ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಜನವರಿ 26, 2022

 ಗಾಂಧಿ

ಅಪರೂಪದ ಚಿತ್ರಗಳು


'ಬೆಂಕಿ ಬೇರೆ! ಬೆಳಕು ಬೇರೆ!
ಬಣ್ಣ ಬೇರೆ! ಬಿಡಿಬಿಡಿಸಿ,
ತಿಳಿತಿಳಿಸಿ ಹೇಳಿದ ಮಹಾತ್ಮ...'

~ ದ.ರಾ. ಬೇಂದ್ರೆ


ಓ ಮಹಾತ್ಮನೆ, ನಿನ್ನ ಸಾನ್ನಿಧ್ಯತೀರ್ಥದಲಿ ಮಾನವನ ಮೋಹಮದಮಾತ್ಸರ್ಯಗಳು ಮಿಂದು ಪ್ರೇಮದಿ ಪುನೀತವಾಗಿಹವು! ಸುಮುಹೂರ್ತದಲಿ ~ ಕುವೆಂಪು



ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
* * *
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ

~ ಪುತಿನ

'ಇನ್ನಿನಿಸು ನೀ ಮಹಾತ್ಮ ಬದುಕಬೇಕಿತ್ತು ಈಗ ಭಾರತಕಗತ್ಯವಿದೆ ನಿನ್ನ ಬಿರುಗಾಳಿಗೊಲೆವ ಹಡಗದಂತಿಹುದಾಸತ್ತು' ~ ಗೋವಿಂದ ಪೈ


ನಿನ್ನ ಹೆಸರಿಡಬಹುದು ಬೀದಿಬೀದಿಗೆ, ಸುಲಭ; ನಿನ್ನಂತೆ ಬದುಕುವುದು ದುರ್ಲಭ . ನಿನ್ನ ಹೆಸರೆತ್ತಿದರೆ, ನಿನ್ನ ಮಾತಾಡಿದರೆ ನಿನ್ನ ವೈರಿಗೆ ಕೂಡ ಲಾಭ ~ ಕೆ.ಎಸ್.ನ.





















ಗುರುವಾರ, ಅಕ್ಟೋಬರ್ 14, 2021

ಆಳಾಗ ಬಲ್ಲವನು ಆಳುವನು

 

ಆಳಾಗ ಬಲ್ಲವನು ಆಳುವನು

ಕಾಯಕವು ಉಳ್ಳನಕ| ನಾಯಕನು ಎನಿಸಿಪ್ಪ|

ಕಾಯಕವು ತೀರ್ದ ಮರುದಿನವೆ ಸುಡಗಾಡ

ನಾಯಕನು ಎನಿಪ ಸರ್ವಜ್ಞ||

ಕಾಯಕ ಎಂದರೆ ಕೆಲಸ. ಎಲ್ಲರೂ ಯಾವುದೇ ಒಂದು ಉದ್ಯೋಗವನ್ನು ಮಾಡಬೇಕು. ಆಗ ತಾನೇ ನಾಯಕನಾಗುತ್ತಾನೆ. ಇನ್ನೊಬ್ಬರನ್ನು ಬೇಡದೆ ಬದುಕಬಹುದು. ಕಾಯಕ ಇಲ್ಲದೆ ನಿರುದ್ಯೋಗಿಯಾದರೆ ಯಾವ ಪ್ರಯೋಜನಕ್ಕೂ ಬಾರನು. ಸುಡುಗಾಡಿನ ಅಂದರೆ ಶ್ಮಶಾನದ ನಾಯಕನಂತೆ ಅಪ್ರಯೋಜಕನಾಗುತ್ತಾನೆ. ನಾವು ಬದುಕಬೇಕೆಂದರೆ ಯಾವುದೇ ಒಂದು ಕಾರ್ಯವನ್ನು ಭೇದವಿಲ್ಲದೆ ನಿರ್ವಹಿಸಬೇಕು.

ಆಳಾಗ ಬಲ್ಲವನು ಆಳುವನು ಅರಸಾಗಿ

ಆಳಾಗಿ ಬಾಳಲರಿಯದವನು-ಕಡೆಯಲ್ಲಿ

ಹಾಳಾಗಿ ಹೋಹ ಸರ್ವಜ್ಞ

ಯಾವುದೇ ಕೆಲಸವನ್ನು ಒಲವು ನಲಿವಿನಿಂದ ಮಾಡಬಲ್ಲವನು ಮಾತ್ರ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾನೆ ಎಂಬುದನ್ನು ಹೇಳಲಾಗಿದೆ. ಆಳಾಗಿ ದುಡಿ ಅರಸಾಗಿ ಉಣ್ಣು ಎಂಬ ಗಾದೆ ಇದೆ. ಕಷ್ಟಪಟ್ಟು ದುಡಿದರೆ ಮಾತ್ರ ಅದಕ್ಕೆ ಸೂಕ್ತವಾದ ಪ್ರತಿಫಲ ದೊರೆಯುವುದು. ದುಡಿಮೆಯ ಪ್ರತಿಫಲದಿಂದ ಲಾಭ ಬರುತ್ತದೆ. ಕನಸಿನ ಎಲ್ಲವನ್ನೂ ಸೃಷ್ಟಿಸಿಕೊಳ್ಳಬಹುದು. ನಾಲ್ಕಾರು ಜನಕ್ಕೆ ಉದ್ಯೋಗವನ್ನೂ ಕೂಡ ನೀಡಬಹುದು. ಕಷ್ಟಪಟ್ಟು ಆಳಿನಂತೆ ದುಡಿಯಲು ಇಚ್ಚಿಸದೆ ಸೋಮಾರಿಯಾದರೆ ಕೊನೆಗೆ ಆಳಾಗಿ ಹೋಗುವನು ಎಂದಿದ್ದಾರೆ ಸರ್ವಜ್ಞ.

ಅಲಸಿಕೆಯಲಿರುವಂಗೆ| ಕಲಸಲಂಬಲಿಯಿಲ್ಲ

ಕೆಲಸಕ್ಕೆ ಅಲಸದಿರುವಂಗೆ ಬೇರಿಂದ

ಹಲಸು ಕಾತಂತೆ ಸರ್ವಜ್ಞ||

ಸೋಮಾರಿತನವನ್ನು ಸರ್ವಜ್ಞ ಇಲ್ಲಿ ವಿರೋಧಿಸಿದ್ದಾನೆ. ಸೋಮಾರಿಗಳು ಕೆಲಸಮಾಡದೆ, ಆಲಸ್ಯದಿಂದ(ಸೋಮಾರಿತನ) ಇದ್ದರೆ ತಿನ್ನಲು ಅನ್ನ ಸಿಗುವುದಿಲ್ಲ. ಯಾವುದೇ ಕೆಲಸವಾಗಲಿ ಆಲಸ್ಯ ತೋರದೆ, ಆಸಕ್ತಿ ತೋರಿದರೆ ಶ್ರೀಮಂತಿಕೆ ತಾನಾಗಿಯೇ ದೊರೆಯುತ್ತದೆ. ಅದು ಅಲಸಿನ ಮರವು ಬೇರಿನಿಂದಿಲ್ಲಾ ಅಲಸಿನ ಹಣ್ಣು ಬಿಡುತ್ತಾ ಸಂಭ್ರಮಿಸುವಂತೆ ಕ್ರಿಯಾಶೀಲವ್ಯಕ್ತಿ ಸದಾ ಆನಂದದಲ್ಲಿರುತ್ತಾನೆ.

ಉದ್ಯೋಗ ಉಳ್ಳವನ| ಹೊದ್ದುವುದು ಸಿರಿಬಂದು

ಉದ್ಯೋಗವಿಲ್ಲದಿರುವವನ ಕರದೊಳಗೆ

ಇದ್ದುದೂ ಪೋಕು ಸರ್ವಜ್ಞ||

ಉದ್ಯೋಗ ಇರುವವನು| ಬಿದ್ದಲ್ಲಿ ಬಿದ್ದಿರನು|

ಹದ್ದು ನೆವನವನು ಈಡಾಡಿ ಹಾವ ಕೊಂದೆದ್ದು

ಹೋದಂತೆ ಸರ್ವಜ್ಞ||

        ಈ ಮೇಲಿನ ಎರಡೂ ವಚನಗಳು ಉದ್ಯೋಗವನ್ನು ಕುರಿತು ತಿಳಿಸುತ್ತವೆ. ಕಾಯಕವೇ ಕೈಲಾಸವೆಂದರು ಬಸವಣ್ಣ. ಕಾಯಕವಿದ್ದರೆ ನಾಲ್ಕಾರು ಜನ ನಮ್ಮನ್ನು ಗೌರವಿಸುತ್ತಾರೆ.

ಶ್ರೀಮಂತಿಕೆಯು ತಾನಾಗಿಯೇ ಬರುತ್ತದೆ. ಇರುವ ಬಡತನವ ಕಳೆದು, ತನ್ನ ಕನಸುಗಳನ್ನು ಸಾಕಾರಗೊಳಿಸಬಹುದು. ಇಂದು ವಿದ್ಯೆಯು ಉದ್ಯೋಗ ನಿಮಿತ್ತವಾಗಿ ಸಂಘಟಿತಗೊಂಡಿದೆ. ಉತ್ತಮ ಜ್ಞಾನವಿಲ್ಲದೆಯೂ ಉದ್ಯೋಗ ಲಭಿಸದು. ಇರುವ ಉದ್ಯೋಗವೂ ಇಲ್ಲವಾಗುತ್ತದೆ. ಇರುವ ಸಂಪತ್ತನ್ನು ಸೋಮಾರಿತನದಲ್ಲಿ ಖಾಲಿ ಮಾಡುತ್ತಾ ಬಡವನಾಗುತ್ತಾನೆ, ಬಿಕ್ಷುಕನೂ ಆಗಿಬಿಡುತ್ತಾನೆ. ಉದ್ಯೋಗವನ್ನು ನಾವೇ ಸೃಷ್ಟಿಮಾಡಿಕೊಳ್ಳಬೇಕು. ಅದಕ್ಕೆ ಉತ್ತಮ ಶಿಕ್ಷಣ, ತರಬೇತಿಯೂ ಮುಖ್ಯ. ಇಂತಹ ಕ್ರಿಯಾಶೀಲರು ಎಂದಿಗೂ ಸೋಮಾರಿಗಳಾಗದೆ ಸದಾ ಯಾವುದಾದರೊಂದು ಉದ್ಯೋಗವನ್ನು ಸೃಷ್ಟಿಸಿಕೊಳ್ಳುತ್ತಾರೆ. ಸೋಮಾರಿಯು ಆಲಸ್ಯ, ನಿದ್ರೆಯಲ್ಲಿ ಕಾಲಕಳೆಯುತ್ತಾನೆ. ಕ್ರಿಯಾಶೀಲವ್ಯಕ್ತಿತ್ವವು ಯಾವುದಾದರೊಂದು ಉದ್ಯೋಗದಲ್ಲಿ ನಿರತನಾಗುತ್ತಾನೆ. ಅಂತಹ ಮನಸ್ಸನ್ನು ಸರ್ವಜ್ಞನನು ‘ಆಕಾಶದಿಂದಲೇ ಸಂಚು/ಉಪಾಯವನ್ನು ಮಾಡಿ ಭೂಮಿಯಲ್ಲಿ ಸಾಗುವ ಹಾವನ್ನು ವೇಗವಾಗಿ ಬಂದು ಹಿಡಿದು, ಕೊಂದು ಹೊತ್ತೊಯ್ಯುವಂತೆ’ ಯಾವುದೇ ಅವಕಾಶವನ್ನೂ ಬಿಡದೆ ಉಪಾಯದಿಂದ ಬಳಸಿಕೊಳ್ಳುವುದು ಕ್ರಿಯಾಶೀಲ ವ್ಯಕ್ತಿತ್ತ್ವವಾಗಿರುತ್ತದೆ.

 ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು

ಮೇಟಿಯಿಂ ರಾಟೆ ನಡೆದುದಲ್ಲದೆ-ದೇಶ

ದಾಟವೆ ಕೆಡುಗು ಸರ್ವಜ್ಞ

ಜೀವಿಗಳ ಹಸಿವನ್ನು ತಣಿಸುವುದಕ್ಕಾಗಿ ದವಸದಾನ್ಯಗಳನ್ನು ಬೆಳೆಯುವ ಬೇಸಾಯದ ವಿದ್ಯೆಯೇ ಮಾನವನ ಎಲ್ಲಾ ಬಗೆಯ ಕಸುಬುಗಳಿಗಿಂತಲೂ ಮೇಲು/ದೊಡ್ಡದೆಂಬುದನ್ನು ಹೇಳಲಾಗಿದೆ .

ಮೇಟಿ ವಿದ್ಯೆ ಎಂದರೆ ಬೇಸಾಯವನ್ನು ಮಾಡುವ ಕುಶಲತೆ ಮತ್ತು ಕಸುಬು. ಮೇಟಿ=ರಾಗಿ/ಬತ್ತ/ಜೋಳ ಮುಂತಾದ ಬೆಳೆಗಳನ್ನು ಒಕ್ಕಣೆ ಮಾಡುವಾಗ ಕಣದ ನಟ್ಟನಡುವೆ ನೆಡುವ ಮರದ ದಪ್ಪನೆಯ ಕಂಬ. ರಾಟೆ ಎಂದರೆ ನೂಲು ತೆಗೆಯುವ ಚರಕ/ಗಾಲಿ/ಚಕ್ರ. ಮೇಟಿಯಿಂದ  ರಾಟೆ ನಡೆಯುವುದು ಎನ್ನುವುದು ಒಂದು ನುಡಿಗಟ್ಟು. ಕೆಲಸಗಳು ಚೆನ್ನಾಗಿ ನಡೆಯುವುದು ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ. ಮೇಟಿಯಿಂ ರಾಟಿ ನಡೆದುದು ಎಂದರೆ ಬೇಸಾಯದಿಂದಲೇ ದೇಶದ ಸಾಮಾಜಿಕ ಬದುಕು, ಸಂಸ್ಕೃತಿ ಮತ್ತು ನಾಗರೀಕತೆಗಳು ಉಳಿದು ಬೆಳೆದು ಬಾಳುತ್ತಿವೆ. ಬೇಸಾಯ ನಡೆಯದಿದ್ದರೆ ದೇಶದ+ಆಟವೇ=ದೇಶದ ಎಲ್ಲಾ ಬಗೆಯ ಚಟುವಟಿಕೆಗಳು  ಕೂಡ  ಕೆಡುಗು=ನಾಶವಾಗುತ್ತವೆ/ಹಾಳಾಗುತ್ತವೆ ಎಂದರ್ಥ. ಕೃಷಿಯನ್ನು ಕುರಿತು ಹೇಳುವ ಸರ್ವಜ್ಞನು ಕೃಷಿಯೇ ದೇಶಕ್ಕೆ ಮೂಲ ಎಂದು ತೀರ್ಮಾನಿಸಿರುವುದು ಸತ್ಯವೆನಿಸುತ್ತದೆ.



ಸೋಮವಾರ, ಮೇ 24, 2021

ಕಳಚಿಬಿಡು ನೋವು - ಅಂಕುರ

 ಕಳಚಿಬಿಡು ನೋವು - ಅಂಕುರ


ಪಡೆವ ಪ್ರೀತಿಗಳಂತೆ

ಕಳಚುವವು ಮಮತೆಗಳು

ಅಗಲಿಕೆಯು ಅನಿವಾರ್ಯ

ಅರ್ಥ ಮಾಡಿಕೊ ಮನವೆ




ಗೂಡು ಕಟ್ಟುವ ಹಕ್ಕಿ

ಕರುವನಾಕುವ ಪ್ರಾಣಿ

ಕಳಚುವ ಸಂಸಾರ, ತಿಳಿದುಕೊ ವಿಚಾರ

ಸೃಷ್ಟಿಗಳೆಲ್ಲಾ ನಾಶವಾಗಲೇಬೇಕು.

ಹೊಸಪ್ರೀತಿಗೆ ಮನಸು 

ಹೊಂದಿಕೊಳ್ಳಲೇಬೇಕು

ಇದೇ ನಿತ್ಯ ಸತ್ಯ ಪ್ರಕಾರ.


ಗಡಿಯಾರದೋಟಕ್ಕೆ ಅರ್ಥವೇ ಇಲ್ಲ

ಹಣದ ಹಂಬಲಕೆ ಸೂತಕವೆ ಎಲ್ಲ

ಲೋಕದಸಿವನು ಕಣ್ತೆರದು ನೋಡು

ಸತ್ತವರಿಗಿಂತ, ಬದುಕಿ ಸಾಯುವರೆ ಜಾಸ್ತಿ.

ಎನ್ನಸಿವು, ನೋವುಗಳು ಲೆಕ್ಕವಲ್ಲ.


ನೆನಪುಗಳಿಗೆ ಅರ್ಥ ಹುಡುಕದೆ,

ಇರುವ ಸತ್ಯಗಳ ಒಪ್ಪಬೇಕಿದೆ.

ಭವಿಷ್ಯವೇ ಕಾಣದ ಜಗತ್ತಿನಲ್ಲಿ,

ಕನಸುಗಳಿಗೆ ಅಲ್ಪವಿರಾಮ ನೀಡಬೇಕಿದೆ.

ನೋವುಗಳು ಏನನ್ನೂ ಸೃಷ್ಟಿಸುವುದಿಲ್ಲ,

ಈಗಾಗಲೇ ಮನೆಗಳು

ಮನಸ್ಸುಗಳು ಖಾಲಿಯಾಗುತ್ತಿವೆ.


ಎಷ್ಟು ದಿನ ಮುಷ್ಟಿ ಗಾತ್ರದಲಿ

ಮುಚ್ಚಿಡುವೆ ಮನವೆ

ನೆನ್ನೆಗೆ ಎಂದಾದರೂ ಅರ್ಥವಿದೆಯೇ!

ನಮಗಿರುವ ಶಕ್ತಿಯಲಿ

ನೋವುಗಳು ಹೊರೆ ತುಂಬಿ

ಹೊರಲೇ ಬೇಕು ನಮ್ಮ ಬದುಕಿಗಾಗಿ.

ನಾಳೆಯ ಹೊಸ ಅರ್ಥಕ್ಕಾಗಿ.

ಸೋಮವಾರ, ಮೇ 17, 2021

ಸಾವು ಮತ್ತು ಬುದ್ಧ

 ಸಾವು ಮತ್ತು ಬುದ್ಧ



ಸಾವಿಲ್ಲದ ಮನೆಯ ಸಾಸಿವೆಯ ತರಬಹುದೆ,

ಸಾವಿನುತ್ತರಕೆ ಶತಮಾನಗಳೇ ಬರಿದು.

ನೊಂದವರಿಗಷ್ಟೆ ಗೊತ್ತು ನೋವಿನ ಬೆಲೆಯು

ಭಯದಲ್ಲೇ ಬರಿದಾಗುತಿದೆ ಸಾವಿನ ನೆಲೆಯು.


ಇದ್ದವರದೊಂದು ಕೂಡಿಡುವ ಚಿಂತೆ

ಜೀವವೆಂದರೆ ಲಾಭ ತುಂಬಿಡುವ ಸಂತೆ

ಸೂತಕದ ಮನೆಯಲ್ಲಿ ದೀಪವೇ ಹೇಳುವುದು

ತಲೆಮಾರು ಕಳೆದರೂ ಅಳಿಸದ ಕಲೆಯೆಂದು


ಸಾಲು ಸಾವುಗಳಲ್ಲಿ, ಚಿತೆಯ ಬೆಂಕಿಯ ಕಥೆಯು

ಮಣ್ಣಲ್ಲಿ ಮಣ್ಣಾದ ಶೋಕ ಸ್ಮಶಾನದ ವ್ಯಥೆಯು


ನೋವೆಂದರೇನು?

ಬರಿಯ ಭ್ರಮೆಯೆ, 

ಅನುಭವದ ಮನೆಯೆ, 

ಹಾಸ್ಯ ಆನಂದಕ್ಕಾಗಿ 

ತುಡಿದ ಜೀವಗಳೆಲ್ಲಾ 

ಒಟ್ಟಿಗೆ ಅಳುವುದು, ಕಷ್ಟ ಶಿವನೆ.


ಕಳೆದ ಕಾಲದ ನೆನಪು

ನನಗೂ ನಿನಗೂ ಸಾವು ಅನಿವಾರ್ಯ.

ಸತ್ಯವನು ಮೊದಲು ತಿಳಿ

ಭ್ರಮೆಗಳನು ಕಳಚಿ ನಡೆ

ಬದುಕು ಹೋರಾಟ. 

ಸತ್ಯದಾಟದಲಿ ನಮದೊಂದು ಪಾತ್ರವಷ್ಟೆ.

- ಅಂಕುರ ೧೬.೦೫.೨೧

ಭಾನುವಾರ, ಮಾರ್ಚ್ 21, 2021

ಕವಿತೆ

 ಕವಿತೆ ...



ಚೆಲುವನ್ನೇ ಪೋಣಿಸಿ

ಬೆರಳ ಲೆಕ್ಕದಲಿ ಗುಣಿಸಿ, ಬಾಗಿಸಿ

ಅಕ್ಷರದ ದಾರಿಯಲಿ ಶಿಸ್ತಾಗಿ 

ನಿಲ್ಲಿಸಿದ ಬೆಳಕು ಕಂಬದಂತೆ.


ಕಾಲವನ್ನು ಕೃಷಿಮಾಡಿ

ಮನಸ್ಸಿನ ರೆಕ್ಕೆಗಳಿಗೆ 

ಅನುಭವಗಳ ನೆಯ್ಗೆಯಲಿ

ಹದವಿಟ್ಟ ಪಲ್ಲವಿ


ಅವರಿವರ ನೆನಪುಗಳ

ಶಾಖ ಸಮ್ಮೋಹಕೆ ಸಿಲುಕಿ

ನೇತುಬಿದ್ದ ಸಾಲುಗಳು

ಬಣ್ಣ ಬಳಿದ ಮೂಕಾಭಿನಯ


ಈಗ ಕಾಣುವಾಸೆಯ ಬಿತ್ತಿ

ಇರುವಾಸೆಗಳನೆಲ್ಲಾ ತೊರೆದು

ಅವರಿವರ ಇವರವರ ನೆಚ್ಚಿ

ತನ್ನನ್ನೇ ಮಾರಿಕೊಳ್ಳವ ಹಪಾಹಪಿ


ಏನೇ ಆಗಲಿ,


ಮನಸ್ಸಿಗೆ ಮುದವನ್ನು

ಕನಸಿಗೆ ಹದವನ್ನು

ನುಡಿ-ಬರಹಕೆ ನಾದವನ್ನು

ಸೃಷ್ಠಿ-ದೃಷ್ಠಿಯಲಿ ತರುವ ಚಾಣಚೂರ್ಣ.

- ಅಂಕುರ ೨೧ ಮಾರ್ಚ್ ೨೧

ಶುಕ್ರವಾರ, ಫೆಬ್ರವರಿ 26, 2021

ಪ್ರೇಮ ಉಪಜ್ಞೆ!

 ಪ್ರೇಮ ಉಪಜ್ಞೆ!



ಮಣ್ಣಿನ ಹಸಿ ವಾಸನೆಯಲ್ಲಿ

ನಿನ್ನ ಮನಸನ್ನು ಹರಡಿದ್ದೇನೆ

ಸ್ವಚ್ಛವಾದ ಹಳತಂತೆ ಕಳೆಯಲಿ

ನೆನ್ನೆಯ ಎಲ್ಲಾ ಮೈಲಿಗೆಯು


ಪ್ರೇಮವನ್ನು ಬಸಿದು ಈ ಮಣ್ಣಲಿ

ಮೆಚ್ಚಿನ ಗೊಂಬೆಯನು ಮಾಡು

ಆಕಾರವು, ಅಲಂಕಾರವು ಹೇಗೆ ಇರಲಿ

ನೋಟಗಳ ಕೋಣೆಯಲಿ ಬೆಳಕಾಗಲಿ


ಬಂದೇ ಬರುತ್ತೇನೆ, ಹಚ್ಚಿ ಬಿಡು ಬೆಳಕು

ಕಥೆಗಳೆಲ್ಲವೂ ಸಾವಿಗೆ ಬರುವುದಿಲ್ಲ

ಸೃಷ್ಟಿಯ ಪಥದಲ್ಲಿ ಒಂದಿಷ್ಟು ಕಾಲ

ವಿಹರಿಸೋಣ ವಿರಹಗಳ ಮರೆತು


ನೀನೂ ನಾನು ಅವಳೂ ಅವನೂ 

ಸರಳ ರೇಖೆಯ ಸುಖಗಳು

ರೆಕ್ಕೆಗಳು ಮೂಡಲಿ ಸುಕ್ಕುಗಳ ಕಳಚಿ

ಇದು ಪ್ರಕೃತಿಯ ಪ್ರೇಮ ಉಪಜ್ಞೆ!


-ಅಂಕುರ (ಫೆಬ್ರವರಿ ೨೬)

ಮಂಗಳವಾರ, ಅಕ್ಟೋಬರ್ 27, 2020

ಮನೆಗೆ ಬಂದರು ಮೇಷ್ಟ್ರು

 ಮನೆಗೆ ಬಂದರು ಮೇಷ್ಟ್ರು










ಬಿಳಿಕಚ್ಚೆಯ ಕರಿಕೋಟಿನ

ಶಾಸ್ತ್ರಿ, ಭಟ್ಟರೆಲ್ಲರೂ

ಸವಿಯನುಂಡು, ಕಿವಿಯನಿಂಡಿ

ಎಲೆ ಅಡಕೆ ಮುಡಿ ಮಲ್ಲಿಗೆಯ

ಮನೆಗೆ ಮೇಷ್ಟ್ರು ಇದ್ದರು.


ಉಳ್ಳವರ ಒಲೆಯಲ್ಲಿ

ಭೋಜನ-ಭಾಜನದ ವೇಳೆಯಲ್ಲಿ

ಜಾತಿ-ಧರ್ಮವಿಲ್ಲವೆಂದು

ಸಮಾನತೆಯ ನುಡಿದರು

ಶಾಸ್ತ್ರ, ಕಥೆ, ಕಾವ್ಯಗಳ ಬರೆದರು


ದುಡಿವ ಜನಕೆಲ್ಲಿ ಗುಡಿಯ ಚಿಂತೆ

ದುಡಿಯ ಬಡಿದಂತೆ ದುಡಿದರು

ಎಲ್ಲದಕ್ಕೂ ಹಲ್ಲು ಕಿರಿದರು

ತಲೆಮಾರುಗಳ ತಲೆ ತೂಗಿ

ಹೊಸ ವೇಷಗಳ ತೊಟ್ಟರು


ಅವರು ಬಂದರು ಜೊತೆಗೆ ತಂದರು

ಮೇಷ್ಟ್ರು ಶಾಲೆಗೆ ಎಂದರು

ಪಾಠ ಬಂದಿತು ಬೀದಿಗೆ

ಕಲಿವ ಮಕ್ಕಳು ಕಿಟಕಿ ಗಾಳಿಯ ಕಲಿತು

ಕಿಟಕಿಗಾಗಿಯೇ ದುಡಿಯುತ

ಮನೆಗೆ ಕಿಟಕಿಯಾದರು


ಊರ ಸಂತೆಯ, ಗದ್ದೆ ತೊಗರಿಯ

ಗಾಳ-ದಾಳದ, ಹಾಳು ಬಾವಿಯ

ಚೋಳು  ಚಂದಿರ, ಗೋಳು ಮಂದಿರ

ಕುಣಿವ ಕೈಗಳು ನಿಂತವು

ಹಾಡು, ಕಥೆಗಳು ದನಿಯ ಮರೆತವು


ಯಂತ್ರ ಬಂದಿತು, ಬೆವರು ನಿಂತಿತು

ತಂತ್ರದೊಳಗಿದೆ ತತ್ತ್ವವು

ತನ್ನ ಸುಖವನು ಮರೆತ ಕಲಿಕೆಯು

ಪರರ ಸುಖಕೆ ಮೈಚಾಚಿತು

ಹಗಲು ರಾತ್ರಿ ಎನ್ನದೆ ಹೊಟ್ಟೆ ಬಿರಿಯೆ ಬಾಚಿತು


ಎಲ್ಲಾ ಹೋಯಿತು, ಇಲ್ಲೇ ಹಾಯಿತು

ಮೌಲ್ಯ ಮಾರಿದೆ ಮನವನು

ತಾನು ತತ್ತ್ವ, ನೀನು ಸತ್ತ್ವ

ಹೇಳಲೋಸುಗ ಬಾಳು ಮರೆತು

ಮನೆಗೆ ಬಂದರು ಮೇಷ್ಟ್ರು

ಇದೋ...

ನಿರ್ಜೀವ ನಾಕದಿ ಸಜೀವ ಲೋಕ ಎಂದರು.


- ಅಂಕುರ

ಮಂಗಳವಾರ, ಅಕ್ಟೋಬರ್ 13, 2020

ಸಂಶೋಧನೆ ಎಂಬ ಹೊಸ ಅನುಭವಗಳ ಓದು...

ಸಂಶೋಧನೆ ಎಂಬ ಹೊಸ ಅನುಭವಗಳ ಓದು...

    ಕನ್ನಡ ಸಾಹಿತ್ಯ ಅಧ್ಯಯನಕಾರನಾದ ನನಗೆ ಸಂಶೋಧನೆ ಎಂಬುದು ಈಗ ಅರ್ಥವಾಗುತ್ತಿದೆ. ಬರಹದ ಕಲೆಗೆ ಪ್ರವೇಶ ದೊರೆಯುತ್ತಿದೆ. ಪಿಎಚ್.ಡಿ ಎಂಬುದು ಅಧ್ಯಯನದ ಫಲಿತವನ್ನು ಒಂದು ನಿರ್ದಿಷ್ಠ ವಿಷಯದ ಮೇಲೆ ಮಂಡಿಸುವ ಅಧ್ಯಯನವಾಗಲಿ, ಆಯಸ್ಸಾಗಲಿ ನಮಗೆ ಲಭ್ಯವಾಗುವ ವೇಳೆಗೆ ನಮ್ಮ ಅಕಾಡೆಮಿಕ್ ಪಿಎಚ್.ಡಿ ಮುಗಿಯಿತು.

          ನನ್ನ ತಂದೆ, ತಾಯಿ ಹಾಗೂ ಅಣ್ಣ ನನ್ನ ಓದುವಿಗಾಗಿ ಜಗತ್ತಿಗೆ ಪರಿಚಯಿಸಿದರು. ಗುಬ್ಬಿ, ತುಮಕೂರುಗಳಲ್ಲಿ ಓದನ್ನು ಮುಗಿಸಿ, 2011ರಲ್ಲಿ ಕೋಲಾರದ ಬಾಲಕರ ಕಾಲೇಜಿನಲ್ಲಿ ಓದುತ್ತಿದ್ದೆ. ನನ್ನ ಗುರುಗಳಾದ ಡಾ. ಗೋವಿಂದರಾಯರ ಸಂಶೋಧನಾ ಕಾರ್ಯವನ್ನು ಅವರ ಮಾರ್ಗದರ್ಶಕರಾದ ನೆನಪಲ್ಲಿ ಸೇರಿ ಹೋದ ವಿ. ನಾಗರಾಜ್ ಮೇಷ್ಟ್ರ ಬಳಿ ಸುಳಿದಾಡಿದ ದಿನಗಳಲ್ಲಿ ಗಮನಿಸುತ್ತಿದ್ದ ನನಗೆ ಸಂಶೋಧನಾ ಆಸಕ್ತಿ ಮೂಡಿತು. ಬೇಂದ್ರೆ ಕೃಷ್ಣಪ್ಪನವರು ಎಂ.ಎ ಓದುವ ಹಂತಕ್ಕೆ ಸ್ಪರ್ಧೆಯ ನೆಪದಲ್ಲಿ ‘ಬೇಂದ್ರೆ ಸಾಹಿತ್ಯ’ ಓದುವಿನ ಕುತೂಹಲ ಸೃಷ್ಠಿದರು. ಈ ಕುತೂಹಲದಲ್ಲಿ ನನ್ನ ಅಧ್ಯಯನ ಗಮನಿಸಿದ ಡಾ. ಪಿ ಸಂಗೀತ ಮೇಡಂ ಅವರು ಸಂಶೋಧನೆ ಮಾಡಲು ಪ್ರೇರಣೆ ನೀಡಿದರು. 2012-13ರ ಸಮಯದಲ್ಲಿ ಕೆಲವೇ ವಿದ್ವಾಂಸರು ಮಾತ್ರ ಬೇಂದ್ರೆ ಸಾಹಿತ್ಯ ಕುರಿತು ಮಾತನಾಡುತ್ತಿದ್ದರು. ಡಾ. ಜಿ. ಕೃಷ್ಣಪ್ಪ ಅವರು ಅಭಿಮಾನದ ಬೇಂದ್ರೆಯಾಗಿ ಸಾಹಿತ್ಯ ಪರಿಚಾರಿಕೆಯನ್ನು ಕರ್ನಾಟಕದಾದ್ಯಂತ ಪಸರಿಸುತ್ತಿದ್ದರೆ, ಡಾ ಕೆ.ಸಿ ಶಿವಾರೆಡ್ಡಿ ಅವರು ಬೇಂದ್ರೆ-ಕುವೆಂಪು ಅವರ ಸಾಹಿತ್ಯ ತಾತ್ವಿಕತೆಯನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬೇಂದ್ರೆ ಕುರಿತ ನನ್ನ ಅಧ್ಯಯನದ ಆಸಕ್ತಿಗೆ ಡಾ. ಕೆ.ಸಿ ಶಿವಾರೆಡ್ಡಿ  ಅವರನ್ನು ಮಾರ್ಗದರ್ಶಕರಾಗಿ ಆಯ್ಕೆಮಾಡಿಕೊಂಡೆನು. ಲೀಲೆ ಎಂಬಂತೆ ಕನ್ನಡ ವಿಶ್ವವಿದ್ಯಾಲಯದ ಸಂಯೋಜಿತ ಕೇಂದ್ರ ‘ಕುವೆಂಪು ಕನ್ನಡ ಅಧ್ಯಯನ ಕೇಂದ್ರ’ ಕುಪ್ಪಳಿಯ ಆಂತರಿಕ ವಿದ್ಯಾರ್ಥಿಯಾಗಿ ಆಯ್ಕೆಯಾದೆನು. ಪ್ರಯಾಣ  ಕುಪ್ಪಳಿಯ ಕಡೆಗೆ ಸಾಗಿತು.

          ಕುಪ್ಪಳಿಯಲ್ಲಿನ ಬದುಕು ನನ್ನ ಜೀವನದ ಪ್ರಮುಖ ಅಧ್ಯಾಯ. ಅಲ್ಲಿನ ಏಕಾಂತ ಬದುಕು, ಹೋಟೆಲ್ ಆಹಾರ, ಸರೋಜಮ್ಮ ಅವರ ಮಾತೃ ಸೇವೆ, ಹಿರೇಕೊಡಿಗೆಯ ನಿವಾಸ, ವಾಜ್ಹಿ ನೋರೋನ್ನ ಅವರ ಚಿಂತನೆ ಎಲ್ಲವೂ ನನಗೆ ಸಾಕಷ್ಟು ಅನುಭವಗಳ ಮೂಲಕ ಮಲೆನಾಡನ್ನು ಪರಿಚಯಿಸಿತು. ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕರ ಹುದ್ದೆ ಕುರಿತ ನನ್ನ ಅಧ್ಯಯನದಲ್ಲಿ ಆತ್ಮೀಯ ಪ್ರವೀಣ್ ಕುಮಾರ್ ಹಾಗೂ ರತ್ನಾಕರ ಸಿ ಎಂಬ ಇಬ್ಬರ ಸ್ನೇಹ ದೊರೆಯಿತು. ಬರೀ ಸ್ನೇಹವಲ್ಲ, ನನ್ನ ಎಲ್ಲಾ ಬಲವೂ ಆದರು. ಪಿಎಚ್ ಡಿ ಯಲ್ಲಿ ಜೊತೆಯಾದ ಅಕ್ಕರೆಯ ಅರುಣಕುಮಾರಿ ಮೇಡಂ ಹಾಗೂ ಮೃಣಾಲಿನಿ ಮೇಡಂ ಇವರು ನೀಡಿದ ಅಧ್ಯಯನದ ಆತ್ಮೀಯತೆ, ಧೈರ್ಯ ಹೇಗೆ ಮರೆಯಲಿ. ಇವರ ಹಿಂದಿನ ಶಕ್ತಿಗಳಾದ ರವಿನಂದನ ಸರ್ ಹಾಗೂ ಮಹದೇವಯ್ಯ ಸರ್ ಅವರ ಪ್ರೀತಿಯೂ ಒಂದೊಂದು ಅತಿಮಧುರ.

          ಹಸಿವಿನ ಚಿಂತೆಯಲ್ಲಿ ಕುಪ್ಪಳಿಯಿಂದ ಕರಾವಳಿಗೆ ಹೋದೆ, ಆಳ್ವಾಸ್ ನಲ್ಲಿ ಮೇಷ್ಟ್ರಾದೆ. ಇಲ್ಲೆಲ್ಲಾ ಪಿಎಚ್.ಡಿ ಎಂಬುದು ಬಹು ದೊಡ್ಡ ಜವಾಬ್ದಾರಿಯಾಗಿ ಕಾಡುತ್ತಿತ್ತು. ಗುರುಗಳಾದ ಗೋವಿಂದರಾಯರು ಹಾಗೂ ಜಿ ಕೃಷ್ಣಪ್ಪನವರು ನನ್ನ ಕುಟುಂಬವಾಗಿ ನಿತ್ಯ ಎಚ್ಚರಿಸುತ್ತಿದ್ದರು. ಅಂತೂ ವಿಶ್ವವಿದ್ಯಾಲಯ ನಿಯಮಕ್ಕೆ ಅನುಗುಣವಾಗಿ ಅಧ್ಯಯನಮಾಡುತ್ತಾ ಬಂದೆ. ಕರಾವಳಿಯಿಂದ ಬೆಂಗಳೂರು ಬಂದು ಉದ್ಯೋಗ ಬಿಟ್ಟು  ಪ್ರಬಂಧ ಬರೆಹವನ್ನು ಮುಗಿಸುವ ವೇಳೆಗೆ ನೆರಳಾಗಿ ನಿಂತವರು ಆತ್ಮೀಯ ಅನಿತ ಅಕ್ಕ ಅವರು ಹಾಗೂ ಅವರ ಕುಟುಂಬ. ಒಟ್ಟಾರೆ ಅಧ್ಯಯನವೆಂಬುದು ಒಂದು ಪ್ರಯಾಣ ಎಂದು ತಿಳಿಯಿತು. ಇಷ್ಟೆಲ್ಲಾ ಆತ್ಮೀಯರು ಎಲ್ಲರ ಅಧ್ಯಯನದಲ್ಲೂ ಒಂದೊಂದು ಶಕ್ತಿಯಾಗುತ್ತಾರೆ ಎಂದು ಸದಾ ಬಯಸುತ್ತೇನೆ. ಕನ್ನಡ ವಿಶ್ವವಿದ್ಯಾಲಯ ಸೆಪ್ಟಂಬರ್ 08ರಂದು ನನಗೆ ಮೌಖಿಕ ಪರೀಕ್ಷೆ ಏರ್ಪಡಿಸಿ, ಅಧಿಸೂಚನೆ ಹೊರಡಿಸಿತು.

          ಇದರ ನಡುವೆ ಸಂಶೋಧನೆ ಎಂಬುದು ಒಬ್ಬ ಪ್ರಾಧ್ಯಾಪಕ ವೇದಿಕೆಯಲ್ಲಿ ಇದ್ದವರಿಗೆ ನಿತ್ಯ ಕಾರ್ಯವೆಂದು ನನ್ನ ಮಾರ್ಗದರ್ಶಕರಾದ ಕೆ.ಸಿ ಶಿವಾರೆಡ್ಡಿ ಅವರು, ರಹಮತ್ ತರೀಕೆರೆ ಅವರು ಹೇಳುತ್ತಲೇ ಅದೇ ದಾರಿಯಲ್ಲಿ ನಡೆಸಿದರು. ನನ್ನ ಕ್ರಿಸ್ತು ಜಯಂತಿ ಕಾಲೇಜು ನನಗೆ ನಿತ್ಯವೂ ಸಮಯ, ಸೂಕ್ತ ವ್ಯವಸ್ಥೆ ರೂಪಿಸಿರುವುದು ನಾ ಕಂಡ ಶ್ರೇಷ್ಠ ಶಿಕ್ಷಣ ಸಂಸ್ಥೆಯಲ್ಲೊಂದು. ಸಂಶೋಧಕರ ವೇದಿಕೆಯನ್ನು ರೂಪಿಸಿ ಜೊತೆಯಾದ ಗೆಳೆಯ ಕುಮಾರಸ್ವಾಮಿ ಬೆಜ್ಜಿಹಳ್ಳಿ  ಈ ವಿಚಾರದಲ್ಲಿ ಒಳ್ಳೆಯ ಆತ್ಮೀಯ.

          ನನ್ನ ಎಲ್ಲಾ ಸಂತೋಷವನ್ನು ನಿತ್ಯ ತಮ್ಮ ಸಂತೋಷವಾಗಿ ಬೆನ್ನು ತಟ್ಟುವ ಸಹೋದ್ಯೋಗಿ ಆತ್ಮೀಯರಾದ ಸರ್ವೇಶ್ ಬಂಟಹಳ್ಳಿ ಅವರು, ಚಂದ್ರಶೇಖರ್ ಅವರು, ಸೈಯದ್ ಮುಯಿನ್ ಅವರು. ಇವರಂತ ಆತ್ಮೀಯತೆ ಎಲ್ಲಾ ಅಧ್ಯಯನಕಾರರಿಗೂ ಉದ್ಯೋಗದಲ್ಲಿ ಸಿಗಬೇಕು.

           ನನ್ನ ಪಿಎಚ್ ಡಿ ಪರೀಕ್ಷೆ ಮುಗಿಯಿತು ಎಂಬ ವಿಚಾರ ತಿಳಿದ ಡಾ. ಜಿ ಕೃಷ್ಣಪ್ಪ ಅವರು ಅನಾರೋಗ್ಯದ ನಡುವೆಯೂ ನನಗೆ ಮತ್ತೊಂದು ಡಾಕ್ಟರೇಟ್ ದೊರೆಯಿತು ಎಂದು ಕುಟುಂಬ ಸಮೇತ ಖುಷಿ ಪಟ್ಟರು. ಈ ವಿಚಾರ ಪತ್ರಿಕೆಯಲ್ಲಿ ಬಂದಾಗ ನನ್ನ ವಿದ್ಯಾರ್ಥಿಗಳು, ಸ್ನೇಹಿತರು ಇದು ತಮಗೆ ದೊರೆತ ಗೌರವವೆಂದು ಆನಂದಿಸಿದರು. ಇದೆಲ್ಲವೂ ಅಧ್ಯಯನಕ್ಕಿರುವ ಶಕ್ತಿ ಹಾಗೂ ಸಾಧ್ಯತೆ.

          ಸಂಶೋಧನೆ ಎಂಬುದು ನನ್ನ ಪ್ರಕಾರ ಹೊಸ ಅಧ್ಯಯನ. ಅದೊಂದು ಅನುಭವದ ದಾರಿಯ ಸಹಪ್ರಯಾಣ. ಜೊತೆಯಲ್ಲಿ ಸದಾ ಸಾಗೋಣ ಬನ್ನಿ.





ಗುರುವಾರ, ಆಗಸ್ಟ್ 20, 2020

ಎಲ್. ಎಸ್ ಶೇಷಗಿರಿರಾವ್

 ಎಲ್. ಎಸ್ ಶೇಷಗಿರಿರಾವ್

ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಶಬ್ದಕೋಶ
ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಸಾಹಿತ್ಯ ಚರಿತ್ರೆ

 ಎಲ್. ಎಸ್ ಶೇಷಗಿರಿರಾವ್ ಅವರು

 ಎಲ್. ಎಸ್ ಶೇಷಗಿರಿರಾವ್ ಅವರ ಕುರಿತು ಮಾಹಿತಿ :

ವಿಕಿಪೀಡಿಯಾದಿಂದ ಪರಿಶೀಲಿತ ಮಾಹಿತಿ:

ಎಲ್.ಎಸ್.ಶೇಷಗಿರಿರಾವ್ (೧೯೨೫ ಫೆಬ್ರುವರಿ ೧೬ - ೨೦ ಡಿಸೆಂಬರ್ ೨೦೧೯) ಅವರು ಕನ್ನಡದ ಒಬ್ಬ ಹಿರಿಯ ಸಾಹಿತಿ, ವಿಮರ್ಶಕ ಮತ್ತು ನಿಘಂಟು ತಜ್ಞರು.

ಜೀವನ[ಬದಲಾಯಿಸಿ]

ಎಲ್.ಎಸ್.ಶೇಷಗಿರಿರಾವ್ ಅವರು ೧೯೨೫ ಫೆಬ್ರುವರಿ ೧೬ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಃ ದೇಶಪಾಂಡೆ ಮನೆತನದವರಾದ ಇವರ ತಂದೆ, ಲಕ್ಷ್ಮೇಶ್ವರ ಸ್ವಾಮಿರಾಯರು. ಶೇಷಗಿರಿರಾಯರು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ.(ಗೌರವ) ಪದವಿ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾದರು. ಎಚ್.ವಿ. ನಂಜುಂಡಯ್ಯ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿ ಇವರು.ತದನಂತರ ಬೆಂಗಳೂರು ಇಂಟರಮೀಡಿಯೆಟ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು.

ಸಾಹಿತ್ಯ ಸೇವೆ[ಬದಲಾಯಿಸಿ]

೧೯೪೮ರಲ್ಲಿ ಶೇಷಗಿರಿರಾವ್ ಅವರ ಮೊದಲ ಕಥಾಸಂಕಲನ “ ಇದು ಜೀವನ ” ಪ್ರಕಟವಾಯಿತು. ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೆ ಒಂದು ಛಾಪನ್ನು ಸ್ಥಾಪಿಸಿರುವ ಎಲ್. ಎಸ್. ಎಸ್, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ನೂರಾರು ಚಿಕ್ಕ-ಪುಟ್ಟ ಹೊತ್ತಿಗೆಗಳನ್ನು ಅವರು ರಾಷ್ಶ್ಟೋತ್ಥಾನ ಪರಿಷತ್ ವತಿಯಿಂದ ಪ್ರಕಟಿಸಿದ್ದಾರೆ. ಇದು ಮಕ್ಕಳ ಜ್ಞಾನವರ್ಧನೆಗೆಂದು ಹಮ್ಮಿಕೊಂಡ ಕೆಲಸವಾಗಿತ್ತು. ಅದರ ಬೆಲೆ ಕೇವಲ, ೭೫ ಪೈಸೆಗಳು. ಈ ಪುಸ್ತಕಗಳು ಹಿರಿಯರಿಗೂ, ಅತ್ಯಂತ ಉಪಯುಕ್ತಮಾಹಿತಿಗಳನ್ನು ಕೊಟ್ಟಿವೆ. ತುಂಬಾ ಚೆನ್ನಾಗಿವೆ. ರಾಯರ ಸಂಪಾದನೆಯ ಚಟುವಟಿಕೆಯಲ್ಲಿ, ಬೆಂಗಳೂರು ದರ್ಶನ ಸಂಪುಟಗಳು, ಅತ್ಯಂತ ಉಪಯುಕ್ತಮಾಹಿತಿಗಳನ್ನು ಬೆಂಗಳೂರಿನ ಜನರಿಗೆ ಕೊಟ್ಟಿವೆ. ವಿಶ್ವಕೋಶದತರಹವೇ ಸಂಯೋಜಿಸಿರುವ ಈ ಬೃಹದ್ ಸಂಪುಟಗಳು, ಅತ್ಯಂತ ಶ್ರಮವಹಿಸಿ, ವಿದ್ವಾಂಸರಿಂದ ತಯಾರಿಸಲ್ಪಟ್ಟ ಮಾಹಿತಿಗಳು. ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನ ಮನೆಯಲ್ಲೂ ಪಡಸಾಲೆಯ ಕಪಾಟಿನ ಶೋಭೆಯನ್ನು ವಿಜೃಂಭಿಸುವ ಕೃತಿಗಳಿವು.[೧]

ಪ್ರಮುಖ ಕೃತಿಗಳು[ಬದಲಾಯಿಸಿ]

ಸಣ್ಣಕಥೆಗಳ ಸಂಕಲನಗಳು[ಬದಲಾಯಿಸಿ]

ಅ) ಇದು ಜೀವನ. ಆ) ಜಂಗಮಜಾತ್ರೆಯಲ್ಲಿ. ಇ) ಮುಟ್ಟಿದ ಗುರಿ ಮತ್ತು ಇತರ ಕಥೆಗಳು. ಈ) ಮುಯ್ಯಿ.

ಸಾಹಿತ್ಯವಿಮರ್ಶೆ[ಬದಲಾಯಿಸಿ]

ಅ. ಕಾದಂಬರಿ-ಸಾಮಾನ್ಯಮನುಷ್ಯ. ಆ. ಆಲಿವರ್ ಗೋಲ್ಡ್ ಸ್ಮಿತ್, ಇ. ಮಾಸ್ತಿ ವೆಂಕಟೇಶ ಐಯ್ಯಂಗಾರ್. ಈ. ಇಂಗ್ಲೀಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ.

ವಿಮರ್ಶೆ[ಬದಲಾಯಿಸಿ]

  • ಅ) ಪಾಶ್ಚಾತ್ಯಸಾಹಿತ್ಯ ವಿಹಾರ.
  • ಆ) ಸಾಹಿತ್ಯ ವಿಶ್ಲೇಷಣೆ.
  • ಇ) ಹೊಸಗನ್ನಡ ಸಾಹಿತ್ಯ .
  • ಈ) ಫ್ರಾನ್ಸ್ ಕಾಫ್ಕಾ,
  • ಉ) ಗ್ರೀಕ್ ರಂಗಭೂಮಿ ಮತ್ತು ನಾಟಕ.
  • ಊ) ವಿಲಿಯಮ್ ಶೇಕ್ಸ್ ಪಿಯರ್,
  • ಋ) ಸಾಹಿತ್ಯ-ಬದುಕು,
  • ೠ) ಟಿ. ಪಿ. ಕೈಲಾಸಂ,
  • ಏ). ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ,
  • ಏ). ಮಾಸ್ತಿ : ಜೀವನ ಮತ್ತು ಸಾಹಿತ್ಯ,
  • ಐ). ಇಂಗ್ಲೀಷ್ ಸಾಹಿತ್ಯ ಚರಿತ್ರೆ,
  • ಒ). ಸಾಹಿತ್ಯದ ಕನ್ನಡಿಯಲ್ಲಿ,
  • ಓ). ಪಾಶ್ಚಾತ್ಯಸಾಹಿತ್ಯಲೋಕದಲ್ಲಿ,
  • ಔ). ಎಲ್. ಎಸ್. ಎಸ್. ಕಂಡ ತ. ರಾ. ಸು.
  • ಅಂ.) ಮಹಾಭಾರತ( ನಾಲ್ಕು ಸಂಪುಟಗಳು).

ನಾಟಕಗಳು[ಬದಲಾಯಿಸಿ]

ಅ) ಆಕಾಂಕ್ಷೆ ಮತ್ತು ಆಸ್ತಿ. ಆ) ಜೀವನ ಚರಿತ್ರೆ ಇ) ಸಾರ್ಥಕ ಸುಬೋಧ, ಈ) ಎಂ. ವಿಶ್ವೇಶ್ವರಯ್ಯ,

ನಿಘಂಟುಗಳು[ಬದಲಾಯಿಸಿ]

  • ಅ) ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲೀಷ್ ನಿಘಂಟು,
  • ಆ). ಐ.ಬಿ.ಎಚ್ ಇಂಗ್ಲೀಷ್-ಕನ್ನಡ ನಿಘಂಟು,
  • ಇ). ಐ. ಬಿ. ಎಚ್ ಕನ್ನಡ -ಕನ್ನಡ ನಿಘಂಟು,
  • ಈ) ಸುಭಾಸ್ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು,
  • ಉ) ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್-ಕನ್ನಡ್ ನಿಘಂಟು,
  • ಊ) ಸುಲಭ ಇಂಗ್ಲೀಷ್ ( ಏನ್ಗ್ಲಿಶ್ ಮದೆ ಎಅಸ್ಯ್.)

ಇತರೆ[ಬದಲಾಯಿಸಿ]

  • ಅ) ಮಕ್ಕಳ ಸಾಹಿತ್ಯ- ೯ ಕೃತಿಗಳು,
  • ಆ) ಮಕ್ಕಳಿಗಾಗಿ-೪ ಕೃತಿಗಳು.
  • ಇ) ಇತರ-೯
  • ಈ) ಅನುವಾದಿತ-೪,
  • ಉ) ಸಂಪಾದಿತ-೯ ಕೃತಿಗಳು ಹಾಗೂ
  • ಊ) ಇಂಗ್ಲೀಷ್ ನಲ್ಲಿ -ಮೂಲ ಅನುವಾದಿತ-ಸಂಪಾದಿತ- ೩೧ ಕೃತಿಗಳು.[೨]

ಪ್ರಶಸ್ತಿ, ಪುರಸ್ಕಾರಗಳು[ಬದಲಾಯಿಸಿ]

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ.
  • ವರ್ಧಮಾನ ಪ್ರಶಸ್ತಿ.
  • ಡಾ. ಅ.ನ.ಕೃ. ಪ್ರಶಸ್ತಿ.
  • ಬಿ.ಎಮ್.ಶ್ರೀ ಪ್ರಶಸ್ತಿ.
  • ಬಿ.ಎಮ್.ಇನಾಮದಾರ ಪ್ರಶಸ್ತಿ.
  • ಕಾವ್ಯಾನಂದ ಪ್ರಶಸ್ತಿ.
  • ದೇವರಾಜ ಬಹಾದ್ದೂರ ಪ್ರಶಸ್ತಿ.
  • ಮಾಸ್ತಿ ಪ್ರಶಸ್ತಿ.
  • ೨೦೦೭ ರ ಕರ್ನಾಟಕ ಸಾಹಿತ್ಯ ಸಮ್ಮೆಲನದ ಅದ್ಯಕ್ಶರಾಗಿದ್ದರು (ಉಡುಪಿ)

ನಿಧನ[ಬದಲಾಯಿಸಿ]

೨೦ಡಿಸೆಂಬರ್೨೦೧೯ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು[೩][೪] 

ಶುಕ್ರವಾರ, ಆಗಸ್ಟ್ 14, 2020

ಡಾ. ರಾಜೇಂದ್ರ ಎಸ್. ಗಡಾದ



ಡಾ. ರಾಜೇಂದ್ರ ಎಸ್. ಗಡಾದ

'ವಿಸ್ಮಯ ವಿಜ್ಞಾನ' ಎಂಬ ವೈದ್ಯಕೀಯ ಲೇಖನಗಳ ಮೂಲಕ ಪ್ರಸಿದ್ಧರಾಗಿರುವ ಡಾ. ರಾಜೇಂದ್ರ ಎಸ್. ಗಡಾದ ಅವರು ಗದಗದಲ್ಲಿ ವಾಸವಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರಿಗೆ ಎಳವೆಯಿಂದಲೂ ವಿಜ್ಞಾನ ಸಾಹಿತ್ಯದಲ್ಲಿ ಅಪರಿಮಿತವಾದ , ಆಸಕ್ತಿ, ಇಂದಿನ ವೈಯಕ್ತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಾಗೂ

ಸಾಂಸ್ಕತಿಕ ನಿರ್ವಹಣೆಗೆ ನಾವು ತಿಳಿದಿರಲೇಬೇಕಾದ ಜ್ಞಾನವೇ ಜನಪ್ರಿಯ ವಿಜ್ಞಾನವೆಂಬ ತಿಳಿವಳಿಕೆಯಿಂದ ಬರೆಯುತ್ತಿರುವ ವಿಜ್ಞಾನ ಲೇಖಕರಲ್ಲಿ ರಾಜೇಂದ್ರ ಅವರದು ಪ್ರಮುಖ ಹೆಸರು. ನಾಡಿನ ಅನೇಕ ಜನಪ್ರಿಯ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಗಳಲ್ಲಿ ಇವರ ವೈಜ್ಞಾನಿಕ ಬರಹಗಳು ಪ್ರಸಾರಗೊಂಡಿವೆ.









 ಮಕ್ಕಳ ಸಾಹಿತ್ಯ ಕುರಿತು ಡಾ. ರಾಜೇಂದ್ರ ಎಸ್. ಗಡಾದ ಅವರ ನುಡಿಗಳು



ಮಂಗಳವಾರ, ಆಗಸ್ಟ್ 11, 2020

ಭಾಷೆಯ ಮಾಂತ್ರಿಕತೆ – ಕೆ. ವಿ ನಾರಾಯಣ

 ಭಾಷೆಯ ಮಾಂತ್ರಿಕತೆ – ಕೆ. ವಿ ನಾರಾಯಣ

ಕೆ. ವಿ. ನಾರಾಯಣ ಅವರ ಚಿತ್ರ



ಪರಿಚಯ:
ಡಾ. ಕೆ.ವಿ. ನಾರಾಯಣ :- ಹುಟ್ಟಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೋಕು ಕಂಪಲಾಪುರದಲ್ಲಿ. ಅಮ್ಮ ಕೆಂಚಮ್ಮ. ಅಪ್ಪ ವೀರಣ್ಣ. ಕೆ. ಆರ್. ಮೊದಲ ಹಂತದ ಓದು ಹುಟ್ಟೂರು ಮತ್ತು ತಾಲೋಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಙ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಇಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ವಿ.ಎನ್ ಮತ್ತೆ ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ವಿಙ್ಞಾನದ ಪದವಿ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿಎಡ್ ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು. ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಕೆ.ವಿ.ಎನ್ ಮುಂದಿನ ಓದಿಗೆ ಆರಿಸಿಕೊಂಡಿದ್ದು ಸಾಹಿತ್ಯವನ್ನು. ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ತಮ್ಮ ಒಡನೋದಿಯಾಗಿದ್ದ, ಕನ್ನಡದಲ್ಲಿ ಮಹತ್ವದ ಸ್ತ್ರೀವಾದಿ ಚಿಂತಕಿಯಾಗಿರುವ ಶ್ರೀಮತಿಯವರೊಡನೆ ಒಲುಮೆ ಸಂಭವಿಸಿದ್ದು ಇಲ್ಲೆ. ಗೆಳೆಯರ ಸಮ್ಮುಖದಲ್ಲಿ ಮದುವೆ. ಅಧ್ಯಾಪನ ಕೆಲಸ ಆರಂಭಿಸಿದ್ದು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ಜಿ.ಎಸ್.ಎಸ್ ನೇತೃತ್ತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರ್ಪಡೆ. ಜಿ.ಎಸ್.ಎಸ್ ಮಾರ್ಗದರ್ಶನದಲ್ಲಿ ಆನಂದವರ್ಧನನ "ಧ್ವನ್ಯಾಲೋಕ -ಒಂದು ಅಧ್ಯಯನ" ಮಾಡಿ ಪಿಎಚ್ ಡಿ ಪದವಿ ಪಡೆದರು. ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾಶಾಸ್ತ್ರವನ್ನು. ವಿಙ್ಞಾನದ ತಾತ್ವಿಕತೆಯನ್ನಿರಿಸಿಕೊಂಡೇ ಕೆ.ವಿ.ಎನ್ ಬೆಳೆದಿದ್ದು ವಿಮರ್ಶಕರಾಗಿ, ಭಾಷಾಶಾಸ್ತ್ರಜ್ಞರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ. ತಿಳುವಳಿಕೆ ಮತ್ತು ನಡವಳಿಕೆ ಎರಡರಲ್ಲೂ ಸರಳವಾಗಿರುವ ಕೆ.ವಿ.ಎನ್ 1993ರಲ್ಲಿ ಕನ್ನಡಿಗರ ಕನಸಿನ ಸಂಸ್ಥೆಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದ ಶುರುವಿನಲ್ಲೇ ರಿಜಿಸ್ಟ್ರಾರ್ ಆಗಿ ಅಲ್ಲಿನ ಆಡಳಿತ ನಿರ್ವಹಣೆಯೊಳಗೂ ಪ್ರವೇಶ ಪಡೆದರು. ಅಲ್ಲಿಂದ ನಿವೃತ್ತಿಯಾಗಿ ಹೊರಗೆ ಬರುವವರೆಗೆ ಹಲವು ಜನ ಕುಲಪತಿಗಳ ಆವಧಿಯಲ್ಲಿ ಆಡಳಿತ ಮತ್ತು ಅಧ್ಯಯನಗಳ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ತಮ್ಮ ಅಧ್ಯಾಪನ ಸಂದರ್ಭದಲ್ಲೇ ಶುರುಮಾಡಿದ್ದ ಕನ್ನಡಭಾಷೆ ಮತ್ತು ಕನ್ನಡ ಸಂಸ್ಕೃತಿಯ ಚಿಂತನೆಗಳನ್ನು ಕನ್ನಡ ಸಮಾಜದ ಬೇರುಗಳ ಮೂಲಕ ಅರಸುವ ಕೆಲಸವನ್ನು ಮತ್ತಷ್ಟು ಸ್ಪಷ್ಟವಾಗಿ ಮಂಡಿಸುತ್ತಾ ಬಂದರು. ಈಗಲೂ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ವಿಙ್ಞಾನ ಮೊದಲಾಗಿ ಕನ್ನಡ ಸಮಾಜಕ್ಕೆ ಸಂಬಂಧಿಸಿದ ಯಾವುದರಲ್ಲೂ ಜರೂರಾಗಿ ನಡೆಯಬೇಕಿರುವ ಕೆಲಸ ಇದೆ ಎಂದು ತೊಡಗಿಸಿಕೊಂಡು ಈ ಕಾಲದ ಕನ್ನಡದ ಮಹತ್ವದ ಚಿಂತಕರಾಗಿದ್ದಾರೆ.
(ವಿಕಿಪೀಡಿಯಾ ಮಾಹಿತಿಯನ್ನು ಪಡೆದು ಪರಿಶೀಲಿಸಲಾಗಿದೆ)
ಕೃತಿ ತೊಂಡು ಮೇವು ಮುಖಪುಟ


2021ರ ಸಾಲಿನ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ. ಎಚ್. ಎಸ್ ಸತ್ಯನಾರಾಯಣ ಅವರು

ಅಪೂರ್ವ ಒಡನಾಟಕ್ಕೆ ಗೌರವ ಲಭಿಸಿದೆ


        ಅಧ್ಯಯನ ಎಂಬುದು ಎಲ್ಲರಿಗೂ ದಕ್ಕುವುದಿಲ್ಲ. ಕಾಣುವುದನ್ನು ಗ್ರಹಿಸುವುದು, ಗ್ರಹಿಸಿದಕ್ಕೆ ತನ್ನ ಹಿಂದಿನ ಗ್ರಹಿಕೆಗಳನ್ನು ತುಲನೆಮಾಡುವುದು ಅದೊಂದು ವಿಮರ್ಶೆಯ ಚಾಣಾಕ್ಷತೆ. ಅಡುಗೆಮಾಡುವ ರುಚಿ ಮಾಂತ್ರಿಕರು ಕಂಡದ್ದಕ್ಕೆಲ್ಲಾ ರುಚಿ ಮೂಡಿಸಿ ಅರ್ಥ ನೀಡುವಂತೆ ಈ ವಿಮರ್ಶಕರು ಕಾಣಸಿಗುತ್ತಾರೆ.
ಈ ಜ್ಞಾನ ಮೂಡುವುದರ ಹಿಂದೆ ಸರಿಯಾದ, ಶಾಂತವಾದ ಓದು ನಡೆದಿರುತ್ತದೆ. ಆ ಕಾರ್ಯದಲ್ಲಿ ಭಾರತೀಯ, ಪಾಶ್ಚಾತ್ಯವೆಂಬ ಎಲ್ಲೆಗಳನ್ನು ಮೀರಿ, ವಿಶ್ವಮಾನವ ತತ್ವದೊಳಗೆ ತಮ್ಮ ದರ್ಶನಗಳನ್ನು ತಾವು ರುಚಿಸಿಕೊಂಡಾಗ ತಮ್ಮ ನುಡಿ-ನಡೆ, ವಿಚಾರಗಳು ಲೋಕಕ್ಕೆ ಹೊಸ ಮಾದರಿಗಳನ್ನು ನೀಡುತ್ತವೆ. ಇಂತಹ ಹೊಸ ಮಾದರಿಗಳನ್ನು ಪರಿಚಯಿಸುತ್ತಿರುವ ಕನ್ನಡದ ಜನಪ್ರಿಯ ಲೇಖಕರು ನಮ್ಮ ಎಚ್. ಎಸ್. ಸತ್ಯನಾರಾಯಣ ಅವರು.  

    ಮನುಷ್ಯನಿಗೆ ಲೋಕವಿರಾಮದ ಹಸಿವು ಉಂಟಾದರೆ ಆ ದಿಕ್ಕಿನ ಕಡೆಗೆ ತುಡಿಯುತ್ತಾನೆ. ಅಂತಹ ಲೋಕವಿರಾಮವನ್ನು ತನ್ನ ಯೌವನದಲ್ಲಿಯೇ ತುಳಿದಿದ್ದರು ಎನಿಸುತ್ತದೆ. ಈ ಆಸಕ್ತಿಯಲ್ಲಿಯೇ ಕನ್ನಡ ನುಡಿಸೇವಕರ ಕುರಿತು ಅಪೂರ್ವ ಒಡನಾಟ ಇವರದು. ಗಂಭೀರವಾದ ವಿಚಾರಗಳಿಗೆ ಹಾಸ್ಯದ ಲೇಪನವಚ್ಚಿ, ಅವರವರ ರುಚಿ-ಅಭಿರುಚಿಗಳಿಗೆ ಮಾತಿನ ಮಜಲನ್ನು ಕಟ್ಟಿ ಎಲ್ಲರೊಂದಿಗೆ ಬೆರೆತವರು. ಕುವೆಂಪು, ಹಾ.ಮಾ.ನಾ, ಬೇಂದ್ರೆ ಎಲ್ಲರನ್ನೂ ತನ್ನ ಸಮಕಾಲೀನರಂತೆ ಚಿತ್ರಸುವ ವ್ಯಕ್ತಿ-ಸಾಹಿತ್ಯ-ಚಿತ್ರಮಾಂತ್ರಿಕರಾಗಿ ನಮ್ಮ ನಡುವೆ ವೇದಿಕೆ ಕೊಟ್ಟಲ್ಲೆಲ್ಲಾ ಬಿಗುಮಾನವಿಲ್ಲದೆ ಸಂಚಲನ ಮೂಡಿಸುತ್ತಾರೆ. ಸತ್ಯನಾರಾಯಣ ಎಂಬ ಹೆಸರು ಈಗ ಕನ್ನಡದ ಮುಕ್ಕಾಲು ಪಾಲು ಸಾಹಿತ್ಯ ಆಸಕ್ತರ ಮನೆ-ಮನಗಳಲ್ಲಿದೆ. ಸತ್ಯ, ಸತ್ಯಣ್ಣ, ಮೇಷ್ಟ್ರು ಮೊದಲಾದ ಹೆಸರುಗಳೊಂದಿಗೆ ಹಿರಿಯರಿಂದ-ಕಿರಿಯರವರೆಗೂ ಪ್ರೀತಿಯ ಸ್ಪರ್ಷತೆ. ಇದಕ್ಕೆ ಕಾರಣವೆಂದರೆ ಅವರ ಸಮನ್ವಯತೆ, ನಿರಂಹಕಾರ, ಎಲ್ಲರೊಂದಿಗೂ ಆಪ್ತವಾಗಿ ಬೆರೆಯುವ ಗುಣ.

          ಕುವೆಂಪು ಕುರಿತು ಗಂಭೀರ ವಿಚಾರಗಳನ್ನೂ ಸರಳವಾಗಿ ಪರಿಚಯಿಸಿಕೊಳ್ಳಲು ‘ಕುವೆಂಪು ಅಲಕ್ಷಿರೆದೆಯ ದೀಪ’ ಕೃತಿಯನ್ನು ನೀಡಿದ್ದಾರೆ. ಹದಿನೈದು ಸಾಹಿತಿಗಳ ಒಡನಾಟದ ಆಪ್ತತೆಯನ್ನು, ಸಂಕ್ಷಿಪ್ತವಾಗಿ ಫೇಸ್ ಬುಕ್ ನಲ್ಲಿ ಕವಿಸಮಯ-ಅಂಕಣ ಬರಹ ರೂಪದಲ್ಲಿ ಹಂಚಿಕೊಂಡ ಪ್ರಸಿದ್ಧಿಯ ಫಲವೇ ‘ಅಪೂರ್ವ ಒಡನಾಟ’. ಇವರು ಈ ಹಿಂದೆ ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ಸಾಹಿತ್ಯ ಸಂಪದವನ್ನು ಸಂಪಾದಿಸಿದ ಕಾರ್ಯದ ಮೂಲಕ ಮೇಷ್ಟ್ರುಗಳ, ಮಕ್ಕಳ ಮನಸ್ಸಿನಲ್ಲಿ ಇದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’ ಹಾಗೂ ತೇಜಸ್ವಿ ಕುರಿತು ಇವರ ಸಂಶೋಧನಾ ಪ್ರಬಂಧ ಕಾರ್ಯವು ಅತ್ಯಂತ ವಿಭಿನ್ನವಾದುದು. ಅಪೂರ್ವ ಒಡನಾಟ ಪ್ರಕಟವಾದ ಮೇಲೆ ಇವರ ಆಪ್ತರು ಸುಮಾರು ಐವತ್ತು ವರ್ಷಗಳ ನಿರಂತರ ಓದಿನ ಫಲವನ್ನು ಆಚೆ ತರಲು ಹಂಬಲಿಸಿದರು. ಚಿಕ್ಕಮಗಳೂರಿನಲ್ಲಿ ತಪಸ್ವಿಯಂತೆ ಬರವಣಿಗೆ ಪ್ರಾರಂಭಿಸಿರುವ ಇವರು ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ಡುಂಡಿಮಲ್ಲಿಗೆ’, ಅಂಕಣ ಬರಹಗಳ ಕೃತಿರೂಪ ‘ನುಡಿಚಿತ್ರ’, ವಿಮರ್ಶಾ ಲೇಖನಗಳನ್ನು ‘ಕಣ್ಣೋಟ’ವಾಗಿ, ಅಪೂರ್ವ ಒಡನಾಟದಲ್ಲಿ ನೆನಪು ಕಡಿಮೆ ಇದೆ ಎಂದು ಬರೆಯದೆ, ಮುಂದೆ ಮಾಸ್ತಿ ಕುರಿತು ಅಧ್ಯಯನ ಜಾಸ್ತಿಯಿದೆ ಎಂಬಂತೆ ‘ನಗೆಮೊಗದ ಅಜ್ಜ ಮಾಸ್ತಿ’ಯಾಗಿ, ಲಾಲಿತ್ಯದ ಔತಣ ನೀಡುವ ಸತ್ಯಣ್ಣನವರು ‘ಪನ್ನೇರಳೆ’ ಎಂಬ ಲಲಿತ ಪ್ರಬಂಧವನ್ನೂ ಬರೆದಿದ್ದಾರೆ. ಈ ಎಲ್ಲಾ ಕೃತಿಗಳು ವರ್ತಮಾನದ ಹಸಿವಿಗೆ, ಬಾಳ್ವೆಯ ಅರ್ಥಪೂರ್ಣ ಸ್ವೀಕಾರಕ್ಕೆ ಸರಿಯಾದ ಮಾರ್ಗಸೂಚಿ ನೀಡಬಲ್ಲವು ಅನಿಸುತ್ತದೆ.

        ಇಂತಹ ನಮ್ಮ ಅಪೂರ್ವ ಒಡನಾಡಿ ವ್ಯಕ್ತಿತ್ವಕ್ಕೆ 2021ನೇ ಸಾಲಿನ ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಗೌರವ ಲಭಿಸಿದ್ದು ನಮಗೆ ಸಂತಸ ಮೂಡಿತ್ತು. ಅದೇ ಸಂತಸವು ಹಿಮ್ಮಡಿಯಾಗಿ ಈಗ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ನೀಡುವ 2021ರ ಸಾಲಿನ ಪ್ರತಿಷ್ಠಿತ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಲಭಿಸಿರುವುದು ಸಂತಸ ಮೂಡಿಸಿದೆ. ಎಷ್ಟೋ ಸಂದರ್ಭದಲ್ಲಿ ಪ್ರಶಸ್ತಿ ನೀಡುವ, ಪಡೆಯುವ ಕಾರಣಗಳಿಗೆ ಅರ್ಥವಿರದ ಕಾಲದಲ್ಲಿದ್ದೇವೆ. ಆದರೆ ಇಂತಹ ವಿದ್ವಾಂಸರಿಗೆ ಲಭಿಸುವ ಹೊಸಬಗೆಯು ಪ್ರಶಸ್ತಿಯ ಗೌರವವನ್ನು ಹೆಚ್ಚಿಸುತ್ತದೆ. 




ಡಾ. ಎಚ್. ಎಸ್ ಸತ್ಯನಾರಾಯಣ ಅವರ ಕುರಿತು- ಚಿತ್ರ ಹಾಗೂ ಅವರ ಭಾಷಣದ ಒಂದು ಮಾದರಿ

https://youtu.be/c9V5_EhjEPk