ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಜೂನ್ 7, 2023

ಮೆಟ್ರೋ ಕಥನ - ೭೬

 ಮೆಟ್ರೋ ಕಥನ - ೭೬

ತಂಪು ಕಾಂತಿ ನೀಡುವ ಚಂದ್ರನ ಬೆಳಕಲ್ಲಿ ಅದೆಷ್ಟೋ ಜನಪದ ಕಥೆಗಳು ತಲೆಯಿಂದ ತಲೆಗೆ ನುಡಿಗಳಾಗಿದ್ದವು. ಕಥೆಯೊಂದಿಗೆ ಊಟ, ಕೆಲವೊಮ್ಮೆ ಕೆಲಸಗಳು ಹೀಗೆ ಕೃಷಿ- ಖುಷಿ ಎರಡೂ ಇತ್ತು. ಕಣದ ಬಣವೆ ಹುಲ್ಲಿನ ಗುಡಿಸಲು ಕಟ್ಟಿ ಆಕಾಶ ನೋಡುತ್ತಾ ಮಲಗುವ ಸ್ವರ್ಗವೇ ಹಾಲು ಚೆಲ್ಲುವ ಹಾದಿ. ಈಗ ನಮಗೆ ಚಂದ್ರನ ಸಹಾಯವೆಂದರೆ ಎಲ್ಲರ ಮೊಬೈಲ್ ನಲ್ಲೂ ತೊಂದರೆ ಕೊಡಬೇಡಿ ಎಂಬ ಬಟನ್ ಮೂಲಕ ನೆಮ್ಮದಿಯ ಸಂಕೇತವಾಗಿದೆ.


- ಅಂಕುರ


ಮೆಟ್ರೋ ಕಥನ - ೭೫

 ಮೆಟ್ರೋ ಕಥನ - ೭೫


ಶಾಲೆಯೊಂದರಲ್ಲಿ ಇಂಗ್ಲಿಷ್ ಭಾಷೆಯನ್ನು ಕ್ಯಾಂಪಸ್ ಲಾಂಗ್ವೇಜ್‌ ಮಾಡಿದ್ದರು. ಆದರೆ ಅದರೊಳಗೆ ನಗು, ಅಳುವೆಲ್ಲಾ ಆಯಾ ಮಾತೃಭಾಷೆಯಲ್ಲಿ ನಡೆದಿತ್ತು. ಮನುಷ್ಯನ ಭಾವನೆಗಳನ್ನು ಬಂಧಿಸಲಾಗದೆಂದು ತಿಳಿದ ಪ್ರಾಂಶುಪಾಲರು, ಆಡಳಿತ ಭಾಷೆ, ಮಾತೃಭಾಷೆ, ನಾಡಿನ ಭಾಷೆ ಎಂಬ ತ್ರಿಭಾಷೆಯ ಸ್ವಾತಂತ್ರ್ಯ ಘೋಷಿಸಿದರು. 


- ಅಂಕುರ

ಸೋಮವಾರ, ಜೂನ್ 5, 2023

ಮೆಟ್ರೋ ಕಥನ - ೭೪

 ಮೆಟ್ರೋ ಕಥನ - ೭೪

ಮೆಟ್ರೋ ಕಥನ - ೭೩

 ಮೆಟ್ರೋ ಕಥನ - ೭೩


ಅವಳು ಸಿಗರೇಟು ಸೇದುತ್ತಿದ್ದಾಳೆ, ಅವಳ ಅಣ್ಣ ಹೊಸ ಬೈಕು ಕೊಂಡನು. ಅಪ್ಪನ ಹಳೆಯ ಬಜಾಜ್ ರಿಪೇರಿ ಬಂದರೂ ಓಡಿಸುತ್ತಿದ್ದಾರೆ. ಅಮ್ಮ ದೂರದರ್ಶನದಲ್ಲೇ ಮುಳುಗಿದ್ದಾರೆ. ಆದರೆ ಮನೆಯ ಎದುರೇ ಇರುವ ಹಳೆಯ ಶಾಲೆಯಲ್ಲಿ ಇಂದು ಪರಿಸರ ದಿನಾಚರಣೆ ಕಾರ್ಯಕ್ರಮ. ಮಕ್ಕಳು ಸಡಗರದಿಂದ ಹೂ ಕಿತ್ತು ಕಟ್ಟಿ ಮುಡಿದ್ದಾರೆ.  ಮೇಷ್ಟ್ರು ಗೂಗಲ್ ನಲ್ಲಿ ಸುಲಭವಾಗಿ ಸಿಕ್ಕ ಸಾಲುಮರದ ತಿಮ್ಮಕ್ಕನ ಚಿತ್ರ ಮುದ್ರಿಸಿ ಆದರ್ಶವಾಗಿ ಇಟ್ಟು, ತಿಮ್ಮಕ್ಕನ ಸಾಹಸಗಳನ್ನು ಹೇಳುತ್ತಿದ್ದಾರೆ. ಲೆಕ್ಕಕ್ಕೆ ಎಲ್ಲೆಲ್ಲೂ ಒಂದೊಂದು ಗಿಡ ನೆಡುವಂತೆ ನೆಡುತ್ತಿದ್ದಾರೆ. ವಾರದ ನಂತರ ಆ ಗಿಡಗಳು ಅನಾಥವಾಗಲು ಸಿದ್ಧವಾಗಿವೆ.

ಇಲ್ಲಿಗೆ ಪರಿಸರ ದಿನಾಚರಣೆ ಮುಗಿಯಿತು.


- ಅಂಕುರ

ಮೆಟ್ರೊ ಕಥನ - ೭೨

 ಮೆಟ್ರೋ ಕಥನ - ೭೨

ರೈಲುಗಳು ಢಿಕ್ಕಿ ಹೊಡೆದು ಸಾವಿರಾರು ಗಾಯಾಳುಗಳು, ನೂರಾರು ಸಾವುಗಳು. ರಕ್ತ ನೀಡಲು ಜನ ಸಾಲುಗಟ್ಟಿ ನಿಂತಿದ್ದಾರೆ. ಇವರ ನಡುವೆ ಮಾಹಿತಿ ಹೆಸರಲ್ಲಿ, ಯ್ಯೂಟ್ಯೂಬ್ ಹೆಸರಲ್ಲಿ ನಿಧಿ ಎತ್ತುವ ಹೆಸರಲ್ಲಿ ದುಡ್ಡು ಮಾಡುವ ಪಾಪಿಗಳ ಕಂಡು ಬೂದಿಯಾದ ಹೆಣವೊಂದು ನಗುತ್ತಿದೆ.


- ಅಂಕುರ


ಶನಿವಾರ, ಜೂನ್ 3, 2023

ಮೆಟ್ರೋ ಕಥನ - ೭೧

 ಮೆಟ್ರೋ ಕಥನ - ೭೧


ಅಂದನು ಮುಂಗಾರಿನ ಹೆಸರಲ್ಲಿ ಮಳೆ ಬಿದ್ದ ನೆಲದಲ್ಲಿ, ಖುಷಿಯಿಂದ ಬೀಜಗಳನ್ನು ಬಿತ್ತಿದನು. ದಿನವಿಡೀ ಶ್ರಮವನ್ನು, ಬೀಜಗಳ ಹಸಿವನ್ನು, ರಾತ್ರಿಯ ಮಳೆಯು ತೇಲಿಸಿತ್ತು. ಕಳೆದೆಂಟು ದಿನದಲ್ಲಿ ಹುಟ್ಟಿದ್ದು ಬರಿಕಸವು, ಅಂದನಿಗೆ ಇದು ಹೊಸತೇನೂ ಅಲ್ಲ. ಮತ್ತೆ ಹೊಲವನ್ನು ಹದ ಮಾಡಿ ಬಿತ್ತಿದನು. ಹಠದಂತೆ ಬಂದ ಮಳೆಯು ಮತ್ತೆ ನಾಶದ ಯುದ್ಧ ಮಾಡಿತು. ರೈತನಾದ ಅಂದನಿಗೆ ತಾಳ್ಮೆ ಇದೆ, ಬೇಸರಿಸದೆ ಹಿಂಗಾರು ಮಳೆಗಾಗಿ ಈಗ ಹೊಲವನ್ನು ಹದ ಮಾಡುತ್ತಿದ್ದಾನೆ.

- ಅಂಕುರ

ಮೆಟ್ರೋ ಕಥನ - ೭೦

 ಮೆಟ್ರೋ ಕಥನ - ೭೦


ನೀಲಗಿರಿ ಮರವೊಂದು ತಾನೆಷ್ಟು ಎತ್ತರಕ್ಕೆ ಹೋಗುವುದೋ, ಬೇರುಗಳನ್ನು ಅಷ್ಟೇ ಆಳವಾಗಿ ನೆಲಕ್ಕಿಳಿಸುವ ಪರಿಯಲ್ಲಿ ವಿಜ್ಞಾನದ ಸಿದ್ಧಾಂತವಿದೆ. ಸಂಶೋಧಕನ ಈ ಪತ್ತೇಪರಿಗೆ ರೈತನೊಬ್ಬ ಈ ನೀಲಗಿರಿ ಇದ್ರೆ ಭೂಮಿಯೆಲ್ಲಾ ಬರಡಾಗುತ್ತೆ, ಆದ್ರೆ ಜೌಗು ನೆಲ ಇದ್ರೆ ನೀರು ನಿಲ್ಲಲ್ಲ  ಸ್ವಾಮಿ, ಸೊಳ್ಳೆ ಜೊತೆಗೆ ಸಾಕಷ್ಟು ಈ ಬೆಳೆ ಕೀಟ ಬರಲ್ಲ ಸ್ವಾಮಿ ಒಂತರಾ ಒಳ್ಳೆದೇ ಈ ಮರ ಎಂದನು. ವಿಜ್ಞಾನಿಗೆ ಕುತೂಹಲ ಹೆಚ್ಚಾಗಿ ಅಧ್ಯಯನಗಳನ್ನ ಹುಡುಕಿದಾಗ ಇದೇ ಉತ್ತರವಿತ್ತು.


- ಅಂಕುರ

ಶುಕ್ರವಾರ, ಜೂನ್ 2, 2023

ಮೆಟ್ರೋ ಕಥನ - ೬೯

 ಮೆಟ್ರೋ ಕಥನ - ೬೯


ಅವನು ಮಾತಿನ ಮೋಡಿಗಾರ. ಮೌನವನ್ನೂ ನಾಜೂಕಿನಿಂದ ಮಾತನಾಡಿಸಬಲ್ಲ. ಸುಳ್ಳನ್ನು ಸತ್ಯದಂತೆ ನಂಬಿಸಬಲ್ಲ. ಎಲ್ಲರಿಗೂ ಅವನ ಬರುವಿಕೆಯೇ ಕಾತುರ. ಇರುವಿಕೆಯಂತೂ ಹರ್ಷದಬ್ಬ. ಏಕೆಂದರೆ ಅವನು ರೇಡಿಯೋ ನಿರೂಪಕ.


- ಅಂಕುರ


ಮೆಟ್ರೋ ಕಥನ - ೬೮

 ಮೆಟ್ರೋ ಕಥನ - ೬೮


ಮೇಷ್ಟ್ರು ಹೇಳಿದರು,

ದಿನ ಎರಡು ನಿಮಿಷ ನಿಮ್ಮ ಬೆಸ್ಟ್ ಪ್ರೆಂಡ್ ಗೆ ಸಮಯಕೊಡಿ. ನಿಮ್ಮನ್ನು ಬೌದ್ಧಿಕವಾಗಿ ಗೆಲ್ಲಿಸುತ್ತಾನೆ ಎಂದರು.

ಸರ್ ಸಾಕಷ್ಟು ಸಮಯ ಕೊಡ್ತಿವಿ ಸರ್, ಫ್ರೆಂಡ್ಸ್ ಜೊತೆಯಲ್ಲೇ ವಾಸ ಸರ್, ಜೊತೆಯಲ್ಲಿಯೇ ತಿಂಡಿ-ಊಟ ಸರ್ ಒಬ್ಬೊಬ್ಬರು ಒಂದೊಂದು ಹೇಳಿದರು. 

ಬೆಸ್ಟ್ ಫ್ರೆಂಡ್ ಎಂದರೆ ಸುದ್ದಿ ಪತ್ರಿಕೆಗಳು ನೀವು ಇವರಿಗಾಗಿ ಅಷ್ಟು ಸಮಯ ಕೊಡ್ತಿರಾ ಎಂದು ಮೇಷ್ಟ್ರು ಆಶ್ಚರ್ಯವಾದಾಗ, ವಿದ್ಯಾರ್ಥಿಗಳು ನಾಚಿ ನೀರಾದರು.

ಪರಿಣಾಮವೆಂಬಂತೆ ಪತ್ರಿಕೆಗಳ ಓದು ಹೆಚ್ಚಾಯಿತು. ಅದೇ ವಿದ್ಯಾರ್ಥಿಗಳು ಸಾಧಿಸಿ, ಅದೇ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಬೆಸ್ಟ್ ಫ್ರೆಂಡ್ ಕಥೆ ಹೇಳಿದ್ದರು.


- ಅಂಕುರ

ಮೆಟ್ರೋ ಕಥನ - ೬೭

 ಮೆಟ್ರೋ ಕಥನ - ೬೭


ಹೆಣ್ಣು ಹುಡುಗಿಯು ಕುರಿಯನ್ನು ಕತ್ತರಿಸಿದ ಬಗೆಗೆ ಎಲ್ಲರೂ ವಾವ್! ಎಂದರು. ಪವರ್ ಅಂದ್ರೆ ಇದು ಎಂದರು. ಆದರೆ, ಯಾವ ಬಲಿಯನ್ನೂ ಕೊಡದೆ, ಮನೆಯನ್ನು ಸ್ವಚ್ಛ ಮಾಡಿ, ಮನಸ್ಸುಗಳನ್ನು ಶುದ್ಧಮಾಡಿ, ಬೆಂದು-ಬೇಯಿಸಿ ಎದೆಗೆ ಅಕ್ಷರವಿತ್ತ ಹೆಣ್ಣನ್ನು ಕಂಡು ಯಾರೂ ವಾವ್ ಎನ್ನಲಿಲ್ಲ. ಅದು ಬಳೆ ತೊಟ್ಟುಕೊಂಡ ಹೇಡಿ ಎಂದೆ ಪ್ರಚಾರವಾಯಿತು. 

ಸಾಹಿತಿಗಳು ಬರೆದದ್ದು ಅಕ್ಷರದಲ್ಲೆ ಉಳಿಯಿತು. ಏಕೆಂದರೆ ಸ್ಥಿತ್ಯಂತರ ಹೊಂದದಿರುವವರು ಎಂದಿಗೂ ಓದುವುದೇ ಇಲ್ಲ.


- ಅಂಕುರ

ಮೆಟ್ರೋ ಕಥನ - ೬೬

 ಮೆಟ್ರೋ ಕಥನ - ೬೬


ಯುವಕನ ಸಾವಿಗೆ ಎಲ್ಲರೂ ಮಮ್ಮಲ ಮರುಗಿದರು. ಓಂ ಶಾಂತಿ, ಮತ್ತೆ ಹುಟ್ಟಿ ಬಾ, ಇದು ತುಂಬಲಾರದ ನಷ್ಟ ಹೀಗೆ ಹಲವಾರು ನೊಂದ ನುಡಿಗಳ ಸಿಕ್ಕಲ್ಲೆಲ್ಲಾ ಬರೆದರು. ಹುಡುಗನ ತಾಯಿ ಆಸ್ಪತ್ರೆಯಲ್ಲಿ ಬಿಲ್ಲು ಕಟ್ಟಲಾಗದೆ, ತಾಳಿ ಮಾರಿ ಹೆಣ ತಂದಳು. ಸಂಸ್ಕಾರಕ್ಕೆ ಹಣ ಇಲ್ಲದೆ, ಸಿಕ್ಕಸಿಕ್ಕವರಲ್ಲಿ ಅಂಗಲಾಚಿ ಮಣ್ಣು ಮಾಡಿದಳು. ಆದರೆ ಮಾಧ್ಯಮ ಇನ್ನೂ ಮಾತಾಡುತ್ತಲೆ ಇತ್ತು. ಇದ್ದಾಗ ಮಾತಾಡಿಸದ, ಕಷ್ಟ ಎಂದಾಗ ಕೈ ಹಿಡಿಯದ ಜನರೆಲ್ಲಾ ಎಲ್ಲದನ್ನೂ ಸೂತಕದಂತೆ ಕಳುಚುತ್ತಾರೆ. ಮಾತು ಕೃತಿಯಾಗಲಿಲ್ಲ.


- ಅಂಕುರ

ಮೆಟ್ರೋ ಕಥನ - ೬೫

 ಮೆಟ್ರೋ ಕಥನ - ೬೫


ಮೇಷ್ಟ್ರು ಹೇಳಿದರು,

ನೀವು ನಿತ್ಯವೂ ಬಿಟ್ಟುಕೊಡುವುದರಲ್ಲಿ ಖುಷಿ ಕಾಣುತ್ತಿರಿ. ಪಡೆದುಕೊಳ್ಳುವ ಖುಷಿ ಕಾಣಬೇಕು ಎಂದರು.

ಈ ಬಿಟ್ಟುಕೊಡುವುದು ಎಂದರೇನು ಸರ್ ಎಂದನು ವಿದ್ಯಾರ್ಥಿ.

ನನ್ನ ಆಸಕ್ತಿ, ಕ್ಷೇತ್ರ, ವಿಷಯ ಎಂದು ಬೇಲಿ ಹಾಕಿಕೊಂಡು ಕಲಿಕೆಯನ್ನು ಮಿತಗೊಳಿಸಿಕೊಳ್ಳುತ್ತಿದ್ದೇವೆ. ನಮಗೆ ಮನುಷ್ಯ ಕಲಿಯುವ ಎಲ್ಲದನ್ನೂ ಕಲಿಯುವ ಶಕ್ತಿ ಇದೆ. ಸಾಯುವವರೆಗೂ ಕೇವಲ ೨೦% ಅಷ್ಟೇ ನಮ್ಮ ಮಿದುಳಿನ ಬಳಕೆಯಾಗುವುದು ಎಂದರು ಮೇಷ್ಟ್ರು.

ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯ ಕುರಿತು ಆಶ್ಚರ್ಯವಾಯಿತು.


- ಅಂಕುರ

ಮೆಟ್ರೋ ಕಥನ - ೬೪

 ಮೆಟ್ರೋ ಕಥನ - ೬೪

ಗಂಡ ಹೆಂಡತಿಗೆ ಜಗಳವಾಗಿ ತನ್ನ ಊರಿನ ಅಜ್ಜಿಯ ಬಳಿ ಹೋದರು‌. ಇಬ್ಬರೂ ಸಾಕಷ್ಟು ದೂರು ಹೇಳಿಕೊಂಡರು. ಅಜ್ಜಿ ಕೇಳುವ ತನಕ ಕೇಳಿ, ಕೊನೆಗೆ ಒಂದೇ ಒಂದು ಮಾತು ಹೇಳಿತು. 'ಗಂಡಿಗೆ ಚಟ, ಹೆಣ್ಣಿಗೆ ಹಠ' ಇಲ್ಲದೆ ಇದ್ರೆ, ನೀವೆ ಬಂಗಾರ ಆಗ್ತಿರಿ. ಅರ್ಥಮಾಡಿಕೊಂಡು ಬದುಕಿ ಅಂತು. ಇಬ್ಬರೂ ಮೌನವಾಗಿ ಮನೆಗೆ ಬಂದರು. ಎನೋ ಅರ್ಥವಾದಂತಾಗಿ ಮೆಲ್ಲಗೆ ನಕ್ಕರು.


- ಅಂಕುರ

ಮೆಟ್ರೋ ಕಥನ - ೬೩

 ಮೆಟ್ರೋ ಕಥನ - ೬೩

ಒಂದು ಊರಿನ ಜನರು ಸಿಗುವ ಆಸೆಗಾಗಿ ಕಳೆದುಕೊಂಡ, ಕೊಳ್ಳುವ ಎಲ್ಲವನ್ನೂ ಮರೆತರು. ೧ರೂ ಪಡೆದುಕೊಂಡು ೧೦೦ಕ್ಕಿಂತಲೂ ಹೆಚ್ಚು ದಂಡ ತೆರುವ ಲೆಕ್ಕಾಚಾರ ಕುರಿತು ಯಾವ ಅರಳಿಕಟ್ಟೆಯಲ್ಲೂ ಚರ್ಚೆಯಾಗಲಿಲ್ಲ. ಏಕೆಂದರೆ ಅವರ ರಾಜನು ಅವರಿಗೆಲ್ಲಾ ದೇವರು. ದೇವರ ಕುರಿತು ಕನಸಿನಲ್ಲೂ ಪ್ರಶ್ನಿಸಬಾರದೆಂಬ ನಂಬಿಕೆಯ ಮೂರ್ಖರಾಗಿದ್ದರು.


- ಅಂಕುರ

ಮೆಟ್ರೋ ಕಥನ - ೬೨

 ಮೆಟ್ರೋ ಕಥನ - ೬೨


ಮೊಲವೊಂದು ಮಕ್ಕಳನ್ನು ಮಣ್ಣಿನ ಗೂಡಿನಲ್ಲಿ ಮಡಗಿತ್ತು. ಆಹಾರ ಹುಡುಕಿ, ಹೊಟ್ಟೆ ತುಂಬಿಸಿಕೊಂಡು ಬಂದು ಮಣ್ಣು ತೆಗೆದು ಗೂಡಿನಿಂದ ಬರುವ ಮಕ್ಕಳಿಗೆ ಹಾಲುಣಿಸುತ್ತಿತ್ತು. ಎಂದಿನಂತೆ ಆಹಾರಕ್ಕೆ ಹೋದ ಮೊಲವು ತಿಂದದ್ದು ಚಿಗುರೆಲೆ, ಗರಿಕೆ ಅಷ್ಟೇ. ಆದರೆ ಆಚೆ ಬರುವಾಗ ಉರುಳಿಗೆ ಸಿಕ್ಕಿ ನರಳಾಡಿ ಸತ್ತಿತು.  ಉರುಳು ಬಿಟ್ಟ ನಾಗರಾಜನ ಮನೆಯಲ್ಲಿ ಮೊಲದ ಮಾಂಸ ಕುದಿಯುತ್ತಿದೆ. ತಾಯಿ ಬರುವ ಆಸೆಯಿಂದ ಮಕ್ಕಳು ಕಾಯುತ್ತಿವೆ.

ಕಾಡಿನಲ್ಲಿ ಅದೆಷ್ಟೋ ತಾಯಿಗಳು ಅನ್ನಕ್ಕಾಗಿ ಹೋಗಿ, ಮತ್ತೊಂದು ಪ್ರಾಣಿಗೆ ಅನ್ನವಾಗುತ್ತವೆ.


ಉರುಳು - ಉಳ್ಳು ಎಂದು ಕರೆಯುವರು. ತೆಳುವಾದ ತಂತಿಯಲ್ಲಿ ನೇಣಿನಂತೆ ಚಿಕ್ಕ ಚಿಕ್ಕ ವೃತ್ತಾಕಾರಗಳ ಜೋಡಣೆಯ ಬಲೆ


- ಅಂಕುರ

ಮೆಟ್ರೋ ಕಥನ - ೬೧

 ಮೆಟ್ರೋ ಕಥನ - ೬೧

ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕನಿಗೆ ಹೆಣ್ಣು ಕೊಡಲಿಲ್ಲ. ಸರ್ಕಾರಿ ಉದ್ಯೋಗಿಯನ್ನೇ ಹುಡುಕಿ ಮದುವೆಯಾದ ದಂಪತಿಗಳು, ತಮ್ಮ ಮಗುವನ್ನು ಶಾಲೆಗೆ ಸೇರಿಸಲು ಖಾಸಗಿ ಶಾಲೆಯನ್ನೇ ಹುಡುಕಿ ಬಂದರು.  


- ಅಂಕುರ

ಮೆಟ್ರೋ ಕಥನ - ೬೦

 ಮೆಟ್ರೋ ಕಥನ - ೬೦

ಇವಳು ಯಾವಾಗಲೂ ಹುಡುಕುತ್ತಲೇ ಇದ್ದಾಳೆ. ಅವಳ ಕಣ್ಣೀರು ಹೇಳಿಕೊಳ್ಳಲು ಒಂದು ನಂಬಿಕೆಯ ಜೀವ ಬೇಕಿದೆ. ಮುಖವಾಡಗಳೇ ಸ್ವಾರ್ಥದ ವೇಗದಲ್ಲಿ ಸಾಗುವಾಗ ಅವಳು ನಿತ್ಯ ಮೌನಿಯಾಗಿದ್ದಾಳೆ. ಎಲ್ಲರೊಂದಿಗೂ ಹರಟುವ, ತಿನ್ನುವ, ಸಾಗುವ ಇವಳಿಗೆ ಒಂದು ಸಾಂಗತ್ಯದ ಅಗತ್ಯವಿದೆ. ತಂದೆಯಲ್ಲಿ ಹುಡುಕಿದರೆ ವ್ಯವಹಾರದಲ್ಲೇ ಕಳೆದುಹೋಗಿದ್ದಾರೆ. ತಾಯಿಯೋ ತನ್ನದೇ ಲೋಕಕ್ಕಾಗಿ ಹಪಾಹಪಿಸುತ್ತಿದ್ದಾರೆ‌. ಸ್ನೇಹಿತರೋ ಒಬ್ಬೊಬ್ಬರು ಒಂದೊಂದು ರೀತಿ. ಲಾಭವೋ, ಸ್ವಾರ್ಥವೋ, ಕಾಮವೋ ಎನೋ ಉಪಯೋಗಿ ಮನಸ್ಸುಗಳ ಕಂಡು ಬೇಸತ್ತಿದ್ದಾಳೆ.

ಇವಳಿಗೆ ಇವಳದೇ ಮನಸ್ಸಿನ ಮತ್ತೊಂದು ಆಲೋಚನೆಯ ಮನಸ್ಸು ಬೇಕಿದೆ. ಇವಳು ಎಲ್ಲಾ ಕಡೆಯೂ ಇದ್ದಾಳೆ. ಎಲ್ಲರೊಳಗೂ ಇದ್ದಾಳೆ.


- ಅಂಕುರ

ಮೆಟ್ರೋ ಕಥನ - ೫೯

 ಮೆಟ್ರೋ ಕಥನ - ೫೯

ಕ್ಷೌರ ಮಾಡುತ್ತಿದ್ದ ಹುಡುಗ ಬಹಳ ಮಾತುಗಾರ. ಏನೇನೋ ಕೇಳಿದ. ನಾನು ಸ್ವಲ್ಪ ಮಾತು ಇಷ್ಟ ಪಡುವ ಕಾರಣ ಕೇಳಿದ್ದಕ್ಕೆಲ್ಲಾ ಹೇಳುತ್ತಿದ್ದೆ. ಎಲ್ಲಿ ತನಕ ಓದು ನಿಲ್ಲಿಸಿದೆ ಎಂದೆ. ಅದಕ್ಕೆ ಓದಲಿಲ್ಲ ಸಾರ್, ಎಂಟನೆ ತರಗತಿಗೆ ಹೋಗಲೇ ಇಲ್ಲ ಎಂದನು. ಹಾಗೇ ಮುಂದುವರೆಸುತ್ತಾ... ಸಾರ್ ಇದೆಲ್ಲಾ ಸುಮ್ಮನೆ ಕೆಲಸ ಮಾಡೋದು.. ನಾನೇನಿದ್ರು ಡೀಲಿಂಗ್ ಜಾಸ್ತಿ ಸಾರ್. ಆಗಂತ ದುಡ್ಡಿಗಾಗಿ ಮಾಡಲ್ಲ. ನನಗೆ ದೋಸ್ತಿಗಳು ಜಾಸ್ತಿ. ನಾವು ಯಾರು ತಂಟೆಗೂ ಹೋಗಲ್ಲ, ನಮ್ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಅಷ್ಟೇ. ಸಾರ್ ಒಂದು ವಿಚಾರ ಗೊತ್ತಾ! ನಮ್ಮದೆ ತಪ್ಪು ಜಾಸ್ತಿ ಇದ್ರೆ ಸೀದಾ ಸ್ಟೇಷನ್ ಗೆ ಹೋಗಿ ತಪ್ಪು ಒಪ್ಕೊತಿವಿ. ತಪ್ಪಿಲ್ಲ ಅಂದ್ರೆ ಯಾರೇ ಬಂದ್ರು ಫೈಟ್ ಮಾಡ್ತಿವಿ. ನಮಗೆ ಒಬ್ಬ ಅಣ್ಣ ಇದಾನೆ ಸಾರ್. ಯಾವಾಗಲೂ ಆತನೆ ನಮಗೆಲ್ಲ ದಾರಿ. ಸುಮ್ಮನೆ ಇರಬಾರದಲ ಅದಕೆ ಈ ಕೆಲಸ ಮಾಡ್ತಿನಿ ಎಂದ.

ಮಾತಾಡುತ್ತಲೇ ಬ್ಲೇಡು ಒತ್ತಿ, ಅಮ್ಮಾ! ಎಂದೆ. ಅಯ್ಯೋ, ನೋವಾಯ್ತ ಸಾರ್ ಎಂದನು. ಹಾಗೇನಿಲ್ಲ, ನೀವು ಕೊಲೆ ಮಾಡುವಾಗ ಪಾಪ! ಅದೆಷ್ಟು ನೋವಾಗಬಹುದು ಅಂತ ಭಯ ಆಯ್ತು ಅಂದೆ.

ಹೌದಲ್ವ ಸಾರ್ ಆದರೆ ಆ ತರ ಯೋಚನೆ ಬರಲಿಲ್ಲ ಎಂದನು.

ಅಂತೂ ಕ್ಷೌರ ಮುಗಿದು ಬರುವಾಗ, ಯೋಚನೆ ಮಾಡಪ್ಪ! ನೋವು ಚಿಕ್ಕದಾದ್ರೆನು, ದೊಡ್ಡದಾದ್ರೆನು..

ಬರ್ತಿನಿ ಎಂದು ಹೊರಟೆ.


- ಅಂಕುರ

ಮೆಟ್ರೋ ಕಥನ - ೫೮

 ಮೆಟ್ರೋ ಕಥನ - ೫೮


ಜೊತೆಯಲ್ಲಿ ಬೆಳೆದ ಎರಡು ಗಿಡಗಳಲ್ಲಿ ಮೊಗ್ಗುಗಳ ಕುಡಿ ಬಂದವು. ಪರಸ್ಪರ ನೋಟದಲ್ಲಿಯೇ ಪ್ರೇಮ ಬೆಳೆದು ಅರಳಿ ಪರಿಮಳ ಬೀರಲು ಸಿದ್ಧವಾದವು. ವಿಳಾಸವಿಲ್ಲದ ಮನುಷ್ಯನೊಬ್ಬ ಎಲ್ಲಾ ಕಿತ್ತನು. ಎಲ್ಲೋ ಕೊಂಡೊಯ್ದು, ಎಲ್ಲೋ ವ್ಯಾಪಾರ ಮಾಡಿದನು. ಎರಡೂ ಹೂಗಳು ಬೇರೆ ಬೇರೆ ಮನೆ ತಲುಪಿದವು. ಅವರವರ ಆಸೆಯಂತೆ ಎಲ್ಲಿಯೋ ಸುಂದರಗೊಳಿಸಿ ಒಣಗಿಸುವ ಕಾರ್ಯ ನಡೆದಿತ್ತು.

ಪ್ರೇಮ ವಿರಹದಲ್ಲಿದ್ದ ಹೂವುಗಳಿಗೆ ಬಾಡುವಾಸೆ ಇರದೆ, ಬಣ್ಣ ಮಂಕಾಗಿ, ಅರಳಿದ ಪರಿಮಳವು ಪ್ರೇಮದಲಿ ನಗುವ ಕನಸು ಕನಸಾಗಿಯೇ ಉಳಿದಿತು. ಆದರೆ ಹುಟ್ಟಿದ್ದ ಗಿಡಗಳು ಇನ್ನೂ ಅಲ್ಲೇ ಇವೆ, ಮತ್ತೊಮ್ಮೆ ಹೂಬಿಟ್ಟು ಪ್ರೇಮಿಸಬಹುದು. ಅಗಲಿಸುವ ಅದೆಷ್ಟೋ ಆಸೆಗಳು ದಿನದಿನವೂ ಕಿತ್ತು ಖುಷಿಪಟ್ಟರೂ ಗಿಡಗಳು ಮುನಿದಿಲ್ಲ. ಹತ್ತಿರದಿಂದ ಮನವಿಟ್ಟು ನೋಡಿದಾಗ ತಿಳಿಯಿತು. ಪ್ರೇಮಕ್ಕೆ ನೋವು - ಸಾವು ಇಲ್ಲ, ಅದೊಂದು ಸಂಚಲನ ಸವಿ.


- ಅಂಕುರ

ಮೆಟ್ರೋ ಕಥನ - ೫೭

 ಮೆಟ್ರೋ ಕಥನ - ೫೭


ಆ ರಾಗದಲ್ಲಿ ಪ್ರೇಮದ ಸೆಳೆತವಿತ್ತು. ಮಧು ನಿಶೆಯ ಮನೆಯಂತೆ, ನೀರಿನ ಸಂಚಲನದಂತೆ ಆವರಿಸಿದನು. ಕಾತುರದಿಂದ ಕಂಗೆಟ್ಟು ಹೋದೆ. ಹೃದಯ ಬಡಿತ ಹೆಚ್ಚಾಯಿತು. ಇಷ್ಟು ದಿನ ಅವನ ನೃತ್ಯವನ್ನು ಹಣಕೊಟ್ಟು ನೋಡುತ್ತಿದ್ದೆ. 

ಈಗ ಇಲ್ಲೆ, ಕಣ್ಣೆದುರಲ್ಲೆ, ಹುಡುಕಿದೆ...

ಆ ಪ್ರಶಾಂತ ಬಯಲಲ್ಲಿ ತಂಪು ಸಲಿಲದ ಸನಿಹ ಗರಿಬಿಚ್ಚಿ ಕುಣಿಯುತ್ತಿದ್ದನು ನವಿಲು ಚೆಲುವ.


- ಅಂಕುರ

ಮೆಟ್ರೋ ಕಥನ - ೫೬

 ಮೆಟ್ರೋ ಕಥನ - ೫೬


ಕಾಡಿನಲ್ಲಿ ಆಡಳಿತ ಮಂಡಳಿ ರಚನೆಯಾಯಿತು. ಆಯ್ಕೆಯಾದ ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಅಲ್ಲಲ್ಲೆ ಸನ್ಮಾನ ನಡೆಯುತ್ತಿತ್ತು. ಆಯಾ ಜಾತಿಯ, ಧರ್ಮದ ಪಕ್ಷಗಳು ಅಭಿನಂದಿಸಿಕೊಳ್ಳುತ್ತಿದ್ದವು. ಸೋತ  ಜೀವಿಗಳು ನಿಂದನೆಯಲ್ಲೇ ಸಮಾಧಾನ ಮಾಡಿಕೊಳ್ಳುತ್ತಿದ್ದವು. ತಾನೇ ಮಾಡಿದ ತಪ್ಪು, ಇಷ್ಟು ಬೃಹತ್ತಾಗಿ ಬೆಳೆದು, ಕೆಟ್ಟದ್ದೇ ಒಳಿತಾಗಿರುವ ಕ್ರೂರ ಸತ್ಯವನ್ನು ನಿಶಕ್ತವಾದ ಮುದಿಸಿಂಹ ನೋಡುತ್ತಿತ್ತು. ಅಲ್ಲೇ ನೇತು ಹಾಕಿದ್ದ ಕಾಡಿನ ಸಂವಿಧಾನದ ಬೋರ್ಡಿನಲ್ಲಿ ಜಾತ್ಯಾತೀತ, ಧರ್ಮಾತೀತ ಅರಣ್ಯ ಸರ್ವಸಮನ್ವಯತೆಯ ಸಾಲುಗಳು ವಿಜೃಂಭಣೆಯಿಂದ ಕಾಣುತ್ತಿದ್ದವು.


- ಅಂಕುರ

ಮೆಟ್ರೋ ಕಥನ - ೫೫

 ಮೆಟ್ರೋ ಕಥನ - ೫೫


ರಾಜನು ಕುದುರೆಯ ಮೇಲೆ ಹೋಗುವಾಗ ರಾಜನಷ್ಟೇ ಕಂಡನು. ಏಕೆಂದರೆ ಅವನಲ್ಲಿ ಸುಖವಿತ್ತು. ನಿಜವಾಗಿಯೂ ಕುದುರೆ ಅಲ್ಲಿ ಶೋಷಣೆಯೊಳಗಿತ್ತು. ಅದು ಪ್ರತಿ ಕ್ಷಣವೂ ನೋವನ್ನೇ ಅನುಭವಿಸುತ್ತಿತ್ತು. ಆದರೆ ರಾಜನ ಕಾರ್ಯ ದೇವರ ಸೇವೆ ಅನಿಸಿತ್ತು. ಕುದುರೆಯ ಕ್ಷೇಮಕ್ಕಾಗಿ ರಾಜನು ಹಲವು ಯೋಜನೆಗಳನ್ನು ತಂದನು. ಉನ್ನತವಾದ ಪೋಷಣೆ, ಗುಣಮಟ್ಟದ ಆಹಾರ, ಹೊಸತಾದ ಲಾಳ, ರತ್ನಗಂಬಳಿ ಹೀಗೆ. ಕುದುರೆ ಆನಂದಪಟ್ಟಿತು. ಆದರೆ ಈ ಪೋಷಣೆಯು ತನ್ನ ಶೋಷಣೆಗಾಗಿಯೇ ಎಂದು ಕುದುರೆಗೆ ತಿಳಿಯಲೇ ಇಲ್ಲ. ರತ್ನಗಂಬಳಿಯ ಮೇಲೆ ರಾಜ ಕುಳಿತಿದ್ದಾನೆ. ಕುದುರೆ ಚಲಿಸುತ್ತಲೇ ಇದೆ. ಇದು ದೇವರ ಸೇವೆಯೆಂದೇ ತಿಳಿದಿದೆ.


- ಅಂಕುರ

ಸೋಮವಾರ, ಮೇ 22, 2023

ಮೆಟ್ರೋ ಕಥನ - ೫೪

 ಮೆಟ್ರೋ ಕಥನ - ೫೪


ಹೆಚ್ಚು ನೀರಿನಲ್ಲಿ ಎಣ್ಣೆಯ ಹನಿ ತೇಲುತ್ತದೆ. ಹೆಚ್ಚು ಎಣ್ಣೆಯಲ್ಲಿ ನೀರಿನ ಹನಿ ತೇಲುತ್ತದೆ. ಕೆಡುಕಿನೊಳಗೆ ಒಳಿತು, ಒಳಿತಿನೊಳಗೆ ಕೆಡುಕು ಹೀಗೆಯೇ ಇರುತ್ತದೆ. ಮಿಶ್ರಣದಂತೆ ಕಂಡರೂ ಹೆಚ್ಚು ಇರುವುದು ತಾನಾಗಿಯೇ ತೇಲಿಸುತ್ತದೆ. 


- ಅಂಕುರ

ಮೆಟ್ರೋ ಕಥನ - ೫೩

 ಮೆಟ್ರೋ ಕಥನ - ೫೩


ಒಂದು ಸುಂದರವೆಂಬ ಹೊಗಳಿಕೆಯ ಮಹಾನಗರವಿದೆ. ರಾಜ, ರಾಣಿ, ಶ್ರೀಮಂತ ದೊರೆಗಳು ಇರುವ ನಗರವಿದು. ಎಲ್ಲಾ ಮಾಧ್ಯಮಗಳೂ ನಗರದಲ್ಲೇ ಇವೆ. ಇಲ್ಲಿನ ತೆರಿಗೆಯೇ ಕೋಟಿ ಲೆಕ್ಕದಲ್ಲಿ. ಈ ಮಹಾನಗರಕ್ಕೆ ಎಂದಿನಂತೆ ಮಳೆ ಬಂದಿತು. ಗೊತ್ತಿಲ್ಲದೆ ಬಂದ ಹೆಣ್ಣು ಮಗಳು ರಸ್ತೆಯಲ್ಲಿ ಮುಳುಗಿ ಸತ್ತಳು. ಮಹಾನಗರಕ್ಕೆ ಕಣ್ಣು ಬಂದು ಶತಮಾನವೇ ಕಳೆದರೂ ರಸ್ತೆ, ಕೊಳಚೆ, ಬಡತನ ಹಾಗೆಯೇ ಉಳಿದಿವೆ. ಕಂಡರೂ ಕಾಣದಂತೆ ಬಹು ಎಚ್ಚರದಲ್ಲಿ ಸಾಗುತ್ತಿರುವ ಬುದ್ಧಿವಂತರಿಗೆ ಇಲ್ಲಿ ಕಣ್ಣಿಲ್ಲ. ಮುಳುಗಿ ಸತ್ತವರಂತೆ ನಿತ್ಯವೂ ಕೊಳಚೆ, ಬಡತನಗಳ ಹಾಸಿ-ಹೊದ್ದು ಸಾಯುವ ಮಂದಿಗಳು ಲೆಕ್ಕವಿಲ್ಲ. ಸುಂದರ ಸುಳ್ಳು ಹೇಳುವ ಮಂದಿಗೆ ಬೇಕಾಗಿಯೂ ಇಲ್ಲ. ಮಗಳನ್ನು ಕಳೆದುಕೊಂಡ ತಾಯಿಯ ಕಣ್ಣೀರಲ್ಲಿ ಈ ಕಥೆ ಕಾಣುತ್ತಿತ್ತು.


- ಅಂಕುರ

ಶನಿವಾರ, ಮೇ 20, 2023

ಮೆಟ್ರೋ ಕಥನ - ೫೨

 ಮೆಟ್ರೋ ಕಥನ - ೫೨


ಚೆನ್ನನು ಇತ್ತೀಚೆಗೆ ಟೀವಿಯನ್ನು ಗಂಭೀರವಾಗಿ ನೋಡುತ್ತಾನೆ. ಜೊತೆಯಾಗುವ ನಾಲ್ಕಾರು ಜನಕ್ಕೆ ಅವರು ಹೀಗೆ ಮಾಡಿದರು, ಇವರು ಹೀಗೆ ಮಾಡಿದರು ಎಂದು ಹೇಳುತ್ತಿದ್ದಾನೆ. ಇವರೇ ಮಂತ್ರಿ, ಮುಖ್ಯಮಂತ್ರಿ ಆಗಿದ್ದರೆ ಚೆಂದವೆಂದು ಸಲಹೆ ನೀಡುತ್ತಾನೆ. ಉಚಿತ ಯೋಜನೆಗಳು ಸರಿ, ಸರಿಯಲ್ಲ, ಹಣ ಎಲ್ಲಿಂದ ತರುವರು! ಏನೇನೋ ತಲೆಗೊಂದು ಪ್ರಶ್ನೆಗಳ ತಂದು ದಿನ ತಳ್ಳುತ್ತಾನೆ. ದುರಂತವೆಂದರೆ, ಚೆನ್ನನ ಅಭಿಪ್ರಾಯಕ್ಕಾಗಿ ಅಧಿಕಾರದಲ್ಲಿ ಯಾರೂ ಕಾಯುವುದಿಲ್ಲ. ಕಾದಿದ್ದು ಅವನ ಮೇವಿಲ್ಲದಿದ್ದರೂ ಹಾಲು ನೀಡುತ್ತಾ ಹಂಬಲಿಸುವ ಹಸು, ನೀರಿಲ್ಲದೆ ನೆರಳಾದ ತೆಂಗು, ಬೇಸಿಗೆಯ ತಣಿಸುವ ಮಾವು, ಕೂಲಿಯಂತೆ ದುಡಿವ ಹೆಂಡತಿ, ಓದಲಾಗದೆ ಹಾಳಾಗುತ್ತಿರುವ ಮಕ್ಕಳು. 

ಚೆನ್ನನು ಯಜಮಾನ, ಅವನಿಗೆ ಮರ್ಯಾದೆ ಮುಖ್ಯ. ಮರ್ಯಾದೆಗಾಗಿ ಅವನು ಎಲ್ಲಾ ಮನೆಯಲ್ಲೂ ಕಾಣುತ್ತಿದ್ದಾನೆ.



- ಅಂಕುರ

ಮೆಟ್ರೋ ಕಥನ - ೫೧

 ಮೆಟ್ರೋ ಕಥನ - ೫೧


ಕಾಡು ಹರಟೆಯ ಸ್ನೇಹಗಳು ಕೈಯಲ್ಲಿ ಸಿಗರೇಟು, ಚಹಾ, ಕಾಫಿಯಿಡಿದು ಕುಡಿಯುತ್ತಾ, ಕೆಲವರು ತಂಬಾಕು ಜಗಿಯುತ್ತಾ, ದೊಡ್ಡ ದೊಡ್ಡ ವಿಚಾರಗಳೊಂದಿಗೆ ಕಾಲಹರಣ ಮಾಡುತ್ತಿರುವ ಯುವಸಮೂಹವು ಎಲ್ಲೆಲ್ಲೂ ಕಾಣುತ್ತವೆ. 

ಆದರೆ, 

ರೂಪಾಯಿ ನಾಣ್ಯದಿಂದ ಹಿಡಿದು, ಸೌಧಗಳನ್ನು ನಿರ್ಮಿಸುವ ಯಾರೂ ಕೂಡ ಕಾಣಿಸಿಕೊಳ್ಳದೆ ಚಿಕ್ಕ ಚಿಕ್ಕ ಹೊಸ ನಿರ್ಮಿತಿಗಳ ಸೃಷ್ಟಿಸುತ್ತಲೇ ಇದ್ದಾರೆ. ವಿಜ್ಞಾನಿಯೊಬ್ಬರು ದೆವ್ವ ಮತ್ತು ದೇವರಿಗೆ ಈ ರೀತಿಯಲ್ಲಿ ಉದಾಹರಣೆ ನೀಡಿದರು.


- ಅಂಕುರ

ಗುರುವಾರ, ಮೇ 18, 2023

ಮೆಟ್ರೋ ಕಥನ - ೫೦

 ಮೆಟ್ರೋ ಕಥನ - ೫೦



ಅಂದು,

ಕಾಡು ಬಯಲಿನ ನಡುವೆ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ನೂರಾರು ಮೈಲಿ ಸಾಗುತ್ತಿದ್ದ ಕಾಲವದು. ರಸ್ತೆ ಪಕ್ಕ ಸಾಲು ಮರಗಳ ನೆರಳು. ಅಲ್ಲಲ್ಲೆ ನೀರು, ಮಜ್ಜಿಗೆಗಳ ಅರವಟ್ಟಿಗೆಯನ್ನಿಡುತ್ತಿದ್ದ ಪುಟ್ಟ ಹಳ್ಳಿಗಳು. ಕೊರತೆಯೇ ತುಂಬಿರುವ ಕಾಲದಲ್ಲಿ ಎಲ್ಲರಿಗೂ ಆತ್ಮತೃಪ್ತಿ ಇತ್ತು. 

ಇಂದು, 

ಅದೇ ರಸ್ತೆ, ಅದೇ ನೆರಳು, ಅದೇ ಪಾನಕಗಳಿಗೆ ಹಣಕೊಟ್ಟು ವೇಗವಾಗಿ ಕಾಲದ ಹಿಂದೆ ತೃಪ್ತಿಗಾಗಿ ಓಡುತ್ತಿದ್ದೇವೆ.


ಅಂದು,

ತಿನ್ನಲು ಸಮಯವಿತ್ತು,

ಅನ್ನ ವಿರಲಿಲ್ಲ.

ಇಂದು, 

ಅನ್ನವಿದೆ

ತಿನ್ನಲು ಸಮಯವಿಲ್ಲ.

ಅಂದನಿಗೆ ಸಾಧು ಹೇಳಿದ ಈ ನುಡಿಗಳಲ್ಲಿ ತೃಪ್ತಿ - ಆತ್ಮತೃಪ್ತಿಯ ಸರಳ ಸಾರವಿತ್ತು.


- ಅಂಕುರ

ಮೆಟ್ರೋ ಕಥನ - ೪೯

 ಮೆಟ್ರೋ ಕಥನ - ೪೯

ನೀರು ಕುಡಿಯುತ್ತಿದ್ದ ಜಿಂಕೆಗೆ ತನ್ನ ದಾಳಿಯ ಪ್ರಾಣಿಗಳ ಕುರಿತು ಭಯವಿತ್ತು. ಮೀನಿನ ಉಸಿರಾಟವೂ ಒಂದು ಕ್ಷಣ ತಲ್ಲಣ ಉಂಟುಮಾಡಿತು. ಗೋಡೆಯ ಮೇಲೆ ಈ ಚಿತ್ರವು ನೇತಾಡುತ್ತಿತ್ತು. ಈ ಚಿತ್ರವನ್ನು ನೋಡುತ್ತಿದ್ದ ಕಾಂಕ್ರೀಟ್ ಜಗತ್ತಿನ ಮೇಸ್ತ್ರಿ ಮಹಾಶಯನಿಗೆ ಯಾವ ಭಯವೂ ಆಗಲಿಲ್ಲ.


- ಅಂಕುರ

ಮೆಟ್ರೋ ಕಥನ - ೪೮

 ಮೆಟ್ರೋ ಕಥನ - ೪೮


ಸುನಾಮಿಯು ಆವರಿಸಿ, ಜನ ತಮ್ಮ ಸ್ಥಳಗಳನ್ನು ಬಿಟ್ಟು ಸಾಗುತ್ತಿದ್ದರು. ಕೆಲವರು ದೋಣಿಯಲ್ಲಿ, ತೆಪ್ಪದಲ್ಲಿ, ಈಜುತ್ತಾ ಹೀಗೆ ಒಬ್ಬೊಬ್ಬರೂ ಒಂದೊಂದು ನಂಬಿಕೆಯ ಬೆನ್ನತ್ತಿದ್ದರು. ವೃದ್ಧನೊಬ್ಬನು ದೇವಿ, ಆಂಜನೇಯ, ರಾಮ, ಮಂಜುನಾಥ ಎಂದು ದೇವರ ಪೋಟೋಗಳನ್ನು ಭದ್ರವಾಗಿ ಹಿಡಿದು ನಡದೇ ಹೋಗುತ್ತಿದ್ದನು. ಎಲ್ಲರೂ ಆತನನ್ನು ದಡ್ಡ, ಅತಿ ಆಸ್ತಿಕ, ಮೂರ್ಖ ಎಂದೆಲ್ಲಾ ತಲೆಗೊಂದು ನುಡಿದರು. ಆದರೆ ಆತ ಹಿಡಿದದ್ದು ಬರಿ ಪೋಟೋ ಅಲ್ಲ. ಅದು ಸದಾ ಧೈರ್ಯ ತುಂಬುವ ನಂಬಿಕೆಯಾಗಿತ್ತು. ಅದೇ  ರೀತಿಯಲ್ಲಿ ಎಲ್ಲರೂ ಏನನ್ನಾದರೂ ಒಂದೊಂದು ಹಿಡಿದಿದ್ದರು. ಇದನ್ನು ಅರ್ಥೈಸಲು ಕಷ್ಟವಾಗಿತ್ತು. ಏಕೆಂದರೆ ಅವರ ಕುರಿತು ಅವರಿಗೆ ಸರಿಯಾದ ನಂಬಿಕೆ ಇರಲಿಲ್ಲ.


- ಅಂಕುರ

ಮೆಟ್ರೋ ಕಥನ - ೪೭

 ಮೆಟ್ರೋ ಕಥನ - ೪೭


ಮನೆಯ ಕಾಂಪೌಂಡ್ ಗೋಡೆಯ ಮೇಲೆ ಯಾರೂ ಹತ್ತಬಾರದೆಂದು ಒಡೆದ ಗಾಜುಗಳನ್ನು ನೆಟ್ಟಿದ್ದರು. ಕಳ್ಳರಂತೂ ಈ ತರಬೇತಿಯನ್ನು ಮೊದಲೆ ಪಡೆದು ಬರುತ್ತಾರೆ. ಈ ಸತ್ಯವೂ ಮನೆಯೊಡೆಯನಿಗೆ ತಿಳಿದಿತ್ತು. ಹಾಗಾದರೆ ಈ ಗಾಜು, ಮನೆಗೆ ಬೀಗ, ಮತ್ತೊಂದು-ಮಗದೊಂದು ಯಾರಿಗಾಗಿ ಎಂಬ ಯಕ್ಷಪ್ರಶ್ನೆ ಮೂಡಿತು. 


ಉತ್ತರವೂ ಸರಳವಾಗಿತ್ತು. ನಮ್ಮ ಸಮಾಧಾನ, ನಂಬಿಕೆ ಹಾಗೂ ಧೈರ್ಯಕ್ಕಾಗಿ ಎಂದು. ನಮ್ಮೊಳಗಿನ  ಅನುಮಾನವೇ ಇಷ್ಟೆಲ್ಲಾ ರಕ್ಷಣೆಮಾಡುತ್ತದೆ ಎಂದು ತಿಳಿದ ಮನೆಯೊಡೆಯ ತುಸು ನಕ್ಕು ಎದೆಯುಬ್ಬಿಸಿ ನಡೆದನು.


- ಅಂಕುರ

ಮೆಟ್ರೋ ಕಥನ - ೪೬

 ಮೆಟ್ರೋ ಕಥನ - ೪೬


ಆತ್ಮೀಯರಿಬ್ಬರು ಪಡೆದ ಅಂಕಗಳ ಮೇಲೆ ಕಾಲೇಜು ಬದಲಾಯಿತು. ಊರಿನಿಂದ ವಿರುದ್ಧ ದಿಕ್ಕಿಗೆ ಹೊರಡುತ್ತಿದ್ದ ದುಃಖದ ಸ್ನೇಹಿತರನ್ನು ಕಂಡ ಕಂಡಕ್ಟರ್ ಹೀಗೆ ನುಡಿದನು. ಯೋಚ್ನೆ ಮಾಡಬೇಡ್ರೋ ದೋಣಿ ಬದಲಾದರೇನು ನೀರು ಒಂದೇ... ನಿಮ್ಮ ಪ್ರಯಾಣದಲ್ಲಿ ಸರಿಯಾಗಿ ಕಣ್ಬಿಡಿ, ಬಲೆ ತುಂಬಾ ಮೀನು ಹಿಡಿಬಹುದು. ಬದುಕು ಅಂದ್ಕೊಣೊದಲ್ಲ, ಅರ್ಥಮಾಡಿಕೊಳ್ಳೋದು.


- ಅಂಕುರ

ಮೆಟ್ರೋ ಕಥನ - ೪೫

 ಮೆಟ್ರೋ ಕಥನ - ೪೫

ಆಕೆಗೆ ಅವನ ಪರಿಚಯವಿರಲಿಲ್ಲ. ಹೇಳಿದ್ದನ್ನೆಲ್ಲಾ ನಂಬಿದಳು. ಮದುವೆಗೂ ಒಪ್ಪಿದಳು. ಆರಂಭವು ಕವಿತೆಯಂತೆ ಲಯಬದ್ದ ಗೀತೆ, ಬದುಕು ಮುಂದುವರೆದಂತೆ ಕಥೆಯಾಗುತ್ತಾ ಹಿತವೆನಿಸಿತು. ನೆನಪಿಸಿಕೊಂಡಷ್ಟೂ  ಅದೇಕೋ ಇತ್ತಿಚೆಗೆ ಕಾದಂಬರಿಯಂತೆ ಸುದೀರ್ಘ, ಕುತೂಹಲ. ಈಗ ಅವಳು ಮೋಸವನ್ನೂ ಅರಿತಿದ್ದಾಳೆ, ಸುಳ್ಳನ್ನು ನಂಬಿ, ನಂಬಿಸುತ್ತಾಳೆ.

ಪ್ರೇರಣ - ರಮಾಮಣಿಯಾದ ಕಥೆ

 ಪ್ರೇರಣ - ರಮಾಮಣಿಯಾದ ಕಥೆ

 


ಮಲೆನಾಡಿನ ಚೆಲುವೆ, ಬೆಂಗಳೂರಿನ ಗೊಂಬೆಯು ಸಿನಿಮಾ ನಟಿಯಾಗುವುದು ಸಾಮಾನ್ಯ ವಿಚಾರವೇನಲ್ಲ. ಪ್ರೇರಣಾ ಈಗ ಬೆಳೆದು ದೊಡ್ಡವಳಾಗಿ ಓದುಗರೇ ನಿರ್ಮಿಸಿದ ಕನ್ನಡದ ಮೊದಲ ಸಿನಿಮಾ ಡೇರ್ ಡೆವಿಲ್ ಮುಸ್ತಾಫ ಸಿನಿಮಾದಲ್ಲಿ ನಾಯಕಿಯಾಗಿದೆ. ಕನ್ನಡ ನಾಡಿಗೆ ಕುತೂಹಲ ಭರಿಸುವಷ್ಟು ಡಿಡಿಎಂ ತಂಡವು ಸೋಸಿಯಲ್ ಮೀಡಿಯಾವನ್ನು ಬಳಸಿಕೊಂಡಿದೆ. ಹಂತ ಹಂತವಾಗಿ ಜನರನ್ನು ತಲುಪಿದ್ದು ಶ್ರಮದಿಂದಲೇ ಆಗಿದೆ. ಅಭಿಮಾನವನ್ನು ಬಂಡವಾಳಮಾಡಿಕೊಂಡು ಮುಂದೆ ಬಂದಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ತೇಜಸ್ವಿ ಎಂದರೆ ವಿಭಿನ್ನ ಹಾಗೂ ಸೃಜನಶೀಲ ಪ್ರತಿಭೆಯ ಸ್ಥಾನವಿದೆ. ಸಾಮಾನ್ಯ ಓದುಗರಿಂದ, ಸಾಪ್ಟ್ವೇರ್ ಕ್ಷೇತ್ರದ ತನಕ ಓದುಗರನ್ನು ತುಂಬಿಕೊಂಡಿರುವ ತೇಜಸ್ವಿ ಈ ಮಕ್ಕಳ ವಿಚಿತ್ರ ಓದು ಕಾರ್ಯಗಳನ್ನು ತೇಜಸ್ವಿ ನೋಡಬೇಕಿತ್ತು. ಮೂರು ವರ್ಷಗಳ ಹಿಂದೆ, ಸಿನಿಮಾ ಕ್ಷೇತ್ರ ಕುರಿತು ಕನಸು ಕಾಣುತ್ತಿದ್ದ ಹೊಸ ಪ್ರತಿಭೆಗಳು, ಅವಕಾಶ ಸಿಗದ ಹಳೆಯ ಪ್ರತಿಭೆಗಳು ಒಟ್ಟಿಗೆ ಸೇರಿ ಪ್ರಾರಂಭಿಸಿದ ಚಿಕ್ಕ ಕಥೆ ಇದು. ಪ್ರಾರಂಭವೇನೋ ಚಿಕ್ಕ ಕಥೆಯಾಗಿ ಬೆಳೆದು ದೊಡ್ಡ ಆಲದಮರವಾಗಿ ನಿಂತ ಈ ಪ್ರಯಾಣದಲ್ಲಿ ಅದೆಷ್ಟು ಬಿಳಿಲುಗಳ ಶ್ರಮವಿದೆಯೋ ಆ ತಂಡಕ್ಕೆ ಗೊತ್ತು. ಅಂತು ಕಾಲ ಕಾಲಕ್ಕೆ ಟೀಶರ್ಟ್ ಮಾರಿ ಹಣ ಹೊಂದಿಸುವುದು, ಬ್ಯಾಡ್ಜ್ ಮಾರಾಟ ಇವೆಲ್ಲವೂ ಡಿಡಿಎಂ ತಂಡದ ಶ್ರಮ. ೨೦೨೧ರಲ್ಲಿ ರಾಜ್‌ಕುಮಾರ್ ಕುರಿತು ನಿನ್ನಂರ‍್ಯಾರು ಇಲ್ವಲ್ಲೋ ಹಾಡು ಅನಿಮೇಶನ್ ಮೂಲಕ ಕ್ರಾಂತಿಮಾಡಿತು. ಎರಡು ವರ್ಷಗಳ ಹಿಂದೆ ಮಕ್ಕಳಿಗೆ ಪೂಚಂತೆ ಪ್ಯಾರಾಗ್ರಾಫ್‌ನಂತಹ ಸ್ಪರ್ಧೆಗಳು, ಓದಿನ ಸ್ಪರ್ಧೆಗಳನ್ನೆಲ್ಲಾ ಏರ್ಪಡಿಸುತ್ತಾ, ತನ್ನ ಸಿನಿಮಾ ಯಾನವನ್ನು ಯುವಕರಲ್ಲಿ ಭಿತ್ತಿದರು. ಇಂತಹ ಯುವಕರೇ ಸೇರಿ ಇಷ್ಟು ಸುಲಲಿತ ಸಿನಿಮಾಯಾನವನ್ನು ಮಾಡಿದ್ದು ಈ ಶತಮಾನದ ವಿಶೇಷ. ಶಂಕರ್‌ನಾಗ್‌ನತಹ ನಿರ್ದೇಶಕರ ಕನಸು ಈಡೇರಿದಂತೆ ಎನ್ನಬಹುದು. ಇಂತಹ ಕಾರ್ಯಕ್ಕೆ ಯುವಕರ ತಂಡವಂತೂ ತುಂಬಾ ಸಾಥ್ ಕೊಡುತ್ತಿದೆ. ಉನ್ಮಾದ ಹೆಚ್ಚಿಸುವ ಕೆಟ್ಟ ಸಿನಿಮಾವನ್ನು ಬೆಳೆಸುವ ಸಂಸ್ಕೃತಿಯನ್ನು ಮುರಿದು ಮಲೆನಾಡ ಪರಿಸರದಲ್ಲಿ ಮಕ್ಕಳ ಮನೋಲೋಕವನ್ನು ಚಿತ್ರಿಸಿದ ತೇಜಸ್ವಿ ಕಥೆಯನ್ನು ಸ್ವಯಂ ಪ್ರೇರಿತರಾಗಿಯೇ ಇಷ್ಟಪಡಬೇಕಿದೆ. ಸಿನಿಮಾದ ರಮಾಮಣಿ ಈಗ ಕರುನಾಡು, ವಿಶ್ವವೇ ಗಮನಿಸುವ ಪ್ರತಿಭೆ. ಎಲ್ಲಾ ಯುವ ಪ್ರತಿಭೆಗಳಿಗೆ ಶುಭವಾಗಲಿ. ಎಲ್ಲರೂ ತಮ್ಮ ತಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡೋಣ. ನೋಡಿಸೋಣ. ಕನ್ನಡ ಸೃಜನಶೀಲರ ಶ್ರಮಕ್ಕೆ ಗೌರವ ನೀಡುವುದಕ್ಕೆ ಇದೇ ಸೂಕ್ತ ಸಮಯ.

 


ಪ್ರೇರಣ ನನಗೆ ಹೇಗೆ ಗೊತ್ತು ಅಂದ್ರೆ ಈ ಕಿರು ಕತೆ ಓದಿ...

ನಾನು ತುಂಬಾ ಹತ್ತಿರದಿಂದ ಮನೆಯ ಮಗುವಾಗಿ ನೋಡಿದ ಪ್ರತಿಭೆ ಈಕೆ. ೨೦೧೪-೧೫ರ ಸಂದರ್ಭದಲ್ಲಿ ಮಲೆನಾಡಿನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದೆ. ಮನೆಯಿಲ್ಲದೆ ನೂರು ರೂಪಾಯಿಗೆ ಒಂದು ಚಿಕ್ಕದೊಂದು ಕೊಠಡಿಯಲ್ಲಿ ಬಾಡಿಗೆ ಇದ್ದ ಸಮಯ. ಒಂದು ದಿನ ಸರೋಜಮ್ಮ ಅವರು ಮನೆಗೆ ಬಂದು ನಿಮ್ಮ ಬಗ್ಗೆ ತಿಳ್ಕೊಂಡಿದಿವಿ ಮನೆಗೆ ಬಾರಪ್ಪ ಅಂತ ಔತಣ ಕೊಟ್ಟು ಕರೆದಾಗ ಹೋಗಲೇಬೇಕಾಯಿತು. ನಾನೇ ಅಲೆಮಾರಿ, ನನ್ನ ಜೊತೆಯಲ್ಲಿ ನನ್ನ ಸ್ನೇಹಿತ ಪ್ರವೀಣ್ ಅವರು ಕೂಡ ಜೊತೆಯಲ್ಲಿ ಓದಲು ಬಂದಿದ್ರು. ಇಬ್ಬರು ಅವರ ಮನೆಗೆ ಹೋದೆವು. ಸರೋಜಮ್ಮ ಅವರ ಬಗ್ಗೆ ನಾಲ್ಕು ಮಾತು ಇಲ್ಲಿ ಹೇಳಲೇಬೇಕು. ಅವರ ಬಗ್ಗೆ ಪ್ರತ್ಯೇಕ ಒಂದು ಪ್ರಬಂಧವೇ ಬರೆದಿರುವೆ. ಅವರು ಒಂಥರಾ ಏಕಾಂಗಿ ಹೋರಾಟಗಾರ್ತಿ, ಬಸವಣ್ಣನ ಕಾಯಕವೇ ಕೈಲಾಸತತ್ವದೊಟ್ಟಿಗೆ ಬದುಕುತ್ತಿರುವ ಸ್ವಾಭಿಮಾನಿ. ನಮ್ಮಂತವರನ್ನು ತಿಳಿದು ಆಶ್ರಯ ನೀಡಿ, ಅಮ್ಮನಾದ ತೆರೆದಮನ.

ಇಂಗ್ಲೆಂಡ್ನಲ್ಲಿ ತನ್ನದೇ ಕಂಪನಿ ನಡೆಸುತ್ತಿರುವ ರಾಜೇಶ್ ಅವರು ಹಾಗೂ ಸರೋಜಮ್ಮ ಅಂದು ಅಷ್ಟು ಪ್ರೀತಿ ತೋರಿ, ನಾವು ನಾಲ್ಕು ತಿಂಗಳು ಇಂಗ್ಲೆಂಡ್ಗೆ ಹೋಗ್ತಾ ಇದ್ದೀವಿ, ನೀವು ಇದೆ ಮನೆಯಲ್ಲಿ ಬಂದು ಇದ್ದುಬಿಡಿ. ದೊಡ್ಡಮನೆ ಬೀಗ ಹಾಕಬಾರದು ಎಂದು ಹೇಳಿದಾಗ ಏನೂ ತಿಳಿಯದೆ ಒಪ್ಪಿಕೊಂಡೆ. ಆದರೆ ಅವರು ಹೋಗಿಬಂದರೂ, ಅದೇ ಪ್ರೀತಿಯಲ್ಲಿ ಆ ಮನೆಯಲ್ಲಿ ಆಶ್ರಯಕೊಟ್ಟು, ಬದುಕೆಂದರೆ ಏನು ಎಂಬುದನ್ನು ಕಣ್ಣೆದುರು ಕಾಣಿಸಿದವರು. ಮಲೆನಾಡು ಪರಿಚಯಿಸಿದವರು. ಕೂರಿಸಿ ಅನ್ನ ಕೊಟ್ಟವರು. ಕುವೆಂಪು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಅದೇ ಮನೆಯಲ್ಲಿ ನಿತ್ಯವೂ ಓದಿದ್ದು ನನ್ನ ಪುಣ್ಯ. ಹೀಗೆ ಆ ಮನೆಯ ಸದಸ್ಯನಾದ ನನಗೆ ಅವರ ಮನೆಯವರೆಲ್ಲಾ ಸ್ವಂತ ತಮ್ಮನಂತೆ ಕಂಡರು. ರಾಜೇಶಣ್ಣ ಹಾಗೂ ರಮ್ಯಕ್ಕ ಎಂಬ ಅಣ್ಣತಂಗಿ ಎಂದರೆ ಗೌರವ ಹಾಗೂ ಹೆಮ್ಮೆ ಅನಿಸುತ್ತದೆ. ರಾಜೇಶಣ್ಣ ಇಂಗ್ಲೆಂಡ್, ರಮ್ಯಕ್ಕ ಬೆಂಗಳೂರು. ಈ ರಮ್ಯಕ್ಕನ ಮಗಳೇ ಪ್ರೇರಣ. ರಜೆ ಬಂದರೆ ಸಾಕು, ಈ ರಮಾಮಣಿ ಅಂದ್ರೆ ಪ್ರೇರಣ ಅಲಿಯಾಸ್ ಪ್ರೆಟ್ಟಿ ಮಲೆನಾಡಿಗೆ ಬರುತ್ತಿದ್ದ ಪುಟ್ಟ ಹುಡುಗಿ. ಮುದ್ದಾಗಿ ಮಾತಾಡಿಸುವ, ಅಜ್ಜಿ ಹಿಂದೆ ತಿರುಗಾಡುವ, ಓದುವ, ಚಿತ್ರ ಬರೆಯುವ ಜಾಣ ಮಗು ಅದು. ಟ್ಯಾಬ್ ಕೈಲಿದ್ದರೆ ಸಾಕು ಟಾಕಿಂಗ್ ಟಾಮ್ - ಕ್ಯಾಟ್ ಗೇಮ್ ನಲ್ಲಿ ಬೆಕ್ಕಿಗೆ ಸ್ನಾನ, ನಿದ್ರೆ, ದಿನದ ಎಲ್ಲಾ ಕೆಲಸವನ್ನು ಮಾಡಿಸುತ್ತಾ ಆಟದಲ್ಲಿ ಮುಳುಗಿಹೋಗುತ್ತಿತ್ತು. ಚಿಕ್ಕ ವಯಸ್ಸಿಗೆ ಸದ್ಗುಣಗಳು ತಂದೆಯಿಂದ ಧ್ಯಾನ, ತಾಯಿಯಿಂದ ಮೌನ ಮತ್ತು ಮಾತು ಕಲಿತು ಬೆಳೆದ ಕಿನ್ನರಿ ಈಕೆ. ರಜೆಯನ್ನು ಮಲೆನಾಡಿನಲ್ಲಿ ಕಳೆಯುತ್ತಿದ್ದ ಪ್ರೇರಣ ಭರತನಾಟ್ಯ, ಯೋಗ ಹೀಗೆ ಪ್ರತಿಭೆಯನ್ನು ತಾನೇ ಅರ್ಥಪೂರ್ಣವಾಗಿ ನಿರ್ಮಿಸಿಕೊಂಡ ಮಗು. ಈಗ ತನ್ನ ಪ್ರತಿಭೆಯ ಮೂಲಕವೇ ನಟಿಯಾಗುವ ಎಲ್ಲಾ ಲಕ್ಷಣವನ್ನೂ ಹೊಂದಿರುವುದು ನಮಗೆಲ್ಲಾ ಹರ್ಷನೀಯ. 
 


https://in.bookmyshow.com/bengaluru/movies/daredevil-musthafa/ET00358461

 


     

ಗುರುವಾರ, ಮೇ 11, 2023

ಮೆಟ್ರೋ ಕಥನ - ೪೪

ಮೆಟ್ರೋ ಕಥನ - ೪೪

ಉದ್ಯೋಗ ಅರಸಿ ಹೊರಟ ಅಂದನಿಗೆ ರಸ್ತೆಯಲ್ಲಿ ಬರುವಾಗ ಚಿಕ್ಕ ಅಪಘಾತವಾಯಿತು. ಬಹಳ ನೊಂದನು. ಬಡತನವಿದ್ದಾಗಲೇ ಇಂತಹ ಕಷ್ಟಬರಬೇಕಾ ಎಂದು ಆಸ್ಪತ್ರೆ ಸೇರಿದನು. ಆ ದಿನ ಆಸ್ಪತ್ರೆಯಲ್ಲಿ ಎಲ್ಲರೂ ಒತ್ತಡದಲ್ಲಿಯೇ ಓಡಾಡುತ್ತಿದ್ದರು. ಹಾಸಿಗೆಯಲ್ಲಿಯೇ ಗಮನಿಸಿದ ಅಂದನು ನರ್ಸ್ ಅವರನ್ನು ವಿಚಾರಿಸಿದನು. ಸಾಫ್ಟ್ವೇರ್ ಸಮಸ್ಯೆಯಿಂದ ಯಾವ ಕೆಲಸಗಳು ಆಗುತ್ತಿಲ್ಲ.  ಇಂಜಕ್ಷನ್ ಇಂದ ಅಪರೇಶನ್ ವರೆಗೂ ಇಡೀ ಆಸ್ಪತ್ರೆಯೇ ತಂತ್ರಜ್ಞಾನದಿಂದ ಕೂಡಿದೆ ಎಂದು ನೊಂದರು. ನಾನು ಸಾಪ್ಟ್ವೇರ್ ತಜ್ಞ, ಒಂದು ಅವಕಾಶ ಕೊಡಿ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದನು. ನರ್ಸ್ ಆಶ್ಚರ್ಯ ಪಟ್ಟರಾದರೂ ನಂಬಿದರು. ಕ್ಷಣಾರ್ಧದಲ್ಲಿಯೇ ವೈದ್ಯರಿಗೆ ತಿಳಿಸಿದರು. ವ್ಯವಸ್ಥೆಮಾಡಲಾಯಿತು. ಹತ್ತು ನಿಮಿಷ ನೋವನ್ನು ಮರೆತು ವೆಬ್ ಲೋಕದಲ್ಲಿ ಮುಳುಗಿದನು, ಎಲ್ಲವೂ ಸರಿಹೋಯಿತು. ವೈದ್ಯರ ತಂಡಕ್ಕೆ ಬಹಳ ಆನಂದವಾಯಿತು. ಉಡುಗೊರೆಯಾಗಿ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದರು. ಅಂದನು ನಿಧಾನವಾಗಿ ಹೇಳಿದನು ಉಚಿತವೆಂಬುದು ಬೇಡ, ಉದ್ಯೋಗ ನೀಡಿ ಎಂದನು. ಆ ಕ್ಷಣದಲ್ಲಿಯೇ ಒಂದು ಸಭೆ ನಡೆಸಿ ತೀರ್ಮಾನಿಸಿ, ಲಕ್ಷಕ್ಕೂ ಅಧಿಕ ಸಂಬಳದ ಇಂಜಿನಿಯರ್ ಪದವಿ ನೀಡಿದರು.

ಆಸೆಯೇ ದುಃಖಕ್ಕೆ ಮೂಲವೆಂದನು ಬುದ್ಧ. ನಂಬಿಕೆಯೇ ದುಃಖ ನಿವಾರಕನೆಂದ ಅಂದ.

ಬುಧವಾರ, ಮೇ 10, 2023

ಮೆಟ್ರೋ ಕಥನ - ೪೩

 

ಮೆಟ್ರೋ ಕಥನ - ೪೩

ಮಾವು ಹಣ್ಣಾಗಿತ್ತು. ಹಕ್ಕಿಗೆ ಹಸಿವಾಗಿತ್ತು. ಕಾಲವೇ ಕೂಡಿಸಿದಂತೆ ಹಾರಿಬಂದು ಹಣ್ಣು ಕಂಡು ಖುಷಿಯಿಂದ ಹಾರಾಡಿತು. ಮೆಲ್ಲನೆ ಕುಕ್ಕಿ, ಕುಕ್ಕಿ ಸವಿಯಿತು. ಮಧ್ಯಾಹ್ನವಾಯಿತು. ದಾರಿಹೋಕ ಬಿಸಿಲ ಬೇಗೆಗೆ ಧಣಿವಾಗಿ ಮರದ ಬಳಿ ಬಂದನು. ಕುಳಿತು ಕತ್ತೆತ್ತಿ ನೋಡಿದರೆ ಹಣ್ಣಾಗಿ ಹಕ್ಕಿಮುಕ್ಕಿದ ಹಣ್ಣು ಕಂಡು ಖುಷಿಯಾದ. ಅರೆತಿಂದ ಹಣ್ಣು ಬಲುಸವಿಯೆಂದು ಕಿತ್ತು ತಿಂದನು. ಮಾವಿನಗಿಡ ಇಬ್ಬರಿಗೆ ತೃಪ್ತಿ ನೀಡಿ ಖುಷಿಯಾಯಿತು. 


ಹಣಕ್ಕಾಗಿ ಆತುರ ಪಟ್ಟು ಕಾಯಿಗಳ ಕಿತ್ತು, ಔಷಧಿಯಲ್ಲಿ ಹಣ್ಣುಮಾಡಿ ಲೋಕ ರಂಜಿಸುವ ಕಾಲದಲ್ಲಿ ಮೇಲಿನ ಕಥೆಯೊಂದು ಚಿತ್ರವಾಗಿ ನಗರದಲ್ಲಿ ನೇತಾಡುತ್ತಿತ್ತು.


- ಅಂಕುರ

ಮಂಗಳವಾರ, ಮೇ 9, 2023

ಮೆಟ್ರೋ ಕಥನ - ೪೨

ಮೆಟ್ರೋ ಕಥನ - ೪೨

ಮಿಂಚು ಹುಳವೊಂದು ಮಳೆಯ ತಂಗಾಳಿಯಲ್ಲಿ ಹಾರುತ್ತಿತ್ತು. ಮಿಂಚುಳ್ಳಿ ಈ ಹುಳವನ್ನು ಕಂಡು ಕ್ಷಣಾರ್ಧದಲ್ಲಿಯೇ ಹಿಡಿದು ತಂದು ತನ್ನ ಗೂಡಿಗೆ ಇಟ್ಟಿತು. ಅಜ್ಜಿಯ ಈ ಕತೆಯು ಅಂದನ ಕಣ್ಣಲ್ಲಿ ವಾಸ್ತವದ ಸುಂದರ ಹೆಣ್ಣುಗಳ ಕತೆ ಎನಿಸಿತು.


ವಿಶೇಷವೆಂದರೆ ರಾತ್ರಿ ಮಿಂಚುವ ಹುಳ, ಗರಿ ಬಿಚ್ಚಿ ಕುಣಿವ ನವಿಲು ಹೆಣ್ಣಲ್ಲ ಇವು, ಗಂಡು ಜಾತಿ ಎಂಬುದನ್ನು ನೆನೆದು ಸುಮ್ಮನೆ ನಕ್ಕನು.


- ಅಂಕುರ

ಸೋಮವಾರ, ಮೇ 8, 2023

ಮೆಟ್ರೋ ಕಥನ - ೪೧

 ಮೆಟ್ರೋ ಕಥನ - ೪೧


ಸುಖವಾಗಿ ನಿದ್ರಿಸುವುದು ಹೇಗೆ ಎಂಬ ಪ್ರಶ್ನೆಗೆ ಸಾಧು ಹೀಗೆ ಉತ್ತರಿಸಿದರು. ಮಲಗುವ ಮುನ್ನ ಮೊದಲು ಶಾಂತನಾಗು. ಸಾಧ್ಯ ಆದರೆ ಎರಡು ಪುಟ ಇಷ್ಟವಾದ ಅಕ್ಷರಗಳನ್ನು ಓದು. ಇಲ್ಲವೆ, ಮಧುರವಾದ ಸಂಗೀತವನ್ನು ಹತ್ತು ನಿಮಿಷ ಕೇಳು, ಇಲ್ಲವೆ, ನಿನ್ನ ಬದುಕಿನ ಯಶಸ್ವಿ ಕ್ಷಣವೊಂದನ್ನು ನೆನೆ. ನಾಳೆ ತಿಳಿದಿಲ್ಲವೆಂದು ಭಾವಿಸು. ಇಲ್ಲಿಯ ತನಕ ನೆಡೆದದ್ದು ಮುಕ್ತಾಯವೆಂದು ಅರಿ. ಇಷ್ಟು ನಿನ್ನದಾದರೆ ನಿದ್ರೆಯೇನು... ಸಾವನ್ನು ಕೂಡ ನೆಮ್ಮದಿಯಾಗಿ ಪಡೆಯಬಹುದು.


ಸಾಧುವಿನ ನುಡಿಯನ್ನು ಕೇಳಿ ಆನಂದವಾಯಿತು.


- ಅಂಕುರ

ಬುಧವಾರ, ಅಕ್ಟೋಬರ್ 26, 2022

ವಿಶ್ವ ಕವಿ

 















ವಿಶ್ವ ಕವಿ

ಎಣೆದ ಬಲೆಯೇ

ಸಾವಿನ ಸೆಲೆಯು

ವಿಜ್ಞಾನ ಹೇಳುತ್ತಿತ್ತು.

ಬಲೆಯನ್ನು ಬಲಿಸದೇ

ಒಲಿಸಿಕೊಳ್ಳುವ ಕಲೆಯ

ಕಾವ್ಯ ಹಾಡುತ್ತಿತ್ತು.


ನೆಲದ ಕಥೆಯನು ನೆನಸಿ

ಹೊರಲೋಕದ ಬೆಳಕನು ಬೆರಸಿ

ಮಣ್ಣಿನ ಮೂರ್ತಿಯನು

ಮಿದ್ದು, ತನ್ನ ನೋವನು ಬರೆದ

ಕವಿಗೆ ಕಾವ್ಯವೆಲ್ಲವೂ ಗೀತ


ಲೋಕದ ನೋವು, ತನಗೆ ಸುತ್ತಿದೆ

ಎಳೆಎಳೆಯನು ಜೀವತಂತಾಗಿ ಹಾಡುವೆ.

ನಾನು ಕವಿಯು, ಬೇಂದ್ರೆ ಬರಿ ಮಾಸ್ತರ

ಬದುಕಿದನು ಕವಿಯು ಅನಂತಕಾಲ


ಬೆಳಕಿನ ದಿನದಂದೇ, 

ಬೆಳಕಾಗಿ ಉಳಿದವಗೆ 

ಸಾವು ನಿರ್ಭಯ ವ್ಯಾಖ್ಯಾನ

ಉಳಿವು ಒಲವಣತೆಯ 

ಜೀವ ಸಖ್ಯತಾಣ.


- ಅಂಕುರ

ಮಂಗಳವಾರ, ಅಕ್ಟೋಬರ್ 25, 2022

ನೀರೋನೋ ರಾಜ್ಯದಲಿ...

 ನೀರೋನೋ ರಾಜ್ಯದಲ್ಲಿ...














ನೀರೋನೋ ರಾಜ್ಯದಲಿ... 

ದೇಹ ಸುಡಲಿಕ್ಕೆ 

ಹಲವು ಕಾರಣಗಳುಂಟು!

ಸುಡುವ ಬೇಗುದಿಗೆ

ನಮ್ಮ ಪರಮಭಕ್ತಿ ಇಹುದು.

'ಇಲ್ಲ'ವೆಂಬುದೇ ನಮ್ಮ 

ದಾಸ್ಯದಾಕೃತಿಯ ಚರಿತೆ.


ಹಣ ಇದ್ದವರ, ಅಧಿಕಾರವುಳ್ಳವರ,

ಒಳಮಾರ್ಗದ ಏಡಿ ಕೊಂಡಿಗಳ,

ಯೌವನದ ಹಸಿದಾವರೆಯ,

ಭೂಮಾಲಿಕರ,  ವಿಷಯ ಸಾಧಕರ, 

ವೇಷನಾದಕರ, ನೆತ್ತರಿನ ದಳ್ಳುರಿಯ,

ವಿದ್ಯೆಯ ಕುಶಲ ಜಾತರ ಈ ಎಲ್ಲರ

ಜವಾಬ್ದಾರಿ ಪೀಠತೋಟದಿ

ಬೆಳೆದ ಮಧುವಣ್ಣಿನ ರಸವನೀರಲು

ಕುಳಿತಿಹರು ಇವರೆಲ್ಲಾ ಒಟ್ಟೊಟ್ಟಿಗೆ...

ಅಂದು ರೋಮ್ ನಲ್ಲಿ

ನೀರೋ ಆಜ್ಞೆಮಾಡಿದನು.

ಎಳೆದು ತನ್ನಿ ಖೈದಿಗಳ 

ಸುಡಲಿಕ್ಕೆ ಸೌದಿಲ್ಲ

ನಮಗೆ ಬೆಳಕು ಬೇಕೀಗ...

ಇಂದು ನಮ್ಮಲ್ಲಿ ಹಲವು

ನೀರೋಗಳು, ಆಜ್ಞೆ ಮಾಡುವುದಿಲ್ಲ

ನಿಮ್ಮ ಸೇವೆಯೇ 

ನಮ್ಮ ಪರಮ ಗುರಿ ಎನ್ನುವರು

ಸೇವೆಯ ನೆಪದಲ್ಲಿ

ಸಾವನೊದಿಸುವರು.


ನಿತ್ಯವೂ ಔತಣಕೂಟ

ದುಡಿಯುವವರು 

ದುಡಿಯುತ್ತಲೇ ಇದ್ದಾರೆ.

ದುಡಿಸಲು ಬೀಸುವರು

'ಖಾಸಗಿ'ಯ ಗಾಳ!

ರಕ್ತ ಹೀರುವ ತನಕ

ಸುಂದರ ನೌಕೆಯ ಪಯಣ.

ದಾಸ್ಯದ ಪರವಾಗಿ

ನಿಂತ ವೇಷಗಾರರು 

ದಸ್ಯುಗಳ ಸೇವಕರೇ

ಮರೆಯ ಮರೆಯಲ್ಲಿ

ಮಧುವ ನೀಡುತ, ಮಧುರವಾಡುತ,

ಕುಣಿದ ದೇಹಹಿತ..

ಎಲ್ಲರೂ ಸುಡುವ ಸೌದಿಗಳೇ


'ಇಲ್ಲ'ದವರ ಹಿತ ಕಾಯುವ

'ಇರು'ವವರ ಜನ್ಮಗಳು

ನೀರೋ ಅವತಾರಗಳೇ..

ದತ್ತು ಮಗನಾಗಿ, 

ಗಂಡನನೇ ಕೊಂದವಳಿಗೆ ಮಗನಾಗಿ,

ಇವರ ಮಗಳಿಗೆ ಗಂಡನಾಗಿ,

ಆ ತಾಯಿಯನೇ ಕೊಂದವನಾಗಿ,

ಕೆಲವು ಅನುರಕ್ತಿಯ 

ಕಾಮಭೋಗಗಳಿಗೆ ತನ್ನೆಂಡತಿಯನೇ ತ್ಯಜಿಸಿ,

ಸಾಧುವಾದವನು,

ಕವಿಯಾಗಿ, ಕಲಾವಿದನಾಗಿ

ಒಣಜಂಬದಿ ದೇಶ ಸುಟ್ಟವನು.


ಸಭೆಯ ಮಾತುಗಳಲ್ಲಿ,

ಕಣ್ಣೀರು ಒರೆಸುತ, ಬೆವರೆಡೆಗೆ

ಬಂದ ಕಾಲ್ನಡಿಗೆ ಪಯಣದಲಿ

ಹಣ ಚೆಲ್ಲಿದ ಕಥೆಗಳಿವೆ.

ಸಂಬಳದ, ಅಧಿಕಾರದ 

ಹೆಚ್ಚಳದ ನಿಚ್ಚಳದಿ

ಬಡತನಕೆ ಸಾಂತ್ವನಗೈದ 

ಸಂಭ್ರಮದ ಕಥೆಯಲ್ಲಿ

ಭ್ರಷ್ಟಾಚಾರದ ಬೆವರವಾಸನೆಯಿದೆ

ನೀರೋ ಕಲ್ಪಿತ ಕಥೆಯ

ಚರಿತ್ರೆಯ ಪುತ್ಥಳಿ.

ಇವರೆಲ್ಲಾ ನಿತ್ಯ ವ್ಯಥೆಯ

ವಾಸ್ತವದ ದಾಳಿ.

ಬೆವರಿಗೂ ಭಯವಿದೆ, ಗಾಳಿಚಿಂತೆ.


ಇರುವವರ ಚರಿತೆಯಲಿ

ಶ್ರೀಮಂತ ಕಥೆಗಳಿವೆ

ನೋವಿನ ನರ್ತನಕೂ

ಅಧಿಕ ಪೀಠ, ಶ್ರೀಮಂತ ನೋಟ.

ಸುಡುವ ವಾಸನೆಗೆ ದಾಸ್ಯದ ಹೆಸರಿಲ್ಲ

ಗೌರವದ ರೇಷ್ಮೆಯಲಿ

ನಲಿವ ನೇಣು, ನಗುತ ನಿಂತಿವೆ

ಸಾಲು ಬಡತನದ ಗೋಣು.


'ಇಲ್ಲ'ದ ಕಥೆಯಲ್ಲಿ ಇದು ನಿತ್ಯ ನಾಕ

'ಇರು'ವವರ ಆರಾಧನೆಯು ಸಗ್ಗವಿವೇಕ

ಇಲ್ಲಿ ಬಾ, ಮೆಲ್ಲನೆ ನೀನು ನೀನಾಗಿ

ನಂಬದಿರು ರೂಪಗಳ ಕ್ಷಣಹಿತದ ಸುಖದಿ.


-ಅಂಕುರ

ಭಾನುವಾರ, ಅಕ್ಟೋಬರ್ 2, 2022

ಕಾಂತಾರವೆಂಬ ಅದ್ಭುತ ದೇಸಿ ಕಥನ

 

 ಕಾಂತಾರ ಹೆಸರಿನಂತೆಯೇ ಇರುವ ಅಭೇದ್ಯ ಶಕ್ತಿಯ ಸಿನಿಮಾ.

೨೦೨೨ರಲ್ಲಿ ನಾನು ನೋಡಿದ ಅತ್ಯುತ್ತಮ ಸಿನಿಮಾ. ಇದುವರೆಗೂ ರಿಷಬ್ ಶೆಟ್ಟಿಯವರು ಕಾಣಿಸಿದ ಬಗೆಗಿಂತ ಇದು ವಿಭಿನ್ನ ಹಾಗೂ ಹೊಸ ಮಾದರಿ.

ಕನ್ನಡದ ಉತ್ತಮ ನಟನನ್ನು ಗುರ್ತಿಸುವವರಿಗೆ ಇದು ಮಾದರಿ.


ದೈವದ ನೆಪವಾದರೂ, ಅಭಿನಯ ಕಲೆಯು ಪ್ರಾದೇಶಿಕ ಸ್ವರೂಪಕ್ಕೆ ಪೂರ್ಣ ಹೊಂದಿಕೊಂಡು ನೀಡುವ ಬಗೆಯೇ ವಿಶೇಷವಾದುದು.

ಎಲ್ಲಿಯೂ ನೋಡುಗರು ನಿರೀಕ್ಷಿಸುವ ಕಥೆ ಇರದೆ, ಕುತೂಹಲಕಾರಿ ಕಥೆಯನ್ನು ಹೆಣೆಯುತ್ತಾ ಸಾಗುತ್ತದೆ.

ಇದೊಂದು ಸಿನಿಮಾ ಎಂದು ನೋಡುತ್ತಾ ಸಾಗುವವರೂ ಕೂಡ, ಒಂದು ಕಾಲದ ಕರಾವಳಿಯ ಭೂಮಿಕೆಯ ಕಥೆಯನ್ನು ಓದುವ, ಕಾಣುವ ತಲ್ಲೀನತೆಯಲ್ಲಿ ಮುಳುಗಿಹೋಗುತ್ತಾರೆ. ಸಾಹಿತ್ಯ ಓದುಗರಾದ ನಮಗೆ ಇದು ಮತ್ತೆ ಮತ್ತೆ ನೋಡಬಹುದಾದ ಆಸಕ್ತಿ ಉಳಿಸಿದೆ ಎಂದಮೇಲೆ, ಸಾಮಾನ್ಯರಿಗೆ ಅದೆಷ್ಟು ಆಸಕ್ತಿ ಕೆರಳಿಸಬಹುದು ಅನಿಸಿತು.

     ಕೆಳಜಾತಿಯ ಸಮೂಹವು ಅನುಭವಿಸಿದ ನೋವು, ಭೂಮಿಯ ಹಕ್ಕು ಮೊದಲಾದವುಗಳನ್ನೇ ಕೇಂದ್ರವಾಗಿಸಿಕೊಂಡು, ಭೂಮಾಲಿಕರ ಕುತಂತ್ರಗಳನ್ನು ಪರಿಚಯಿಸುವ ಈ ಸಿನೆಮಾದಲ್ಲಿ ಕಂಬಳ, ಕೋಳಿ ಅಂಕ, ಭೂತಕೋಲ, ಯಕ್ಷಗಾನ ಮೊದಲಾದ ದಕ್ಷಿಣ ಕನ್ನಡದ ಸಂಸ್ಕೃತಿಗಳನ್ನು ಕಥೆಗೆ ತಕ್ಕಂತೆ ಮೇಳೈಸಲಾಗಿದೆ.

ರಿಷಿಬ್ ಅವರು ತೋರಿಸುವ ದೈವದಾಟ, ಭೂತಕೋಲದ ಕುಣಿತವು ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೇ ಉಳಿಯುತ್ತದೆ. ಇಲ್ಲಿನ ಹಲವು ಪಾತ್ರಗಳು ಕೂಡ ದಕ್ಷಿಣ ಕನ್ನಡ, ಕುಂದಾಪುರ, ಉತ್ತರ ಕನ್ನಡ ಭಾಗಗಳ ದೇಸಿ ಪ್ರತಿಭೆಗಳೇ ಆಗಿರುವುದು ವಿಶೇಷ. 

ಭಾಷೆ, ಪ್ರದೇಶಗಳ ಮೀರಿ ನೋಡಬಹುದಾದ ಇದೊಂದು ಕನ್ನಡ, ತುಳು ಹಾಗೂ ಭಾರತೀಯ ಸಿನಿಮಾ ಎನಿಸಿತು.


- ಮೊದಲ ನೋಟದ ಅನಿಸಿಕೆ

ಡಾ. ರವಿಶಂಕರ್ ಎ.ಕೆ

ಸಹಾಯಕ ಪ್ರಾಧ್ಯಾಪಕ

ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು

ಭಾನುವಾರ, ಜುಲೈ 17, 2022

ಅವನು ಅವಳು ಇವನು !

 











ಈ ಪದ್ಯ 

ಅವಳಿಗಾಗಿ ಬರೆದೆ

ಎಂದು ಭಾವಿಸಬೇಡಿ,

ಅವಳು

ಈಗಾಗಲೇ ಅವನನ್ನು

ಇಷ್ಟಪಟ್ಟಾಯ್ತು.

ಅವಳ ಪ್ರೇಮಕಥೆಯಲ್ಲಿ

ನಾನೇ ಮೊದಲಿಗ.

ನನ್ನ ಪ್ರೇಮದ ಸ್ವಾದವು

ಅದೆಷ್ಟು ನಿರ್ಮಲವಲ್ಲವೆ,

ಅವಳಿಗಾಗಿ 

ಸಾವಿರ ಪತ್ರಗಳನ್ನು ಬರೆದೆ...

ಅಂದರೆ,

ನಮ್ಮ ಪ್ರೇಮದ ಸ್ವಾದವು

ಸಾವಿರ ದಿನಕ್ಕೂ ಮಿಗಿಲಲ್ಲವೆ!

ವೃತ್ತಿ-ಬಣ್ಣ-ಜಾತಿಗಳ

ಶಪಿಸದ ಅವಳು

ನನಗಾಗಿ ಪರಿತಪಿಸಿದಳು.

ಮೊದಲ ಭೇಟಿಯಲ್ಲಿಯೆ,

ನನ್ನ ಕನಸಂತೆ

ಅಲ್ಲೇ ಸಿಕ್ಕ ಭಿತ್ತಿ ಚಿತ್ರದ 

ಹಾಳೆಯ ಹರಿದು

ನಾಲ್ಕು ಸಾಲು ಬರೆದೆ..

ಹರಿದ ಕೋನಗಳಿಗೆ

ವಿಚಿತ್ರ ರೇಖೆಗಳ ಗೀಚಿ

ಸುಂದರವಾಗಿ ಮಡಚಿ

ನೀಡಿದೆ.

ಹೀಗೆ ಶುರುವಾದ

ಕಥೆಯಲ್ಲಿ

ನನ್ನ ಕವಿತೆಗಳ ಪತ್ರಗಳಿಗಿಂತ,

ನನ್ನ ಹತ್ತಿರದ ಕೆಲವು

ನೆಪಗಳೆ ಹಲವು

ಅವಳ ಕಥೆಗೆ.


ಮುಗಿದ ಕಥೆಗೆ

ಇಷ್ಟೆಲ್ಲಾ ಪೀಠಿಕೆ ಬೇಕೆ?

ಮುಗಿದಲ್ಲೇ ಪ್ರಾರಂಭವಾಗಿದ್ದರೆ,

ಇಷ್ಟು ಬರಹ ಸಾಕೆ!


ಅವನು ಅವಳಿಗಾಗಿ

ಬದಲಾಗಬೇಕಿದೆ

ಲಘಿಮಾ ಕೌಶಲದ ಪಯಣ

ಭವನೀ ಮಜ್ಜನದಲ್ಲಿ

ತಿರುಗಬೇಕಿದೆ

ಅಲ್ಲಿಯೂ ಅವಳನ್ನೇ

ಕಾಣಬೇಕಿದೆ

ಏಕೆಂದರೆ,

ಅವಳ ಎಲ್ಲಾ ಹೊಸ

ಆಯ್ಕೆಗಳೂ ಇವನೇ ಆಗಿವೆ.


ಅವನು ಇವಳಾಗಿ

ಇವಳು ಅವನಾಗಿ

ಒಂದಾಗುವ ಪರಿಗೆ

ನಾನು ಬದಲಾಗಬೇಕಿದೆ.


ನಾನು ಬದಲಾಗದೆಯೆ

ಅವನು ಅವನಾಗುವುದು

ಹೇಗೆ.. ನನ್ನ ಹಾಗೆ!

ಈ ಪರಿಯ ಪದವಿಗೆ

ಈ ಕವಿತೆಯೇ ಕಾರಣ!


ಮತ್ತೆ ಬರೆದಿದ್ದೇನೆ ಕವಿತೆ

ಅವನಾಗುವ ಹಲವು

ಸಿದ್ಧತೆಗಳು ಬೇಕಿವೆ

ಕವಿತೆಯ ನಿಲ್ಲಿಸಿ, ಹೊಸ

ಕಥೆಯಾಗುವ ಪರಿಗೆ

ಅವನು-ಅವಳು ಕಥಾನಾಯಕರು.

ಈ ಪದ್ಯ

ಅವಳಿಗಾಗಿ ಬರೆದೆ

ಎಂದು ಭಾವಿಸಬೇಡಿ.


- ಅಂಕುರ

ಸೋಮವಾರ, ಜುಲೈ 4, 2022

ಸಹೃದಯತೆ ಎಂದರೆ ಇವರೇ ನೆನಪಾಗುವುದು





ಹೌದು, ಸಹೃದಯತೆ ಎಂದಾಕ್ಷಣ ಇವರ ವ್ಯಕ್ತಿತ್ವ ನೆನಪಾಗುತ್ತದೆ. ಒಂದೊಂದು ಗುಣಕ್ಕೂ ಒಬ್ಬೊಬ್ಬರು ನಮ್ಮ ಮನಸ್ಸು ತುಂಬಿರುತ್ತಾರೆ. ಹೆಸರು ರಘು ಹಾಲೂರು ಎಂದಷ್ಟೇ ಗೊತ್ತಿತ್ತು. ಹಿರಿಯರು, ಜ್ಞಾನಿಗಳು ಎಲ್ಲಕ್ಕಿಂತ ಮಿಗಿಲಾಗಿ ಸಹೃದಯಿ. ಮೊನ್ನೆ ಬುಕ್ ಬ್ರಹ್ಮ ನಡೆಸಿದ ಸಂದರ್ಶನ ನೋಡಿದಾಗ ತಿಳಿಯಿತು ಇವರ ಹೆಸರು ರಘುನಂದನ ಹಾಲೂರು ಅಂತ.

ಲೋಕದಲ್ಲಿ ಇಷ್ಟವಾಗುವವರು ಸಾವಿರಾರು ಜನ ಇರಬಹುದು. ಈ ಇಷ್ಟಗಳಿಗೆ ಹಲವು‌ ಕಾರಣ ಇರುತ್ತವೆ.

ಈ ಲೋಕದಲ್ಲಿ ಮೊದಲಿಗೆ ಸ್ವಾರ್ಥ.

ನಂತರ‌ ಇರೋದೇ ನಿಸ್ವಾರ್ಥ.. 

ಇಂತಹ ಜಗತ್ತಿನಲ್ಲಿ ಸಾವಿರಾರು ಜನರು ಉತ್ತಮರು ನಿಸ್ವಾರ್ಥದ ನೆಲೆಯಲ್ಲಿ ಇದ್ದಾರೆ. ಆದರೆ ಅಲ್ಪ ಪ್ರಮಾಣದಲ್ಲಿ ಇರುವ ಸ್ವಾರ್ಥದ ಜನರ ಲೆಕ್ಕಾಚಾರದಲ್ಲಿ ಸಹೃದಯತೆಯು ಮುಖ್ಯ ವಾಹಿನಿಯಲ್ಲಿ ಕಾಣುತ್ತಿಲ್ಲ. 

ಸಹೃದಯತೆಯಲ್ಲಿ ರಘು ಆಲೂರ ಹೆಸರು ಏಕೆ  ಮುಖ್ಯ ಅಂದರೆ ಅವರ ಕನ್ನಡ ಪ್ರೀತಿ, ಕನ್ನಡ ಸೇವೆ, ಎಲ್ಲಕ್ಕಿಂತಲೂ ಆಪ್ತತೆ.

ಅಮೇರಿಕಾದಲ್ಲಿ ಇದ್ದರೂ ಕೇವಲ ಅಭಿಮಾನದ ಕನ್ನಡಿಗರಾಗದೆ, ಸಾಕಷ್ಟು ಕನ್ನಡ ಸೇವೆ ಮಾಡುತ್ತಿರುವ ಸಹೃದಯ ಕಾರ್ಯದಿಂದ ಮುಖ್ಯ ಅನಿಸುತ್ತಾರೆ.

ಅವರ ಕನ್ನಡಸೇವೆ ಕುರಿತು ಇಲ್ಲಿ ಬರಹವೇನೂ ನೀಡಲಾರೆ. ಏಕೆಂದರೆ ಎಲ್ಲವನ್ನೂ ಅವರ ಮಾತಲ್ಲೇ ಕೇಳಬಹುದು. ಬುಕ್ ಬ್ರಹ್ಮ ಅವರು ಸೆರೆಹಿಡಿದ್ದಿದ್ದಾರೆ.

ನನಗೆ ಮುಖ್ಯ ಅನಿಸಿದ್ದು...

ಟೋಸ್ಟ್ ಮಾಸ್ಟರ್ ಮೂಲಕ ವಾಕ್ಪಟುಗಳು ಕ್ಲಬ್ ನಿರ್ವಹಿಸುವ ಕಾರ್ಯದ ಮೂಲಕ..



ನಮ್ಮ ಸತ್ಯಣ್ಣನ ಮಾತು ಕೇಳಲು ಅದರ ಆನ್ಲೈನ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ನನಗೆ ಅದರ ಕಾರ್ಯವೈಖರಿ ತುಂಬಾ ಇಷ್ಟವಾಯಿತು. ಅವರ ಆಪ್ತತೆಯಲ್ಲಿ ನಾನೂ ಒಬ್ಬನಾದೆ. ಇದರಲ್ಲಿ ಎರಡು ಮಾದರಿಯ ಕಾರ್ಯಕ್ರಮ ನಡೆಯುತ್ತವೆ. ಒಂದು ವಾರ ಕನ್ನಡ ಅತಿಥಿಗಳಿಂದ ಒಂದು ಮುಖ್ಯ ವಿಚಾರ ಸಂವಾದ. ಮತ್ತೊಂದು ವಾರ ಇವರದೇ ಆಪ್ತರಿಂದ ಭಾಷಾ ಪ್ರಧಾನ ಹರಟೆ.

ಈ ಹರಟೆಯಲ್ಲಿ ಇವರ ನಿಯಮ ಚೆಂದ ಇರುತ್ತೆ.

ವಿಷಯ, ಭಾಷೆ, ಉಚ್ಛಾರಣೆ, ಪದಪ್ರಯೋಗ, ಸಮಯಪಾಲನೆ ... ಇತ್ಯಾದಿ

ಹೀಗೆ ವಿಂಗಡಿಸಿಕೊಂಡು ಎಲ್ಲವನ್ನೂ ಲೆಕ್ಕ ಹಾಕಿ ತಿದ್ದಿ ತೀಡಿ ಎಷ್ಟು ಮಜವಾಗಿ ನಮ್ಮ ಭಾಷೆಯನ್ನು ದುಡಿಸುತ್ತಾರೆ ಎಂದರೆ ಕನ್ನಡ ಮೇಷ್ಟ್ರುಗಳೂ ಕೂಡ ಈ ಕಾರ್ಯ ಮಾಡುತ್ತಿಲ್ಲ.

ಅಲ್ಲಿ ಗಾದೆ, ಒಗಟು, ನಾಣ್ನುಡಿ, ಸಿನಿಮಾ(ಹಳೆಯ), ಭಾಷಾಂತರ ಮೊದಲಾದ ಮಾದರಿಗಳು ಬಂದು ಹೋಗುತ್ತವೆ.

ಅಂತರಾಷ್ಟ್ರೀಯವಾಗಿ ಟೋಸ್ಟ್ ಮಾಸ್ಟರ್ ನ ಸಾವಿರಾರು ಕ್ಲಬ್ ಗಳಲ್ಲಿ ಮೊದಲಿಗೆ ಭಾರತೀಯ ಅದರಲ್ಲೂ ಕನ್ನಡದಲ್ಲಿ ಇಂತಹ ಪ್ರಯೋಗ ಮಾಡುತ್ತಿರುವುದು ಹಿರಿಮೆ ಅನಿಸಿತು. ಒಬ್ಬರಿಗೊಬ್ಬರು ಹಿತಮಿತ ವಾಕ್ಪಟುಗಳೇ, ನುಡಿ, ನಡೆ- ಸದ್ಭಾವಗಳ ಗಣಿ ಇವರು ಅನಿಸಿತು. ಅದರೊಳಗಿನ ಪ್ರತಿಯೊಬ್ಬರೂ ಅರ್ಥಪೂರ್ಣ ಕಾರ್ಯ ಮಾಡುತ್ತಿದ್ದಾರೆ ಅನಿಸಿತು. ಇದು ನಮ್ಮ ಚಿಕ್ಕಮಗಳೂರಿನ ರಘುನಂದನ ಹಾಲೂರು(ರಘು ಹಾಲೂರು) ಇವರ ಒಂದು ಚಿಕ್ಕ ಕಾರ್ಯವನ್ನು ಕಂಡಾಗ ಅನಿಸಿದ್ದು.. 

ಮೊನ್ನೆ ಅಮೇರಿಕಾದಿಂದ ಬೆಂಗಳೂರಿಗೆ ಬಂದಾಗ ನಮ್ಮನ್ನೆಲ್ಲಾ ಭೇಟಿಯಾದರು. ಪರದೆಯಲ್ಲಿ ಕಂಡ ಮುಖದ ಮನೋ ಮಧುರತೆ ಹಾಗೇ ಇತ್ತು. ಇನ್ನೂ ಹೆಚ್ಚಿನ ಗುಣವಿತ್ತು. ಹಳೆಯ ಆಪ್ತರು ಅನಿಸಿತು. ನನಗಿಂತ ತುಂಬಾ ಹಿರಿಯವರಾದರೂ ಯಾವುದೇ ಅಂತರವಿಲ್ಲದೆ ಹತ್ತಿರವಾಗುತ್ತಾರೆ. ಭಾಷೆ ಕುರಿತು ಒಂದಿಷ್ಟು ಮಾತಾಡಿದೆವು. ಅಣಕು ರಾಮನಾಥ್ ಅವರ ಮನೆಯ ಸಾಹಿತ್ಯ ಗೋಷ್ಠಿಗೆ ಸೇತುವೆ ಮಾಡಿ ತುರ್ತು ಕಾರ್ಯ ನಿಮಿತ್ತ ನಿರ್ಮಿಸಿದೆ. ಕಂಡದ್ದು ಅರ್ಧ ತಾಸಾದರೂ ಒಡನಾಟ ಮೂರ್ನಾಲ್ಕು ವರ್ಷದಷ್ಟು ಹಳೆಯದು.


ಇವರು ಕಾಣಿಸಿದ್ದು.. ಇಷ್ಟೇ ಆದರೂ, ಕಾಣಿಸಿದಿರುವ ಹಲವು ಇವರ ಆಪ್ತರು ಇವರಷ್ಟೇ ಶ್ರೇಷ್ಠರು ಅನಿಸಿತು. ಇಂತಹ ಹಲವು ಸಮಾಜಮುಖಿ ಕಾರ್ಯಗಳ ಪಟ್ಟಿಯೇ ಇದೆ. ಎಲ್ಲವನ್ನೂ ಕೇಳಿದ್ದೇನೆ, ಕಾಣುವ, ಸಾಧ್ಯವಾದಷ್ಟು ನಮ್ಮಂತೆ ಅಳವಡಿಸಿಕೊಳ್ಳುವ ಹಂಬಲವೂ ಇದೆ. ಧನ್ಯೋಸ್ಮಿ ಇವರ ಕಾರ್ಯವಿಶಾಲತೆಗೆ.

ಇವರ ಕ್ಲಬ್ ನಲ್ಲಿ ಇರುವವರು ಹಾಗೂ ವಾರಕ್ಕೊಮ್ಮೆ ಭಾನುವಾರ ರಾತ್ರಿ ಒಬ್ಬತ್ತು, ಹತ್ತಕ್ಕೆ ಏರ್ಪಡುವ ಕಾರ್ಯಕ್ರಮದ ಲಿಂಕು ಇದು.

Officers and members:

Anil Shekhar

Anil Joshi-Treasurer

Ashok-President

Chandra

Chanaveer 

Chetan

Mahadesh-Secretary

Prasad-SAA

Raghu-VPE

Shailaja

Shiva-VPM

Suma

Sumanth-VPPR

Club Name : Vakpatugalu 

Club Number : 01259423

District: 101

Division : C

Area : C5

For weekly session:

https://us02web.zoom.us/j/81055934461

ರಘುನಂದನ ಹಾಲೂರ ಅವರ ಸಂದರ್ಶನ - ಬುಕ್ ಬ್ರಹ್ಮ

https://youtu.be/qmTrvUrsO-4

ಶನಿವಾರ, ಜುಲೈ 2, 2022

ನಾವು ಮಧ್ಯಮ ವರ್ಗದವರೇ ಹೀಗೆ...

ನಾವು ಮಧ್ಯಮ ವರ್ಗದವರೇ ಹೀಗೆ...

ನಾವು ಮಧ್ಯಮ ವರ್ಗದವರೇ ಹೀಗೆ... 
ಮಾತು ಮಾತಿಗೂ 
 ಜೋತು ಬೀಳುತ್ತೇವೆ. 
ಆಡಿದ ಮಾತಿಗೆಲ್ಲಾ 
 ಅರ್ಥ ಹುಡುಕುತ್ತೇವೆ. 
ಹುಡುಕಿದ್ದಕ್ಕೆಲ್ಲಾ 
 ರೆಕ್ಕೆ ಪುಕ್ಕ ಕಟ್ಟಿ 
ನಾವೇ ನೋಯುತ್ತೇವೆ, 
 ಇಲ್ಲವೆ, ಸದಾ ಬೇಯುತ್ತೇವೆ. 
ಮಾತೆಲ್ಲವನ್ನೂ 
ಮರೆಯದೇ ಉಳಿಸುತ್ತೇವೆ.. 
ತಕ್ಕಮಟ್ಟಿಗೆ ರುಚಿ ನೀಡಿ ಬೆಳೆಸುತ್ತೇವೆ. 
ನಾವು ಯಾವಾಗಲೂ ಹೀಗೆ,
ಬೆಳೆವವರ ಕಾಲೆಳೆಯುತ್ತಾ
ಮೂಗು ತೂರಿಸುತ್ತಾ
ನಮ್ಮುದ್ದವ, ನಮ್ಮಗಲವ
ತೋರುತ್ತಲೇ 
ಇರುತ್ತೇವೆ.
ಮಾರುಕಟ್ಟೆಯಲ್ಲಿ
ಮೆಣಸಿನಕಾಯಿಗೂ,
ಅಕ್ಕಪಕ್ಕದ ತೋಟಗಳಿಗೂ,
ದೂರದೂರಿನ 
ಜಮೀನು-ಸೈಟುಗಳಿಗೂ,
ಆಗ ತಾನೇ ಸಿಕ್ಕ
ಸಾಬರು, ಸೇಟುಗಳಿಗೂ,
ನಮ್ಮ ರಾಜ್ಯಗಳ ಮುಖ್ಯಮಂತ್ರಿಗಳಿಗೂ,
ಪ್ರಧಾನಿಗೂ, ವಿದೇಶಾಂಗಕ್ಕೂ
ನಮ್ಮ ಸಲಹೆಗಳು
ಸದಾ ಇರುತ್ತವೆ...

ಬೆಲೆ ಹೆಚ್ಚಳಕೆ ಕುದಿಯುತ್ತೇವೆ
ಕಡಿಮೆ ಎಂದ ಕಡೆ 
ಕೈ ಚಾಚುತ್ತೇವೆ...
ಯಾರೂ ಕಾಣದಿದ್ದರೆ
ಜೇಬು ತೆರೆಯುತ್ತೇವೆ.

ಅಪ್ಪ-ಅಮ್ಮನ ಕುರಿತು
ನಮ್ಮದು ಸದಾ 
ಭಗವದ್ಗೀತೆಯ ನೀತಿ..
ಗಂಡ-ಹೆಂಡತಿ-ಮಕ್ಕಳ ಕುರಿತು
ಇನ್ನಿಲ್ಲದ ಭೀತಿ.
ಸ್ನೇಹಕ್ಕೆ ಕರ್ಣರಸಾಯನ.

ಅಕ್ಷರಗಳ ಓದಿ-ಬರೆದು 
ಬೆಳೆಯಬೇಕಾದ ನಾವು 
ಅಳಿಸಿಹೋಗುವ ಮಾತಿಗೆ 
ಸದಾ ಮೈಲಿಗೆಯಾಗುತ್ತೇವೆ.
ಕಣ್ತೆರೆಯ ಬೇಕಾದ ನಾವು
ಕಣ್ತೆರಸಲು ಹಂಬಲಿಸುತ್ತೇವೆ.
ನಮ್ಮ ದಾರಿಗೆ ನಾವೇ ಶತ್ರು..
ಲೋಕ ಮೆಚ್ಚಿಸಲು ನಾವೇ 
ನಿತ್ಯ ಸಾರ್ವತ್ರಿಕ ಮಿತ್ರು.


 -ಅಂಕುರ

ಬುಧವಾರ, ಜೂನ್ 1, 2022

ಹುಡುಕಬಹುದೇ !

 ಹುಡುಕಬಹುದೇ !




ದನಿ ಎತ್ತುವ ಕೊರಳುಗಳೇ

ಮೌನವೀಣೆಯ ಮೀಟಿ

ದನಿಯ ಕೇಳಿ ಒಮ್ಮೆ!

ಅಧರ್ಮದ ಕ್ರಿಮಿಯೇ

ಹುಡುಕುತಿಹೆ ಬಣ್ಣದ ಸೋಂಕು!

 ಇಲ್ಲಿ ಧರ್ಮವಿಲ್ಲ.

ಕಳೆದ ಕಾಲದ ಕಲಹ

ಇಂದು ಹಾಳಾಯ್ತು ವಿನಃ

ಭವಿಷ್ಯವೆಲ್ಲಿ?

ಹುಡುಕಬೇಡ ಮನವೆ

ಇನ್ನೆಲ್ಲೋ ಇದೆಯೆಂದು

ಕಳೆದುಕೋ ಇಲ್ಲೇ.

ಕಾಡಿದ್ದು, ಹುಡುಕಿದ್ದು

ಅಜ್ಞಾನವೇ ಹೊರೆತು

ಜ್ಞಾನವಲ್ಲ.


ಮಂಗಳವಾರ, ಮೇ 31, 2022

ಟ್ರೋಲು ಸ್ವಾಮಿ! ಟ್ರೋಲು..

 ಟ್ರೋಲು ಸ್ವಾಮಿ! ಟ್ರೋಲು..

 








ಟ್ರೋಲು ಸ್ವಾಮಿ! ಟ್ರೋಲು..

ಪ್ರಸಿದ್ಧಿಯಾಗಬೇಕಂದ್ರೆ

ಟ್ರೋಲೇ ಆಗಬೇಕು !

ಅಧಿಕಾರ ಇದ್ದ ಕಡೆ ವಾಲಬೇಕು

ವಾಲಾಟದಲ್ಲೇ ತೇಲಬೇಕು!

ಹಿಂದೂ ಬಗ್ಗೆ ಮಾತಾಡಬೇಕು

ಕೆಲವರನ್ನು ಮೆಚ್ಚಿಸಬೇಕು

ಕೆಲವರನ್ನು ಚುಚ್ಚಬೇಕು

ಮುಸ್ಲಿಂ ಕುರಿತು ಮಾತಾಡಬೇಕು

ಕೆಲವರನ್ನು ಮೆಚ್ಚಿಸಬೇಕು

ಕೆಲವರನ್ನು ಚುಚ್ಚಬೇಕು

ಸಮಯ ಸಿಕ್ರೆ ಹಿಜಾಬ್ ಕುರಿತೂ

ಮಾತಾಡಬೇಕು...

ದಲಿತರಿಗೆ ನ್ಯಾಯ ಕೊಡಿ

ಅನ್ನುತ್ತಲೇ ಇರಬೇಕು!

ಮಹಿಳೆಯೋ, ಮಾಂಸವೋ, ಪಕ್ಷವೋ

ಪುಡಾರಿಯೋ ಮಾತಾಡುತ್ತಲೇ ಇರಬೇಕು

ಸಾಧ್ಯವಾದಷ್ಟೂ ಶುದ್ಧವೆಂದು ವಿರುದ್ಧ ಮಾತಾಡಬೇಕು

ಮಠವೋ ಮಾನ್ಯವೋ ಪರವಾದಿ

ಸಂಘ ಕಟ್ಟಬೇಕು,

ಹೊಗಳು ಭಟ್ಟರಿಗೆ ಹಣ ನುಂಗಿಸಬೇಕು

ಕೃಪಾಪೋಷಿತವಾಗಿಯೇ ಬದುಕಬೇಕು

ಕುತ್ತಿಗೆಗೆ ಬಂದ್ರೆ,

 ಅರಾಮಾಗಿ ಇರಬೇಕಾದ್ರೆ,

ಮಾಡಿದ ತಪ್ಪು ಮರೆಸಬೇಕಂದ್ರೆ

ಆಸ್ಪತ್ರೆ ಇದೆ, ಜೈಲೂ ಇದೆ.

ಹೆಸರು ಕುದುರೆ ಹತ್ತಿಕೊಂಡು

ಬಿರುದು ಭವಾವಳಿ ಹೊತ್ತುಕೊಂಡು

ಅಪ್ಪ ಮಾಡಿದ ಆಸ್ತಿಯಲ್ಲಿ,

ಇಲ್ಲದಿದ್ರೇನು..

ಸರ್ಕಾರದ ಗದ್ದುಗೆ ಇವೆಯಲ್ವ

ಮಸ್ತಿ ಮಾಡೋ ಸಿಂಪಲ್ ಐಡಿಯಾ

ಬುಸಿನೆಸ್ ಆದ್ರೂ ಮಾಡ್ಲೇಬೇಕು

ಅಗತ್ಯ ಅನಿಸೋ  ಕಡೆ

ಬಡವರನ್ನೇ ಗಾಣ ಹಾಕಿ

ಹಗಲು ರಾತ್ರಿ ರಕ್ತ ಹೀರಬೇಕು

ಶಾಲೆ, ಮಂದಿರ, ಆಹಾರ

ಬೇಕಾದಷ್ಟು ಸ್ವಾಮಿ!

ಅಂತರಂಗ ಶುದ್ಧಿ ಇಲ್ಲದೆ

ಬಹಿರಂಗ ಹಾರಾಟ ಮಾಡ್ತ

ಲೋಕದ ಕಣ್ಣಿಗೆ ಟ್ರೋಲ್ ಆಗಬೇಕು

ಟ್ರೋಲು ಸ್ವಾಮಿ, ಟ್ರೋಲು

ಇವರೇ ಜಗತ್ತು ಮೆಚ್ಚುವ ಹೊಸ ಮಾಲು.

ಬುಧವಾರ, ಜನವರಿ 26, 2022

 ಗಾಂಧಿ

ಅಪರೂಪದ ಚಿತ್ರಗಳು


'ಬೆಂಕಿ ಬೇರೆ! ಬೆಳಕು ಬೇರೆ!
ಬಣ್ಣ ಬೇರೆ! ಬಿಡಿಬಿಡಿಸಿ,
ತಿಳಿತಿಳಿಸಿ ಹೇಳಿದ ಮಹಾತ್ಮ...'

~ ದ.ರಾ. ಬೇಂದ್ರೆ


ಓ ಮಹಾತ್ಮನೆ, ನಿನ್ನ ಸಾನ್ನಿಧ್ಯತೀರ್ಥದಲಿ ಮಾನವನ ಮೋಹಮದಮಾತ್ಸರ್ಯಗಳು ಮಿಂದು ಪ್ರೇಮದಿ ಪುನೀತವಾಗಿಹವು! ಸುಮುಹೂರ್ತದಲಿ ~ ಕುವೆಂಪು



ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
* * *
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ

~ ಪುತಿನ

'ಇನ್ನಿನಿಸು ನೀ ಮಹಾತ್ಮ ಬದುಕಬೇಕಿತ್ತು ಈಗ ಭಾರತಕಗತ್ಯವಿದೆ ನಿನ್ನ ಬಿರುಗಾಳಿಗೊಲೆವ ಹಡಗದಂತಿಹುದಾಸತ್ತು' ~ ಗೋವಿಂದ ಪೈ


ನಿನ್ನ ಹೆಸರಿಡಬಹುದು ಬೀದಿಬೀದಿಗೆ, ಸುಲಭ; ನಿನ್ನಂತೆ ಬದುಕುವುದು ದುರ್ಲಭ . ನಿನ್ನ ಹೆಸರೆತ್ತಿದರೆ, ನಿನ್ನ ಮಾತಾಡಿದರೆ ನಿನ್ನ ವೈರಿಗೆ ಕೂಡ ಲಾಭ ~ ಕೆ.ಎಸ್.ನ.