ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಜೂನ್ 13, 2020

ದೃಷ್ಟಾಂತ




ಇವ ಬರೆಯುವುದು,
ಅವ ಮಾತನಾಡುವುದು
ಕಾಲ್ನಡಿಗೆಯ ಕಾರ್ಮಿಕನಿಗೆ ಕಷ್ಟ ತೀರಲಿಲ್ಲ
ಇವರ ಇಷ್ಟ ತೀರಿದವಷ್ಟೆ !





ಅವರು ಬರುವಾಗ ಹೊಂದಿದ ಸಲೀಸು
ಇವರು ಹೋಗುವಾಗ ಇರಲಿಲ್ಲ
ಗಾಂಧಿಯು ರೈಲು- ಆಸ್ಪತ್ರೆ-ಕೋರ್ಟು ಕುರಿತು
ಅಂದೇ ಬರೆದರು

ಕಡಿಮೆ ಕಾಸಿಗೆ ಬಿಲವೊ ನೆಲವೋ
ತೂರಿಕೊಂಡು ದುಡಿವವರು
ಎಲ್ಲಿ ಸಿಕ್ಕಾರು...
ಹಾಗಾಗಿ ಅವರ ಕುರಿತು ಕರುಣೆ

ಒಬ್ಬ ಮನುಷ್ಯ ಜೀತ ಮಾಡುತ್ತಿದ್ದ!
ಅದು ಕ್ರೌರ್ಯವೆಂದಿರಿ
ಇನ್ನೂ ಜೀತ ವಿಮುಕ್ತಿ ಆಗಲಿಲ್ಲ.
ಒಬ್ಬ ಮನುಷ್ಯ ದುಡಿಮೆ ಹರಸಿ
ನಾಡಿಂದ ನಾಡಿಗೆ ಸಾಗುವುದೆಂದರೆ
ಈ ನಾಡು ಮನುಷ್ಯತ್ವ ಮರೆತಿದೆ ಎಂದರ್ಥ.

ಉಚಿತಗಳ ಖಚಿತತೆಯು
ಇರುವವರ ಸೂತಕವಾಗಿ
ಇಲ್ಲದವರ ಇರುವಿಕೆಗೆ
ಯಾವ ಗುಡಿ, ಚರ್ಚು, ಮಸೀದಿ
ವಿಹಾರ, ಮಠಮಾನ್ಯಗಳು
ಕಣ್ತೆರೆದಿಲ್ಲ...
ಬರೆದಿದ್ದು, ಓದಿದ್ದು, ಹಾರ ತುರಾಯಿಗಳ
ಚಪ್ಪಾಳೆಗಳೂ ಇರುವವರ
ನಡುವಿನಲಿ ಮಂತ್ರ ಪಠಣ

ಈ ಘಟನೆ...!
ಇಂದು ನೆನ್ನೆಯದಲ್ಲ
ರಾಜರಿಂದ ಮಂತ್ರಿಯ ತನಕ
ವಾಸನೆಯೆದ್ದ ರಕ್ತ ಕಲೆ
ನಾವಿನ್ನೂ ಅದರಲ್ಲೇ ಮೂಸುತ್ತಿದ್ದೇವೆ.
ನಮಗೆ ಎಲ್ಲಾ ಇರುವಾಗ
ಇರದವರು ನಮಗೆ ಪ್ರತಿಮೆ,
ದೂರಲು ಅರ್ಥಪೂರ್ಣ ರೂಪಕ.

ಸಾಕೆನಿಸಿ ನಿಲ್ಲಿಸುತ್ತೇನೆ.
ನಮ್ಮೂರಿನವರು
ನಮ್ಮೂರಲ್ಲೇ ನಿಲ್ಲಲು
ನಾವು ಸೋತು ಗೆಲ್ಲಬೇಕಿದೆ.
ವಿಶ್ವಕ್ಕೆ ಹೆಜ್ಜೆ ಇಡುವುದೆಂದರೆ
ಹಣದಿಂದಲ್ಲ, ಗುಣದಿಂದವೆಂಬ
ಅಕ್ಷರ ಅಭ್ಯಾಸ ನಡೆಯಬೇಕಿದೆ.

- ಅಂಕುರ ೧೪.೦೬.೨೦
ಬೆಂಗಳೂರು


ಕಾಮೆಂಟ್‌ಗಳಿಲ್ಲ: