ಜೀವನ ಪ್ರೀತಿ

ಸಾಹಿತ್ಯವು ಜೀವನದ ಸಂಸ್ಕೃತಿ

ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಜನವರಿ 15, 2020








ಕುವೆಂಪು ಕುರಿತು ಮಾಹಿತಿ










ಕುವೆಂಪು
ಕನ್ನಡದ ಎರಡನೇ ರಾಷ್ಟ್ರಕವಿ


ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[೧] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು
ಕುವೆಂಪು

ಶ್ರೀ ಕೆ. ವಿ. ಪುಟ್ಟಪ್ಪ
ಜನನಡಿಸೆಂಬರ್ ೨೯, ೧೯೦೪
ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
ಮರಣನವೆಂಬರ್ 11, 1994
ಮೈಸೂರು, ಕರ್ನಾಟಕ, ಭಾರತ
ಅಂತ್ಯ ಸಂಸ್ಕಾರ ಸ್ಥಳಕುಪ್ಪಳಿ, ಶಿವಮೊಗ್ಗ ಜಿಲ್ಲೆ
ಕಾವ್ಯನಾಮಕುವೆಂಪು
ವೃತ್ತಿಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ
ವಿಷಯಪ್ರೇಮ, ದೇಶಪ್ರೇಮ, ಪ್ರಕೃತಿ, ಅಧ್ಯಾತ್ಮ, ವಿಚಾರ
ಸಾಹಿತ್ಯ ಚಳುವಳಿನವೋದಯ
ಪ್ರಮುಖ ಪ್ರಶಸ್ತಿ(ಗಳು)ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ
ಬಾಳ ಸಂಗಾತಿಹೇಮಾವತಿ
ಮಕ್ಕಳುಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ
ಸಂಬಂಧಿಗಳುಚಿದಾನಂದ ಗೌಡ

ಪ್ರಭಾವಗಳು
  • ಕುಮಾರವ್ಯಾಸ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧಿ, ರವೀಂದ್ರನಾಥ ಟಾಗೋರ್ ಮಿಲ್ಟನ್, ವರ್ಡ್ಸ್ ವರ್ತ್,

ಪ್ರಭಾವಿತರು
  • ದೇ. ಜವರೇಗೌಡ, ಜಿ. ಎಸ್. ಶಿವರುದ್ರಪ್ಪ

ಸಹಿ

www.kuvempu.com
ಕುವೆಂಪು
ಜನನ29 ಡಿಸೆಂಬರ್ ೧೯೦೪
ಹಿರೇಕೊಡಿಗೆ, ಕೊಪ್ಪ, ಚಿಕ್ಕಮಗಳೂರು
ನಿಧನ೧೧ ನವೆಂಬರ್ ೧೯೯೪
ರಾಷ್ಟ್ರೀಯತೆಭಾರತೀಯ
Other namesಕೆ.ವಿ. ಪುಟ್ಟಪ್ಪ
ವೃತ್ತಿಕವಿ
Known forಕವಿತೆಗಳು
Notable work
ರಾಮಾಯಣ ದರ್ಶನಂ
ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ಜೀವನ

ಸಾಹಿತ್ಯ ಕೃಷಿ

ಕೃತಿಗಳು








ಮಹಾಕಾವ್ಯ

  1. ಶ್ರೀ ರಾಮಾಯಣ ದರ್ಶನಂ (1949)

ಖಂಡಕಾವ್ಯಗಳು

  1. ಚಿತ್ರಾಂಗದಾ (1936)

ಕವನ ಸಂಕಲನಗಳು

  1. ಕೊಳಲು (1930)
  2. ಪಾಂಚಜನ್ಯ (1933)
  3. ನವಿಲು (1934)
  4. ಕಲಾಸುಂದರಿ (1934)
  5. ಕಥನ ಕವನಗಳು (1937)
  6. ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
  7. ಪ್ರೇಮ ಕಾಶ್ಮೀರ (1946)
  8. ಅಗ್ನಿಹಂಸ (1946)
  9. ಕೃತ್ತಿಕೆ (1946)
  10. ಪಕ್ಷಿಕಾಶಿ (1946)
  11. ಕಿಂಕಿಣಿ (ವಚನ ಸಂಕಲನ) (1946)
  12. ಷೋಡಶಿ (1946)
  13. ಚಂದ್ರಮಂಚಕೆ ಬಾ ಚಕೋರಿ (1957)
  14. ಇಕ್ಷುಗಂಗೋತ್ರಿ (1957)
  15. ಅನಿಕೇತನ (1963)
  16. ಜೇನಾಗುವ (1964)
  17. ಅನುತ್ತರಾ (1965)
  18. ಮಂತ್ರಾಕ್ಷತೆ (1966)
  19. ಕದರಡಕೆ (1967)
  20. ಪ್ರೇತಕ್ಯೂ (1967)
  21. ಕುಟೀಚಕ (1967)
  22. ಹೊನ್ನ ಹೊತ್ತಾರೆ (1976)
  23. ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ(1981)

ಕಥಾ ಸಂಕಲನ

  1. ಸಂನ್ಯಾಸಿ ಮತ್ತು ಇತರ ಕಥೆಗಳು (1936)
  2. ನನ್ನ ದೇವರು ಮತ್ತು ಇತರ ಕಥೆಗಳು (1940)

ಕಾದಂಬರಿಗಳು

  1. ಕಾನೂರು ಹೆಗ್ಗಡತಿ (1936)
  2. ಮಲೆಗಳಲ್ಲಿ ಮದುಮಗಳು (1967)

ನಾಟಕಗಳು

  1. ಯಮನ ಸೋಲು (1928)
  2. ಜಲಗಾರ (1928)
  3. ಬಿರುಗಾಳಿ (1930)
  4. ವಾಲ್ಮೀಕಿಯ ಭಾಗ್ಯ (1931)
  5. ಮಹಾರಾತ್ರಿ (1931)
  6. ಸ್ಶಶಾನ ಕುರುಕ್ಷೇತ್ರಂ (1931)
  7. ರಕ್ತಾಕ್ಷಿ (1933)
  8. ಶೂದ್ರ ತಪಸ್ವಿ (1944)
  9. ಬೆರಳ್‍ಗೆ ಕೊರಳ್ (1947)
  10. ಬಲಿದಾನ (1948)
  11. ಚಂದ್ರಹಾಸ (1963)
  12. ಕಾನೀನ (1974)

ಪ್ರಬಂಧ

  1. ಮಲೆನಾಡಿನ ಚಿತ್ರಗಳು (1933)

ವಿಮರ್ಶೆ

  1. ಕಾವ್ಯವಿಹಾರ (1946)
  2. ತಪೋನಂದನ (1950)
  3. ವಿಭೂತಿಪೂಜೆ (1953)
  4. ದ್ರೌಪದಿಯ ಶ್ರೀಮುಡಿ (1960)
  5. ರಸೋ ವೈ ಸಃ (1963)
  6. ಇತ್ಯಾದಿ (1970)

ಆತ್ಮಕಥೆ

  1. ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ

ಜೀವನ ಚರಿತ್ರೆಗಳು

  1. ಸ್ವಾಮಿ ವಿವೇಕಾನಂದ
  2. ರಾಮಕೃಷ್ಣ ಪರಮಹಂಸ

ಅನುವಾದ

  1. ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
  2. ಕೊಲಂಬೋ ಇಂದ ಆಲ್ಮೋರಕೆ

ಭಾಷಣ-ಲೇಖನ

  1. ಸಾಹಿತ್ಯ ಪ್ರಚಾರ (1930)
  2. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)
  3. ಷಷ್ಠಿನಮನ (1964)
  4. ಮನುಜಮತ-ವಿಶ್ವಪಥ (1971)
  5. ವಿಚಾರ ಕ್ರಾಂತಿಗೆ ಆಹ್ವಾನ (1976)

ಶಿಶು ಸಾಹಿತ್ಯ

  1. ಅಮಲನ ಕಥೆ (1924)
  2. ಮೋಡಣ್ಣನ ತಮ್ಮ (ನಾಟಕ) (1926)
  3. ಹಾಳೂರು (1926)
  4. ಬೊಮ್ಮನಹಳ್ಳಿಯ ಕಿಂದರಿಜೋಗಿ (1928)
  5. ನನ್ನ ಗೋಪಾಲ (ನಾಟಕ) (1930)
  6. ನನ್ನ ಮನೆ (1946)
  7. ಮೇಘಪುರ (1947)
  8. ಮರಿವಿಜ್ಞಾನಿ (1947)
  9. ನರಿಗಳಿಗೇಕೆ ಕೋಡಿಲ್ಲ (1977)

ಇತರೆ

  1. ಜನಪ್ರಿಯ ವಾಲ್ಮೀಕಿ ರಾಮಾಯಣ

ಆಯ್ದ ಸಂಕಲನಗಳು

  1. ಕನ್ನಡ ಡಿಂಡಿಮ (1968)
  2. ಕಬ್ಬಿಗನ ಕೈಬುಟ್ಟಿ (1973)
  3. ಪ್ರಾರ್ಥನಾ ಗೀತಾಂಜಲಿ (1972)


ಶೂದ್ರ ತಪಸ್ವಿ
- ಕುವೆಂಪು
ಶೂದ್ರ ತಪಸ್ವಿ ಕುವೆಂಪುರವರ ಪ್ರಸಿದ್ಧ ನಾಟಕ ಕೃತಿ. ಮೂಲ ರಾಮಾಯಣದ ಕಥೆ ಆಧರಿಸಿ ಅಲ್ಪ, ಸ್ವಲ್ಪ ಬದಲಾವಣೆಗಳೊಂದಿಗೆ ಈ ನಾಟಕವನ್ನು ಸಿದ್ದಪಡಿಸಲಾಗಿದೆ. ಗುಣಕ್ಕೆ ಮಾತ್ಸರ್ಯ ಇರಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಗೌರವಿಸ ಬೇಕೆಂಬ ತತ್ವ್ತದ ಅಡಿಯಲ್ಲಿ ನಾಟಕ ರೂಪುಗೊಂಡಿರುವುದನ್ನು ಕಾಣಬಹುದಾಗಿದೆ.

ಶೂದ್ರ ತಪಸ್ವಿ, ವಸ್ತು ವಿಷಯ
ರಾಮಾಯಾಣದ ಉತ್ತರಾಕಾಂಡದಲ್ಲಿ ಬರುವ ಪ್ರಕ್ಷಿಪ್ತ ಭಾಗದಲ್ಲಿ ಬರುವ ಕಥೆ. ಶಂಬೂಕ ವಧಾ ಪ್ರಸಂಗ.
ರಾಮನು ರಾಜ್ಯಭಾರ ಮಾಡುವ ಸಂದರ್ಭದಲ್ಲಿ ಒಮ್ಮೆ ಬ್ರಾಹ್ಮಣನ ಮಗನು ಸತ್ತು ಹೋಗುತ್ತಾನೆ. ಇದಕ್ಕೆ ಕಾರಣ ಶೂದ್ರನೊಬ್ಬ ತಪಸ್ಸು ಮಾಡುವುದು ಎಂದು ಬ್ರಾಹ್ಮಣ ರಾಮನ ಬಳಿ ಬಂದು ಆರೋಪಿಸಿ ರಾಮರಾಜ್ಯದಲ್ಲಿ ತನ್ನ ಮಗು ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ನ್ಯಾಯ ಕೊಡಬೇಕೆಂದು ಪರಿಪರಿಯಾಗಿ ಬೇಡುತ್ತಾನೆ. ರಾಮ ಬ್ರಾಹ್ಮಣನ ಮನವೊಲಿಸಲು ಪ್ರಯತ್ನಿಸಿ ಸೋಲುತ್ತಾನೆ.
ಕಡೆಗೆ ಶೂದ್ರ ತಪಸ್ವಿ ತಪಸ್ಸು ಮಾಡುವ ಜಾಗಕ್ಕೆ ಬ್ರಾಹ್ಮಣನೊಂದಿಗೆ ರಾಮನೂ ಬಂದು, ಅವನ ಮನಸ್ಸಿನ ಸಮಾಧಾನಕ್ಕೋಸ್ಕರ ಶೂದ್ರ ತಪಸ್ವಿಯನ್ನು ಸಂಹರಿಸಲು ಮುಂದಾಗಿ ಬಾಣವನ್ನು ಹೂಡುತ್ತಾನೆ. ಆದರೆ ಆ ಭಾಣ ಶೂದ್ರ ತಪಸ್ವಿಯನ್ನು ಪ್ರದಕ್ಷಿಣೆ ಹಾಕಿ, ಬ್ರಾಹ್ಮಣನನ್ನು ಕೊಲ್ಲಲು ಧಾವಿಸಿದಾಗ, ಬ್ರಾಹ್ಮಣ ಕಂಗಾಲಾಗುತ್ತಾನೆ. ನಂತರ ರಾಮನ ಅನುಜ್ಞೆಯಂತೆ ಶೂದ್ರ ತಪಸ್ವಿಗೆ ವಂದಿಸುತ್ತಾನೆ. ತನ್ನ ಪ್ರಾಣ ಮತ್ತು ಮಗುವಿನ ಪ್ರಾಣ ಎರಡನ್ನು ಕಾಪಾಡಿಕೊಳ್ಳುತ್ತಾನೆ.
ಶೂದ್ರ ತಪಸ್ವಿ ೧೯೪೪ರಲ್ಲಿ ಕುವೆಂಪು ರಚಿಸಿದ ‘ಶೂದ್ರ ತಪಸ್ವಿ’ ನಾಟಕಕ್ಕೆ ರಾಮಾಯಣದ ಒಂದು ತುಣುಕನ್ನು ಕಥೆಯಾಗಿ ಆಯ್ದುಕೊಂಡಿದ್ದಾರೆ. ಶೂದ್ರ ತಪಸ್ವಿ ನಾಟಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹುಮುಖ್ಯವಾಗಿದ್ದು ಶೋಷಿತರ ಗಟ್ಟಿದನಿಯಾಗಿ ಹೊರಹೊಮ್ಮುತ್ತಲೇ ಅಂದಿನ ಮೇಲ್ವರ್ಗದ ಘಟಾನುಘಟಿ ಸಾಹಿತಿ, ಟೀಕಾಕಾರರ ವಾಗ್ಧಾಳಿ ಮತ್ತು ಅಸಡ್ಡೆಗಳನ್ನು ಧೂಳಿಪಟ ಮಾಡಿ ಒಂದು ಅದ್ಭುತ ಕೃತಿಯಾಗಿ, ಕೆಳವರ್ಗದ ಜನತೆಯ ಆತ್ಮಸ್ಥೈರ್ಯವಾಗಿ ನಿಂತಿದೆ.

ಶೂದ್ರ ಶಂಬೂಕನ ತಲೆ ಉರುಳಿಸುವ ಮೂಲ ರಾಮಾಯಣ: ಮೂಲ ರಾಮಾಯಣ ಕಾವ್ಯದಲ್ಲಿ ಶ್ರೀರಾಮ ಸೀತೆಯನ್ನು ಕಾಡಿಗಟ್ಟಿದ ನಂತರ ವೃದ್ದ ಬ್ರಾಹ್ಮಣನೊಬ್ಬ ತನ್ನ ಮೃತ ಬಾಲಕನನ್ನು ಹೊತ್ತು ತಂದು ರಾಮನ ಅರಮನೆಯ ಮುಂದೆ ಗೋಳಿಡುತ್ತಾನೆ. ರಾಮ ರಾಜ್ಯದಲ್ಲಿ ಶೂದ್ರ ಶಂಬೂಕನು ತಪಸ್ಸು ಮಾಡುತ್ತಿರುವುದರಿಂದಲೇ ತನ್ನ ಮಗನಿಗೆ ಸಾವುಂಟಾಗಿದೆ ಎನ್ನುತ್ತಾನೆ. ರಾಮ ಶೂದ್ರ ಶಂಬೂಕನನ್ನು ಹುಡುಕಿ ತನ್ನ ಖಡ್ಗದಿಂದ ಶಂಬೂಕನ ತಲೆ ಕಡಿಯುತ್ತಾನೆ. ಈ ಕಾರ್ಯವನ್ನು ಗಮನಿಸಿ ಇಂದ್ರಾದಿಗಳೆಲ್ಲಾ ರಾಮನ ಧರ್ಮಪಾಲನೆಗಾಗಿ ಮನಮೆಚ್ಚಿ, ರಾಮನಿಗೆ ವರ ನೀಡುತ್ತಾರೆ. ರಾಮ ಆ ವರದಿಂದ ಸತ್ತಿರುವ ಬ್ರಾಹ್ಮಣ ಬಾಲಕನನ್ನು ಬದುಕಿಸಿಕೊಳ್ಳುತ್ತಾನೆ.

ಶೂದ್ರ ತಪಸ್ವಿಯ ಹಿಂದಿರುವ ಸೃಜನಶೀಲ ಪ್ರತಿಭೆ: ಕುವೆಂಪು ಮೂಲ ರಾಮಾಯಣದಲ್ಲಿರುವ ರಾಮನನ್ನು ಜೀವ-ವಿರೋಧಿ ಮನೋಗುಣದಿಂದ ಶೂದ್ರ ತಪಸ್ವಿಯಲ್ಲಿ ಬಿಡುಗಡೆಗೊಳಿಸಿ ರಾಮ ಮತ್ತು ಬ್ರಾಹ್ಮಣನ ಮನ:ಪರಿವರ್ತನೆಗೊಳಿಸುತ್ತಾರೆ. ಮೃತ್ಯುವನ್ನು ಅಥವಾ ಮನುಷ್ಯ-ವಿರೋಧಿ ಧರ್ಮವನ್ನು ಮನುಷ್ಯ ಧರ್ಮ ಗೆಲ್ಲಬೇಕು ಎಂಬ ನಾಟಕ ಆಶಯ ಭಿತ್ತಿಗೊಳ್ಳುತ್ತದೆ. ಕುವೆಂಪು ಜಾತಿಯ ವಿಷ ಬೀಜ ಬಿತ್ತುವ ಮೂಲ ರಾಮಾಯಣಕ್ಕೆ ವಿಶ್ವಪಥದ ಉಸಿರು ತುಂಬುತ್ತಾರೆ. ನಾಟಕದ ಪ್ರಮುಖ ಮೂರು ದೃಶ್ಯಗಳಲ್ಲಿ ಮೊದಲಿಗೆ, ಮೃತ್ಯುವು ಕೂಡ ಒಂದು ಪಾತ್ರವಾಗಿ ಬರುವ, ಅರಣ್ಯ ಕಾಯುವ ವೃಕ್ಷ ಭೈರವನೊಂದಿಗೆ ಸಂಘರ್ಷಿಸುವ ದೃಶ್ಯ ರೋಚಕವಾಗಿ ಮೂಡಿಬಂದಿದೆ. ಶೂದ್ರ ಶಂಬೂಕ ಋಷಿಯು ತಪಸ್ಸು ಮಾಡುತ್ತಿರುವ ಅರಣ್ಯದೊಳಕ್ಕೆ ಪ್ರವೇಶಿಸುವ ಮೃತ್ಯುವನ್ನು ಅರಣ್ಯ ರಕ್ಷಕ ತಾನೆಂದು ಅಪ್ಪಣೆಯಿಲ್ಲದೆ ಪ್ರವೇಶಿಸಕೂಡದೆಂದು ವೃಕ್ಷ ಭೈರವ ತಡೆಯುತ್ತಾನೆ. ಶೂದ್ರ ತಪಗೈಯುತ್ತಿರುವುದು ಅಧರ್ಮವೆಂಬಂತೆ ಬ್ರಾಹ್ಮಣ ಬಾಲಕ ಅದನ್ನು ನೋಡಿರುವುದರಿಂದ ಮೃತ್ಯುವು ಒಳಹೋಗುವುದು ಅನಿವಾರ್ಯವೆನ್ನುತ್ತಾ ಮೆಲ್ಲ ಮೆಲ್ಲನೆ ಕರಿಮಂಜಾಗಿ ಆಶ್ರಮದ ಕಡೆ ಚಲಿಸುತ್ತದೆ. ಭೈರವನಿಗೆ ರೋಷವುಕ್ಕಿ ‘ಶಿವ ಶಿವಾ! ಏನ್ ಭಯಂಕರಂ ಪಾಪಂ, ಶ್ರೀರಾಮನಾಳು ತಿರ್ಪ್ಪೀ ಧರ್ಮರಾಜ್ಯದೊಳ್!’ ಎಂದು ಹಲುಬುತ್ತಾನೆ. ಎರಡನೆಯ ದೃಶ್ಯದಲ್ಲಿ ಬ್ರಾಹ್ಮಣನೊಬ್ಬ ರೋದಿಸುತ್ತಾ ಶ್ರೀ ರಾಮಚಂದ್ರನ ಅಯೋಧ್ಯೆಯ ಬಳಿಯ ಉದ್ಯಾನವನದಲ್ಲಿ, ಮಗನ ದುರ್ಮರಣ ರಾಮರಾಜ್ಯದಲ್ಲಿ ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎಂದು ಬೊಬ್ಬಿಡುತ್ತಾನೆ. ಅಲ್ಲಿಗೆ ಬರುವ ರಾಮ ಬ್ರಾಹ್ಮಣನನ್ನುದ್ದೇಶಿಸಿ ‘ನೀಂ ಏನಾದೊಡಂ ಅಪೂಜ್ಯಗೆಯ್ದಿರೇನ್’ ಎಂದಾಗ ಬ್ರಾಹ್ಮಣ ಹೆದರಿ ತೊದಲುತ್ತಾ, ಈ ಅಪರಾಧಕ್ಕೆ ಮೂಲ ರಾಮನೇ ಎನ್ನುತ್ತಾನೆ. ಶೂದ್ರ ತಪಸ್ವಿಯ ದರ್ಶನದ ಫಲವಾಗಿ ನನ್ನ ಮಗನಿಗೆ ಮರಣ ಉಂಟಾಗಿದೆ ಎನ್ನುತ್ತಾನೆ. ರಾಮರಾಜ್ಯದಲ್ಲಿ ತಪಸ್ಸು, ವೇದಾಧ್ಯಯನ, ದರ್ಶನ ಎಲ್ಲವೂ ತನ್ನ ವರ್ಗಕ್ಕೆ ಮಾತ್ರ ಮೀಸಲು, ಶೂದ್ರ ತಪಸ್ಸು ಒಂದು ಅಧರ್ಮ ಎನ್ನುವುದು ಬ್ರಾಹ್ಮಣನ ಅಭಿಪ್ರಾಯ. ಕುವೆಂಪುರವರ ರಾಮ ಬ್ರಾಹ್ಮಣನ ಮಾತಿಗೆ ಪ್ರತ್ಯುತ್ತರವನ್ನು ಮನಸ್ಸಿನಲ್ಲಿ ಯೋಚಿಸುತ್ತಾನೆ: “ವರ್ಣಗರ್ವಾಂಧಂಗೆ ಈ ಶಾಸ್ತ್ರ ಮೂರ್ಖಂಗೆಂತು ಬುದ್ದಿಗಲಿಪೆನ್!’. ಅವನ ಒಡಗೂಡಿ ಪುಷ್ಪಕ ವಿಮಾನವೇರಿ ಹೊರಡುತ್ತಾನೆ. ಮೂರನೆಯ ದೃಶ್ಯದಲ್ಲಿ, ಮಹಾತಪ್ಪಸ್ಸಿನಲ್ಲಿರುವ ಶಂಬೂಕ ಮಹರ್ಷಿ ಆಶ್ರಮಕ್ಕೆ ಶ್ರೀರಾಮ, ಬ್ರಾಹ್ಮಣನ ಪ್ರವೇಶವಾಗುತ್ತದೆ. ತಪೋಗುಣ, ಶಾಂತಿನೆಲೆಸಿರುವ ವಾತಾವರಣ ಕಂಡು ಶ್ರೀರಾಮ ಭಾವಪರವಶನಾಗಿ ಶಂಬೂಕ ಋಷಿಗೆ ಶ್ರೀರಾಮ ಕೈಮುಗಿಯುತ್ತಿದ್ದರೆ, ರೋಷವುಕ್ಕಿದ ಬ್ರಾಹ್ಮಣ ರೋದಿಸುವ ನಾಟಕವಾಡುತ್ತಾ ಶಂಬೂಕನ ಶಿರಚ್ಛೇದ ಮಾಡಬೇಕೆಂದು ಅಲವತ್ತು ಮಾಡುತ್ತಾನೆ. ರಾಮ ಬ್ರಾಹ್ಮಣನಿಗೆ ಕೆಲ ಪ್ರಶ್ನೆ ಹಾಕುತ್ತಾನೆ: ತಪಸ್ಸುಗೈಯುವವನು ಪೂಜ್ಯನಲ್ಲವೇ? ಈ ತಪಸ್ವಿಯಂ ಕೊಲ್ವುದುಂ ಪಾಪಮಾಗದೆ? ಅದಕ್ಕೆ ಬ್ರಾಹ್ಮಣ ‘ನಾಯಿಯ ಹಾಲಿಗೆ ಈ ಶೂದ್ರನ ತಪಸ್ಸು ಸಮ’ ಎಂದಾಗ ರಾಮ ವ್ಯಂಗ್ಯದಿಂದ ‘ಸಾರ್ಥಕವಾಯ್ತು ನೀ ಕಲಿತ ವಿದ್ಯೆ ಆಚಾರ್‍ಯ’ ಎನ್ನುತ್ತಾನೆ. ಬ್ರಾಹ್ಮಣನನ್ನು ಸಂತೈಸಲು ರಾಮ ಶಸ್ತ್ರ ಹೂಡಲು ನಿರ್ಧರಿಸಿದಾಗಲೂ, ತೊಡುವುದಿದ್ದರೆ ಬ್ರಹ್ಮಾಸ್ತ್ರವನ್ನೇ ತೊಡಬೇಕು ಎಂದು ಬ್ರಾಹ್ಮಣ ಪಟ್ಟು ಹಾಕುತ್ತಾನೆ. ಕುವೆಂಪು ರಾಮನ ಜಿಜ್ಞಾಸೆಯನ್ನು ಇಲ್ಲಿ ಪರಿಹರಿಸುವ ಪರಿಯೇ ವಿಶಿಷ್ಟ. ತಾನು ಹೂಡುವ ಬ್ರಹ್ಮಾಸ್ತ್ರ ಅಧರ್ಮದ ವಿರುದ್ದ ಹೋರಾಡಲಿ ಎನ್ನುತ್ತಾ ರಾಮ ಶಸ್ತ್ರ ಹೂಡುತ್ತಾನೆ. ಬ್ರಹ್ಮಾಸ್ತ್ರವು ಶಂಬೂಕ ತಪಸ್ವಿಯ ಬಳಿ ತೆರಳಿ ತಪೋಮಹಿಮೆಗೆ ನಮಿಸುತ್ತದೆ. ನಂತರ ಬ್ರಾಹ್ಮಣನೆಡೆಗೆ ತಿರುಗಿ ಧಾವಿಸತೊಡಗಿದಾಗ ಅಧರ್ಮಿ ಯಾರು ಎಂಬುದು ಬ್ರಾಹ್ಮಣನಿಗೆ ಅರಿವಾಗಿ ರಕ್ಷಣೆಗಾಗಿ ಬೊಬ್ಬಿಡುತ್ತಾನೆ. ಅಂತಿಮವಾಗಿ ಬ್ರಹ್ಮಾಸ್ತ್ರವನ್ನು ಹಿಂಪಡೆಯುವ ವೇಳೆಗೆ ಬಾಲಕ ಬ್ರಾಹ್ಮಣನನ್ನು ಹುಡುಕುತ್ತಾ ಬರುತ್ತಾನೆ. ತನ್ನ ತಾತನೊಂದಿಗೆ ಹೂವು ತರಲು ಕಾಡಿಗೆ ಬಂದ ತಾನು ಮೂರ್ಛೆ ಹೋಗಿ ಪ್ರಜ್ಞೆ ಬರುವಷ್ಟರಲ್ಲಿ ದಾರಿ ತಪ್ಪಿದೆ ಎನ್ನುತ್ತಾನೆ ಬಾಲಕ. ಬಾಲಕ ಮತ್ತು ಬ್ರಾಹ್ಮಣರಿಬ್ಬರು ಶೂದ್ರ ಶಂಬೂಕ ತಪಸ್ವಿಗೆ ನಮಿಸುವ ದೃಶ್ಯದೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಮೂಲ ರಾಮಾಯಣದಲ್ಲಿ ಶೂದ್ರ ಶಂಬೂಕನ ಮೇಲೆ ಧಾಳಿ ಮಾಡಿ ಜೀವ-ವಿರೋಧಿಯಂತೆ ರಾಮ ಅವನನ್ನು ಕೊಂದಿದ್ದರೆ, ಇಲ್ಲಿ ಕುವೆಂಪುರವರ ರಾಮ ಜೀವ-ಪರನಂತೆ, ಸತ್ಯದ ಅಸ್ತ್ರವಿಡಿದು ಮನ:ಪರಿವರ್ತನೆಗೆ ಸಾಕ್ಷಿಯಾಗುತ್ತಾನೆ.

ಶೂದ್ರತಪಸ್ವಿಯಲ್ಲಿ ಬರುವ ಧಾರ್ಮಿಕ ವಿಚಾರಶೀಲತೆ. ಇಲ್ಲಿ ಬ್ರಾಹ್ಮಣ –ಶೂದ್ರ ಪ್ರಜ್ಞೆಗಳು ಧರ್ಮಾಧರ್ಮದ ಪ್ರಶ್ನೆಯಾಗಿ ರಾಮನಿಗೆ ಉಧ್ಭವಿಸುತ್ತವೆ. ಇದನ್ನು ಅರಿತ ರಾಮ, ಬ್ರಾಹ್ಮಣನಿಗೆ ತಮ್ಮ ಮೇಲು ಕೀಳುಗಳ ಅಹಮಿಕೆಯ ಅರಿವೆಯನ್ನು ಮನವರಿಕೆಯಾಗುವಂತೆ ಮಾಡುತ್ತಾನೆ. ಇಲ್ಲಿ ಬ್ರಾಹ್ಮಣ ಮತ್ತು ಶಂಬೂಕ ಇಬ್ಬರ ಘನತೆ, ಧರ್ಮದ ಔನತ್ಯ ಮಾತು ಶ್ರೀ ರಾಮನ ಮಹೋನ್ನತ ವ್ಯಕ್ತಿತ್ವ ಏಕಕಾಲಕ್ಕೆ ಅನಾವರಣವಾಗುವಂತೆ ಕುವೆಂಪುರವರು ವ್ಯಾಖ್ಯಾನಿಸುವ ರೀತಿಯಲ್ಲಿ ಅವರ ವೈಚಾರಿಕತೆ ಹೊಮ್ಮುತ್ತದೆ.



ಶೂದ್ರ ತಪಸ್ವಿ ನಾಟಕ
ಯೂಟ್ಯೂಬ್ ಲಿಂಕ್ ಗಳು
ಮೂಲನಾಟಕದ ಕೃತಿಭಾಷೆಯಲ್ಲಿ
https://youtu.be/uzUH8HH_974


BEL ಸಾಹಿತ್ಯ ಕೂಟ ಅಭಿನಯಿಸಿದ ಸರಳಗನ್ನಡದಲ್ಲಿ
ಒಟ್ಟು ಐದು ಭಾಗಗಳು
ಭಾಗ ೧

https://youtu.be/wArgbW3GVkk

ಭಾಗ ೨
https://youtu.be/N-WZSmb--Iw

ಭಾಗ ೩
https://youtu.be/aGO9ZwJGkI4

ಭಾಗ ೪
https://youtu.be/XDu4UFroN2U


ಈ ಲಿಂಕ್ ಗಳನ್ನು ಆಯ್ಕೆಮಾಡಿಕೊಂಡು ಯೂಟ್ಯೂಬ್ ನಲ್ಲಿ ನೋಡಬಹುದು.

ಈ ಎಲ್ಲಾ ಮಾಹಿತಿಯನ್ನು ಅಧ್ಯಯನ ದೃಷ್ಟಿಯಿಂದ ಗೂಗಲ್ ಮೂಲಕ ವಿಕಿಪೀಡಿಯ ಸಹಾಯದಿಂದ ಸಂಗ್ರಹಿಸಲಾಗಿದೆ

ಧನ್ಯವಾದಗಳು
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಜನವರಿ 15, 2020 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಶುಕ್ರವಾರ, ಆಗಸ್ಟ್ 23, 2019

ಮೆಚ್ಚುವ ಕಾರ್ಯವಿದು











ಶ್ರದ್ಧೆ ಎಂದರೆ ಥಿಯರಿಗಳ ಮೂಲಕ ಕಲಿಯುವುದಲ್ಲ.
ಶ್ರದ್ಧೆಯು ನಮ್ಮೊಳಗಿನ ಶಕ್ತಿಗೆ ನೀಡುವ ಕ್ರಿಯಾಶೀಲತೆ.
ಈ ಶ್ರದ್ಧೆಯು ನಮಗೆ ಸ್ಫೂರ್ತಿಯನ್ನು, ಆತ್ಮತೃಪ್ತಿಯನ್ನು ಕೆಲವೊಮ್ಮೆ ಗೌರವ ಹಾಗೂ ಲಾಭವನ್ನು ನೀಡುತ್ತದೆ.
ಇಂತಹ ಒಂದು ಉದಾಹರಣೆಯನ್ನು ಗಮನಿಸೋಣ.
ನಮ್ಮ ಕಾಲೇಜಿನಲ್ಲಿ ಇಂದು ಮತ್ತು ನಾಳೆ (ದಿನಾಂಕ೨೩ ಮತ್ತು ೨೪ ಆಗಸ್ಟ್ ೨೦೧೯) ರಂಗ ಶಿಕ್ಷಣ ಕಾರ್ಯಗಾರ ನಡೆಯುತ್ತಿದೆ. ಡಾ. ಪವಿತ್ರ ಎಂಬ ರಂಗಶಿಕ್ಷಕರು ಸುಮಾರು ಹದಿನೈದು ವರ್ಷಗಳಿಂದಲೂ ಪ್ರತಿವರ್ಷ ಈ ಮೆಚ್ಚುಗೆಯ ತರಬೇತಿ ಕಾರ್ಯ ನಡೆಸಿಕೊಡುತ್ತಿದ್ದಾರೆ.
ಇದರಲ್ಲಿ ಇಂದು MASKMAKING ಎಂಬ ತರಬೇತಿಯನ್ನು ಹತ್ತು ನಿಮಿಷದಲ್ಲಿ ಹೇಳಿಕೊಟ್ಟರು. ಎಂಟು ತಂಡಗಳ ರಚನೆಯಲ್ಲಿ ನಮ್ಮ ರಂಗತರಬೇತಿಯ ವಿದ್ಯಾರ್ಥಿಗಳು ತಮ್ಮ ಪ್ರಯೋಗ ಪ್ರಾರಂಭಿಸಿದರು. ಮುಖವಾಡಗಳ ರಚನೆ ತಯಾರಾಯಿತು. ಪ್ರತಿ ತಂಡವೂ ಉತ್ತಮ ಕಲಿಕೆಯನ್ನು ಪ್ರದರ್ಶನ ಮಾಡಿದವು.
ಮುಖವಾಡ ರಚನೆಗೆ ಒಳಗಾದ ವಿದ್ಯಾರ್ಥಿಗಳು ತಮ್ಮ ಮುಖದ ಆಕೃತಿಯನ್ನು ತುಂಬಾ ಖುಷಿಯಿಂದ ಮನೆಗೆ ಕೊಂಡೊಯ್ದರು.
ಇವರಲ್ಲಿ ವಾಣಿಜ್ಯ ವಿಭಾಗದ ಶ್ರೀಮಂತ್ ಎಂಬ ವಿದ್ಯಾರ್ಥಿ‌ ಕೂಡ ಒಬ್ಬ. ಈತನ ಶ್ರದ್ಧೆಯನ್ನು ಮೆಚ್ಚಲೇಬೇಕು.
ನಾವು ಹೇಳಿದ ಕೀ ಪಾಯಿಂಟ್ ಬಳಸಿ ಇದಕ್ಕೆ ಬೇಕಾದ ಆಕೃತಿ ನೀಡಬಹುದು ಎಂಬ ಸಲಹೆಯ ಮೇರೆಗೆ ಮನೆಗೆ ಹೋಗಿ ಮೂರು ಗಂಟೆಗಳ ಕಾಲ ಶ್ರದ್ದೆಯಿಂದ ಈ ಮುಖಾಕೃತಿಗೆ ಹೊಸ ರೂಪನೀಡಿದ್ದಾನೆ. ಬೆಂಗಳೂರಿನವ ಕರಾವಳಿಯ ಕಲೆಯನ್ನು ಅನುಕರಿಸುವುದು ಎಂದರೆ ಸುಲಭವಲ್ಲ. ಶ್ರದ್ದೆ ಇದ್ದರೆ ಎಲ್ಲವೂ ಸುಲಭ ಎಂಬುದಕ್ಕೆ ಸಾಕ್ಷಿಯಾಗಿ ಯಕ್ಷಗಾನದ ದೇವರೂಪವನ್ನು ರಚಿಸಿರುವ ಕಲೆಯು ಅಮೋಘವಾಗಿದೆ. ಈತನ ಶ್ರದ್ಧೆಯು ಎಲ್ಲರಿಗೂ ಬಂದರೆ ಮನೆ-ಮನ, ನಾಡು, ದೇಶ ಮುಂದುವರೆಯುತ್ತವೆ. ಈತನಲ್ಲಿ ಈ ಶ್ರದ್ಧೆ ಮುಂದುವರೆಯಲಿ ಎಂಬುದೇ ಇಲ್ಲಿನ ಆಶಯ. ಸಮಯ ಎಲ್ಲರಿಗೂ ಒಂದೇ ಆದರೆ ಅದರ ನಿರ್ವಹಣೆಯ ಜಾಗೃತಿಯಲ್ಲಿ ನಮ್ಮ ಅಭಿವೃದ್ಧಿ ಇರುತ್ತದೆ.

ದಿನಾಂಕ 23-09-2019


Posted by ಡಾ. ರವಿಶಂಕರ್ ಎ.ಕೆ. ಅಂಕುರ on ಆಗಸ್ಟ್ 23, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
Labels: ಮೆಚ್ಚುವ ಕಾರ್ಯವಿದು
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ
ಸಖಿಯಾ ಸಖನೇ..

ನೀನು ನನ್ನೊಳಗೋ
ನಾನು ನಿನ್ನೊಳಗೋ
ಹರಿಯೇ ನಾ ಅರಿಯೇ

ಭಾವ ಮನದೊಳಗೋ
ಮನವೇ ಭಾವದೊಡಲೋ
ಈ ಏಕಾಂತವು ಸರಿಯೇ...!

ನೆನ್ನೆಗಳ ನೆನಪಿನಲಿ
ನಾಳೆಗಳ ಕನಸಿನಲಿ
ಗಾಡಿಯಾರದ ಹೆಜ್ಜೆ ಗುರುತು
ಬಾಳು ನೀನು ಅರಿತು
ನಿನ್ನ ನೀನೇ ಮರೆತು...

ಪುಣ್ಯ-ಪಾಪಗಳ, ಶಾಂತಿ-ಹಿಂಸೆಗಳ
ಲೆಕ್ಕವೇ ನಮಗೆ ದುಃಖ
ಮೂರು ದಿನಗಳ ಈ ಸುಖ
ಕೇಳೋ ಸಖನೇ, ಸಖಿಯಾ ಸಖನೆ...

- ಅಂಕುರ
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಆಗಸ್ಟ್ 23, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ


ಕೃಷ್ಣನೊಬ್ಬನೇ ಅಲ್ಲ!

ಕೃಷ್ಣನ ಪಾತ್ರಕೆ ಇಂದು
ಹಲವು ಕಥೆಗಳ ತಂದು
ಮುದ್ದು ಮಾಡಿದೆವಲ್ಲೇ ಸಖಿ..
ಸಖೀ ನಾವು ಮುದ್ದು ಮಾಡಿದೆವಲ್ಲೇ...!

ಕೃಷ್ಣನ ಹೊರೆತು ಮುದ್ದು ಪಾತ್ರಗಳಿಲ್ಲ..
ಕೃಷ್ಣನೇ ಇಂದಿಗೂ ಮಾದರಿ ಸೂತ್ರ
ನಮ್ಮ ಮಕ್ಕಳಿಗೆಲ್ಲ ಸಿಗದ ತಂತ್ರ
ಇವನೇ ಇಂದು ಎಲ್ಲರೂ ಭಜಿಸುವ ಮಂತ್ರ

ಕೃಷ್ಣನುಟ್ಟಿದನೆಂದು ನಮ್ಮ ಮಕ್ಕಳ ತಂದು
ಕೊಳಲು ಕಿರೀಟವ ಧರಿಸಿ
ಕೃಷ್ಣನನು ಕಂಡೆವು
ನಮ್ಮ ಮಗುವಿನ ರೂಪಕೂ
ಕೃಷ್ಣ ಸೂತಕವಾದ
ಅವನೇ ದ್ಯೋತಕವಾದ

ಇದೇ ಕೇಳಿ ಮುದ್ದುಕಥೆಯ ನಾದ
ಅವನೊಬ್ಬನೇ ಅಲ್ಲ, ನನ್ನ ವಾದ! - ಅಂಕುರ
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಆಗಸ್ಟ್ 23, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಶುಕ್ರವಾರ, ಆಗಸ್ಟ್ 16, 2019

ವಚನಗಳ ನಿರ್ವಚನ

ವಚನಗಳ ನಿರ್ವಚನ


    ದಾಸಿಮಯ್ಯ ಎಂಬುದು ಶ್ರದ್ಧೆ, ಭಕ್ತಿ, ಸೂಕ್ಷ್ಮತೆಯ ಸಂಕೇತ. ವಚನ ಸಾಹಿತ್ಯದಲ್ಲಿ ಅತ್ಯಂತ ಸರಳವಾಗಿ ವಚನಗಳನ್ನು ತಿಳಿಸಿ ಸಮಾಜದ ಆರೋಗ್ಯಕ್ಕಾಗಿ ಶ್ರಮಿಸಿದವನು. ಬದುಕಿನ ಅರ್ಥಸಾರವನ್ನು ತಾನು ಮಾಡುವ ಕಾಯಕದ ಕಾರ್ಯ, ಪರಿಕರಗಳಿಂದಲೇ ಪರಿಚಯಿಸಿದ ಮೊದಲ ವಚನಕಾರನಾಗಿ ಕಂಡುಬರುತ್ತಾನೆ.

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ?
ಕಡೆಗೀಲು ಬಂಡಿಗಾಧಾರ
ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಡಭಕ್ತರ ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ.


    ಈ ವಚನವು ದೇವರ/ಜೇಡರ ದಾಸಿಮಯ್ಯ ಅವರ ಸರಳವಾದ ವಚನ. ಮನುಷ್ಯನ ಬದುಕನ್ನು ಸರಿಪಡಿಸುವ ಸರಿಯಾದ ಮಾರ್ಗವನ್ನು ಈರೀತಿಯಾಗಿ ನುಡಿದಿದ್ದಾರೆ. ಬಂಡಿ ಎಂದರೆ ಗಾಡಿ, ಎತ್ತಿನ ಗಾಡಿ ಅಥವಾ ಯಾವುದೇ ರಥ. ಇದಕ್ಕೆ ಎರಡು ಚಕ್ರಗಳಿವೆ. ಈ ಚಕ್ರಗಳನ್ನು ಒಂದು ಅಚ್ಚಿಗೆ ಜೋಡಿಸಲಾಗಿರುತ್ತದೆ. ಈ ಅಚ್ಚಿನ ಕೊನೆಯ ಭಾಗದಲ್ಲಿ ಚಕ್ರ ಜಾರದಂತೆ, ಕಳಚದಂತೆ ಬಂಧಿಸುವುದೇ ಕಡೆಗೀಲು ಅಥವಾ ಕಡಾಣಿ. ಈ ಕಡೆಗೀಲಿಲ್ಲದೆ ಬಂಡಿಯನ್ನು ಚಲಿಸಲು ಸಾಧ್ಯವಿಲ್ಲ. ಬಂಡಿಗೆ ಕಡೆಗೀಲೇ ಆಧಾರ. ಹಾಗೇಯೇ ಅಹಂಕಾರ ತುಂಬಿದ ನಮ್ಮ ಶರೀರಕ್ಕೆ(ಮನಸ್ಸು) ಮೃಡ(ಶಿವ)ಭಕ್ತರ ಹಿತವಚನಗಳೇ ಆಧಾರ. ಅಹಂಕಾರ ಇಲ್ಲವಾಗಿಸಿ ಉತ್ತಮ ಜೀವನ ನಡೆಸಲು ಶರಣರ ಮಾತುಗಳು ದಾರಿದೀಪವಾಗುತ್ತವೆ. ಇಲ್ಲಿ ಬಂಡಿಗೆ ಈ ಶರೀರವನ್ನು ಹೋಲಿಸಿ, ಕಡೆಗೀಲಿಗೆ ಶರಣರ ನುಡಿಗಳನ್ನು ಹೋಲಿಸಿದ್ದಾರೆ. ದಾಸಿಮಯ್ಯನ ಈ ವಚನವು ಆದರ್ಶ ಬದುಕಿಗೆ ನಾವು ಯಾರನ್ನು ಅನುಸರಿಸಬೇಕು ಎಂಬ ಎಚ್ಚರವನ್ನು ನೀಡುತ್ತದೆ.

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನಿನೆನ್ನ ಜಡಿದೊಮ್ಮೆ ನುಡಿಯದಿರಾ
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮಾನಾಥ


ಈ ದೇಹವೆಂಬುದು ಹಸಿವಿನಿಂದ ಕೂಡಿದೆ. ಈ ದೇಹವನ್ನು ಹೊಂದಿರುವ ಜೀವಗಳೆಲ್ಲವೂ ಹಸಿವಿಗಾಗಿ ಈ ಸಮಾಜದಲ್ಲಿ ನಾನಾ ಕಾರ್ಯಗಳನ್ನು ಮಾಡುತ್ತಿವೆ. ಮನುಷ್ಯನೂ ಕೂಡ ಅದೇ ಕಾರ್ಯದಲ್ಲಿ ‘ಉದರನಿಮಿತ್ಥಂ ಬಹುವಿಧಕಾರ್ಯಂ’ ಎಂಬಂತೆ ಹಲವು ಕಾರ್ಯದಲ್ಲಿ ತೊಡಗಿದ್ದಾನೆ. ಸುಳ್ಳನ್ನು ಕೂಡ ಈ ಕಾರಣದಿಂದಲೇ ಹೇಳುತ್ತಾನೆ. ಆದರೆ ದೇವರು ನಿರಾಕಾರ ಸ್ವರೂಪಿ, ಆಕಾರವಿಲ್ಲದವನು, ಅವನಿಗೆ ಶರೀರವಾಗಲೀ, ಹಸಿವಾಗಲಿ ಇರಲಾರದು. ಹೀಗಿರುವಾಗ ದೇಹವನ್ನು ಹೊಂದಿ ಸುಳ್ಳಿನಲ್ಲಿ ತೊಡಗಿರುವವನು ಅಂದರೆ ಅನ್ನಕ್ಕಾಗಿ ಬದುಕುವವನು ಎಂದು ನಿಂದಿಸದಿರು ಎಂದು ದೇವರಿಗೆ ಸವಾಲು ಹಾಕಿದ್ದಾರೆ. ನನ್ನಂತೆ ನೀನು ದೇಹ ಹೊಂದಿ ನೋಡು ಎಂದು ತನ್ನ ದೇಹದ ಹಸಿವಿನ ಕಷ್ಟವನ್ನು ಬಡವರ, ದೀನದಲಿತರ ಪರವಾಗಿ ನಿಂತು ಅವರ ಕಷ್ಟಗಳನ್ನು ಸರಳವಾಗಿ ಸಮರ್ಥಿಸಿದ್ದಾನೆ.

ಮಡದಿಯ ಪ್ರಾಣಕ್ಕೆ ಮೊಲೆಮುಡಿ ಇದ್ದಿತೇ?
ಒಡೆಯರ ಪ್ರಾಣಕ್ಕೆ ಇದ್ದಿತೆ ಯಜ್ಞಪವೀತ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೇ ಪ್ರಾಣದಲ್ಲಿ ಹಿಡಿಗೋಲ
ನೀ ತೊಡಕಿಕ್ಕಿದ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ
ಬಲ್ಲರೈ ರಾಮನಾಥ?


    ದೇವರ ದಾಸಿಮಯ್ಯನು ವಚನ ಸಾಹಿತ್ಯದಲ್ಲಿ ವೈಚಾರಿಕವಾಗಿ ದನಿ ಎತ್ತಿದ ಮೊದಲಿಗ. ವಚನ ಸಾಹಿತ್ಯದ ಮೊದಲ ವಚನಕಾರನೂ ಹೌದು. ಮನುಷ್ಯನ ನಡುವೆ ಆಗಾಧವಾಗಿದ್ದ ಅಭಿಪ್ರಾಯ ಬೇಧಗಳನ್ನು ಖಂಡಿಸುವ ನುಡಿಗಳನ್ನು ವಚನವನ್ನಾಗಿಸಿದ್ದಾನೆ.
ಪ್ರಾಣವೆಂದರೆ ಉಸಿರು. ವಿಶಾಲ ಅರ್ಥದಲ್ಲಿ ಜೀವನ ಎಂದರ್ಥ. ಜೀವನ, ಬದುಕು ಎಂದರ್ಥ. ಇಲ್ಲಿ ಬದುಕಲು ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಈ ಪ್ರಾಣಕ್ಕೆ ಯಾವುದೇ ಹಂಗಿಲ್ಲ. ಹೆಣ್ಣು-ಗಂಡು ಬೇಧವಿಲ್ಲ. ಯಾವುದೇ ಜಾತಿಯ ತೊಡಕಿಲ್ಲ. ಆದರೆ ಸಮಾಜದಲ್ಲಿ ಲಿಂಗ, ಜಾತಿಗಳ ಆಧಾರದ ಮೇಲೆ ವರ್ಗೀಕರಿಸುತ್ತಾ ಮೇಲು-ಕೀಳು ಎಂಬ ಭಾವನೆಗಳನ್ನು ಅತ್ಯಂತ ಬೌದ್ಧಿಕವಾಗಿ ನಿರ್ಮಿಸಲಾಗಿದೆ.
    ದಾಸಿಮಯ್ಯನವರ ಒಂದು ವಚನ ಅತ್ಯಂತ ಮುಖ್ಯವಾಗಿ ಗ್ರಹಿಸುತ್ತಾ ಈ ಮೇಲಿನ ವಚನದ ವ್ಯಾಖ್ಯಾನಮಾಡಬಹುದು. “ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವಾತ್ಮನು ಹೆಣ್ಣು ಅಲ್ಲ ಗಂಡು ಅಲ್ಲ ರಾಮನಾಥ..” ಈ ವಚನದಲ್ಲಿ ದೇಹದ ಆಕಾರಗಳು ಲಿಂಗವನ್ನು ತಿಳಿಸುತ್ತವೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ದೇಹದ ಆಕಾರಗಳ ಮೂಲಕವೇ ಮೇಲು-ಕೀಳೆಂಬ ಬೇಧ ಎಣಿಸುವುದು ತಪ್ಪೆಂದು ಹೇಳುತ್ತಾರೆ.
    ಮೊದಲ ಸಾಲು ಲಿಂಗದ ವಿಚಾರದಲ್ಲಿ ಹೆಣ್ಣು ಹೊರೆತು. ಪ್ರಾಣದ ವಿಚಾರದಲ್ಲಿ ಗಂಡಿಗೆ ಸಮಾನಳು ಅಲ್ಲಿ ಮೇಲು-ಕೀಳಿಲ್ಲ ಎಂದಿದ್ದಾರೆ. ಇನ್ನು ಎರಡನೇ ಸಾಲಿನಲ್ಲಿ ಒಡೆಯ ಎಂದರೆ ಪ್ರಾಚೀನ ಕಾಲದಲ್ಲಿ ಜನಸಾಮಾನ್ಯರು ಕರೆಯುತ್ತಿದ್ದ ಬ್ರಾಹ್ಮಣನ ಹೆಸರು. ಬ್ರಾಹ್ಮಣನು ಯಜ್ಞಪವೀತ ಅಂದರೆ ಜನಿವಾರ ಧರಿಸುವ ಮೂಲಕ ಬ್ರಾಹ್ಮಣನಾದನೇ ಹೊರೆತು ಪ್ರಾಣದ ವಿಚಾರದಲ್ಲಿ ಆತನೂ ಮನುಷ್ಯನೇ ಆಗಿದ್ದಾನೆ. ಇದು ಸಮಾಜದಲ್ಲಿದ್ದ ವರ್ಗಬೇಧವನ್ನು ಕುರಿತು ಹೇಳುತ್ತದೆ. ಮೂರನೆಯ ಸಾಲು ಜಾತಿಬೇಧ ಕುರಿತ ವಿಚಾರ. ಅಂತ್ಯಜ ಎಂದರೆ ಕೊನೆಯವ, ದಲಿತ, ಕೆಳಜಾತಿಯವ ಎಂಬ ಅಭಿಪ್ರಾಯವಿತ್ತು. ಅವನು ಊರನ್ನು ಪ್ರವೇಶಿಸುವಾಗ ಹಿಡಿಗೋಲು ಅಥವಾ ಸಂಬಳಿಗೋಲು ಹಿಡಿದು ಕುಟ್ಟುತ್ತಾ ಬರಬೇಕಿತ್ತು. ಆಗ ಅವನ ಬರುವ ಸೂಚನೆ ಕೇಳಿ ಬ್ರಾಹ್ಮಣರು ಆಚೆ ಬರುತ್ತಿರುತ್ತಿಲ್ಲ. ಇಂತಹ ಮೈಲಿಗೆಯೊಂದಿಗಿನ ಮೂಢನಂಬಿಕೆಗಳು ಸಾಕಷ್ಟಿದ್ದವು. ಇವನೂ ಕೂಡ ಹಿಡಿಗೋಲು ಹಿಡಿದ ಕ್ಷಣ ಕೀಳಲ್ಲ. ಸಮಾಜದಲ್ಲಿ ಪ್ರತಿಯೊಬ್ಬನ ಪ್ರಾಣಕ್ಕೂ ಸಮಾನ ಗೌರವ ಇರಬೇಕು ಏಕೆಂದರೆ ಹುಟ್ಟುತಹಃ ಎಲ್ಲರೂ ಮನುಷ್ಯರೇ ಆಗಿದ್ದಾರೆ. ಗಂಡ-ಹೆಂಡತಿ, ಒಡೆಯ-ಅಂತ್ಯಜ, ಯಜ್ಞಪವೀತ-ಹಿಡಿಗೋಲು ಇಂತಹ ಬೇಧಗಳೆಲ್ಲಾ ಸಮಾಜದಲ್ಲಿ ತಮ್ಮ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ಉಪಾದಿಗಳಾಗಿವೆ ಎನ್ನಬಹುದು ಏಕೆಂದರೆ ಎಲ್ಲರೂ ಸೇವಿಸುವ ಗಾಳಿ, ನೀರು ಮೊದಲಾದ ಪಂಚಭೂತಗಳಲ್ಲಿ ಈ ಪ್ರಕೃತಿ ಸಮಾನತೆ ನೀಡಿದೆ. ದಾಸಿಮಯ್ಯನವರು ಲಿಂಗ-ವರ್ಗ-ಜಾತಿ ಈ ಸಂಬಂಧಿಯಾಗಿ ಸಮಾನತೆ ರೂಪಿಸುವ ವೈಚಾರಿಕತೆಯನ್ನು ತಿಳಿಸಿದ್ದಾರೆ.

ಅನುಭಾವವಿಲ್ಲದವನ ಭಕ್ತಿ
ತಲೆಕೆಳಗಾದುದಯ್ಯ,
ಅನುಭಾವವೇ ಭಕ್ತಿಗಾಧಾರ
ಅನುಭಾವವುಳ್ಳವರ ಕಂಡು ತೂರ್ಯ
ಸಂಭಾಷಣೆಯ ಬೆಸಗೊಳ್ಳದಿದ್ದರೆ
ನರಕದಲ್ಲಿಕ್ಕಯ್ಯ ರಾಮನಾಥ !


ಅನುಭವವೆಂದರೆ ನಮ್ಮ ಇಂದ್ರಿಯಗಳಿಗೆ ದೊರಕುವ ಜ್ಞಾನ, ಅನುಭಾವವೆಂದರೆ ಇಂದ್ರಿಯಗಳಿಗೆ ಗೋಚರವಾಗದ ಜ್ಞಾನ ಎನ್ನಬಹುದು. ಅನುಭವಕ್ಕೆ ಈ ದೇಹ ಕೇಂದ್ರವಾದರೆ, ಅನುಭಾವಕ್ಕೆ ಮನಸ್ಸು ಕೇಂದ್ರವಾಗಿದೆ. ವಚನಕಾರ ಚೆನ್ನಬಸವಣ್ಣನು ‘ಭಕ್ತಿಗೆ ಅನುಭಾವವೇ ಬೀಜ ಕಾಣಿರೆ, ಆಚಾರ ಕಾಣಿರೆ, ಅನುಭಾವವಿಲ್ಲದವನ ಭಕ್ತಿ ಎಳತಟ(ಬಲವಂತ)ಗೊಳಿಸಿತ್ತು.’ ಎಂದಿದ್ದಾರೆ. ಈತ ಭಕ್ತಿಯನ್ನು ಅತ್ಯಂತ ಸಮರ್ಥವಾಗಿ ವ್ಯಾಖ್ಯಾನಿಸಿದ ವಚನಕಾರ. ಮೂಲ ಪ್ರೇರಣೆಯಾಗಿ ದಾಸಿಮಯ್ಯನ ಈ ಮೇಲಿನ ವಚನ ಉಳಿದ ವಚನಕಾರರಿಗೆ ಸ್ಪೂರ್ತಿ ತಂದಿದೆ.
    ಭಕ್ತಿಗೆ ಅನುಭಾವವಿರಬೇಕು. ಇಲ್ಲದಿದ್ದರೆ ಅದೊಂದು ವ್ಯರ್ಥ ಆಚರಣೆ. ಏಕೆಂದರೆ ಅನುಭಾವವೇ ಭಕ್ತಿಗೆ ಆಧಾರ. ಅದುವೆ ಮೂಲಸ್ಥಾನ. ಮನಸ್ಸಿನಿಂದ ಭಕ್ತಿಯನ್ನು ಪ್ರಕಟಿಸಬೇಕೆ ಹೊರೆತು ಈ ಬರೀ ದೇಹದಿಂದಲ್ಲ. ದೇಹದಿಂದ ಪ್ರಕಟಿಸುವ ಭಕ್ತಿಯು ಡಾಂಭಿಕ ಭಕ್ತಿಯಾಗುತ್ತದೆ. ಅನುಭಾವವುಳ್ಳವರ ಕಂಡು ಆನಂದದಿಂದ, ಮೋಕ್ಷ ಪಡೆಯುವ ಸ್ಥಿತಿಯಂತೆ ಪರಸ್ಪರ ಸಂಭಾಷಣೆಯ ಮಾಡದಿದ್ದರೆ ಅಂತಹವರನ್ನು ನರಕದಲ್ಲಿಡು ಎಂದು ನೇರವಾಗಿ ನುಡಿದಿದ್ದಾರೆ. ಇಲ್ಲಿ ಸರಳವಾಗಿ ತಿಳಿಯುವುದಾದರೆ ನಮ್ಮ ಪ್ರತಿ ಕಾರ್ಯದಲ್ಲೂ ಶ್ರದ್ಧೆ ಇರಬೇಕು. ಶ್ರದ್ಧೆಯಿಂದ ವರ್ತಿಸಬೇಕು ಆಗ ಮಾತ್ರ ಯಶಸ್ಸು ಸಾಧ್ಯ. ಶ್ರದ್ಧೆ ಇಲ್ಲದವರು ಯಾವುದೇ ಸಾಧನೆಗೆ ಅನರ್ಹರು ಎಂಬುದನ್ನು ಈ ವಚನ ತಿಳಿಸುತ್ತದೆ.

ಘಟವನೊಡೆದು ಬಯಲ ನೋಡಲದೇಕೆ ?
ಘಟದೊಳಿಪ್ಪುದೇ ಬಯಲೆಂದರಿದಡೆ ಸಾಲದೆ?
ಪಟವ ಹರಿದು ತಂತುವ ನೋಡಲದೇಕೆ?
ಪಟವೇ ತಂತುವೆಂದರಿದಡೆ ಸಾಲದೆ?
ಕಟಕವ ಮುರಿದು ಕಾಂಚನವ ನೋಡಲದೇಕೆ? ಆ
ಕಟಕವೇ ಕಾಂಚನವೆಂದರಿದಡೆ ಸಾಲದೆ?
ತನ್ನನಳಿದು ಘನವ ನೋಡಲದೇಕೆ?
ತಾನೇ ಘನವೆಂದರಿದಡೆ ಸಾಲದೆ ? ಹೇಳಾ ರಾಮನಾಥ !


ವಚನ ಸಾಹಿತ್ಯದ ಮೂಲಬೇರು ಜನಪದ ಮೂಲದಲ್ಲಿಂದ ಬಂದಿದೆ. ಆಧ್ಯಾತ್ಮ, ತತ್ವಶಾಸ್ತ್ರ ಮೊದಲಾದ ಪದಗಳಿಗೆ ವಚನಕಾರರು ‘ಅನುಭಾವ’ವೆಂಬ ಒಂದೇ ಪದವನ್ನು ಅತ್ಯಂತ ಸಹಜ ಹಾಗೂ ಸರಳವಾಗಿ ಬಳಸಿದ್ದಾರೆ. ಮಡಕೆ, ಬಟ್ಟೆ, ಕಂಚು ಇವೆಲ್ಲಾ ಒಂದೊಂದು ಸಾಮಾಜಿಕ ಕಸುಬುಗಳ ಸಂಕೇತವಾಗಿ ಮೂಡಿಬಂದಿವೆ. ಅಂತಹ ಕಸುಬುಗಳಲ್ಲಿ ಅಡಗಿದ್ದ ಕಾಯಕ ಶ್ರದ್ಧೆಯು ಅತ್ಯಂತ ಸಮರ್ಥನೀಯವಾದುದು. ಮಡಕೆಯನೊಡೆದು ಬಯಲನೋಡುವ ಅಗತ್ಯವಿಲ್ಲ. ಏಕೆಂದರೆ ಬಯಲೆಂಬುದು ಅಲ್ಲಮನ ಆಕಾಂಕ್ಷೆಯ ಪದ. ಅದು ಮುಕ್ತಿಯ ರೂಪಕ. ಬಯಲು ಎಲ್ಲವನ್ನೂ ಒಳಗೊಂಡಿರುವ ಸಂಕೇತ. ಇಂತಹ ಬಯಲನ್ನು ಪರೀಕ್ಷಿಸುವುದು ಮೂರ್ಖತನ. ಮಡಕೆಯೊಡೆದು ತಿಳಿವುದಕ್ಕಿಂತ ಅದರೊಳಗಿರುವುದೇ ಮುಕ್ತಿಯೆಂದು ಭಾವಿಸಿದರೆ ಸಾಲದೆ ಎಂದಿದ್ದಾರೆ ದಾಸಿಮಯ್ಯ. ಹಾಗೇಯೇ ಬಟ್ಟೆಯ ಹರಿದು ದಾರವ ನೋಡುವುದು ದಡ್ಡತನ. ಬಟ್ಟೆಯೇ ದಾರದಿಂದಾದುದು ಎಮದು ತಿಳಿದರೆ ಸಾಲದೆ? ಕಟಕವೆಂದರೆ ‘ಚಿನ್ನದ ಬಳೆ’, ಕೈಕಡಗ. ಕಟಕವ ಮುರಿದು ಚಿನ್ನವ ನೋಡುವುದು ಅಜ್ಞಾನ. ಏಕೆಂದರೆ ಚಿನ್ನದಿಂದಲೇ ಕಟಕವಾಗಿರುತ್ತದೆ. ಘನವೆಂದರೆ ಶ್ರೇಷ್ಠ ಮಹತ್ವ ಪೂರ್ಣವಾದುದು. ದೇವರು ಮೊದಲಾದ ಅರ್ಥಗಳಿಂದ ಕರೆದರೆ ತನ್ನನ್ನು ತಾನು ನಿಂದಿಸಿಕೊಳ್ಳುತ್ತಾ ಈ ಘನವನ್ನು ಹುಡುಕುವುದು ಆಚಾರವಲ್ಲ. ತನ್ನನ್ನೆ ಘನವನ್ನಾಗಿ ರೂಪಿಸಿಕೊಳ್ಳುವುದು, ಭಾವಿಸುವುದು ಘನದ ವಿಚಾರ. ಅದುವೆ ಆಚಾರ. ಬಸವಣ್ಣನವರು ‘ಉಳ್ಳವರು ಶಿವಾಲಯ ಮಾಡುವರು’ ಎಂಬ ವಚನದಲ್ಲಿ ತನ್ನ ದೇಹವನ್ನು  ದೇವಾಲಯವಾಗಿ ಆತ್ಮವನ್ನೆ ದೇವರನ್ನಾಗಿ ರೂಪಿಸಿದ ಬಗೆಯನ್ನು ನೆನಯಬಹುದು. ವಿಶ್ವ ಚೈತನ್ಯವನ್ನು ಪ್ರಾಣ ಪರಂಪರೆಯಿಂದ ಕಾಣುವ ಈ ಸಾಕ್ಷಿಪ್ರಜ್ಞೆ ಜಗತ್ತಿನ ಸಾಹಿತ್ಯದಲ್ಲಿ ವಚನಕಾರರ ವಿಶಿಷ್ಟ ಕೊಡುಗೆಯಾಗಿ ಗುರ್ತಿಸಲಾಗಿದೆ.

ಉಂಕೆಯ ನಿಗುಚಿ, ಸರಿಗೆಯ ಸಮಗೊಳಿಸಿ,
ಸಮಗಾಲನಿಕ್ಕಿ ಅಣಿಯೇಳಮೆಟ್ಟಿದೆ !
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು
ಈ ಸೀರೆ ನೇಯ್ದವ ನಾನೊ ನೀನೊ ರಾಮನಾಥ

    ವೃತ್ತಿಯನ್ನೆ ಕೇಂದ್ರವನ್ನಾಗಿಸಿ ವಚನಗಳನ್ನು ರಚಿಸಿದ ಮೊದಲ ವಚನಕಾರ ಈ ದಾಸಿಮಯ್ಯ. ಈತ ಬಟ್ಟೆಯನ್ನು ತಯಾರಿಸುವ ನೇಕಾರ ಜಾತಿಯವನು. ದಶಕಗಳ ಕಾಲ ನೇಯ್ದ ಬಟ್ಟೆಯನ್ನು ಸಿದ್ದಾಪುರ ಸಂತೆಯಲ್ಲಿ ಮಾರಲು ಹೋದಾಗ ಶಿವನು ಪರೀಕ್ಷಿಸಿ ಹರಿದು, ಮನೆಗೆ ಬಂದು ಹಸಿವಿಗೆ ಅನ್ನವನುಂಡು ದಾಸಿಮಯ್ಯನ ಎಲ್ಲಾ ತಾಳ್ಮೆಯನ್ನು ಪರೀಕ್ಷಿಸಿದ ಈತನಿಗೆ ‘ತವನಿಧಿ’(ಅನ್ನದ ಅಕ್ಷಯ ಪಾತ್ರೆ) ನೀಡಿದ ಕಥೆಗಳಿವೆ. ಈತನಿಗೆ ಜೇಡರ ದಾಸಿಮಯ್ಯ ಎಂಬ ಹೆಸರೂ ಇದೆ ಹಾಗೆಯೇ ಸಾಕಷ್ಟು ಈ ಹೆಸರಿನ ಚರ್ಚೆಗಳೂ ಇವೆ. ಈತನ ದೊರೆತ ೧೭೬ ವಚನಗಳಲ್ಲಿ ಮುಕ್ಕಾಲುಪಾಲು ವೃತ್ತಿಗೌರವ ಕುರಿತಾದವುಗಳೇ ಆಗಿವೆ.

    ಈ ವಚನವು ಬಟ್ಟೆಯನ್ನು ನೇಯ್ಗೆ ಮಾಡುವ ಕಾಯಕ ಎಷ್ಟು ಶ್ರಮದಾಯಕವಾದುದೋ. ಈ ಕಾಯದೊಳಗೆ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅಷ್ಟೇ ಕಷ್ಟದ ಕಾರ್ಯ. ಇಲ್ಲಿ ತಾಳ್ಮೆ, ಸೂಕ್ಷö್ಮತೆ, ಶ್ರದ್ಧೆ ತುಂಬಾ ಮುಖ್ಯವಾದ ಅಂಶಗಳು. ಬಟ್ಟೆಯನ್ನು ನೇಯಲು ಹಾಸುವ ದಾರವನ್ನು ಮಗ್ಗಕ್ಕೆ ಸರಿಯಾಗಿ ಹಾಸಿ, ಮೇಲೆ ಕೆಳಗೆ ಸರಿಗೊಳಿಸಿ, ಸರಿಯಾದ ರೀತಿಯಲ್ಲಿ ನೆಯ್ಗೆ ಮಾಡಿದರೆ ಆ ದಾರಗಳ ನಡುವೆ ಅಡ್ಡದಾರವನ್ನು ಜೋಡಿಸುವ ಚಿಕ್ಕ ಮರದ ವಸ್ತು ಲಾಳಿಯು ದಾರದ ಉಂಡೆಯನ್ನೆ ಖಾಲಿಮಾಡಿತ್ತು ಹೀಗೆ ಸೀರೆಯು ತಯಾರಾಗುತ್ತದೆ. ಇಂತಹ ಸೀರೆಯು ನನ್ನ ತಾಳ್ಮೆ ಮತ್ತು ಶ್ರಮದಿಂದ ತಯಾರಾದುದು. ಎಂಬ ದೇವರನ್ನು ಪ್ರಶ್ನಿಸುವ ರೀತಿಯನ್ನು ಹೊಂದಿದ್ದರೂ ನಾನೊ, ನೀನೊ ಎನ್ನುವಾಗ ಇದೊಂದು ಅಭೂತಕಾರ್ಯ ಆದ್ದರಿಂದ ನಿನ್ನ ದಯೆಯಿದ್ದರೆ ಮಾತ್ರ ಇದು ಇಷ್ಟು ಪರಿಪೂರ್ಣವಾಗಿ ನೆಯ್ಗೆಯಾಗಲು ಸಾಧ್ಯವೆಂಬ ಭಕ್ತಿಯನ್ನೂ ಪ್ರಕಟಿಸಿದ್ದಾರೆ. ರಾಮನಾಥವೆಂಬುದು ವಚನಗಳ ಅಂಕಿತ. ದಾಸಿಮಯ್ಯನು ನಂಬಿದ ಕಾಯಕ ಶಕ್ತಿ.

ಅಲ್ಲಮಪ್ರಭು

ತನು ಬತ್ತಲಿದ್ದಡೇನೂ ಮನ ಶುಚಿಯಾಗದನ್ನಕ್ಕರ ?
ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ ?
ಭಸ್ಮವ ಹೂಸಿದಡೇನೊ,
ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ ?
ಇಂತೀ ಆಶೆಯ ವೇಷದ ಭಾಷೆಗೆ,
ಗುಹೇಶ್ವರಾ, ನೀ ಸಾಕ್ಷಿಯಾಗಿ ಛೀ ಎಂಬೆನು.

ವಚನಕಾರರು ಸಮಾಜದ ನಿಜವಾದ ವಿಮರ್ಶಕರು ಹಾಗೂ ಚಿಕತ್ಸಕರು. ಸಮಾಜದ ಅಸಮಾನತೆ, ಭಿನ್ನ ಅಭಿಪ್ರಾಯಗಳಿಗೆ ಸಮಾಜದ ಮಾದರಿಗಳನ್ನೆ ಉದಾಹರಣೆಯಾಗಿ, ಪ್ರತಿಮೆಯಾಗಿ ಬಳಸುತ್ತಾ ಚಿಕಿತ್ಸೆ ನೀಡಿದರು.
ಈ ಮೇಲಿನ ವಚನವನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಜೈನಧರ್ಮ, ವೈಷ್ಣವ ಧರ್ಮದ ಅಂಧ ಆಚರಣೆಗಳನ್ನು ಪ್ರಶ್ನಿಸಿರುವುದಾಗಿ ಕಂಡುಬರುತ್ತದೆ. ಅಥವಾ ನಮ್ಮೊಳಗೆ ಇರುವ ನಿತ್ಯ ನಾರಕವನ್ನು ನೂತನಗೊಳಿಸಿ ಪ್ರಶ್ನಿಸಿದ್ದಾರೆ. ಬಾಹ್ಯದ ಡಂಭಾಚಾರಕ್ಕಿಂತ ಅಂತರಂಗದ ಪರಿಶುದ್ಧ ಮೌನವೇ ಮಿಗಿಲೆಂದು ಅಲ್ಲಮಪ್ರಭುಗಳು ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಹೊರಗೆ ವೇಷ ಧರಿಸುತ್ತಾ ಆಚರಣೆಯ ನೆಪದಲ್ಲಿ ತೋರಿಕೆಯಲ್ಲಿರುತ್ತಾರೆ. ದಿಗಂಬರರಾಗುತ್ತಾರೆ. ಆದರೆ ಮನದಲ್ಲಿ ಆ ಶುಚಿತ್ವ ಇರದೆ ಈ ಹೊರಗಣದ ಎಲ್ಲಾ ಆಚಾರ ವ್ಯರ್ಥವೆಂದಿದ್ದಾರೆ. ಕೇವಲ ತಲೆಯನ್ನು ಬೋಳಿಸಿದರೆ ತನ್ನ ಹರಕೆ ತೀರಿಸಬಹುದೇ ಹೊರೆತು ಭಾವನೆಗಳು ಶುದ್ಧವಾಗಲಾರದು. ಭಾವನೆಗಳು ಶುದ್ಧವಿಲ್ಲದೆ ಮಾಡಿದ ಭಕ್ತಿ ವ್ಯರ್ಥ ಕಾರ್ಯ. ಬೂದಿ(ಭಸ್ಮ)ಗಳನ್ನು ಪೂಸಿಕೊಂಡರೆ ಅಂದರೆ ಬಳಿದುಕೊಂಡರೆ ಭಕ್ತನಾಗಲಾರನು. ಅಂತರಂಗ ಶುದ್ಧವಿರಬೇಕು. ಕರಣಗಳು ಎಂದರೆ ಕಾಯ ವಾಚ ಮನಸಾ ಈ ಮೂರು ಅಂಶಗಳ ನಿಯಂತ್ರಣ ಮುಖ್ಯ ಇವುಗಳ ಮೇಲೆ ಪ್ರಯೋಗವಾಗುವ ಇಂದ್ರಿಯ ವ್ಯಾಮೋಹಗಳ ನಿಯಂತ್ರಣ, ಅವುಗಳ ನಾಶ ಮುಖ್ಯ ಎಂದಿದ್ದಾರೆ. ಇಂತಹ ತೋರಿಕೆಯ ಭಕ್ತರ ಆಸೆಯ, ವೇಷದ, ನುಡಿಗಳ ಕಂಡರೆ ಛೀ ಎನ್ನುತ್ತೇನೆ, ಇಂತಹವರನ್ನು ತ್ಯಜಿಸುತ್ತೇನೆ ಗುಹೇಶ್ವರನ ಸಾಕ್ಷಿಯಾಗಿ ಎಂದಿದ್ದಾರೆ. ಅಲ್ಲಮನ ವಚನಗಳು ಬೆಡಗಿನಿಂದ ಕೂಡಿದ್ದರೂ ನೇರ ನಿಷ್ಠುರತೆಯನ್ನು ಸಾರುತ್ತವೆ.

ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ,
ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ.
ಒಡೆದು ಸಂಸಾರದ ಹೆಂಟೆಯ, ಬಗಿದು ಬಿತ್ತಿದೆಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ,
ಸುಷುಮ್ನನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.


    ವಚನಕಾರರ ಕೆಲವು ಕಾಯಕಗಳ ಕುರಿತು ಅಲ್ಲಮನು ನೇರವಾಗಿ ಹೇಳಿದಂತಿದ್ದರೂ ಮನದ ಕಾಯಕ ಮೊದಲಿಗೆ ಇರಬೇಕೆಂಬ ಅನಂತ ಸತ್ಯದ ತಿಳಿ ಹೇಳಿದ್ದಾರೆ. ಗೊಗ್ಗಯ್ಯನೆಂಬ ಕೃಷಿಕ ವಚನಕಾರನಿಗೆ ಮನದ ತೋಟವ ಸಿದ್ಧಮಾಡೆಂದು ಈ ರೀತಿಯಲ್ಲಿ ಹೇಳಿದ್ದಾರೆ.
    ಇದೊಂದು ಸರಳವಾದ ಹಾಗೂ ವಿಶಾಲ ಅರ್ಥವನ್ನು ಒಂದು ಕಾರ್ಯವಿವರಣೆಯಂತೆ ಮೂಡಿದ ವಚನವಾಗಿದೆ. ಅಲ್ಲಮರು ಬಾಹ್ಯ ತೋಟವನ್ನು ಸಿದ್ಧಮಾಡುವ ಕ್ರಮದಲ್ಲಿಯೇ ಮನಸ್ಸನ್ನು ಶುದ್ಧಮಾಡಬೇಕೆಂಬ ಎಚ್ಚರ ಮೂಡಿಸಿದ್ದಾರೆ. ಈ ದೇಹವನ್ನು ತೋಟವೆಂದು ಭಾವಿಸಿ, ಮನವನ್ನೆ ಗುದ್ದಲಿಯನ್ನಾಗಿ ಮಾಡಿಕೊಂಡು ಮೊದಲಿಗೆ ಸ್ವಚ್ಛಮಾಡಬೇಕು, ಹಸನುಗೊಳಿಸಬೇಕು. ಅಗೆದು ತೆಗೆಯಬೇಕು ಈ ಶರೀರ ಹೊಂದಿರುವ ಭ್ರಮೆಗಳನೆಲ್ಲವನ್ನು ಹಾಗೆಯೇ ಸಂಸಾರದ ತೊಡಕುಗಳನ್ನು ಮಣ್ಣಿನ ಹೆಂಟೆಗಳನ್ನು ಉಡಿಗೊಳಿಸಿದಂತೆ ಸರಿಪಡಿಸಿಕೊಳ್ಳಬೇಕು. ಸರಿಯಾದ ಅರ್ಥಗಳನ್ನು ತುಂಬಿಕೊಳ್ಳಬೇಕು. ಇಂತಹ ತೋಟದಲ್ಲಿ ಅಂದರೆ ಶರೀರದಲ್ಲಿ ಬಿತ್ತಬೇಕು ಬ್ರಹ್ಮಬೀಜವನ್ನು ಎಂದಿದ್ದಾರೆ. ಇಲ್ಲಿ ಬ್ರಹ್ಮಬೀಜವೆಂದರೆ ಬದುಕಿನ ನಿಶ್ಚಲವಾದ ಗುರಿಯೆಂದು ಭಾವಿಸಬಹುದು. ಇಂತಹ ತೋಟಕ್ಕೆ ನೀರು, ಗಾಳಿಯನ್ನು ಈ ಅಖಂಡಮಂಡಲವೆಂಬ ವಿಶ್ವವೇ ಅಂದರೆ ನಮ್ಮ ಜ್ಞಾನಕೋಶವೆಂಬ ಬಾವಿ, ಈ ಗಾಳಿಯೇ ಅಂದರೆ ಉಸಿರಾಟವೇ ಚಕ್ರವಾಗಿ ಸುಷುಮ್ನನಾಳದಿಂದ ನೀರು ತಂದು ಹಾಕಬೇಕು. ಅಂದರೆ ನಮ್ಮ ದೇಹದಲ್ಲಿ ಯೋಗಶಾಸ್ತçವೇಳುವಂತೆ ಮೂರು ನಾಳಗಳಿವೆ ಒಂದು ಇಹಾ, ಪಿಂಗಳ, ಸುಷುಮ್ನ(ಕುಂಡಲಿನಿ). ಈ ಇಹಾ ಮತ್ತು ಪಿಂಗಳಗಳ ನಡುವೆ ಸುಷುಮ್ನ ನಾಳವಿದೆ. ಇವೆರಡು ಉಸಿರಾಟದ ಉಚ್ವಾಸ ಹಾಗೂ ನಿಚ್ವಾಸಗಳಾದರೆ ಸುಷುಮ್ನನಾಳವು ಪ್ರಾಣಶಕ್ತಿಯನ್ನು ಈ ದೇಹಕ್ಕೆ ಒದಗಿಸುತ್ತದೆ. ಇಂತಹ ನಾಳದಿಂದ ನಾವು ಈ ತನುವೆಂಬ ತೋಟಕ್ಕೆ ನೀರು ತರಬೇಕು ಎಂದಿದ್ದಾರೆ ಅಲ್ಲಮಪ್ರಭು. ಈ ರೀತಿಯಲ್ಲಿ ಬೆಳೆಸುತ್ತಿರುವ ತೋಟವನ್ನು ಬಸವಗಳೈವರು ಎಂದರೆ ಪಂಚೇಂದ್ರಿಯಗಳು(ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ) ತಮ್ಮ ಇಷ್ಟ ಸುಖಕ್ಕಾಗಿ ಹಾಳುಮಾಡುತ್ತಾರೆ ಎಂದು ಈ ಪಂಚೇಂದ್ರಿಯಗಳನ್ನು ಸಮತೆ, ಸೈರಣೆಯೆಂಬ ಬೇಲಿಯನ್ನು ಅಂದರೆ ನಿಯಂತ್ರಣವನ್ನು ಹೊಂದಿ ಯಾವಾಗಲೂ ಈ ತೋಟದಲ್ಲಿ ಎಚ್ಚರವಿದ್ದು(ಜಾಗ್ರತೆವಹಿಸಿ) ಬಿತ್ತಿ ಬೆಳದ ಸಸಿಯನ್ನು ಕಾಪಾಡಿದೆನು. ಎಂದರೆ ಬದುಕಿನ ಧ್ಯೇಯವನ್ನು ಬರೀ ಹೊಂದುವುದಷ್ಟೆ ಅಲ್ಲದೇ ಕಾಪಾಡಬೇಕಾದ ಎಚ್ಚರವನ್ನು ಈ ರೀತಿಯಲ್ಲಿ ಅರ್ಥಪಡಿಸಿದ್ದಾರೆ. 

ನೀಲಮ್ಮನ ವಚನಗಳು
ನನ್ನನಾರೂವರಿಯರು
ನಾನು ಸ್ವರ್ಗಿಯಲ್ಲ ಅಪವರ್ಗಿಯಲ್ಲ
................................
.....................................
..........................
ನನ್ನನಾರೂ ಅರಿಯರು
       ನೀಲಾಂಬಿಕೆ, ನೀಲಲೋಚನೆ, ನೀಲಮ್ಮ, ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನು ವಚನ ಸಾಹಿತ್ಯದಲ್ಲಿ ವೈಚಾರಿಕ ಚಿಂತಕಿ. ಹರಿಹರ ಮತ್ತು ಭೀಮ ಕವಿಗಳು ಬಸವಣ್ಣನವರ ಮಡದಿ ನೀಲಾಂಬಿಕೆಯವರನ್ನು ಮಾಯಿದೇವಿ ಎಂದು ಕರೆದಿದ್ದಾರೆ.  ನೀಲಮ್ಮ ವಿಚಾರದಲ್ಲಿ ವಿಶಿಷ್ಟ ವ್ಯಕ್ತಿತ್ವದವಳು. ಆಕೆಯೇ ತನ್ನ ವಚನಗಳಲ್ಲಿ ತಿಳಿಸುವಂತೆ ಯಾರೂ ತನ್ನನ್ನು ಅರಿಯಲು ಸಾಧ್ಯವಿಲ್ಲ ಎನ್ನುವಾಗ ಯಾವುದೇ ಒಂದು ಆಯಾಮದ ವ್ಯಕ್ತಿತ್ವವಾಗಿ ತನ್ನನ್ನು ಅಳೆಯಬೇಡಿ ಎಂಬ ಸೂಕ್ಷ್ಮತೆಯನ್ನೂ ತಿಳಿಸಿದ್ದಾರೆ.
    ತನ್ನ ವ್ಯಕ್ತಿತ್ವವನ್ನು ತಾನೇ ಪರಿಚಯಿಸುವ ಈಕೆ ತಾನೊಬ್ಬಳು ವಿಶಿಷ್ಟವಲ್ಲವೆಮದು ಸಾರುತ್ತಿದ್ದಾಳೆ. ನನ್ನನ್ನು ಯಾರು ಅರಿಯಲು ಸಾಧ್ಯವಿಲ್ಲ. ಏಕೆಂದರೆ ಒಂದು ಆಯಾಮದಲ್ಲಿ ನನ್ನ ವ್ಯಕ್ತಿತ್ವ ಇರಲಾರದು. ನಾನು ಸ್ವರ್ಗ ನಿರೀಕ್ಷಕಳು ಅಲ್ಲ, ಅಂತಹ ನಿಯಮಕ್ಕೂ ಒಳಗಾದವಳಲ್ಲ. ನನ್ನನ್ನು ಯಾರೂ ತಿಳಿಯಲಾಗದು. ನಾನು ಈ ಲೌಕಿಕದಿಂದ ಮುಕ್ತಳೂ ಅಲ್ಲ, ಅಮುಕ್ತಳೂ ಅಲ್ಲ. ನಿತ್ಯ ಸಂಸಾರದಲ್ಲಿ ಇರುವೆ. ಆದರೆ ಸಂಸಾರವೇ ನನ್ನ ಬದುಕಲ್ಲ. ಸಂಗಯ್ಯನೊಳಗಿನ ವ್ಯಕ್ತಿತ್ವ ನಾನು. ನನಗೆ ಯಾವುದೇ ರೂಪವಿಲ್ಲ. ಆದ್ಧರಿಂದ ನನ್ನನ್ನು ಯಾರೂ ಅರಿಯರು. 
ತಾನು ಬಿಜ್ಜಳನ ಕುಟುಂಬದವಳು ಎಂದು ಸೂಕ್ಷ್ಮವಾಗಿ ಹೇಳುತ್ತಾ:

ನಾಡನಾಳಹೋದರೆ,
ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು.
ಹಗೆಯಳಿದು ನಿಸ್ಸಂಗವಾಯಿತ್ತು.
ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು.

ನಾಡನ್ನು ಆಳ ಹೋದರೆ ಅದು, ಆ ನಾಡಿನ ಕೋಪಕ್ಕೆ ಕೆಂಗಣ್ಣಿಗೆ ಗುರಿಯಾಗಿ ನಾಡು ಹಾಳಾಯಿತ್ತು ಎಂದು ಬಿಜ್ಜಳನ ವೈಫಲ್ಯವನ್ನು ಎತ್ತಿ ತೋರುತ್ತಾರೆ. ಹಗೆಯು ಅಳಿದು ನಿಸ್ಸಂಗವಾಯಿತ್ತು, ಮುಂದೆ ನಿಸ್ಸಂಗವೇ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ಎಂದು ಹೇಳಿದ್ದಾರೆ.


ಕೊನೆಕಾಲದಲ್ಲಿ ಬಸವಣ್ಣನವರನ್ನು ಭೇಟಿಯಾಗಿ ಅವರ ಮುಂದಿನ ಗೊತ್ತು ಗುರಿಗಳನ್ನು ಅರಿತು ಅದರಂತೆ ಸಮಾಜ ಕಟ್ಟುವ ಕೆಲಸಕ್ಕೆ ಬದ್ಧಳಾಗಬೇಕೆಂದು ನೀಲಮ್ಮ, ಹಿರಿಯ ಶರಣ ಹಡಪದ ಅಪ್ಪನವರ ಜೊತೆಗೆ ಕೂಡಲ ಸಂಗಮಕ್ಕೆ ಪಯಣ ಬೆಳೆಸುತ್ತಾರೆ. ಆದರೆ ರಕ್ಕಸ ತಂಗಡಗಿ ಮುಟ್ಟುವಷ್ಟರಲ್ಲಿ ಬಸವಣ್ಣನವರು ಸಂಗಮದಲ್ಲಿ ಐಕ್ಯರಾದ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸುತ್ತದೆ. ನೀಲಮ್ಮನವರಿಗೆ ಅಗಾಧ ನೋವು ಕಳವಳ ಆತಂಕವಾಗುತ್ತದೆ.



Posted by ಡಾ. ರವಿಶಂಕರ್ ಎ.ಕೆ. ಅಂಕುರ on ಆಗಸ್ಟ್ 16, 2019 2 ಕಾಮೆಂಟ್‌ಗಳು:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಸೋಮವಾರ, ಆಗಸ್ಟ್ 12, 2019








ಮುಳುಗಿದ ಮನುಜ

ಮತ್ತೆ ಮತ್ತೆ ನಾಡಿನಲ್ಲಿ
ಇದೋ ತಿರುಗಿ ನಾಡಿಯಲ್ಲಿ
ಶೋಕ ತುಂಬಿ ಬಂದಿದೆ
ಕೊರಳ ತೇವ ಬತ್ತಿ ಇಂದು
ಕಣ್ಣೀರಲಿ ಕೋಟಿ ಕಥೆಯ ನಾಡಿದೆ

ಕಳೆದ ಬಾರಿ ಕೂರ್ಗಿನಲ್ಲಿ
ಕೇರಳಾದ ಕಡಲಿನಲ್ಲಿ
ಇನ್ನೂ ಜೀವ ನಡುಕವಿದೆ
ಮತ್ತೆ ಶಾಪ ಮೂಡಿದೆ

ಅತ್ತ ಕೃಷ್ಣೆ, ಇತ್ತ ತುಂಗೆ
ಜಲಾಶಯದಿ ಜೋಲಿಯಾಟ
ನೇತ್ರಾವತಿಯ ರೌದ್ರ ರೂಪ
ಕುಮಾರ ಧಾರ, ಫಲ್ಗುಣಿ
ಉಕ್ಕಿ ಹರಿದ ಕಂಬನಿ

ತಿಳಿದವರು ಗಂಟು ಕಟ್ಟಿ
ಊರನೂರ ಸೇರಿ ಬದುಕಿ
ಉಳಿದರು, ಕಣ್ಣೀರ ತಳೆದರು
ತಿಳಿಯದವರ ಗೋಳು ಇದು
ನಾಡು ತುಂಬಾ ದಾನಿ ಬೀಡು
ಇದೋ ಕಲ್ಯಾಣ ನೋಡು
ಪರಿಹಾರ ಪಂಜರ, ಸಾಗುತಿದೆ ಜನಸಾಗರ

ನದಿಯ ಬಳಿಗೆ ಹೋದವರು
ನದಿಯೇ ಬಳಿಗೆ ಬಂದಿದೆ
ಆನಾಗರೀಕತೆಯಿಂದ
ನಾಗರೀಕತೆಗೆ ಹೆಜ್ಜೆ ದನಿಯು ಹೀಗಿದೆ

ಕೈಗಾರೀಕತೆ ಕಟ್ಟಿದೆವು
ಕಂಪನಿಯನೇ ನೆಟ್ಟೆವು
ದುಡಿತದೊಳಗೆ ಜ್ಞಾನ ತುಂಬಿ
ಸೋಮಾರಿಯ ಬದುಕ ನಂಬಿ
ದಾಸರಾಗಿ ದಾಸ್ಯಹೊಂದಿ
ನಮ್ಮ ನಾಡ ಮರೆತೆವು

ಭೂಮಿಯನ್ನು ಕಟ್ಟುವಂತ
ಹರಿವ ನೀರ ಹರಿಸುವಂತ
ಬೆಳಕಿನಿಂದ ಬೆಳಕು ತಂದು
ಕೊಳಕಿನಿಂದ ಫಲವ ಬೆಳೆದು
ಕೆಸರಿನೆಸರ ಬಸಿರಿಗಿಡೆ
ಜ್ಞಾನ ನಮಗೆ ಬೇಕಿದೆ
ಕಣ್ಣು ತೆರೆವ ಮಣ್ಣಿನರಿವು
ಇದೋ ಇಲ್ಲಿ ಮೂಡಿದೆ - ಅಂಕುರ ೧೧+೦೮= ೧೯
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಆಗಸ್ಟ್ 12, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಗುರುವಾರ, ಆಗಸ್ಟ್ 8, 2019

                       ತುಂಗಭದ್ರೆ ಎಂಬ ತವಕ

    ಮಕ್ಕಳೆಂದರೆ ವಿಶ್ವಾಸದ ವಿಶ್ವಗಳು. ಅವು ಭವಿಷ್ಯತ್ತಿನ ಸಂಪತ್ತುಗಳು. ಮಕ್ಕಳನ್ನು ನಿರ್ಮಿಸಲು ತಂದೆ-ತಾಯಿಯಿಂದ ಪ್ರಾರಂಭವಾಗಿ ಸಮಾಜ, ವಿಶ್ವವೇ ಜವಾಬ್ದಾರಿ ಹೊರುತ್ತದೆ. ಇಂತಹ ವಿಶ್ವದ ಸಂಗಾತಿ ಮಕ್ಕಳನ್ನು ಕುರಿತು ಒಂದು ಸಾಹಿತ್ಯಲೋಕವೇ ಸೃಷ್ಠಿಗೊಂಡಿದೆ. ಈ ದಿಸೆಯಲ್ಲಿ ಒಂದು ಮಗುವಿನ ಕುರಿತು ಚರ್ಚಿಸುವುದು ಈ ಲೇಖನದ ಉದ್ದೇಶ.

    ಒಲವಿನ ಕವಿ ಎಂದೇ ಪ್ರಸಿದ್ಧವಾದ ಕೆ. ಎಸ್ ನರಸಿಂಹಸ್ವಾಮಿ ಅವರು ಜನಸಾಮಾನ್ಯರಿಗಾಗಿ ಕವಿತೆಯನ್ನು ಬರೆದ ಮಲ್ಲಿಗೆಯ ಕವಿ. ಈ ಕವಿಯು ನಲ್ಲ-ನಲ್ಲೆಯ ಕುರಿತು ನಲ್ಮೆಯಿಂದ ಬರೆದ ಸಾಹಿತ್ಯ ಇಂದಿಗೂ ಪ್ರಸಿದ್ಧ. ಅವರ 'ಮೈಸೂರು ಮಲ್ಲಿಗೆ' ಸಂಕಲನವು ಒಂದು ಸಂಸಾರದ ಸಾರವನ್ನೇ ವಿಚಾರ ವಿವರವಾಗಿ ನೀಡುವ ಏಕೈಕ ಕೃತಿಯಾಗಿದೆ. ಈ ಕವಿಯು ಎಲ್ಲಾ ಪ್ರಕಾರದಲ್ಲೂ ಸಾಹಿತ್ಯ ರಚನೆ ಮಾಡಿದ್ದರೂ ಪ್ರೀತಿ ತುಂಬುವ ವಿಷಯದಲ್ಲಿ ಜನಜನಿತವಾದವರು. ‘ತುಂಗಭದ್ರೆ’ ಎಂಬ ಕವಿತೆ ಒಲವಿನ ಕವಿತೆಗಳ ಮುಂದುವರೆದ ಭಾಗದಲ್ಲಿ ಕಾಣುವ ದಾರಿಯಂತೆ ಗೋಚರವಾಗುತ್ತದೆ. ಈ ಕವಿತೆಯು ವಿಶೇಷವಾಗಿ ಆಕರ್ಷಿತವಾಗುತ್ತದೆ.

    ತಂದೆ-ತಾಯಿ ಎಂಬ ಎರಡು ದಡಗಳ ನಡುವೆ ಮಗಳು ಚಂದಿರನ ಹಾಗೆ ಮೂಡಿದವಳು, ಶಾಂತ ಸ್ವರೂಪಿ. ಈ ತುಂಗಭದ್ರೆಯ ಬಾಲ್ಯದ ರೂಪವನ್ನು ಅತ್ಯಂತ ಸರಳವಾಗಿ ತಿಳಿಸಿದ್ದಾರೆ. ಈ ಮಗಳ ತುಂಟತನ, ಆಟ, ವೈಯಾರದ ಸೊಬಗು ವಿಶೇಷವಾದುದು. ಈ ತುಂಗಭದ್ರೆಯು ಹೊಳೆಯಲ್ಲವೆಂದು ಮೊದಲೇ ಅರ್ಥೈಸುವ ಮೂಲಕ ವಿಶೇಷ ಅರ್ಥಗಳಿಗೆ ಕಡಿವಾಣ ಹಾಕಿದ್ದಾರೆ. ಇವಳು ವರ್ಷದ ಮಗಳು ಈಗತಾನೇ ಬಾಲ್ಯದ ಅರ್ಥಕ್ಕೆ ಪದವಾಗಿ ಪದವಿಯೇರುತ್ತಿರುವ ಜೀವ. ಇವಳು ನನ್ನ ದೇವರು ಎನ್ನುವಾಗ ಅನಂತ ಸ್ವರೂಪವನ್ನೇ ನೀಡುತ್ತಾರೆ. ಕುವೆಂಪು ಈ ಸ್ಥಿತಿಯನ್ನು ‘ವಿಶ್ವಮಾನವ’ ಬಿಂಬವಾಗಿ ಕಾಣುತ್ತಾರೆ. ಜಗತ್ತಿನ ಯಾವುದೇ ರೂಪಗಳಿಗೂ ಸಿಲುಕದ ಮುಗ್ಧರೂಪ. ನಿರ್ಮಲ ಮನಸ್ಸು ಮಕ್ಕಳ ಸ್ವರೂಪ. ಇಂತಹ ಮಗುವಿನ ಪಾಲನೆಯನ್ನು ಮೊದಲಿಗೆ ತಿಳಿಹಾಸ್ಯದಲ್ಲಿ ನವಿರಾಗಿ ಬಿಂಬಿಸಿದ್ದಾರೆ. ಮದರಾಸಿನಲಿ ಬಿರುಗಾಳಿ ಎದ್ದು ಮೈಸೂರಿನಲಿ ಹತ್ತು ಹನಿ ಮಳೆ ಬಿದ್ದರೆ ತುಂಗಭದ್ರೆಗೆ ನೆಗಡಿ, ಬೀದಿಯಲಿ ಬಿಸಿಲು ಸುಳಿದರೆ ಉಷ್ಣ. ಈ ವ್ಯತ್ಯಾಸವು ಸಾಮಾನ್ಯವಾದ ವಿಚಾರವಾದರೂ ಅತ್ಯಂತ ಗಂಭೀರವಾದ ಹಿಂಸೆಗಳು ಆದ್ದರಿಂದ ಈ ವಿಚಾರದಲ್ಲಿ ಎಲ್ಲರೂ ಎಚ್ಚರವಹಿಸುತ್ತಾರೆ. ‘ತುಂಗಭದ್ರೆ’ಗೆ ಉಂಟಾಗುವ ಈ ಬದಲಾವಣೆಗೆ ಇಡೀ ಮನೆಯೇ ರಕ್ಷಣೆಗೆ ನಿಲ್ಲುತ್ತದೆ. ಎಲ್ಲರೂ ಈಕೆ ಕುರಿತು ಮಾತಾಡುವವರೇ. ಮಗುವಾದ ಕಾರಣ ದೇಹದ ಚಿಕ್ಕ ಬದಲಾವಣೆಗೂ ಸ್ಪಂದಿಸುತ್ತದೆ. ಮಾತುಬಾರದು ಮುಗ್ಧ ಕೂಸು ಅಳುವಿನ ಮೂಲಕ ಮಾತಾಡುತ್ತದೆ. ಈ ಅಳು ಕವಿಯ ಒಳಗಣ್ಣಿನ ಪ್ರೀತಿ. ತನ್ನ ಕಣ್ಣಿನ ಕಪ್ಪು ಬಿಂಬದ ದೀಪ್ತಿ. ಈ ಕಾರಣ ಮಗುವನ್ನು ಹಲವು ವಿಧದಲ್ಲಿ ಮುದ್ದಿಸಬೇಕು. ಬೆಚ್ಚಗೆ ಮಲಗಿಸುವ, ಆರೋಗ್ಯಕ್ಕಾಗಿ ಧೂಪವನಿಡುವ, ತೊಟ್ಟಿಲು ತೂಗುವ, ಲಾಲಿ ಹಾಡುವ, ಕಥೆ ಹೇಳುವ ಕೆಲಸ ಮಾಡಬೇಕು. ಆದರೆ ಈ ಮಗಳು ಮಲಗುವುದಿಲ್ಲ. ಮಾಯಾಂಗನೆಯಂತೆ ಅಳುವಿಂದ ನಗುವಿಗೆ ತನ್ನ ಸ್ವರೂಪವನ್ನೇ ಬದಲಿಸುತ್ತಾಳೆ. ಹೆಡೆ ಬಿಚ್ಚಿ ನಯನ ಮನೋಹರವಾಗಿ ನರ್ತಿಸುವ ಹಾವಿನಂತೆ ಸುಂದರವಾಗಿ ಈಕೆಯನ್ನು ಲಾಲಿಸುವವರಿಗೂ ನಗು ತುಂಬುತ್ತಾಳೆ.

    ಮಗಳಿಗೆ ವರ್ಷ ತುಂಬಿರುವ ಕಾರಣ ತೊಟ್ಟಿಲಿನಿಂದ ಮಂಡಿಯೂರಿ ನಡೆವ ನಾಲ್ಕು ಕಾಲಿನ ಕೂಸಾಗಿ ತನ್ನವರನ್ನು ಅಚ್ಚಿಕೊಳ್ಳುತ್ತದೆ. ಅದರಲ್ಲೂ ತುಂಗಭದ್ರೆ ಮಗಳು ತಂದೆಯೆಂದರೆ ತುಂಬಾ ಪ್ರೀತಿ. ಏಕೆಂದರೆ ದಿನವೆಲ್ಲಾ ತಾಯಿ ಬಳಿಯೇ ಅಧಿಕಾರ ನಡೆಸಿ ರಾತ್ರಿಯಾದರೆ ಸಾಕು ಹೊರಗಿನಿಂದ ಬರುವ ತಂದೆಗೆ ದೇವರ ಪದಕದಂತೆ ಆಕರ್ಷಣೆ, ಆಪ್ತಪ್ರೀತಿ. ಹೊಸಿಲು ದಾಟಲು ಬಿಡದೆ ಸರ್ಪದ ಕಾವಲಿನಂತೆ ಸದಾ ತಂದೆಯೂ ನನ್ನ ಜೊತೆಯಲ್ಲಿರಲಿ ಎಂದು ಬಯಸುವ ಮುಗ್ಧ ಭಾವ. ಈ ಮಗಳು ತುಟಿತೆರೆದರೆ ಸಾಕು ಹಾಲುಹಲ್ಲಿನ ರೂಪದ ದರ್ಶನ ಮೇಲಿನ ತುಂಟಿಯಂಚಲಿ ಸಣ್ಣಕ್ಕಿಯಂತೆ ಹಾಗೂ ಕೆಳದುಟಿಯ ಹಿಂದೆ ಹಾಲಿನ ಚುಕ್ಕಿಯಂತೆ. ಬಟ್ಟತಲೆ, ದುಂಡಾದ ಮುಖ ಹಾಗೂ ಕಣ್ಣಿನ ರೂಪವು ಕಿವಿಯತನಕವೆಂದು ಮುಖದ ಮನೋಹರತೆಯನ್ನು ವರ್ಣಿಸಿದ್ದಾರೆ. ಆ ಮಗುವಿನ ತಲೆಯ ಮೇಲೆ ಶಾಸ್ತçಕ್ಕೆ ಅಂದರೆ ಲೆಕ್ಕಕ್ಕಾಗಿ ಹತ್ತು ಕೂದಲು, ಆ ಕೂದಲನ್ನೇ ಸೇರಿಸಿ ಒಂದು ಮರಳು ಜಡೆ, ಅಂದರೆ ಬ್ರಹ್ಮಗಂಟು. ಇಲ್ಲಿ ಕೆಲವು ವಿಷಯಗಳು ಮುಖ್ಯವಾಗಿವೆ. ಬ್ರಹ್ಮಗಂಟಿನ ಮೂಲಕ ಹೆಣ್ಣಿನ ಸಂಕೇತವನ್ನು ನೀಡುವುದು ಅಂದರೆ ಸಂಬಂಧದ ಶಾಶ್ವತತೆ ಹಾಗೂ ಪವಿತ್ರದ ಗಂಟಾಗಿ ಜೈವಿಕ ಬೆಳವಣಿಗೆ ಸ್ವರೂಪ ತುಂಬುವುದು, ಬಿಡಿಸಲಾಗದ ಸಮಸ್ಯೆಯಾಗಿಯೂ ಅವಲೋಕಿಸುತ್ತಾರೆ.
 
    ಈ ಮಗುವಿನ ಆಟದ ಕ್ರಿಯೆಯೇ ಒಂದು ಸೋಜಿಗ. ಲೋಕದ ಯಾವುದೇ ಚೇಷ್ಠೆಗಳು ತಿಳಿಯದ ಈ ವರ್ಷದ ವಯಸ್ಸಿನಲ್ಲಿ ಪರಿಚಯದ ಪದನಿಧಿಗೆ ಹೆಜ್ಜೆಯಿಡುತ್ತದೆ. ಎಲ್ಲವನ್ನೂ ಮುಕ್ತವಾಗಿ ಮುಗ್ಧವಾಗಿ ಅವಲೋಕಿಸುತ್ತಾ ಸಾಗುವ ಜೀವಕ್ಕೆ ಅನುಭವದ ಮೊದಲ ಶಿಕ್ಷಣ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಧೈರ್ಯವೇ ಧೈರ್ಯ. ಆಗಾಗ ಮುಂಗೋಪ. ಎಲ್ಲರೂ ನನ್ನ ಇಷ್ಟಪಡಲಿ ಎಂದು ಭಾವಿಸುವ ‘ಇಷ್ಟ’ ಪ್ರವೃತ್ತಿ ಪ್ರಾರಂಭವಾಗುವುದೇ ಈ ವರ್ಷದ ವಯಸ್ಸಿನಲ್ಲಿ ಎನ್ನಬಹುದು. ಇದನ್ನು ‘ಇಗೋ’ವಿನ ಮೊದಲ ಹೆಜ್ಜೆ ಎಂದು ಮನೋವಿಜ್ಞಾನ ತಿಳಿಸುತ್ತದೆ. ತಂದೆ ಬೇಸರ ಮಾಡಿದ ತಾಯಿಯ ಬಳಿಗೆ ಓಡಿಹೋಗುವ ‘ತುಂಗಭದ್ರೆ’ಯು ತಾಯಿ ಗದರಿದರೆ ಅಂಬೆಗಾಲಿಡುತ ಕಣ್ಣೀರು ಸುರಿಸುತ್ತಾ ತಂದೆಯ ಬಳಿ ಬಂದು ಸೇರುತ್ತಾಳೆ. ಅಂದರೆ ಕೋಪವೇ ತಿಳಿಯದ ಕಂದನಿಗೆ ಪ್ರೀತಿಯೇ ಪ್ರಾಧಿಕಾರ, ಅಪೇಕ್ಷೆ.

    ಕೆ. ಎಸ್ ನರಂಸಿಂಹಸ್ವಾಮಿ ಅವರು ಈ ಕವಿತೆಯಲ್ಲಿ ‘ಸಂಸಾರವು ಒಂದು ಸಾಗರ'ವೆಂದಿದ್ದಾರೆ. ಸಾಗರಕ್ಕೆ ಎರಡು ದಡಗಳಿದ್ದಂತೆ ತಂದೆ ಹಾಗೂ ತಾಯಿ. ಮಗು ಎರಡು ದಡಗಳಿಗೂ ಚಲಿಸುವ ಚಂದ್ರ ರೂಪ. ಶಾಂತ ಸ್ವರೂಪ. ಈ ಮಗುವಿನ ತರಹ ನಮಗೆ ಯೋಗವಿಲ್ಲವೆಂದು ಕೊರಗುತ್ತಾರೆ. ಏಕೆಂದರೆ ಬಾಲ್ಯದಲ್ಲಿ ಜೀವದ ಕಣ್ಣಾಗಿ ಮಕ್ಕಳನ್ನು ಕಾಪಾಡುವ ತಂದೆ, ತಾಯಿ ಎಷ್ಟೊ ಜನ ಆ ವೇಳೆಗೆ ಅನಾಥರಾಗಿರುತ್ತಾರೆ. ಈ ಬದುಕಿನ ದಡವು ಬೇಸರವಾದರೆ ಇನ್ನೊಂದು ದಡಕ್ಕೆ ಪ್ರೀತಿ ಹುಡುಕಿ ಹೋಗಲು ಆ ದಡವೇ ಮುಳುಗಿ ಹೋಗಿರುತ್ತದೆ. ಇದೇ ರೀತಿ ಮುಂದೆ ಈ ಪುಟ್ಟ ಮಗಳು ದೊಡ್ಡವಳಾಗುತ್ತಾಳೆ. ಅವಳಿಗೂ ಈ ಅನಾಥಭಾವ ಕಾಡಬಹುದು. ಇಂದು ನಮ್ಮ ಅನಾಥಭಾವವನ್ನು ಹೋಗಲಾಡಿಸಲು ನಂಬಿಕೆಯನ್ನೆ ಹೊತ್ತು ತಂದವಳು ತನ್ನ ನಂಬಿಕೆಯನ್ನೆ ಕಳಚಿ ನಿಂತು ಅನಾಥವಾಗುವ ಕಾಡುದಾರಿಯ ಪರಿತಪವನ್ನು ನೆನೆದು ಭಯಗೊಳ್ಳುತ್ತಾರೆ. ತಳಮಳದಿಂದ ಕನವರಿಸಿ ಪ್ರತಿ ನಿದ್ದೆಯಿಂದ ಎಚ್ಚರಗೊಳ್ಳುವ ನನ್ನ ಜೀವಂತಿಕೆಯಲ್ಲಿ ಆಕೆಯ ಭವಿಷ್ಯದ ಚಿಂತೆಯಿದೆ ಎನ್ನುತ್ತಾರೆ. ಮುಂದೆ ಏನಾಗುವುದೋ ಎಂದು ನೋವುಪಡುವ ತಂದೆಯ ಈ ತವಕ ಭಾವದಲ್ಲಿ ಮಗಳೆಂಬ ಮುಗ್ಧತೆಯು ಕೂಡಿ ಕಳಚುವ ಕೊಂಡಿಯಾಗಿದೆ.

    ಪ್ರತಿ ತಂದೆಗೂ ಪ್ರಾಣತುಂಬುವ ಮಗಳ ಸ್ವರೂಪವು ಸಿಗ್ಮಂಡ್ ಫ್ರಾಯ್ಡ್ ಥಿಯರಿಯನ್ನು ತಿಳಿಸಿದರೂ ಸಹ ಅದು ಕೂಡಿ-ಕಳಚುವ ಕೊಂಡಿಯಲ್ಲಿ ಅನಾಥಭಾವದ ನಂಟಿದೆ. ತನ್ನ ಮಗಳು ಎರಡು ಸಂಸಾರದಲ್ಲಿ ಬದುಕುವಾಗ ಅನಾಥಳಾಗುವ ನೋವು ತಂದೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಈ ದೃಷ್ಠಿಕೋನದಲ್ಲಿ ‘ತುಂಗಭದ್ರೆ’ ಎಂಬ ಕವಿತೆಯು ತಂದೆ-ಮಗಳ ನಂಟನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದೆ. ಕೆ.ಎಸ್.ನ ಅವರು ಪ್ರತಿ ಜೀವದಲ್ಲೂ ಒಲುಮೆಯನ್ನು ಕಾಣುವ ಕವಿ. ಜೀವನವೆಂದರೆ ನಂಟು. ಅದೊಂದು ಸಂಬಂಧಗಳನ್ನು ಬೆಸೆಯುವ ಬ್ರಹ್ಮಗಂಟಾಗಿ ಕಾವ್ಯ ನಿರ್ಮಿಸಿದ್ದಾರೆ.

ಕೆ. ಎಸ್ ನರಸಿಂಹಸ್ವಾಮಿ ಅವರ ಕುರಿತು ಮಾಹಿತಿಗಾಗಿ ವಿಕಿಪಿಡಿಯಾ ಲಿಂಕ್ :

https://kn.wikipedia.org/s/jf


Posted by ಡಾ. ರವಿಶಂಕರ್ ಎ.ಕೆ. ಅಂಕುರ on ಆಗಸ್ಟ್ 08, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಬುಧವಾರ, ಜುಲೈ 31, 2019

Constantinople
C-O-N-S-T-A-N-T-I-N-O-P-L-E
C-O-N-S-T-A-N-T-I-N-O-P-L-E
Use your pluck now try your luck to sing along with me,
Constantinople
C-O-N-S-T-A-N-T-I-N-O-P-L-E
C-O-N-S-T-A-N-T-I-N-O-P-L-E
It’s as easy to sing as you sing your A-B-C.
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ
ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ,
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ;
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ.
ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ
ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಂಹಳ್ಳಿ ಕಿಲಾಡಿ ಹುಂಜಾ!
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.
ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.
ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ,
ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿ “ಲೇ, ಯಾರೋ ಯಾಕೋ ಇಲ್ಲಿ” ಅಂತ!
ಹಃ ನಾನು..
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು
ಬೆಪ್ ನನ್ ಮಗ.
ಸಾಹಿತ್ಯ – ಟಿ.ಪಿ.ಕೈಲಾಸಮ್
ಸಂಗೀತ – ಸಿ ಅಶ್ವಥ್
ಗಾಯನ – ಸಿ ಅಶ್ವಥ್ ಮತ್ತು ಸಂಗಡಿಗರು
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಜುಲೈ 31, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಬುಧವಾರ, ಜೂನ್ 26, 2019

ವಚನದ ಸಾರವೇ ಈ ಕವಿತೆ







ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ 
ಇಲ್ಲೇ ಇರುವ ಪ್ರೀತಿ ಸ್ನೇಹಗಳ 
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ 
ಎಲ್ಲಾ ಇವೆ ಈ ನಮ್ಮೊಳಗೆ 
ಒಳಗಿನ ತಿಳಿಯನು ಕಲಕದೆ ಇದ್ದರೆ 
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು 
ನಮ್ಮ ಅಹಮ್ಮಿನ ಕೋಟೆಯಲಿ 
ಎಷ್ಟು ಕಷ್ಟವೋ ಹೊಂದಿಕೆ ಎಂಬುದು 
ನಾಲ್ಕು ದಿನದ ಈ ಬದುಕಿನಲಿ





ಜಿ.ಎಸ್.ಶಿವರುದ್ರಪ್ಪ ಅವರ ಈ ಕವಿತೆ ವಚನ ಸಾಹಿತ್ಯದ ಸಂಪೂರ್ಣ ಆಶಯವನ್ನು ಹೇಳಬಲ್ಲದು. ಪ್ರಸ್ತುತ ಹೊಂದಿಕೆಯಾಗುವ ಈ ಕವನ ಮನುಷ್ಯ ಸಂಬಂಧಗಳ ನಡುವಿನ ಬಿಕ್ಕಟ್ಟುಗಳನ್ನು ಸರಳವಾಗಿ ಹೇಳುತ್ತದೆ. ದೇವನಿರುವುದು ಆತ್ಮದಲ್ಲಿ ಎಂದು ತಿಳಿದಿದ್ದರೂ ಆಡಂಬರಕ್ಕಾಗಿ ದೇವಾಲಯಗಳಲ್ಲಿ ದೇವರನುಡುಕುವ ಡಾಂಭಿಕ ಕಾರ್ಯದಲ್ಲಿ ತೊಡಗಿದ್ದೇವೆ. ನಮಗೆ ಭಯವಿದೆ. ಏಕೆಂದರೆ ನಮ್ಮ ಕುರಿತು ನಮಗೆ ಅಷ್ಟು ಪೂರ್ಣ ನಂಬಿಕೆ ಇಲ್ಲದಿರುವುದೇ ಆ ಭಯ, ಅಂಜಿಕೆ. ಈ ಸಮಾಜದಲ್ಲಿ ಪರಸ್ಪರರು ಪ್ರೀತಿ-ಸ್ನೇಹಗಳಿಂದ ವರ್ತಿಸಿ ಬಾಳುವುದರಿಂದ ಯಾವ ದ್ವೇಷವೂ ಇರಲಾರದು. ಸ್ವಾರ್ಥದ ಕಾರಣದಿಂದ ಗೆಲ್ಲುವ ಸವಾರಿ ಹೊರಟಿದ್ದೇವೆ. ಮನುಷ್ಯರ ನಡುವಿನ ಈ ಬಿಕ್ಕಟ್ಟು ಸಮಾಜ, ರಾಜ್ಯ, ದೇಶ-ದೇಶಗಳ ನಡುವಿನ ಹಿಂಸೆಗೆ ಕಾರಣವಾಗಿದೆ. ಇಷ್ಟು ಹಿಂಸೆಯ ಉಲ್ಬಣವಿದ್ದರೂ ನಾವು ಗುಡಿ-ಚರ್ಚು-ಮಸೀದಿ-ಸ್ತೂಪ-ಬಸದಿಗಳಲ್ಲಿ, ಮತಧರ್ಮಗಳ ಮತಿಹೀನತೆಯಲ್ಲಿ ಪರಿಹಾರ ಹುಡುಕುತ್ತಿದ್ದೇವೆ.

ಮನುಷ್ಯನ ಎಲ್ಲಾ ಕ್ರಿಯೆಗಳು ಕೂಡ ಸಂತೋಷವಾಗಿ ಬದುಕುವ ಕಾರಣ ನಡೆಯುತ್ತಿವೆ. ಈ ಬದುಕಿನ ಎಲ್ಲಾ ಹಿಂಸೆಗಳು ಈ ಕ್ರಿಯೆಗಳಿಂದಲೇ ನಿರ್ಮಿತವಾಗಿವೆ. ನಮ್ಮ ಮನಸ್ಸನ್ನು ನಾವೇ ನಿರ್ಮಾಣಮಾಡಿಕೊಳ್ಳಬೇಕು. ಇನ್ನೊಬ್ಬರಲ್ಲಿ ನಮ್ಮ ಲಾಭವನ್ನು ಹುಡುಕಿದರೆ ಅದೇ ಹಿಂಸೆ. ಹುಡುಕದೇ ಅವರೂ ನಮ್ಮಂತೆ ಎಂದು ಭಾವಿಸಿದರೆ ಅದೇ ನಂದನ, ಆನಂದ.  ಈ ನಿರ್ಮಲವಾದ ಮನಸ್ಸಿನ ಆತ್ಮವನ್ನು ಕಲಕುತ್ತಾ ಸದಾ ನೋವಿನಲ್ಲಿ ಬದುಕು ಸಾಗಿಸುವ ಬದಲು ನಮ್ಮೊಳಗೆ ಇರುವ ಅಮೃತದಂತಹ ಆನಂದವನ್ನು, ಮನದ ತಿಳಿಯನ್ನು ಕಲಕದೆ ಅನುಭವಿಸಬೇಕು, ಸವಿಯಬೇಕು, ಪರರಿಗೂ ಉಣಿಸಬೇಕು. 'ಇದಂ ಶರೀರಂ ಪರೋಪಕಾರಾರ್ಥಂ' ಎಂಬಂತೆ ನಿಸ್ವಾರ್ಥ ಗುಣ ನಮ್ಮದಾಗಬೇಕು.





ಮನುಷ್ಯನ ಬದುಕು ಪರಸ್ಪರ ಸಂಬಂಧಗಳ ಸರಪಳಿಯಲ್ಲಿ ಇರುವಂತಹದು. ರಕ್ತ ಸಂಬಂಧ,  ಪರಿಚಯದ ಮೂಲಕ ನಾವು ಆತ್ಮೀಯತೆ ಗಳಿಸಿರುತ್ತೇವೆ. ಎಷ್ಟೇ ಹತ್ತಿರವಿದ್ದರೂ ಮಾನಸಿಕವಾಗಿ ತುಂಬಾ ದೂರ ಉಳಿದಿರುತ್ತೇವೆ. ಕೇವಲ ಋಣಾತ್ಮಕವಾಗಿ ತಪ್ಪುಗಳನ್ನು ಹುಡುಕುತ್ತಾ ಅವರಿಂದ ದೂರ ಉಳಿಯುತ್ತಿರುತ್ತೇವೆ. ಈ ಬದುಕು ನಾಲ್ಕುದಿನ ಸಂತೆಯಂತೆ ಇರುವುದು. ಇಂತಹ ಬದುಕಿನಲ್ಲಿ ಹೊಂದಿಕೆಯೆಂಬುದು ಮುಖ್ಯವಾದುದು. ಅದೇ ಹೊಂದಾಣಿಕೆ ಕಷ್ಟವಾದರೆ ನಮ್ಮ ಇಷ್ಟವಾದ ಬದುಕು ಸಿಗಲಾರದು.

ಮನೆಯಲ್ಲಿ ನಾವು ಎಷ್ಟು ಅನ್ಯೋನ್ಯತೆ ಹೊಂದಿದ್ದೇವೆ. ಸಮಾಜದಲ್ಲಿ ಇತರರ ಕುರಿತು ನಮ್ಮ ಅಭಿಪ್ರಾಯಗಳೇನು! ಈ ಅಂಶಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಒಂದು ಕಾರ್ಯಾರ್ಥವಾಗಿ ಇಲ್ಲಿ ಜನಿಸಿರುವ ನಾವು ಸ್ವಾರ್ಥವನ್ನು ಬಿಟ್ಟು ನಮ್ಮನ್ನು ಪ್ರೀತಿಸುವವರ ಮೇಲೆ ಪ್ರೀತಿಯನ್ನು ಹೊಂದಿ ಯಾರನ್ನೂ ದ್ವೇಷಿಸದೇ ನಮ್ಮ ಕಾಲವನ್ನು ಫಲಪ್ರದಗೊಳಿಸಬೇಕಿದೆ.
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಜೂನ್ 26, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಬುಧವಾರ, ಮೇ 15, 2019

                               ಬೇರು ತೇರು

ಬೇರು ತೇರು

ಸಂಪಾದನೆ : ಮಂಜುನಾಥ ಡಿ. ಎಸ್.
ರವಿಶಂಕರ ಎ.ಕೆ.
ಅನಿತ ಕೆ.ವಿ.

ಪ್ರಕಾಶನ : ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ರಿ)., ಬೆಂಗಳೂರು.

ಬೆಲೆ : ೨೨೦ರೂಗಳು


'ಬೇರು ತೇರು' 

ಇದೊಂದು ಅಪೂರ್ವ ಕೃತಿಯಾಗಿದೆ. ಕನ್ನಡ ಸಾಹಿತ್ಯದ ಪ್ರಾರಂಭದ ಗದ್ಯ ಬರಹಗಾರರಲ್ಲಿ ಕುವೆಂಪು ಹಾಗೂ ಬೇಂದ್ರೆ ಪ್ರಮುಖರು. ಇವರ ಗದ್ಯ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಂಶೋಧನಾ ಲೇಖನಗಳನ್ನು ಕರ್ನಾಟಕ ಹಾಗೂ ಹೊರರಾಜ್ಯಗಳ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧಕರು ರಚಿಸಿದ್ದಾರೆ.
ಇದರಲ್ಲಿರುವ ಲೇಖನಗಳ ರಚನೆಯಲ್ಲಿ ಕುವೆಂಪು ಬೇಂದ್ರೆ ಅವರು ರಚಿಸಿದ ನಾಟಕ, ಕಥೆ, ಭಾಷಣ, ಲೇಖನ, ಕಾದಂಬರಿ, ಮೀಮಾಂಸೆ, ವಿಮರ್ಶಾತ್ಮಕ ಕೃತಿಗಳನ್ನು ಲೇಖಕರು ಅನುಲಕ್ಷಿಸಿದ್ದಾರೆ. ಈ ಕೃತಿಯನ್ನು ಮಂಜುನಾಥ ಡಿ. ಎಸ್., ರವಿಶಂಕರ ಎ.ಕೆ., ಅನಿತ ಕೆ.ವಿ ಸಂಪಾದಿಸಿದ್ದಾರೆ.
ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಪ್ರಕಟಿಸಿದ ಮೊದಲ ಕೃತಿ ಇದು.

ಕನ್ನಡ ಸಾಹಿತ್ಯದಲ್ಲಿ ಕುವೆಂಪು ಬೇಂದ್ರೆ ಅವರ ಗದ್ಯಸಾಹಿತ್ಯದ ಅಧ್ಯಯನಕ್ಕೆ ಮೀಸಲಾದ ಮೊದಲ ಕೃತಿ.

ದಿನಾಂಕ ೧೧,೧೨ ಮೇ ೨೦೧೯ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಬೇರು ತೇರು ಕೃತಿಯು ಬಿಡುಗಡೆಗೊಂಡು ಅಧಿವೇಶನಗಳ ರೂಪದಲ್ಲಿ ಚರ್ಚಿಸಲಾಯಿತು. ವಿವಿಧ ವಿಷಯ ತಜ್ಞರು ಈ ಕೃತಿ ಕುರಿತು ವಿಚಾರಗಳನ್ನು ಮಂಡಿಸಿದರು.

ಕಾರ್ಯಕ್ರಮದ ಚಿತ್ರಗಳು

















Posted by ಡಾ. ರವಿಶಂಕರ್ ಎ.ಕೆ. ಅಂಕುರ on ಮೇ 15, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
Labels: ಬೇರು ತೇರು
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಮಂಗಳವಾರ, ಫೆಬ್ರವರಿ 12, 2019

ಬೇಂದ್ರೆ ಕಾವ್ಯ : ಪದನಿರುಕ್ತ ಲೋಕಾರ್ಪಣೆ

ಕಿಟೆಲ್ ಕೋಶದಂತೆ ಕನ್ನಡದಲ್ಲಿ ಮತ್ತೊಂದು ಸೇವೆ ಎಂದರೆ ಕೃಷ್ಣಪ್ಪನವರ ಬೇಂದ್ರೆ ಕಾವ್ಯ : ಪದನಿರುಕ್ತ –
ನಾಡೋಜ ಚಂದ್ರಶೇಖರ ಕಂಬಾರರು



ಜರ್ಮನಿಯಿಂದ ಬಂದು ಕನ್ನಡದ ದೇಸಿ ಪದಗಳನ್ನು ಊರೂರು ತಿರುಗಿ ಜನರಿಂದ ಅರ್ಥ ಸಂಗ್ರಹಿಸಿ ಕಿಟೆಲ್ ತಮ್ಮ ಕೋಶವನ್ನು ರಚಿಸಿದನು ಅಂತಹ ಕಾರ್ಯವನ್ನು ಸಮರ್ಥವಾಗಿ ಕೃಷ್ಣಪ್ಪನವರು ಬೇಂದ್ರೆ ಕಾವ್ಯದ ಮೇಲೆ ಮಾಡಿದ್ದಾರೆ ಈ ನಿಮ್ಮ ಕಾರ್ಯಕ್ಕಾಗಿ ಇಡೀ ಕನ್ನಡ ನಾಡು ಕೃತಜ್ಞವಾಗಿದೆ ಎಂದು ಡಾ. ಚಂದ್ರಶೇಖರ ಕಂಬಾರ ಅವರು ಉದಯಭಾನು ಕಲಾಸಂಘ ಎರ್ಪಡಿಸಿದ್ದ ‘ಬೇಂದ್ರೆಕಾವ್ಯ: ಪದನಿರುಕ್ತ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅಭಿಪ್ರಾಯ ಪಟ್ಟರು. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಮತ್ತು ಸಾಮಾಜಿಕವಾಗಿ ಸುಮಾರು ಅರವತ್ತು ವರ್ಷಗಳ ಕಾಲ ಈ ನಗರದಲ್ಲಿ ಅನನ್ಯ ಸೇವೆ ಮಾಡಿದ ಉದಯಭಾನು ಕಲಾಸಂಘದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಇದರ ಕಾರ್ಯವನ್ನು ಯಾವುದೇ ಸಂಸ್ಥೆಗೂ ಹೋಲಿಸಲಾಗದು, ಇದು ‘ಪ್ರಜಾ ಜನ್ಯಕಾರ್ಯ’ ಎಂದು ಗೌರವ ವ್ಯಕ್ತಪಡಿಸಿದರು. ಕುವೆಂಪು, ಬೇಂದ್ರೆ ಮತ್ತು ಪಂಜೆ ಮಂಗೇಶರಾಯರು ಈ ಮೂವರು ಜನಪದದಿಂದ ಸಾಕಷ್ಟು ಸಾಮಾಗ್ರಿಗಳನ್ನು ತಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕನ್ನಡ ಸಾಹಿತ್ಯದ ಸೂರ್ಯಚಂದ್ರರೆಂದು ಇವರಿಬ್ಬರನ್ನು ಕರೆಯುತ್ತಿದ್ದರು ಬೇಂದ್ರೆಯವರು ತುಂಟತನದಿಂದ ನಾನು ಸೂರ್ಯನೋ, ಚಂದ್ರನೋ ಹೇಳಿ ಎಂದು ತಮಾಷೆ ಮಾಡಿದ್ದರು. ಕಿಟೆಲ್ ಜರ್ಮನಿಯಿಂದ ಬಂದು ಜನಸಾಮಾನ್ಯರ ಬಳಿಗೆ ಹೋಗಿ ಪ್ರತಿಯೊಂದು ಪದವನ್ನು ತಿಳಿದವರು ಹೇಳಿ ಎಂದು ಕೇಳುತ್ತಾ ಕಿಟೆಲ್ ಕೋಶ ರಚಿಸಿದರು. ಇವತ್ತಿಗೂ ಶ್ರೇಷ್ಠವಾದ ಕೃತಿಯದು. ಅಂತಹ ಅನನ್ಯವಾದ ಕಾರ್ಯವನ್ನು ಕೃಷ್ಣಪ್ಪನವರು ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ತಪಸ್ಸಿನಂತೆ ಮಾಡಿದ್ದಾರೆ. ಇದು ಬಹಳ ಸಾರ್ಥಕ ಕೆಲಸ ಹಾಗೂ ಇನ್ನೊಬ್ಬರು ಮಾಡಲಾಗದ ಕೆಲಸವಾಗಿ ಕಾಣುತ್ತದೆ. ನಾನೂ ನಿಮಗೆ ಕೃತಜ್ಞನಾಗಿದ್ದೇನೆ ಇದಕ್ಕಿಂತ ಹೆಚ್ಚು ಹೇಳಲಾಗದು ಎಂದು ಗೌರವ ಸಲ್ಲಿಸಿದರು.
‘ಬೇಂದ್ರೆಕಾವ್ಯ : ಪದ ನಿರುಕ್ತ’ ಗ್ರಂಥವನ್ನು ಪರಿಚಯಿಸುತ್ತಾ ಮೂರು ಸಾವಿರ ವರ್ಷಗಳ ಹಿಂದೆ ಸಂಸ್ಕೃತದಲ್ಲಿ ವೇದಗಳಿಗೆ ವ್ಯುತ್ಪತ್ತಿಯನ್ನು ರಚಿಸಿ ನಿರುಕ್ತ ಎಂಬ ಹೆಸರಿನಲ್ಲಿ ಯಾಸ್ಕನು ಬರೆದಿದ್ದಾನೆ. ಇದು ಭಾರತದಲ್ಲಿಯೇ ಇಂತಹ ಕಾರ್ಯ ಇದುವರೆಗೂ ಆಗಿಲ್ಲ. ಕನ್ನಡ ಸಾಹಿತ್ಯದಲ್ಲಿ ಆಧುನಿಕ ಕಾಲದಲ್ಲಿ ಕೃಷ್ಣಪ್ಪನವರ ಬೇಂದ್ರೆಕಾವ್ಯ: ಪದನಿರುಕ್ತ ಬರುವವರೆಗೂ ಇಂತಹ ಕಾರ್ಯ ಮತ್ತೊಂದು ಆಗಿಲ್ಲ. ಒಬ್ಬ ಕವಿಯನ್ನು ಪೂರ್ಣವಾಗಿ ಅಧ್ಯಯನ ಮಾಡಿ ಬೇಂದ್ರೆ ಕಾವ್ಯ ಅಧ್ಯಯನ ಮಾಡುವವರಿಗೆ  ನಿರುಕ್ತ ರಚಿಸಿಕೊಟ್ಟಿದ್ದಾರೆ. ಉಕ್ತ, ಅನುಕ್ತ, ದುರುಕ್ತ ಎಂಬ ಸಂಸ್ಕೃತದಲ್ಲಿ ಒಂದು ಯಾಸ್ಕನ ಕೃತಿ ಮಾತ್ರವಿದೆ. ಒಂದು ಕಾವ್ಯಕ್ಕೆ ಪ್ರವೇಶ ಮಾಡಲು ಅಂತಹ ಕಾರ್ಯವನ್ನು ಸಮಗ್ರವಾಗಿ ನೀಡಿದೆ. ತೆಲುಗಿನಲ್ಲಿ ಇಂತಹ ಹಲವು ಸಾಹಿತಿಗಳ ಮೇಲೆ ಇಂತಹ ಕಾರ್ಯವಾಗಿದೆ. ಕನ್ನಡದಲ್ಲಿ ಒಬ್ಬ ಕವಿಯ ಮೇಲೆ ಆಗಿರುವುದು ವಿಶೇಷ. ‘ಯಾವತ್ತು’ ಎಂಬ ಪದವು ಮೂರು ಅರ್ಥಗಳನ್ನು ಧ್ವನಿಸುತ್ತಾ ಹಲವು ಅರ್ಥಗಳಿಗೆ ದಾರಿ ಮಾಡಿಕೊಡುತ್ತದೆ. ಮೀಮಾಂಸೆಯ ವಾಚ್ಯಾರ್ಥ, ಲಕ್ಷಾö್ಯರ್ಥ, ವ್ಯಂಗ್ಯಾರ್ಥ ಈ ಮೂರು ಅರ್ಥಗಳನ್ನು ತಿಳಿದು ಕಾವ್ಯ ಪ್ರವೇಶ ಮಾಡಬೇಕು. ಈ ಮೂರು ಅರ್ಥದ ಜೊತೆಗೆ ಜನಪದ ಸಾಹಿತ್ಯವನ್ನು ಸೇರಿಸಿ ಬೇಂದ್ರೆ ಕಾವ್ಯವನ್ನು ಪ್ರವೇಶ ಮಾಡುವವರಿಗೆ ದಾರಿ ಮಾಡಿಕೊಟ್ಟಿದ್ದಾರೆ. ಕನ್ನಡದಲ್ಲಿ ಯಾಸ್ಕನ ಆ ಕಾರ್ಯವನ್ನು ನಿರ್ವಹಿಸಿದ್ದಾರೆ. ಈ ಗ್ರಂಥದ ಪ್ರತಿ ಪದವನ್ನು ಪರಿಶೀಲಿಸಿರುವ ನಾನು ನಿರುಕ್ತಎಂಬ ಹೆಸರನ್ನು ನೀಡಿದೆ. ವಿಶ್ವವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಬೇಂದ್ರೆಕಾವ್ಯ ಅಧ್ಯಯನ ಮಾಡಲು ಸದಾ ಜೊತೆಯಲ್ಲಿ ಇಟ್ಟುಕೊಳ್ಳುವ ಕೃತಿಯಾಗಿದೆ. ಬೇಂದ್ರೆ ಕಾವ್ಯಗಳ ಕ್ರಮಾನುಗತಿಯಲ್ಲಿ ಇದರೊಳಗೆ ಅಧ್ಯಯನದಲ್ಲಿ ಅಡ್ಡಿಯಾಗುವ ಪದಗಳನ್ನು ಅರ್ಥ ನೀಡುತ್ತಾ ಸಾಗಿದ್ದಾರೆ. ಒಬ್ಬ ವಿಮರ್ಶಕನಿಗೆ ಈ ಕಾರ್ಯ ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕೃಷ್ಣಪ್ಪನವರು ಬೇಂದ್ರೆಯವರನ್ನು ಪೂರ್ಣವಾಗಿ ತಮ್ಮೊಳಗೆ ಅವಗಾಹನೆ ಮಾಡಿಕೊಂಡು ಹಲವು ಓದಿನಲ್ಲಿ ದಕ್ಕಿಸಿಕೊಂಡು ‘ಬೇಂದ್ರೆ ಕಾವ್ಯಕ್ಕೆ ಸುವರ್ಣ ಪ್ರವೇಶಿಕೆ’ ನೀಡಿದ್ದಾರೆ. ಇದೊಂದು ಸಾರಸ್ವತ ಯಜ್ಞದಂತೆ ಈ ಕಾರ್ಯ ಮಾಡಿದ್ದಾರೆ ಎಂದು ಮಲ  ಪುರಂ ಜಿ. ವೆಂಕಟೇಶ ಅವರು ಕೃತಿಯನ್ನು ತಮ್ಮ ಅಧ್ಯಯನದ ದೃಷ್ಠಿಕೋನದಲ್ಲಿ ಪರಿಚಯಿಸಿದರು.
ಲೇಖಕರಾದ ಡಾ. ಜಿ ಕೃಷ್ಣಪ್ಪನವರು ತಮ್ಮ ಕೃತಿ ರಚನೆ ಕುರಿತು ಚಂದ್ರಶೇಖರ ಕಂಬಾರರಿಂದ ಬಿಡುಗಡೆಯಾದ ಈ ನನ್ನ ಕೃತಿಯು ರಾಷ್ಟç ಗೌರವ ದೊರೆತಂತಾಯಿತು. ಈ ಕೃತಿಯಲ್ಲಿ ನನಗೆ ತಿಳಿದ ಕಾವ್ಯದ ಸವಿಯನ್ನು ಹಂಚಿದ್ದೆÃನೆ. ಮದಗ, ಅಕ್ಕಿ, ಮದಗುಣಕಿ, ಗುಂಭ, ಹಿಂಡವಳ, ಹಡಗದ ಹುಡುಗಿ, ಮಾವಿನ ಪೀಪಿ ಮೊದಲಾದ ಎಲ್ಲಿಯೂ ಅರ್ಥವಿಲ್ಲದ ಪದಗಳನ್ನು ಇಲ್ಲಿ ಮೊದಲಿಗೆ ಪರಿಚಯಿಸಿದ್ದೆÃನೆ. ಬೇಂದ್ರೆಯವರು ಆತ್ಮಕಥೆ ಬರೆದಿಲ್ಲವೆಂದು ಕೆಲವು ಬೀಸು ಹೇಳಿಕೆ ನೀಡುತ್ತಾರೆ ಆದರೆ ಒಬ್ಬ ಕವಿಯನ್ನು ಗದ್ಯದಲ್ಲಿಯೇ ಬರೆಯಬೇಕೆಂದು ಎಳೆಯುತ್ತಾ ನಾವು ಬೇಂದ್ರೆಯವರನ್ನು ಸರಿಯಾಗಿ ಗಮನಿಸಿಲ್ಲ. ಇವರ ಸಖೀಗೀತ, ಬಾಲ್ಯಕಾಂಡ ಮತ್ತು ಹಾಡು ಪಾಡು ಇವು ಮೊದಲ ಬಾರಿಗೆ ಕಾವ್ಯದಲ್ಲಿ ಆತ್ಮಚರಿತ್ರೆ ಬರೆದ ಕವಿ ಆಗಿದ್ದಾರೆ. ಕೃಷ್ಣಪ್ಪನವರು ತಮ್ಮ ಈ ಕೃತಿಯ ಕಾರ್ಯಕ್ಕೆ ಸಹಾಯಕವಾದ ಎಲ್ಲರನ್ನೂ ಅತ್ಯಂತ ಸಹೃದಯತೆಯಿಂದ ಕೃತಿಯನ್ನು ನೀಡುವುದರ ಮೂಲಕ ನೆನಪಿಸಿಕೊಂಡರು.


ಅಧ್ಯಕ್ಷತೆಯನ್ನು ವಹಿಸಿದ್ದ ಪಿ. ವಿ ನಾರಾಯಣ ಅವರು ಹಾಸು ಹೊದ್ದಾಸಿ ಹೊದ್ದವರು, ಕೊಟ್ಟು ತೊಟ್ಟವರು, ಉಂಡು ತೇಗಿದವರು ಎಂಬಂತೆ ತೇಗು ಈ ಪದನಿರುಕ್ತವಾಗಿದೆ. ತುಂಬು ಹೊಳೆಯಲ್ಲಿ ಈಜಿ ಬರುವ ಬಸವನ ಕೊಂಬು ಮಾತ್ರ ಕಾಣುತ್ತದೆ, ನೀರಿನಲ್ಲಿ ಅದರ ಕಾಲಿನ ಶ್ರಮ ಇರುತ್ತದೆ. ಆದೇ ರೀತಿ ಕೃಷ್ಣಪ್ಪನವರು ಶ್ರಮಪಟ್ಟಿದ್ದಾರೆ. ಹಾಗೇಯೆ ಅನಂತರಾಮು, ಶಂಕರ ಮೊಕಾಶಿ ಪುಣೇಕರ ಮೊದಲಾದವರು ಕೃಷ್ಣಪ್ಪನವರ ಕುರಿತ ಮಾತುಗಳನ್ನು ನೆನಪಿಸಿಕೊಂಡರು. ಕನ್ನಡದಲ್ಲಿ ವಿಮರ್ಶಕರು ದಾರಿ ತಪ್ಪಿಸುವ ಕಾರ್ಯ ಮಾಡುತ್ತಾರೆ ಹೊರೆತು ದಾರಿ ತೋರಿಸುವ ಕಾರ್ಯವಲ್ಲ. ಇಲ್ಲಿ ಕೃಷ್ಣಪ್ಪನವರು ಬೇಂದ್ರೆಯವರ ಕಾವ್ಯ ಅನುಸಂಧಾನದಲ್ಲಿ ಯಶಸ್ವಿಯಾಗಲು ನಮ್ಮಂತೆ ಕಾವ್ಯಮೀಮಾಂಸೆಯ ಚೌಕಟ್ಟಿನಲ್ಲಿ ದಾರಿ ತಪ್ಪಿದವರಲ್ಲ. ಅತ್ಯಂತ ಸಹಜವಾಗಿ ಬೇಂದ್ರೆಯವರ ಕಾವ್ಯ ಅನುಭವ ಮೂಲಕವಾದ ಅನುಸಂಧಾನವಾಗಿ ಕರಗತವಾಗಿದೆ, ಅಭ್ಯಾಸ ಪೂರ್ವಕವಾಗಿ ಅಲ್ಲ. ಇವರು ನೀಡುವ ಪದಗಳ ಅರ್ಥ ನನಗೂ ಬೇರೆ ಬೇರೆ ರೀತಿಯಲ್ಲಿ ಅರ್ಥವಾಗಿದೆ. ಬೇಂದ್ರೆ ಇವರಿಗೂ ಕೂಡ ಪೂರ್ಣವಾಗಿ ದಕ್ಕಿಲ್ಲ. ಏಕೆಂದರೆ ಒಬ್ಬ ಕವಿ ಪೂಣವಾಗಿ ಒಬ್ಬರಿಗೆ ದಕ್ಕಿದರೆ ಆ ಕವಿಯನ್ನು ಮತ್ತೆ ಓದುವುದಿಲ್ಲ. ಕುರ್ತಕೋಟಿ, ಆಮೂರ ಮೊದಲಾದವರ ಅಧ್ಯಯನದಲ್ಲಿ ಉಂಟಾದ ತಪ್ಪುಗಳನ್ನು ಗುರ್ತಿಸಿ ಸರಿಯಾದ ಅರ್ಥ ನೀಡಿ ಬೇಂದ್ರೆ ಕಾವ್ಯಕ್ಕೆ ಸಂಪಾದನಾ ಕಾರ್ಯವನ್ನು ಕೂಡ ಮಾಡಿದ್ದಾರೆ. ಈ ಕಾರ್ಯವನ್ನು ಮೆಚ್ಚಿದ ಪುಣೇಕರರು ಇವರ ಕಾರ್ಯಕ್ಕಾಗಿ ಐವತ್ತು ವರ್ಷ ಕಾದಿದ್ದೆÃನೆ ಎಂದು ಹೇಳಿದ ಮಾತನ್ನು ನೆನಪಿಸಿಕೊಂಡರು. ರವದಿ ಎಂಬ ಪದಕ್ಕೆ ಜನಪದ ಅರ್ಥವನ್ನು ಮತ್ತು ಆಧ್ಯಾತ್ಮಿಕ ಅರ್ಥದೊಂದಿಗೆ ಜೋಡಿಸುವ ಕ್ರಮವನ್ನು ನೋಡಬಹುದು ಎಂದರು. ಬೇಂದ್ರೆಯವರನ್ನು ಮಗುವಾಗಿ ಕಂಡು ಯಶೋಧೆಯಾಗಿ ಮಗುವಿನ ಎಲ್ಲಾ ಲೀಲೆಗಳನ್ನು ನೋಡಿದ್ದಾರೆ. ನಾವು ದೇವಕಿಯನ್ನು ಮರೆತು ಯಶೋಧೆಯನ್ನು ಕುವೆಂಪು, ಪುತಿನ ಅವರಿಗೂ ಇಂತಹ ಕಾರ್ಯ ಮಾಡುವ ಯಶೋಧೆ ಸಿಗಲಿ ಎಂದು ಬೇಂದ್ರೆ ಕಾವ್ಯದ ಯಶೋಧೆಯಾದ ಕೃಷ್ಣಪ್ಪನವರಿಗೆ ಅಭಿನಂದಿಸುತ್ತೆÃನೆ ಎಂದರು


ಪ್ರಸ್ತಾವಿಕ ನುಡಿಗಳನ್ನು ನುಡಿದ ಉದಯಭಾನು ಕಲಾ ಸಂಘದ ಕಾರ್ಯದರ್ಶಿಗಳಾದ ನರಸಿಂಹ ಅವರು ಚಂದ್ರಶೇಖರ ಕಂಬಾರರನ್ನು ಕನ್ನಡ ಸಾಹಿತ್ಯದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗೂ ಕನ್ನಡದ ಜ್ಞಾನಪೀಠವೆಂದು ಗೌರವಿಸಿ ಸ್ವಾಗತಿಸಿದರು. ಕೃಷ್ಣಪ್ಪನವರು ಮೊದಲ ಭಾಷಣ ೧೯೭೪ರಲ್ಲಿ ನಮ್ಮ ಉದಯ ಭಾನು ಕಲಾಸಂಘದಲ್ಲಿ ಮಾಡಿದ್ದರು. ಅದು ಬೇಂದ್ರೆ ಸಾಹಿತ್ಯ ಕುರಿತ ಮೊದಲ ಭಾಷಣವಾಗಿತ್ತು. ಯಾವುರಾಕೀ ನೀ ಮಾಯಾಕಾರತಿ ಕವಿತೆಯನ್ನು ಜನಪದ ಕಂಸಾಳೆಗೆ ಅಳವಡಿಸಿದ್ದರು ಎಂದರು. ಈ ಎಲ್ಲಾ ಕಾರ್ಯಗಳÀನ್ನು ನೆನಪಿಸಿಕೊಳ್ಳುತ್ತಾ ಉದಯಭಾನು ಕಲಾ ಸಂಘವು ನಾಡಿನಲ್ಲಿ ಶ್ರೆÃಷ್ಠ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಬಗೆಯನ್ನು, ಸಾರ್ವಜನಿಕ ಸೇವೆಯನ್ನು ನೆನಪಿಸಿಕೊಂಡರು. ಬೇಂದ್ರೆಯವರ ಕಾವ್ಯವನ್ನು ನಿರಂತರವಾಗಿ ಅಧ್ಯಯನ, ಪರಿಚಾರಿಕೆ ಮಾಡಿದ ಕೃಷ್ಣಪ್ಪನವರ ಸೇವೆಗೆ ೨೦೧೬ರಲ್ಲಿ ನಮ್ಮ ಸಂಘವು ಇವರು ರಚಿಸಿರುವ ಸಾಹಿತ್ಯ ಕುರಿತು ವಿಚಾರ ಸಂಕಿರಣ ಏರ್ಪಡಿಸಿ ‘ಕಾವ್ಯಶೋಧಕ’ ಗೌರವ ಗ್ರಂಥ ಅರ್ಪಿಸಿದೆ. ಈಗ ವಂಶಿ ಪ್ರಕಾಶನದ ಜೊತೆಗೆ ಬೇಂದ್ರೆಕಾವ್ಯ: ಪದನಿರುಕ್ತ ಬಿಡುಗಡೆ ಮಾಡುತ್ತಿದೆ ಎಂದು ಸಂತೋಷಪಟ್ಟರು. ಗಣ್ಯರಾದ ಕೃತಿಯನ್ನು ಲೋಕಾರ್ಪಣೆ ಮಾಡಿದ ಚಂದ್ರಶೇಖರ ಕಂಬಾರರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿ.ವಿ ನಾರಾಯಣ, ಗ್ರಂಥ ಪರಿಚಯ ಮಾಡಿದ ವಿಶ್ರಾಂತ ಕುಲಪತಿ ಮಲ್ಲೆÃಪುರಂ ಜಿ. ವೆಂಕಟೇಶ್, ಸಂಘದ ಅಧ್ಯಕ್ಷರಾದ ಬಿ. ಕೃಷ್ಣ ಅವರು, ವಂಶಿ ಪ್ರಕಾಶನದ ಮಾಲೀಕರಾದ ಎನ್. ಪ್ರಕಾಶ್ ಅವರನ್ನು ಉದಯಭಾನು ಕಲಾಸಂಘದ ವತಿಯಿಂದ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ನಾಗಚಂದ್ರಿಕಾ ಭಟ್ ಹಾಗೂ ಸಂಗಡಿಗರು ಬೇಂದ್ರೆ ಕಾವ್ಯ ಗಾಯನ ಮಾಡಿದರು. ಸಂಘದ ಕಾರ್ಯಾಧ್ಯಕ್ಷರಾದ ಸತ್ಯನಾರಾಯಣ ಅವರು ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. 
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಫೆಬ್ರವರಿ 12, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
Labels: ಬೇಂದ್ರೆ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಸೋಮವಾರ, ಜನವರಿ 14, 2019

ನಾ ಕಂಡ ಸಂಕ್ರಾಂತಿ

ಸೂರ್ಯನು ಉತ್ತರಾಯಣಕೆ
ಬರುವನೋ ಬಿಡುವನೋ
ಕಾಂತಿ ಕಡಿಮೆಯಾಗಿಲ್ಲ...
ಚಳಿಗೆ ಹೊದಿಕೆ ಬಂದಿಲ್ಲ...
ಹನ್ನೆರಡು ರಾಶಿಯ ಹೆಜ್ಜೆ
ಇಡುವನೋ ಬಿಡುವನೋ
ನನಗೆ ತಿಳಿದಿಲ್ಲ...
ರೈತನಂತೂ ಹನ್ನೆರಡು ತಿಂಗಳ
ಕಳೆದು ಸುಗ್ಗಿಗೆ ಬಂದ...
ವರ್ಷದ ಬೆವರನ್ನು ಕೂಡಿಡುವ
ಸಮಯವಿದು
ಹರ್ಷದ ಸುಗ್ಗಿಯ ಕಾಲಮೇಳ

ಕಥೆಯ ಸುಗ್ಗಿಯು ಈಗ
ಕಥೆಯಾಗಿ ಮರೆಯಾಯ್ತು
ಸುಲಭ ದಾರಿಯ ಬೆಳೆಯ
ಲಾಭ ಬಂದಾಯ್ತು..
ಕಣಗಳೆಲ್ಲಾ ರಸ್ತೆಗೆ ಬಂದು
ಮೇಟಿ-ಕೋಲುಗಳೆಲ್ಲಾ
ಯಂತ್ರದಲಿ ಮರೆಯಾಗಿ
ಉಳಿದದ್ದು ರೈತನಿಗೆ ಒಕ್ಕಲೂಟ
ದನಕರುಗಳೆಲ್ಲಾ ಸಂತೆಯಲಿ
ವ್ಯಾಪಾರ
ಉಳಿದದ್ದು ವಾಣಿಯಲಿ
ಹರಿಕಥೆಯ ಸಾರ..
ಸಂಕ್ರಾಂತಿ ಎಂಬುದು
ಹಳ್ಳಿಯ ಹಬ್ಬ!
ಸುಗ್ಗಿಗೂ ಸಂಭ್ರಮದ
ವಸಂತ ಕಬ್ಬ!
ಬರೀ ತೋರಣ ಬರದಿರಲಿ
ಮನಸುಗಳು ಇತಿಹಾಸ
ಮರಳಿ ತರಲಿ..
ಸುಲಭ ಬದುಕಿಗೆ
ಬೆವರ ಕ್ರಾಂತಿ ಇರಲಿ.-
ಅಂಕುರ ೧೫/೦೧/೨೦೧೯
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಜನವರಿ 14, 2019 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ
ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಕಾಮೆಂಟ್‌ಗಳು (Atom)

ಬರಹವೆಂಬ ಬೆವರು...

ನನ್ನ ಫೋಟೋ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ

ಬ್ಲಾಗ್ ಆರ್ಕೈವ್

  • ಸೆಪ್ಟೆಂ 30 (3)
  • ಅಕ್ಟೋ 03 (2)
  • ಜನ 15 (2)
  • ಜೂನ್ 21 (1)
  • ಜುಲೈ 17 (1)
  • ಜುಲೈ 18 (1)
  • ಜುಲೈ 20 (1)
  • ಜುಲೈ 22 (1)
  • ಜುಲೈ 24 (1)
  • ಜುಲೈ 26 (1)
  • ಜುಲೈ 31 (1)
  • ಆಗ 06 (1)
  • ಆಗ 13 (2)
  • ಆಗ 20 (1)
  • ಆಗ 27 (1)
  • ಅಕ್ಟೋ 09 (1)
  • ಆಗ 24 (1)
  • ಸೆಪ್ಟೆಂ 02 (2)
  • ಡಿಸೆಂ 25 (1)
  • ಜನ 14 (1)
  • ಫೆಬ್ರ 12 (1)
  • ಮೇ 15 (1)
  • ಜೂನ್ 26 (1)
  • ಜುಲೈ 31 (1)
  • ಆಗ 08 (1)
  • ಆಗ 12 (1)
  • ಆಗ 16 (1)
  • ಆಗ 23 (3)
  • ಜನ 15 (1)
  • ಜನ 19 (1)
  • ಜನ 22 (1)
  • ಫೆಬ್ರ 08 (1)
  • ಫೆಬ್ರ 22 (1)
  • ಏಪ್ರಿ 05 (1)
  • ಏಪ್ರಿ 08 (1)
  • ಮೇ 25 (1)
  • ಜೂನ್ 13 (1)
  • ಜೂನ್ 15 (1)
  • ಜೂನ್ 19 (2)
  • ಜೂನ್ 29 (1)
  • ಜುಲೈ 04 (1)
  • ಆಗ 11 (2)
  • ಆಗ 14 (1)
  • ಆಗ 20 (1)
  • ಅಕ್ಟೋ 13 (1)
  • ಅಕ್ಟೋ 27 (1)
  • ಫೆಬ್ರ 26 (1)
  • ಮಾರ್ಚ್ 21 (1)
  • ಮೇ 17 (1)
  • ಮೇ 24 (1)
  • ಅಕ್ಟೋ 14 (1)
  • ಜನ 26 (1)
  • ಮೇ 31 (1)
  • ಜೂನ್ 01 (1)
  • ಜುಲೈ 02 (1)
  • ಜುಲೈ 04 (1)
  • ಜುಲೈ 17 (1)
  • ಅಕ್ಟೋ 02 (1)
  • ಅಕ್ಟೋ 25 (1)
  • ಅಕ್ಟೋ 26 (1)
  • ಮೇ 08 (1)
  • ಮೇ 09 (1)
  • ಮೇ 10 (1)
  • ಮೇ 11 (1)
  • ಮೇ 18 (7)
  • ಮೇ 20 (2)
  • ಮೇ 22 (2)
  • ಜೂನ್ 02 (15)
  • ಜೂನ್ 03 (2)
  • ಜೂನ್ 05 (3)
  • ಜೂನ್ 07 (3)
  • ಜೂನ್ 12 (8)
  • ಜೂನ್ 17 (14)
  • ಜೂನ್ 18 (1)
  • ಅಕ್ಟೋ 12 (2)
  • ಅಕ್ಟೋ 13 (1)
  • ಅಕ್ಟೋ 14 (1)
  • ಅಕ್ಟೋ 15 (1)
  • ಅಕ್ಟೋ 16 (1)
  • ಅಕ್ಟೋ 21 (1)
  • ಅಕ್ಟೋ 24 (1)
  • ಡಿಸೆಂ 18 (1)
  • ಏಪ್ರಿ 12 (1)
  • ಮೇ 10 (1)
  • ಜೂನ್ 17 (2)
  • ಅಕ್ಟೋ 14 (1)
  • ಜನ 25 (1)

ಸಾಹಿತ್ಯ ಕಾರ್ಯ

  • ಇರುವ ಭಾಗ್ಯವ ನೆನೆದು
  • ಬೇಂದ್ರೆ
  • ಬೇರು ತೇರು
  • ಮೆಚ್ಚುವ ಕಾರ್ಯವಿದು
  • ಮೆಟ್ರೋ ಕಥನ

ನಿಂದನೆ ವರದಿ ಮಾಡಿ

ಲೇಬಲ್‌ಗಳು

  • ಇರುವ ಭಾಗ್ಯವ ನೆನೆದು
  • ಬೇಂದ್ರೆ
  • ಬೇರು ತೇರು
  • ಮೆಚ್ಚುವ ಕಾರ್ಯವಿದು
  • ಮೆಟ್ರೋ ಕಥನ

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

  • ಮುಖಪುಟ

ಆಧ್ಯಾತ್ಮದೊಂದಿಗೆ ಗಣರಾಜ್ಯದ ಚಿಂತನೆಗಳು

ಜೀವನ ಪ್ರೀತಿ

ಸಾಹಿತ್ಯವು ಜೀವನದ ಸಂಸ್ಕೃತಿ

ಪ್ರಚಲಿತ ಪೋಸ್ಟ್‌ಗಳು

  • ವಚನಗಳ ನಿರ್ವಚನ
    ವಚನಗಳ ನಿರ್ವಚನ     ದಾಸಿಮಯ್ಯ ಎಂಬುದು ಶ್ರದ್ಧೆ, ಭಕ್ತಿ, ಸೂಕ್ಷ್ಮತೆಯ ಸಂಕೇತ. ವಚನ ಸಾಹಿತ್ಯದಲ್ಲಿ ಅತ್ಯಂತ ಸರಳವಾಗಿ ವಚನಗಳನ್ನು ತಿಳಿಸಿ ಸಮಾಜದ ಆರೋಗ್ಯಕ್ಕಾಗ...
  • 'ಪಂಚಗವ್ಯ' ಎಂಬ ಹೊಸ ರಂಗನಾಟಕ ಪ್ರಯೋಗ...
      ಪಂಚಗವ್ಯ ಎಂಬ ಹೊಸ ರಂಗನಾಟಕ  ಪ್ರಯೋಗ...    ಪುರಾಣದೊಳಗೆ ಪ್ರವೇಶ ಮಾಡುವ ಪಂಚಗವ್ಯ ನಾಟಕವು ವಿಭಿನ್ನ ಮನೋಭಿತ್ತಿಯ ಪ್ರಯೋಗ. ಅಧ್ಯಯನ, ಪ್ರಯೋಗಗಳ ಮೂಲಕ ಇದುವರೆಗೂ ಹಲವ...
  • ವಿಹಾರಿಕಾ ಎಂಬ ಪ್ರವಾಸ ಪರಿಧಿ
      ವಿಹಾರಿಕಾ ಎಂಬ ಪ್ರವಾಸ ಪರಿಧಿ ಏನು ಸವಿಯೊ ಅದನೆ ಕುಡಿ ನಿನ್ನ ರುಚಿಯ ಹದವ ಹಿಡಿ ನನ್ನನೇನು ಕೇಳುವೆ,  ಆದರೂನು ಹೇಳುವೆ -ದ.ರಾ ಬೇಂದ್ರೆ ಪ್ರವಾಸವು ಮನುಷ್ಯನ ಉಗಮದಿಂದಲ...

ಕ್ಲಿಕ್ ಮಾಡಿ ಜೀವನ ಪ್ರೀತಿಯ ಬರಹಗಳನ್ನು ತಕ್ಷಣ ಪಡೆಯಿರಿ.

ಪೋಸ್ಟ್‌ಗಳು
Atom
ಪೋಸ್ಟ್‌ಗಳು
ಕಾಮೆಂಟ್‌ಗಳು
Atom
ಕಾಮೆಂಟ್‌ಗಳು
ಆಸಮ್‌‌ ಇಂಕ್‌. ಥೀಮ್. molotovcoketail ಅವರಿಂದ ಥೀಮ್ ಚಿತ್ರಗಳು. Blogger ನಿಂದ ಸಾಮರ್ಥ್ಯಹೊಂದಿದೆ.