
ವಿಹಾರಿಕಾ ಎಂಬ ಪ್ರವಾಸ ಪರಿಧಿ
ಏನು ಸವಿಯೊ ಅದನೆ ಕುಡಿ
ನಿನ್ನ ರುಚಿಯ ಹದವ ಹಿಡಿ
ನನ್ನನೇನು ಕೇಳುವೆ,
ಆದರೂನು ಹೇಳುವೆ
-ದ.ರಾ ಬೇಂದ್ರೆ
ಪ್ರವಾಸವು ಮನುಷ್ಯನ ಉಗಮದಿಂದಲೇ ಪ್ರಾರಂಭವಾಗಿದೆ. ತನ್ನ ನೋಟಕ್ಕೆ ಸಿಲುಕುವ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿ ಸೆರೆಯಿಡಿಯುವ ಜ್ಞಾನವು ಪ್ರವಾಸದ ಅನುಭವಗಳನ್ನೇ ತಿಳಿಸುತ್ತದೆ. ಈ ಮನುಷ್ಯ ನಾಗರೀಕನಾಗಿ, ಭಾಷೆ ಕಲಿತು, ಬರವಣಿಗೆ ಕಲಿತು ಸಾಹಿತ್ಯ ರಚಿಸುವ ಹಂತದಲ್ಲಿ ಈ ಪ್ರವಾಸ ಅನುಭವಗಳನ್ನು ಕನಸಿನಂತೆ ದಾಖಲು ಮಾಡಿದ್ದಾನೆ. ಅದು ಮೊದಲಿಗೆ ಸೊಲ್ಲಾಗಿ ಜನಪದರಲ್ಲಿ ಮೂಡಿದೆ. ನಂತರ ನಮ್ಮ ಸಂಸ್ಕೃತ ಸಾಹಿತ್ಯದ ಕಾವ್ಯಗಳಲ್ಲಿ ಕಥನವಾಗಿದೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ನಮ್ಮ ಆದರ್ಶ ಪಾತ್ರಗಳೆಲ್ಲಾ ಈ ಭರತಖಂಡವನ್ನು ನಾಲ್ಕು ದಿಕ್ಕಿಗೂ ಪ್ರವಾಸ ಮಾಡಿವೆ.
ಕನ್ನಡ ಸಾಹಿತ್ಯದ ಮೊದಲ ಕವಿಯಾದ ಪಂಪನು ತನ್ನ ಭಾರತದಲ್ಲಿ ‘ಸೊಗಯಿಸಿ ಬಂದ ಮಾಮರನೆ..’ ಎಂದು ಬನವಾಸಿಯನ್ನು ವರ್ಣಿಸುವ ಕ್ರಮವನ್ನು ಪ್ರವಾಸದ ಮೊದಲ ಸೂಚನೆಯಾಗಿ ವಿದ್ವಾಂಸರು ಅಧ್ಯಯನಮಾಡಿದ್ದಾರೆ. ಅಕ್ಕಮಹಾದೇವಿಯ ವಚನಗಳಾಗಲಿ, ಹರಿಹರನ ರಗಳೆಯಾಗಲಿ, ಲಕ್ಷ್ಮೀಶನ ಕಾವ್ಯವೂ ಕೂಡ ಈ ಪ್ರಕೃತಿಯನ್ನು ವರ್ಣಿಸುವಾಗ ನೋಟವನ್ನು ವಿಸ್ತರಿಸುವ ಹಲವು ಬಗೆಗಳು ಪ್ರವಾಸದ ಚಿಂತನೆಗಳೇ ಆಗಿವೆ. ದಾಸರು, ಸರ್ವಜ್ಞನು, ತತ್ತ್ವಪದಕಾರರು ಇದೇ ಹಾದಿಯಲ್ಲಿ ಪ್ರಕೃತಿ-ಮನುಷ್ಯ ಪ್ರಕೃತಿಯನ್ನು ಕೇಂದ್ರೀಕರಿಸಿ ಮನೋಚೈತನ್ಯ ಮೂಡಿಸುವಾಗ ಅವರ ಕಣ್ಣಲ್ಲಿ ಮೂಡಿದ್ದೆಲ್ಲಾ ಅದ್ಭುತ ಪ್ರವಾಸ ಸಾಹಿತ್ಯವೇ ಆಗಿದೆ. ವಿದೇಶಿಯರ ಆಳ್ವಿಕೆಗಳಲ್ಲಿ ಪ್ರವಾಸ ಸಾಹಿತ್ಯವು ಭಾರತದ ವೈಭವದ ದಾಖಲು ಬರಹಗಳಲ್ಲಿ ವಿಶಿಷ್ಟ ಸ್ಥಾನ ಪಡೆಯಿತು. ಆದರೆ, ಇದೊಂದು ಸಾಹಿತ್ಯ ಪ್ರಕಾರವಾಗಿ ಕಂಡು ಬಂದುದು ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆಯೇ ಆಗಿದೆ. ೨೦ನೇ ಶತಮಾನದಲ್ಲಿ ಇದು ಪ್ರತ್ಯೇಕ ಸಾಹಿತ್ಯವಾಗಿ ಪ್ರಾರಂಭಗೊಂಡು, ಇಂದು ಜಾಲತಾಣದ ಬಹುಮುಖ್ಯ ಮಾರ್ಗವಾಗಿಯೇ ರೂಪುಗೊಂಡಿದೆ.
ಮನೋವಿಜ್ಞಾನದ ಪ್ರಕಾರ ಮಗು ಹುಟ್ಟಿನಿಂದ ತನ್ನ ಹದಿನಾರು-ಹತ್ತೊಂಬತ್ತನೇ ವಯಸ್ಸಿನವರೆಗೂ ತಾನು ಕಲಿತ, ಅನುಭವಿಸಿದ, ಆನಂದಿಸಿದ ಎಲ್ಲಾ ವಿಚಾರಗಳನ್ನು, ಸೂಕ್ಷö್ಮಗಳನ್ನು ಅರ್ಥಪೂರ್ಣವಾಗಿ ಇಡೀ ಜೀವನಪರ್ಯಂತ ತನ್ನ ಮೆದುಳಿನಲ್ಲಿ ದಾಖಲಿಸಿಕೊಂಡು ಮುಂದಿನ ಎಲ್ಲಾ ಅನುಭವಗಳಿಗೂ ಲೇಪಿಸುತ್ತದೆ. ಇದಕ್ಕೆ ಸೂಕ್ತ ಉದಾಹರಣೆಯೆಂದರೆ ಕುವೆಂಪು ಅವರ ಸಾಹಿತ್ಯದ ವೈಭವವೇ ಮಲೆನಾಡು ಕಾಡು, ಬದುಕು ಹಾಗೂ ದರ್ಶನ. ಈ ಹಿನ್ನಲೆಯಲ್ಲಿ ‘ಪ್ರವಾಸದ ಆ ದಿನಗಳು’ ಕೃತಿಯನ್ನು ಸ್ಪರ್ಷಿಸಿದಾಗ ವಿಹಾರಿಕಾ ಅಂಜನಾ ಹೊಸಕೇರಿ ಅವರ ಎಲ್ಲಾ ಅನುಭವಗಳು ಇದೇ ಮಾದರಿಯಲ್ಲಿ ದಾಖಲಾಗುತ್ತವೆ. ಭವಿಷ್ಯಕ್ಕೂ ಅಚ್ಚಳಿಯದ ನೆನಪಾಗುತ್ತವೆ.
ವಿಹಾರಿಕಾ ಹೆಸರಿನಲ್ಲಿಯೇ ಮೂಡಿರುವಂತೆ ಇವರು ಪ್ರಕೃತಿ ಪ್ರಿಯೆ. ಬದುಕೇ ಒಂದು ಸವಾಲು ಎಂಬ ಗಹನ ವಿಚಾರದ ಮೂಲಕ ಸಾಹಿತ್ಯಕ್ಕೆ ಹೆಜ್ಜೆಯಿಟ್ಟು ಇಂದು ತನ್ನ ಅನುಭವಗಳನ್ನು ಪ್ರವಾಸದ ಮಾದರಿಯಲ್ಲಿ ದಾಖಲಿಸಿದ್ದಾರೆ. ಈ ಪ್ರಕೃತಿಯನ್ನು ಆನಂದಿಸುವ ವಿಹಾರ ಮನೋವ್ಯಕ್ತಿತ್ವದ ಇವರ ಈ ಕೃತಿಯನ್ನು ಹಿರಿಯರ ಪ್ರವಾಸ ಕಥನಗಳೊಟ್ಟಿಗೆ ಇಟ್ಟು, ಅಳತೆಮಾಡುವುದಕ್ಕಿಂತ, ಇವರದೇ ವಯಸ್ಸಿನ ಕಣ್ಣುಗಳಲ್ಲಿಯೇ ನೋಡಿದರೆ ಇದೊಂದು ಅದ್ಭುತ ಪ್ರಯತ್ನ. ಸರಳವಾದ ಶೀರ್ಷಿಕೆಯೊಂದಿಗೆ ಉದುಗಿಸಿಟ್ಟ ನೆನಪುಗಳನ್ನು ಹತ್ತು ದಿನಗಳಲ್ಲಿ ದಾಖಲಿಸಿದ್ದಾರೆ. ನನಗಂತೂ ಕೃಪಾಕರ ಸೇನಾನಿಯವರ ‘ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು’ ಜೊತೆಗೆ ಓ.ಎಲ್ ನಾಗಭೂಷಣ ಸ್ವಾಮಿಯವರ ‘ನನ್ನ ಹಿಮಾಲಯ’ ಕೃತಿಗಳೇ ನೆನಪಾದವು. ಆದರೆ, ಇದು ಅಂತಹ ಸಂಕೀರ್ಣ ಪ್ರಯತ್ನವಾಗದೇ ಬರಹಕ್ಕೆ ಮಾತ್ರ ದಿನಗಳ ತುರ್ತು ಪಡೆದಿರುವುದನ್ನು ತಿಳಿಯಬಹುದು.
ನಾಲ್ಕು ಪರಿಸರಗಳಲ್ಲಿ ಮೂಡಿದ ಆರು ಕಥನಗಳ ಮನೋಚೈತನ್ಯವು ಇಲ್ಲಿ ಮೂಡಿದೆ. ಪ್ರತಿ ಪ್ರವಾಸಕ್ಕೂ ಉದ್ದೇಶಿತ ಕಾರಣವಿದೆ. ಆರು ಕಣ್ಣುಗಳಲ್ಲಿ ಮೂರು ಜನರು ದಾಖಲಿಸಿದ ಅನುಭವಗಳಿದ್ದರೂ ಇಲ್ಲಿ ದಾಖಲಾಗುವುದು ಮುಗ್ಧ ಮನಸ್ಸಿನ, ಧೈರ್ಯವಂತ ಹೆಣ್ಣುಮಗುವಿನ ಪ್ರಯಾಣದ ಪ್ರಜ್ವಲಿತ ಇಲ್ಲವೇ ಪ್ರಯಾಸದ ಅನುಭವಗಳ ದಾಖಲೆ ಎನ್ನಬಹುದು. ಬಾಲ್ಯವನ್ನು ಕಳೆದು ಯೌವನಕ್ಕೆ ಕಾಲಿಡುತ್ತಿರುವ ಈ ಹಂತದಲ್ಲಿನ ಯಾವ ಕುತೂಹಲವೂ ಇಲ್ಲಿ ದಾಖಲಾಗುವುದಿಲ್ಲ. ಬಾಲ್ಯವೂ ನಿರೂಪಿತವಾಗುವುದಿಲ್ಲ. ಯೌವನದ ಬಾಲ್ಯವು ಹಿರಿತನ ತೇಜಸ್ಸು ಪಡೆದರೆ ಏನೆಲ್ಲಾ ಮೂಡಬಹುದೋ ಆ ಎಲ್ಲಾ ಅಂಶಗಳೂ ಇಲ್ಲಿ ಪಡಿಯಚ್ಚಾಗಿವೆ.
ಈ ಶತಮಾನದ ಮೂರನೇ ದಶಕದ ಕ್ರಾಂತಿಯೆಂದರೆ ಜಗತ್ತನ್ನು ದೃಶ್ಯಗಳಲ್ಲಿ ಶ್ರೀಸಾಮಾನ್ಯರು ದಾಖಲಿಸಲು ಹೊರಟಿದ್ದು. ಹಳ್ಳಿ ನಗರಗಳ ಅಂತರ ಕಳಚಿ, ಸ್ಥಳೀಯ ವಿದೇಶಗಳ ದೂರವನ್ನು ಸಡಿಲಿಸಿ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಚಿತ್ರೀಕರಿಸಲು ಪ್ರಾರಂಭಿಸಿದ್ದು. ಪ್ರವಾಸ ಕಥನಗಳ ಬರವಣಿಗೆಯೇ ಕಡಿಮೆ ಇರುವಾಗ, ಈ ದೃಶ್ಯಮಾಧ್ಯಮಗಳ ದಾಖಲೀಕರಣ ಕ್ರಾಂತಿಯು ಶುರುವಾದ ಮೇಲೆ ಪ್ರವಾಸ ಕಥನಗಳು ಬರಹದಲ್ಲಿ ಮೂಡುವುದೇ ಅತಿ ವಿರಳವಾಗಿದೆ. ಓದುವ ಕಣ್ಣುಗಳು ವೀಕ್ಷಣೆಯ ಕಡೆ ಹೊರಳಿವೆ. ಇಂತಹ ಸಂದರ್ಭದಲ್ಲಿ ಈ ಕೃತಿಯನ್ನು ಏಕೆ ಓದಬೇಕು? ಇದರಿಂದ ದೊರೆಯುವ ಸುಖಗಳೇನು? ಎಂಬ ಪುಸ್ತಕ ಪ್ರೀತಿಗಳ ಪ್ರಶ್ನೆಗೆ ಕೆಲವು ಉತ್ತರಗಳನ್ನು ಇಲ್ಲಿ ದಾಖಲಿಸಬಹುದು. ದೇಶ ಸುತ್ತುವ ಮನಸ್ಸಿಗೆ ಧೈರ್ಯ ಹೇಗಿರಬೇಕು ಎಂಬುದಕ್ಕೆ ವಿಹಾರಿಕಾ ಅವರು ಉತ್ತಮ ಉದಾಹರಣೆ. ಆರು ಪ್ರವಾಸಗಳಲ್ಲೂ ಇವರು ಸೃಷ್ಟಿಸಿಕೊಳ್ಳುವ ಮನೋಚೈತನ್ಯ ವಿಶಿಷ್ಟವಾಗಿದೆ. ಪ್ರತಿ ಪ್ರವಾಸದಲ್ಲಿಯೂ ಇವರು ಬಯಸುವ ಮೊದಲ ನೋಟವೆಂದರೆ ಒಂದು ‘ಸೂರು’. ಎರಡನೇ ನೋಟವೆಂದರೆ ಶೌಚಾಲಯ ಮತ್ತು ಊಟ. ಇವು ಎಲ್ಲಿಯೂ ಪ್ರಧಾನವೆಂದು ಪರಿಗಣನೆಯಾಗಿ ದಾಖಲಾಗದಿದ್ದರೂ ಇವುಗಳ ಶಿಸ್ತು, ಸ್ವರೂಪಗಳ ಕಡೆ ಸೂಕ್ಷ್ಮನೋಟ ಚೆಲ್ಲುತ್ತಾರೆ. ಮಹಾರಾಷ್ಟದ ಪ್ರವಾಸವು ತೆರೆಯುವ ವಿಮಾನ ಪ್ರಯಾಣ, ರೈಲು ಪ್ರಯಾಣ ಹಾಗೂ ಆಟೋ ಪ್ರಯಾಣಗಳು ಹೊಸ ಅನುಭವಗಳನ್ನು ದಾಖಲಿಸುತ್ತವೆ. ಹಣವು ನಮಗೆ ನೀಡುವ ಸೌಲಭ್ಯಗಳನ್ನು, ಹಣದ ಕೊರತೆಯು ಕಲಿಸುವ ಪಾಠಗಳನ್ನು ನೋಟ ಮತ್ತು ನಿರ್ವಹಣೆಯೊಂದಿಗೆ ಸ್ಪಷ್ಟಪಡಿಸುತ್ತಲೇ ಕುತೂಹಲವನ್ನು ಕೆರಳಿಸುತ್ತಾರೆ. ಎಲಿಫೆಂಟಾ ಗುಹೆಗಳಂತ ಪ್ರಯಾಣದಲ್ಲಂತೂ ನಮ್ಮದೇ ಪ್ರಯಾಣವೇನೋ ಅನಿಸಿಬಿಡುತ್ತದೆ. ಈ ಪ್ರವಾಸದಲ್ಲಂತೂ ಸಾಯಿಬಾಬಾ ದೇವಾಲಯ ಒಂದು ಕೇಂದ್ರ ಬಿಂದು. ನ್ಯಾಯ ಅನ್ಯಾಯಗಳ ಕುತೂಹಲವಂತೂ ಈ ಸುದೀರ್ಘ ಬರಹವನ್ನು ಓದುವವರೆಗೂ ಬಂಧಿಸುತ್ತದೆ.
ಮೈಸೂರು ನಮಗೆ ತಿಳಿದ ಸ್ಥಳವೆಂದು ಭಾವಿಸಿ ಓದಲು ಪ್ರಾರಂಭಿಸಿದರೆ, ಹತ್ತಿರವಿದ್ದೂ ದೂರನಿಲ್ಲುವ ಸೂರಿನ ಸಂಕಷ್ಟವು ಅದರ ಎರಡನೇ ಭಾಗದಲ್ಲಿ ಅದರ ಸಾಹಸ ಸಂಚಲವಂತೂ ವಿಭಿನ್ನ ಅನುಭವಗಳ ಸಂಗ್ರಹವಾಗಿದೆ. ಕರಾವಳಿಯ ಪ್ರವಾಸಕ್ಕೆ ಧರ್ಮಸ್ಥಳ, ಉಡುಪಿ, ಮುರುಡೇಶ್ವರಗಳ ಸರ್ವೇಸಾಮನ್ಯ ಪ್ರವಾಸೀ ತಾಣಗಳು ಸಿಲುಕಿದರೂ ವಿಹಾರಿಕಾ ನೋಡುವ ನೋಟವು ವಿಭಿನ್ನವಾಗಿ ಕಾಣಿಸುತ್ತದೆ. ಎಲ್ಲಾ ಇದ್ದೂ ಏನೂ ಇಲ್ಲದ ಪರಿಸ್ಥಿತಿಗಳು, ಜೇಬಿನಲ್ಲಿ ಹಣವಿದ್ದರೂ ಅಪ್ರಯೋಜನಕಾರಿಯಾಗುವ ಸ್ಥಿತಿಯಾಗಲೀ, ಅಸಹಾಯಕರಾದಾಗ ನಾವು ನಂಬುವ ಹಾಗು ಅನುಮಾನಿಸುವ ಅನುಭವಗಳಾಗಲಿ ಇಲ್ಲಿ ವಿಶೇಷವಾಗಿ ದಾಖಲಾಗುತ್ತವೆ. ಸ್ಥಳ ಪುರಾಣಗಳು ಕಥನಗಳಾಗಿ ಓದುಗರನ್ನು ಕುತೂಹಲ ಭರಿಸುವುದುಂಟು. ಈ ಐತಿಹ್ಯಗಳ ಹಿನ್ನಲೆಯನ್ನು ಯಾವುದೇ ಪ್ರಶ್ನಿಸದೇ ನೇರವಾಗಿ ದಾಖಲಿಸುವ ಮುಗ್ಧ ಮನಸ್ಸಿನಲ್ಲಿ ನಿಚ್ಛಳವಾಗಿರುವುದು ಭಕ್ತಿಯೊಂದೇ ಆಗಿದೆ. ಬದುಕಿನ ಪಾಠಗಳನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸುವ ಈಕೆಗೆ ಕರಾವಳಿಯ ಜನ ಹಾಗೂ ಅವರ ಭಾಷೆ, ಸಂದರ್ಭಗಳು ತಾತ್ಕಲಿಕ ಬೇಸರ ಮೂಡಿಸಿ ಕೊನೆಗೆ ಹೆಮ್ಮೆಯ ವಿಚಾರಗಳೇ ಆಗಿ ಬಿಡುತ್ತವೆ. ಮೊಬೈಲ್ ಕಳೆದುಕೊಂಡ ಪ್ರಸಂಗವಂತೂ ಪ್ರತ್ಯೇಕ ಅಧ್ಯಾಯವಾಗಿದ್ದರೂ ಅರ್ಥಪೂರ್ಣ ಎನಿಸುತ್ತದೆ. ಓದುಗ ಕೂಡ ಅದೇ ಕುತೂಹಲದಲ್ಲಿ ಹುಡುಕಾಟದ ನಡುವಿನ ಪ್ರಸಂಗಗಳ ಪ್ರವಾಸವನ್ನು ಬೇಸರದಲ್ಲಿಯೇ ಓದುತ್ತಾ ಪತ್ತೆದಾರಿಯ ಕಾದಂಬರಿಯ ಪಾತ್ರವಾಗುತ್ತಾನೆ. ಪ್ರತಿಯೊಬ್ಬರ ಬದುಕಿನಲ್ಲೂ ಒಳ್ಳೆಯತನಗಳ ಕಥನಗಳಿರುತ್ತವೆ. ಅವೆಲ್ಲವೂ ಮೊಬೈಲ್ ಸಿಗುವ ಪ್ರಸಂಗದಲ್ಲಿ ನೆನಪಾಗುತ್ತವೆ.
ಹಂಪಿ ಪ್ರವಾಸವು ಒಮ್ಮೆ ಇತಿಹಾಸದ ಘಟನೆಗಳ ಕಡೆ ದರ್ಶನ ಮಾಡಿಸುತ್ತಾ ನಿಧಾನವಾಗಿ ಕಥೆ ಹೇಳುತ್ತದೆ. ಪ್ರವಾಸ ಸಾಹಿತ್ಯವು ಕಥನವಾಗುವ ಮಾರ್ಗಕ್ಕೆ ಇದು ಸೂಕ್ತ ಉದಾಹರಣೆಯಾಗುತ್ತದೆ. ಹಂಪಿಯನ್ನು ನೋಡದವರಿಗೆ ಬದುಕಿನಲ್ಲಿ ಒಮ್ಮೆ ನೋಡಲೇಬೇಕೆಂಬ ಆಕಾಂಕ್ಷೆಗಳನ್ನು ಈಕೆಯ ನೋಟಗಳು ಕೇಂದ್ರಿಕರಿಸಿವೆ.
‘ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ’ ಎಂಬ ಬಲವಾದ ನಂಬಿಕೆಯೇ ಈಕೆಯ ದೃಢಮಂತ್ರವಾಗಿದೆ. ಅದರ ಫಲಿತಗಳನ್ನು ರೈಲ್ವೇ ನಿಲ್ದಾಣದಲ್ಲಿ ಮಲಗಿದರೂ ದೇವರು ಕಾಪಾಡುವ ಅಭಯವಾಗಲಿ, ಯಾರದೋ ಮನೆಯ ಮುಂದೆ ಮುಂಜಾನೆ ಕಾಣುವ ಉಡುಪಿಯ ಅನುಭವಗಳಾಗಲಿ, ಕಳೆದು ಹೋದ ಮೊಬೈಲು ಮತ್ತೆ ಸಿಗುವ ಮೂಲಕ ಮೂಡಿಸುವ ನಂಬಿಕೆಗಳನ್ನು ಪ್ರವಾಸಗಳ ಮುಖ್ಯ ನೋಟವನ್ನಾಗಿ ಗಮನಿಸಬಹುದು. ತನ್ನ ತಂದೆ, ತಾಯಿ ಜೊತೆಯಲ್ಲಿದ್ದರೂ ತನ್ನದೇ ಏಕಾಂತ ಪ್ರಯಾಣವನ್ನು ದಾಖಲಿಸುವ ಸ್ವಾವಲಂಬಿತನದ ಮನೋಧೈರ್ಯವು ಈ ಪ್ರವಾಸ ಕಥನದ ಪ್ರಧಾನ ಅಂಶವಾಗಿದೆ.
ತನ್ನ ವಯಸ್ಸಿನವರು ಚಿತ್ರ-ದೃಶ್ಯಗಳಲ್ಲಿ ಕಳೆದುಹೋಗುತ್ತಿರುವ ಈ ಸಂದರ್ಭಗಳಲ್ಲಿ ಈಕೆಯು ಕಣ್ಣಳತೆಯ ಕ್ಯಾಮರಾವನ್ನು ಆಸೆಗಳಿಗಾಗಿಯೇ ದಿಟ್ಟಿಸುತ್ತಾ ‘ಈ ತುಂಬಿ ಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕಾದ’ ಬೇಂದ್ರೆ ಕಾವ್ಯಗುಣವನ್ನು ಅಳವಡಿಸಿಕೊಂಡಿದೆ. ಈ ಕಣ್ಣುಗಳು ಹಲವು ಪ್ರವಾಸ ಕಥನಗಳನ್ನು ತನ್ನ ಒಳನೋಟಗಳಿಂದ ಓದುತ್ತಾ, ‘ಶ್ರೀ ಸಾಮಾನ್ಯರ ನೋಟಗಳನ್ನು ಕಳಚಿ, ಯಾರೂ ನೋಡದ ನೋಟವೊಂದನ್ನು’ ತನ್ನ ವೈಜ್ಞಾನಿಕ, ವೈಚಾರಿಕ ದೃಷ್ಟಿಯಲ್ಲಿ ಸೆರೆಯಿಡಿಯುವ ಶಕ್ತಿ ಪಡೆಯುತ್ತವೆ ಎಂಬ ಭರವಸೆ ಇದೆ.
‘ಕಣ್ಣು ತಿಳಿ ಆದರ ಎಲ್ಲಾ ತಿಳಿ’ ಎಂಬ ಬೇಂದ್ರೆ ನುಡಿಯೊಂದಿಗೆ ವಿರಾಮ ಹೇಳುತ್ತಿದ್ದೇನೆ. ಈ ಕೃತಿಯು ಪ್ರತಿಯೊಬ್ಬರ ಓದುವಿನ ಹೊಸ ನೋಟಗಳಿಗೆ ಸಿಲುಕಿ ‘ವಿಹಾರಿಕಾ’ ಪದಕ್ಕೆ ಹೆಚ್ಚಿನ ಅರ್ಥ ಬರಲಿ, ಭವಿಷ್ಯದ ಭರವಸೆಯ ಮನೋಚೈತನ್ಯವಾಗಿ ನಿರೀಕ್ಷಿಸುತ್ತೇನೆ. ಶುಭವಾಗಲಿ.
- ಡಾ. ರವಿಶಂಕರ್ ಎ.ಕೆ