯುತ್ತಿದ್ದ ಹಾಗೆ ಅವರ ವರ್ತನೆಯೇ ಬದಲಾಗಿಬಿಡುತ್ತದೆ.

ಸಂಗೀತವನಿತೇನು ಮನಮೋಹಿಪಂತೆ
ಇರಲಿಲ್ಲ. ಗಾನದೇವಿಯು ಹೀನ ಜಲಗಾರನನ್
ಒಲಿಯುವಳೇ? ಎಂದಿಗೂ ಇಲ್ಲ

ಎಂದು ಒಬ್ಬನು,

ಶೂದ್ರರೊಳ್
ಕವಿವರ್ಯರುದಿಸುವರೆ? ಹುಟ್ಟುವರೆ ಪಂಡಿತರ್?
ಜನಿಸುವರೆ ಶಿಲ್ಪಿಗಳ್? ಗಾಯಕರ್? ಯೋಗಿಗಳ್?
ಅಸದಳಂ! ಹೊತ್ತಾಯ್ತು ಹೋಗೋಣ

ಎಂದು ಹೊರಡುತ್ತಾರೆ. ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಸಫಲರಾದರೂ, ಸಾಮಾಜಿಕ ಕಾರಣದಿಂದ ಅದನ್ನು ಸ್ವೀಕರಿಸುವ ಮನೋಭಾವ ಅವರಿಗಿರುವುದಿಲ್ಲ.
ಮುಂದೆ ಒಬ್ಬ ಯುವಕ ಬಂದು ಜಲಗಾರನಿಗೆ ’ಒಂದು ದಿನವಾದರೂ ವಿಶ್ರಾಂತಿಯಿರಲಿ; ಬಾ, ಹೋಗೋಣ’ ಎನ್ನುತ್ತಾನೆ. ಆದರೆ ಜಲಗಾರ ’ನೀನು ಶಿವನ ಗುಡಿಯೊಳಗರಸು; ನಾನು ಪುಡಿಯೊಳಗರಸುವೆನು’ ಎಂದು ಬೀಳ್ಕೊಡುತ್ತಾನೆ. ’ತ್ವಮೇವ ಮಾತಾ ಚಿ ಪಿತಾ ತ್ವಮೇವ!’ ಎಂದು ಮಂತ್ರ ಹೇಳುತ್ತ ಬರುವ ಭಟ್ಟನೊಬ್ಬ, ’ಕಣ್ಣಿಲ್ಲ, ಧರ್ಮರೇ, ಕಾಸು ಕೊಡಿರಪ್ಪಾ!’ ಎನ್ನುತ್ತಾ ಬರು ತಿರುಕನಿಗೆ ’ನೀ ಸತ್ತರೆನಗೇನೊ? ಮಡಿಬಟ್ಟೆ ಮುಟ್ಟುವೆಯಾ? ಅದಕೆ ದೇವರು ನಿನ್ನ ಕಣ್ಣಿಂಗಿಸಿದ್ದು’ ಎಂದು, ಮತ್ತೆ ’ತ್ವಮೇವ ಮಾತಾ ಚ......’ ಹೇಳುತ್ತಾ ಸಾಗಿ ಹೋಗುತ್ತಾನೆ. ನಂತರ ವಿಚಾರವಾದಿಗಳಂತೆ ಕಾಣುವ ಇಬ್ಬರು ತರುಣರ ಪ್ರವೇಶವಾಗುತ್ತದೆ. ’ಜಗವೆಲ್ಲ ದೇವನಿಹ ಗುಡಿಯಲ್ಲವೇ, ಗೆಳೆಯ?’ ಎನ್ನುವ ಒಬ್ಬ;

ಮೊದಲ ಠಕ್ಕನು ಮೊದಲ ಬೆಪ್ಪನಂ ಸಂಧಿಸಲು
ಸಂಭವಿಸಿತೆಂಬರೀ ಮತ ಎಂಬ ಮತಿವಿಕಾರಂ.
ದೊರೆ ಪುರೋಹಿತರ್ ಅವಳಿಮೊಲೆಯೂಡಿ ಸಲುಹಿದರದಂ.
ಮತದ ಮದಿರೆಯನೀಂಟಿ ಮಂಕುಬಡಿದಿದೆ ಜನಕೆ.
ಕೊನೆ ದೊರೆಯ ಕೊರಳಿಗಾ ಕೊನೆ ಪುರೋಹಿತನ ಕರುಳ್
ಉರುಳಾಗುವಾ ವರೆಗೆ ಸುಖವಿಲ್ಲ ಈ ಧರೆಗೆ!

ಎನ್ನುವ ಇನ್ನೊಬ್ಬ ತಮ್ಮ ವಿಚಾರಧಾರೆಯನ್ನು ಹರಿಯಬಿಡುತ್ತಾರೆ. ತಿರುಕ ಅವರ ಬಳಿ ಭಿಕ್ಷೆ ಬೇಡಿದಾಗ ಕೊಡುವಂತೆ ನಟಿಸಿ, ಕೊಡದೆ ಆತನನ್ನು ಗೋಳು ಹುಯ್ದುಕೊಳ್ಳುತ್ತಾರೆ. ’ಭಿಕ್ಷುಕರ ದೆಸೆಯಿಂದ ದೇಶವೇ ಹಾಳಾಯ್ತು! ಲೋ! ನಿನ್ನ ಕಣ್ಣು ಕುರುಡೇನೊ, ಠಕ್ಕ!’ ಎಂದು ಆತನನ್ನು ಹಿಂಸಿಸುತ್ತಾರೆ. ಜಲಗಾರ ಬಂದು ತಿರುಕನನ್ನು ಬಿಡಿಸಿಕೊಳ್ಳುತ್ತಾನೆ. ಆ ಯುವ ವಿಚಾರವಾದಿಗಳ ವಿಚಾರ ಕೇವಲ ಪುಸ್ತಕದ ಬದನೆಯಾಗುತ್ತದೆ!

ಎದ್ದೇಳು ಭಿಕ್ಷುಕನೆ, ನನ್ನನ್ನದೊಳೆ, ಮುಷ್ಟಿ
ನಿನಗಿಕ್ಕಿ, ಶಿವಪೂಜೆ ಮಾಡುವೆನು. ನೀನೆನ್ನ
ಸೋದರ, ನೀನೆನ್ನ ದೇಗುಲ!...........

ಎನ್ನುತ್ತಾನೆ ಜಲಗಾರ. ಮುಂದೆ, ಎರಡನೆಯ ದೃಶ್ಯದಲ್ಲಿ ಜಲಗಾರ ತನ್ನ ಸಂಜೆಯ ಕೆಲಸವನ್ನು ಮಾಡುತ್ತಿರುತ್ತಾನೆ. ಜಾತ್ರೆಗೆ ಹೋದವರೆಲ್ಲಾ ಹಿಂತಿರುಗುತ್ತಿರುತ್ತಾರೆ. ಜಾತ್ರೆಯ ವೈಭವ, ಆಡಂಬರದ್ದೇ ಮಾತು! ’ಜಲಗಾರ ಪುಣ್ಯವಿಲ್ಲವೊ ನಿನಗೆ!’ ಎನ್ನುತ್ತಾನೆ ರೈತ. ’ಶಿವಗುಡಿಯಿಂದ ಏನು ತಂದೆ’ ಎಂಬ ಜಲಗಾರನ ಮಾತಿಗೆ ’ಹಣ್ಣು ಕಾಯಿ ಹೂವು ಕರ್ಪೂರ ಕುಂಕುಮ’ ಎನ್ನುತ್ತಾನೆ; ದೇವಾಲಯದ ಕಲಾವೈಭವವನ್ನು ವರ್ಣಿಸುತ್ತಾನೆ! ತನ್ನ ಬದುಕಿನ ಕಷ್ಟವನ್ನು ಹಾಡುತ್ತಾ ಹುಡುಗಿಯೊಬ್ಬಳು ಹೋಗುತ್ತಾಳೆ. ಪಾರ್ವರಿಬ್ಬರು ಬರುತ್ತಾರೆ. ಅಂದಿನ ಅವರ ದಕ್ಷಿಣೆ, ಹಣ್ಣುಕಾಯಿನ ದುಡ್ಡು, ತೀರ್ಥ ಮಾರಿದ ದುಡ್ಡುಗಳ ಬಾರಿ ಲೆಕ್ಕಾಚಾರದಲ್ಲಿ ಅವರಿಬ್ಬರೂ ಮುಳುಗಿರುತ್ತಾರೆ. ’ಅಂತೂ ನಮಗೆಲ್ಲ ಶಿವಗುಡಿಯ ದೆಸೆಯಿಂದ ಹಿಟ್ಟು ಹೊಟ್ಟೆಗೆ, ದುಡ್ಡು ಬಟ್ಟೆಗೆ’ ಎಂದು ಒಬ್ಬ; ’ಗುಟ್ಟು ಬಿಟ್ಟರೆ ಕೆಟ್ಟೆ. ನಡೆ ಬೇಗ’ ಎಂದು ಇನ್ನೊಬ್ಬ ಹೇಳುತ್ತಾ ಹೋಗುತ್ತಾರೆ. ಇವರ ಮಾತು ಕೇಳಿದ ಜಲಗಾರ-

ಜೋಯಿಸರು
ಗುಡಿಯ ನುಗ್ಗುವ ಮುನ್ನವೇ ಶಿವನ ಹೊರಗಟ್ಟಿ
ನುಗ್ಗುವರು. ಶಿವಶಿವಾ ಗುಡಿಯೊಳಿದ್ದರು ಕೂಡ
ದೇವರಿಂದತಿ ದೂರವಿಹ ಪಾಪಿಯೆಂಥವನು?

ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಕವಿಯೊಬ್ಬ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆನ್ನುವಂತೆ ’ಕೊರಗಲೇಕೆ? ಮರುಗಲೇಕೆ? ಬರಿದೆ ಬಾಳನು ಜರೆವುದೇಕೆ? ಎಂದು ಹಾಡುತ್ತಾನೆ. ಹುಡುಗರ ಗುಂಪೊಂದು ’ನಾವು ಮರುಳರು, ನಾವು ಕುಡುಕರು, ಮರುಳುತನವೆಮ್ಮಾಟವು’ ಎಂದು ಹಾಡುತ್ತಾ ಸಾಗುತ್ತದೆ! ಇವೆಲ್ಲವನ್ನೂ ಕಂಡ, ಕೆಲಸ ಮುಗಿಸಿದ ಜಲಗಾರ ’ಕುಳಿತಿಲ್ಲಿ ಶಿವನಂ ಧ್ಯಾನಿಸುವೆ’ ಎಂದು ಮಧುರವಾಗಿ ಹಾಡತೊಡಗುತ್ತಾನೆ. ಜಲಗಾರನ ವೇಷದಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಜಲಗಾರ-

ನೀನಾರು ಆಕೃತಿಯೆ! ನೀನಾರು? ಯಾರು?
ಮಾನುಷವಾಗಿ ಕಂಡರೂ ಅಮಾನುಷವಾಗಿ
ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ
ಕಂಗಳಿಂದೇಕೆನ್ನ ನೋಡುತಿಹೆ ಇಂತು?
ನೀನಾರು? ಆಕೃತಿಯೆ?

ಎಂದು ಹೆದರುತ್ತಲೇ ಕೇಳುತ್ತಾನೆ. ಆಗ ಶಿವ-

ನಾನೊಬ್ಬ ಜಲಗಾರ.
ಅಂಜದಿರು, ಸೋದರನೆ! ಜಗದ ಜಲಗಾರ
ನಾನು! ಶಿವನೆಂದು ಕರೆಯುವರು ಎನ್ನ!
........................................................
ರುದ್ರನೆಂಬರು ಎನ್ನ; ಶಿವನೆಂಬರೆನ್ನ;
ಹೇಸುವರು, ಅಂಜುವರು, ಜಲಗಾರನೆನಲು!

ಎನ್ನುತ್ತಾನೆ. ಆಗ ಜಲಗಾರ ಮುಗ್ಧವಾಗಿ, ವಿನಯದಿಂದ-

ನಿನ್ನನಾ ಶಿವನೆಂದು ನಂಬುವುದೆಂತು? ಹೇ ದೇವ,
ನಿನ್ನೀ ರೂಪಮಂ ನಾನೆಂದುಮಾವೆಡೆಯೊಳುಂ
ಕಂಡರಿಯೆ, ಕೇಳರಿಯೆ. ತಿಳಿದವರು, ಪಂಡಿತರು,
ಬೇರೊಂದು ರೀತಿಯಲ್ಲಿ ಬಣ್ಣಿಸಿರುವರು ನಿನ್ನ

ಎಂದು ಕೇಳುತ್ತಾನೆ. ಆಗ ಶಿವ, ’ನಾನು ಶಾಸ್ತ್ರಿಗಳ ಶಿವನಲ್ಲ, ಕಾವ್ಯಗಳ ಶಿವನಲ್ಲ, ಬೆಳ್ಳಿಬೆಟ್ಟದ ಮೇಲೆ ಗಿರಿಜೆಯೊಡಗೂಡಿ ಸರಸವಾಡುವ ರಸಿಕ ಶಿವನಲ್ಲ! ಬ್ರಹ್ಮಾಂಡ ಒತ್ತುತಿಹ ಕಸದ ರಾಸಿಯ ಮೇಲೆ ಹತ್ತಿ, ನಿಂತು ನರ್ತನವೆಸಗುತಿಹ ತೋಟಿ ನಾನು! ನಿಜಶಿವನು ಜಲಗಾರ! ನಿನ್ನ ಮುಂದಿಹನು, ನೋಡು’ ಎನ್ನುತ್ತಾನೆ. ಆದರೂ, ”ಪಂಡಿತರದೇಕಂತು ಬಣ್ಣಿಪರು ನಿನ್ನ?’ ಎಂಬ ಜಲಗಾರನ ಪ್ರಶ್ನೆಗೆ, ಶಾಸ್ತ್ರಿಗಳ ಕಂಗಳಿಗೆ ನಾನು ನೋಡಲು ಕುರೂಪಿಯಾಗಿದರಿಂದ ತಣ್ಗದಿರನೊಡವೆ ಮಾಡಿದರು. ಅವರ ಭಾಗಕೆ ನಾನು ಪಾಪಿಯಾಗಿದ್ದರಿಂದ ಗಂಗೆಯನ್ನು ತಲೆಯಲ್ಲಿಟ್ಟು ಶುದ್ಧ ಮಾಡಿದರು! ಅಸ್ಪೃಶ್ಯನಾಗಿದ್ದರಿಂದ ಹಣೆಗಣ್ಣಿನ ಬೆಂಕಿಯಿಂದ ಸುಟ್ಟರು. ರೌದ್ರವಾಗಿ ನಾನು ಕಾಣಬೇಕೆಂದು ಹಾವುಗಳ ಸುತ್ತಿದರು ಎಂದೆಲ್ಲಾ ಹೇಳಿ,

ಚಂದ್ರನಿಲ್ಲದೆ, ಗೆಂಗೆ
ಇಲ್ಲದೆಯೆ, ಹೆಣೆಗಣ್ಣು ಹಾವುಗಳು ಇಲ್ಲದೆಯೆ,
ಜಿನವಾರ ಬೂದಿಗಳು ಇಲ್ಲದೆಯೆ, ಶಿವಗುಡಿಗೆ
ಸೇರಿಸರು ಶಿವನಾದ ಎನ್ನ. ಅದರಿಂದ
ನಿಜವಾದ ಶಿವನು, ಜಲಗಾರ ಶಿವನು,
ಶಿವಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ!

ಎನ್ನುತ್ತಾನೆ. ’ನೀನು ಮತ್ತೆಲ್ಲಿರುವೆ?’ ಎಂಬ ಜಲಗಾರನ ಪ್ರಶ್ನೆಗೆ-

ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ!
ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ!
ಎಲ್ಲಿ ಹೊಲೆಯನು ನನ್ನ ಕಾರ್ಯದಲಿ ತೊಡಗಿಹನೊ
ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು,
ಕುರುಡರನು, ದೀನರನು, ಅನಾಥರನು ಕೈಹಿಡಿದು
ಪೊರೆಯುತಿಹನೆಡೆಯಿರುವೆ................
....................................
ಊರ ತೋಟಿಯು ನೀನು; ಜಗದ ತೋಟಿಯು ನಾನು!
ಬಾ ಎನ್ನ ಸೋದರನೆ. ನೀನೆನ್ನ ನಿಜಭಕ್ತ!
ನಿನ್ನದೇ ಶಿವಭಕ್ತಿ! ನೀನೇ ಶಿವಭಕ್ತ!
ನೀನೆ ನಾನಾಗಿಹೆನು! ನಾನೆ ನೀನಾಗಿರುವೆ!
ಶಿವ ನೀನು! ಶಿವ ನೀನು!

ಎಂದು ಜಲಗಾರ ರೂಪಿಯಾದ ಶಿವ ಹಾಡುತ್ತಾನೆ. ಆಗ ಭಾವಪರವಶನಾದ ಜಲಗಾರ ’ಶಿವ ನಾನು! ಶಿವ ನಾನು!’ ಎಂದು ಹೇಳುತ್ತಾ ಶಿವನ ತೆಕ್ಕೆಯೊಳಗಾಗುತ್ತಾನೆ. ನಾಟಕ ಮುಗಿಯುತ್ತದೆ.
ಈ ನಾಟಕ ಆರಂಭದಲ್ಲಿಯೇ, ಮೈಸೂರಿನ ಸಾಹಿತ್ಯ ವಲಯದಲ್ಲಿ ಹಲವರ ಪ್ರಶಂಸೆಯನ್ನೂ ಕೆಲವರ ನಿಂದನೆಯನ್ನೂ ಎದುರಿಸಬೇಕಾಯಿತು. ನಾ.ಕಸ್ತೂರಿಯವರು ಸ್ವತಃ ತಾವೇ ನಿರ್ದೇಶಿಸಿ, ಸ್ಕೌಟು ದಳದ ವಾರ್ಷಿಕೋತ್ಸವದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಮುಂದೆ ಪ್ರದರ್ಶಿಸುತ್ತಾರೆ. (ನಾನು ನನ್ನ ರೂಢಿಯಂತೆ ಆ ನಾಟಕ ಪ್ರದರ್ಶನಕ್ಕೆ ಹೋಗಿರಲಿಲ್ಲ-ಕುವೆಂಪು) ಅದಕ್ಕೆ ಸಾಕಷ್ಟು ಶ್ಲಾಘನೆಯೂ ವ್ಯಕ್ತವಾಗುತ್ತದೆ. ಆದರೆ ಆಗ್ಗೆ ಮೈಸೂರಿನ ವೃದ್ಧಪಿತಾಮಹರೆಂದು ಪ್ರಸಿದ್ಧರಾಗಿದ್ದ ಎಂ.ವೆಂಕಟಕೃಷ್ಣಪ್ಪಯ್ಯನವರು ತಮ್ಮ ಪತ್ರಿಕೆಯಲ್ಲಿ, ’ಆ ನಾಟಕ ಬ್ರಾಹ್ಮಣರನ್ನು ಅವಹೇಳನ ಮಾಡುವುದಕ್ಕೆ ಬರೆಯಲಾಗಿದೆ’ ಎಂದೂ ’ಜಾತಿದ್ವೇಷದ ವಿಷದ ಹಲ್ಲನ್ನು ಬಿತ್ತುವವರು ವಿಷದ ಫಲವನ್ನೆ ಅನುಭವಿಸಬೇಕಾಗುತ್ತದೆ’ ಎಂದೂ ಟೀಕಿಸಿದ್ದರಂತೆ. ಆದರೆ, ನಾಟಕದಲ್ಲಿ ವ್ಯಕ್ತವಾಗಿದ್ದ ಹೊಸ ವಿಚಾರಗಳಿಂದಾಗಿ ನಾಟಕ ದಿನದಿಂದ ದಿನಕ್ಕೆ ಆಸಕ್ತರನ್ನು ಸೆಳೆಯುತ್ತಲೇ ಹೋಯಿತು. ಎಷ್ಟೋ ದಿನಗಳವರೆಗೂ ನಾಟಕಕ್ಕೆ ವ್ಯಕ್ತವಾಗಿದ್ದ ಪ್ರಶಂಸೆ-ನಿಂದನೆಗಳು ಕವಿಗೆ ತಿಳಿಯಲೇ ಇಲ್ಲ! ತಿಳಿದಾಗಲೂ ಒಂದು ನಗುವಷ್ಟೇ ಕವಿಯ ಉತ್ತರವಾಗಿತ್ತು.
೧೯೨೮ ಅಥವಾ ೧೯೨೯ನೆಯ ವರ್ಷದ ಶಿವರಾತ್ರಿಯ ದಿನ ಹಲವರ ಒತ್ತಾಯದ ಮೇರೆಗೆ ಜಲಗಾರ ನಾಟಕವನ್ನು ಸ್ವತಃ ಕವಿಯ ಬಾಯಿಂದ ಕೇಳುವ ಕಾರ್ಯಕ್ರಮವನ್ನು ಯೋಜಿಸಲಾಗಿತ್ತು. ನಾಟಕದ ಕೊನೆಯಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ ಎಂಬುದರಿಂದಲೋ ಅಥವಾ ಶಿವರಾತ್ರಿಯಾಗಿದ್ದರಿಂದಲೋ ಏನೋ ಸಾಕಷ್ಟು ಜನ ಸೇರಿದ್ದರು. ಕವಿಯೂ ಅಪ್ರಾಸಛಂದಸ್ಸಿನ ಹೊಸ ಶೈಲಿಯಲ್ಲಿ ಅದನ್ನು ಧ್ವನಿಯ ಮಟ್ಟಿಗಾದರು ಅಭಿನಯಪೂರ್ವಕವಾಗಿ ವಾಚಿಸಿದರು. ಜನರೆಲ್ಲಾ ಮೆಚ್ಚಿಕೊಂಡರು. ಆದರೆ ಲಿಂಗಾಯಿತ ಶಿವಭಕ್ತರೊಬ್ಬರು ಮಾತ್ರ ಕುವೆಂಪು ಕಡೆಗೆ ಕೈದೋರುತ್ತಾ, ಭಯಂಕರವಾಗಿ ’ಶಿವದ್ರೋಹಿ! ಶಿವದ್ರೋಹಿ!’ ಎಂದು ಆರ್ಭಟಿಸುತ್ತಾ, ಶಿವನಿಂದೆಯಾದಲ್ಲಿ ನಿಲ್ಲಬಾರದು ಎನ್ನುವಂತೆ ಸಭಾತ್ಯಾಗ ಮಾಡಿದರಂತೆ! ಮೊದಲು ವಿಷಯ ತಿಳಿಯದೆ, ಶಿವಭಕ್ತರ ಆರ್ಭಟದಿಂದ ಗಾಬರಿಯಾಗಿದ್ದ ಸ್ವಾಮೀಜಿಗಳು, ತಾತಗಾರು, ನಾ.ಕಸ್ತೂರಿಯವರು ಮತ್ತಿತರರು ಜೋರಾಗಿ ನಕ್ಕುಬಿಟ್ಟರಂತೆ!
ಕುವೆಂಪು ಅವರು ನಿಧನರಾದಾಗ, ಅಂತಿಮದರ್ಶನಕ್ಕಾಗಿ ಉದಯರವಿಯ ಮುಂದೆ ಸಾಲುಗಟ್ಟಿದ ಸಾವಿರಾರು ಜನರುಗಳಲ್ಲಿ ಜಾಡಮಾಲಿಗಳ ಗುಂಪೊಂದು ಸಹ ಸಾಲಿನಲ್ಲಿ ನಿಂತಿತ್ತು. ಅವರಾರು ಕುವೆಂಪು ಅವರಿಗೆ ಪರಿಚಿತರಲ್ಲ, ಅವರ ಸಾಹಿತ್ಯವನ್ನು ಓದಿದವರೂ ಅಲ್ಲ. ಅದನ್ನು ನೋಡಿ, ಕುತೂಹಲದಿಂದ ರಾಮದಾಸ್ ಮೊದಲಾದವರು ಅವರನ್ನು ಮಾತನಾಡಿಸಿದಾಗ, ಅವರೆಲ್ಲರೂ ಕುವೆಂಪು ಮತ್ತು ಜಲಗಾರ ನಾಟಕದ ಹೆಸರುಗಳನ್ನು ಹೇಳಿದರಂತೆ! ಒಬ್ಬ ಬರಹಗಾರ ಅಥವಾ ಆತನ ಒಂದು ಕೃತಿ ಜನರ ಸ್ವತ್ತಾಗಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ.
ಇಂದು ಶಿವರಾತ್ರಿ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದು ಹಾಡಿದ ಬಸವನ ಹೆಸರನ್ನು ಹೇಳಿಕೊಂಡು, ಆತನ ಧರ್ಮದ ವಾರಸುಧಾರರೆನಸಿಕೊಂಡವರು, ರಾಜಕಾರಣಿಗಳು, ಮಠಾಧಿಪತಿಗಳು ನೂರು - ಇನ್ನೂರು ಅಡಿಯ ಶಿವಮೂರ್ತಿಗಳನ್ನು ಲಿಂಗಗಳನ್ನು ಮಾಡಿಸುತ್ತಾ - ಎದೆಯೊಳಗಿನ ಶಿವನಿಗೆ ಸಮಾಧಿ ಕಟ್ಟುತ್ತಾ - ಕಾಂಕ್ರೀಟ್ ಶಿವನ ಆರಾಧಕರಾಗುತ್ತಿದ್ದಾರೆ. ’ನಿಜಶಿವನಾರು?’ ಎಂಬುದನ್ನು ಅರಿಯುವುದೇ ನಿಜವಾದ ಶಿವರಾತ್ರಿಯಲ್ಲವೆ? --

ನಾಟಕ ಪ್ರದರ್ಶನದ ಲಿಂಕುಗಳು


ಭಾನುವಾರ, ಜನವರಿ 19, 2020

ಕ್ರಿಸ್ತು ಜಯಂತಿ ಕಾಲೇಜಿನ *ನೈರತಿ* ನಾಟಕ ಪ್ರದರ್ಶನಕ್ಕೆ ಪ್ರಥಮ ಬಹುಮಾನ


ಮೈಸೂರಿನಲ್ಲಿ ಜರುಗಿದ *ವಿದ್ಯಾರ್ಥಿ ಸಂಸ್ಕೃತಿ ಚಳುವಳಿ ೨* ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ಕಾಲೇಜಿಗೆ ಪ್ರಥಮ ಬಹುಮಾನ ದೊರಕಿದೆ. *ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ* ನಮ್ಮ ಕಾಲೇಜನ್ನು ಆಯ್ಕೆಮಾಡಿ ಕಳುಹಿಸಿದ್ದು ಈ ಗೆಲುವಿನ‌ ಸಾರ್ಥಕತೆ ನಮ್ಮ ಕಾಲೇಜಿನಷ್ಟೇ ವಿಶ್ವವಿದ್ಯಾಲಯಕ್ಕೂ ಸಲ್ಲುತ್ತದೆ.

ಕರ್ನಾಟಕದಾದ್ಯಂತ ಸುಮಾರು ಐವತ್ತಕ್ಕೂ ಹೆಚ್ಚು  ಉತ್ತಮ ಟೀಮ್ ಗಳ ಮೂಲಕ ಸ್ಪರ್ಧೆ ಜರುಗಿದೆ.
ನಾನೇ ನಾಲ್ಕೈದು ನಾಟಕಗಳ ಶ್ರಮವನ್ನು ನೋಡಿದ್ದೇನೆ. ಆದರೆ ನಮ್ಮ ನಾಟಕವು ಈ ಎಲ್ಲಾ ಶಕ್ತಿಗಳನ್ನು ಮೀರಿಸಿ, ಕಡಿಮೆ ನೋಡುಗರಿದ್ದರೂ ಹೆಚ್ಚು ಶ್ರಮ ನೀಡಿ ನಿರ್ವಹಿಸಿದರು. ಇಡೀ ನಾಟಕದ ವಿಡಿಯೋ ಕೂಡ ಫೇಸ್ ಬುಕ್ *(ರವಿಶಂಕರ ಎ.ಕೆ ಅಂಕುರ https://m.facebook.com/story.php?story_fbid=1192372967619010&id=100005389539367)* ನಲ್ಲಿ ಲಭ್ಯ ಇದೆ.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು *ಪ್ರಥಮ  ಬಹುಮಾನ* ಗೆದ್ದದ್ದು ನನಗೂ ಹಿರಿಮೆಯೇ ಆಗಿದೆ.
ನಿರ್ದೇಶನ ಮಾಡಿದ ಪವಿತ್ರ ಮೇಡಂ ಅವರಿಗೂ...
ಅಭಿನಯಿಸಿದ ಕ್ರಿಸ್ತು ಜಯಂತಿ ಕಾಲೇಜಿನ *ರಂಗಾಂತರಂಗ*  ತಂಡಕ್ಕೂ ಅಭಿನಂದನೆಗಳು.
-ಅಂಕುರ